ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ: ಭಾರತದ ರಾಜಕೀಯ ಇತಿಹಾಸದಲ್ಲಿ ಐದು ದಶಕಗಳ ಕಾಲ ಅತ್ಯುನ್ನತ ಸೇವೆ ಸಲ್ಲಿಸಿ ಯುವ ಪೀಳಿಗೆಗೆ ಡಾ. ಬಾಬು ಜಗಜೀವನ್ ಜೀವನ್ ರಾಂ ಮಾದರಿಯಾಗಿದ್ದಾರೆ ಎಂದು ತಾಲೂಕು ಕಾರ್ಯ ನಿರ್ವಹಣಾಧಿಕಾರಿ ರವಿಚಂದ್ರ ಹೇಳಿದರು.
ಪಟ್ಟಣದ ಬಾಬು ಜಗಜೀವನ್ ರಾಂ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ. ಬಾಬು ಜಗಜೀವನ್ ಜೀವನ್ ರಾಂ ರವರ 40ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 1946 -1952 ರವರೆಗೆ ಭಾರತದ ಕಾರ್ಮಿಕ ಸಚಿವರಾಗಿದ್ದಾಗ, ಕಾರ್ಮಿಕರ ಹಿತಾಸಕ್ತಿಗಾಗಿ ಡಾ. ಬಾಬು ಜಗಜೀವನ್ ಜೀವನ್ ರಾಂ ಅವರು ಹಲವಾರು ಮಹತ್ವದ ಕಾನೂನುಗಳನ್ನು ಜಾರಿಗೆ ತಂದರು. ಅದರಲ್ಲಿ 1948ರಲ್ಲಿ ಕಾರ್ಮಿಕರಿಗೆ ಕೆಲಸಕ್ಕೆ ತಕ್ಕಂತೆ ಕನಿಷ್ಠ ವೇತನ ಖಾತ್ರಿಪಡಿಸುವ ಕಾಯ್ದೆ ತಂದು, ಕಾರ್ಮಿಕರ ಜೀವನ ಸುಧಾರಣೆಗೆ ಶ್ರಮಿಸಿದರು ಎಂದು ಹೇಳಿದರು.
ತಾಲೂಕು ಮಾದಾರ ಮಹಾಸಭಾ ಅಧ್ಯಕ್ಷ ಪರಶಿವಮೂರ್ತಿ ಮಾತನಾಡಿ, ಡಾ.ಬಾಬು ಜಗಜೀವನ್ ರಾಂ ಅವರು ಈ ರಾಷ್ಟ್ರ ಕಂಡ ಶ್ರೇಷ್ಠ ರಾಜಕೀಯ ಮುತ್ಸದಿ, ದಲಿತರ, ತುಳಿತಗೊಳಗಾದವರ, ಶ್ರಮಿಕರ ಹಾಗೂ ಎಲ್ಲಾ ವರ್ಗದ ಅಭಿವೃದ್ಧಿಯ ಪೂರಕವಾಗಿ ಅವರ ಜೀವನವನ್ನು ಮುಡುಪಾಗಿಟ್ಟ ಮಹಾನ್ ಚೇತನ. ಅವರ ಚಿಂತನೆಗಳು ಯುವಜನತೆಗೆ ಸದಾ ಪ್ರೇರಣೆಯಾಗಿದ್ದು, ನಾವು ಅವರ ಆದರ್ಶ, ತತ್ವಗಳನ್ನು ಅಳವಡಿಸಿಕೊಂಡು, ಅವರ ಮಾರ್ಗದಲ್ಲಿ ನಡೆಯಬೇಕಾಗಿದೆ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಸುರೇಶ್ ಮಾತನಾಡಿ, ಇದೇ ಮೊದಲ ಬಾರಿಗೆ ಬಾಬು ಜಗಜೀವನ್ ರಾಂ ಭವನದಲ್ಲಿ ಕಾರ್ಯಕ್ರಮ ಮಾಡಿರುವುದು ಸಂತೋಷದ ವಿಷಯ. ನಮ್ಮ ದೇಶವು ಇತರ ದೇಶಗಳ ಸಾಲಿನಲ್ಲಿ ನಿಲ್ಲಲು ಮಹನೀಯರ ಕೊಡುಗೆ ಅಪಾರ. ದೇಶವು ಸ್ವಾವಲಂಬಿಯಾಗಿ ಆಹಾರ ಪದಾರ್ಥಗಳನ್ನು ಹೆಚ್ಚಿಸಿಕೊಳ್ಳಲು ಇವರ ಪಾತ್ರ ಅನನ್ಯವಾಗಿದೆ. ಸಮುದಾಯದ ಬೇಡಿಕೆಯಾದ ಭವನದ ಪಕ್ಕದಲ್ಲಿ ಅಡುಗೆ ಮನೆಯನ್ನು ನಿರ್ಮಿಸಲು ಹೆಚ್ಚುವರಿಯಾಗಿ ಜಾಗವನ್ನು ಅಳತೆ ಮಾಡಿ ಸಮುದಾಯಕ್ಕೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಬಾಬು ಜಗಜೀವನ್ ರಾಂ ವಿಚಾರ ವೇದಿಕೆ ಅಧ್ಯಕ್ಷ ಸಿ. ತಿಮ್ಮಯ್ಯ, ಮಾಜಿ ಅಧ್ಯಕ್ಷ ಪಿ.ನಾಗರಾಜ್, ಸರಗೂರು ತಾಲೂಕು ಮಾದಾರ ಮಹಾಸಭಾ ಅಧ್ಯಕ್ಷ ಬೆಟ್ಟಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ಸುರೇಶ್, ಸಬ್ ಇನ್ಸ್ಪೆಕ್ಟರ್ ಚಿಕ್ಕನಾಯಕ, ಸಮಾಜ ಕಲ್ಯಾಣ ಅಧಿಕಾರಿ ರಮೇಶ್, ಪರಿಶಿಷ್ಟ ಪಂಗಡ ಅಧಿಕಾರಿ ಮಹೇಶ್, ನಾಗರಾಜ್, ಎಇಇ ಚಂದು ಕುಮಾರ್, ಮಾತಂಗ ಜನ ಜಾಗೃತಿ ವೇದಿಕೆ ಅಧ್ಯಕ್ಷ ರವೀಶ್, ಚಾ ನಂಜುಂಡಮೂರ್ತಿ, ಜೀವಿಕ ಬಸವರಾಜು, ಪುಟ್ಟಮಾದು, ಉಡ ನಾಗರಾಜ್, ವೆಂಕಟೇಶ್, ಶಿವಯ್ಯ, ಡಿ. ನಾಗರಾಜ್, ಚೆಲುವರಾಜ್, ಮುದ್ದು ಮಲ್ಲಯ್ಯ, ಮಹಾಲಿಂಗಯ್ಯ, ಸೋಮು ಪಟೇಲ್, ಭೋಗೇಶ್ವರ ಕಾಲೋನಿ ತಿಮ್ಮರಾಜು, ಆನಗಟ್ಟಿ ದೇವರಾಜ್, ವೆಂಕಟಪ್ಪ, ಜಶೀಲಾ, ಸಿ.ಕಾಳಪ್ಪಾಜಿ, ಗಿರಿ ಪ್ರಸಾದ್ ಸಿಂಗಯ್ಯ, ಚಿಕ್ಕಸ್ವಾಮಿ, ಶಿವರಾಜ್, ಪೇಂಟ್ ನಾಗರಾಜ್, ಮಹೇಶ್, ಚನ್ನಪ್ಪ, ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಸಮುದಾಯದ ಮುಖಂಡರು ಭಾಗವಹಿಸಿದರು.

