ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಕನ್ನಡ ಅಧ್ಯಯನ ಸಂಸ್ಥೆಯ ರಾಷ್ಟ್ರೀಯ ಶಿಕ್ಷಣ ನೀತಿ ಸಿಬಿಸಿಎಸ್ ಮಾದರಿಯ ಸ್ನಾತಕ ತರಗತಿಗಳ ಸೆಮಿಸ್ಟರ್ ಪದ್ಧತಿಯ ಪಠ್ಯಕ್ರಮ ಬಿ.ಎಸ್.ಸಿ ಪದವಿಗೆ ಕಥೆಗಾರ ಶಂಕರ ಬೈಚಬಾಳ ಅವರ “ಮಸಬಿನಾಳದ ಪಶುವಾದಿಗಳು” ಕಥೆ ಪಠ್ಯವಾಗಿ ಆಯ್ಕೆಯಾಗಿದೆ . ಬರಗೂರ ರಾಮಚಂದ್ರಪ್ಪ ಅವರ ‘ಅವ್ವ’ , ಗೀತಾ ನಾಗಭೂಷಣ ಅವರ ‘ಬುದ್ಧ ಗಂಟೆಯ ಸದ್ದು’, ಸಂಗಮನಾಥ ಲೋಕಾಪುರ ಅವರ ‘ಪರಿವರ್ತನೆ’, ಮುಂತಾದ ಕಥೆಗಳು ಸಹ ಈ ಪಠ್ಯದಲ್ಲಿ ಸೇರಿವೆ.
ಜಿಲ್ಲೆಯ ಮಸಬಿನಾಳ ಗ್ರಾಮದ ಆಕಳೊಂದು ಸತ್ತವರ ಅಂತ್ಯಸಂಸ್ಕಾರಕ್ಕೆ ಹೋಗಿ ಜನರೊಂದಿಗೆ ಅಂತ್ಯಕ್ರೀಯೆಯಲ್ಲಿ ಭಾಗವಹಿಸಿ ವಿಶಿಷ್ಟ ಸಂದೇಶ ನೀಡುವ ದೇವರ ಆಕಳಿನ (ಕಪಲಿ) ಸುತ್ತ ಹೆಣೆದ ಚಿತ್ರಣದಲ್ಲಿ ಪಶುವಾದಿಗಳ ಪ್ರಾದೇಶಿಕ ಸೊಗಡಿನ ಜನಪದೀಯ ಭಾಷೆ ಕಥೆಯಲ್ಲಿ ಹೆಪ್ಪುಗಟ್ಟಿದೆ . ಈಗಾಗಲೇ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಹಲವಾರು ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಸಾಹಿತಿ ಶಂಕರ ಬೈಚಬಾಳ ಅವರ ಕಾದಂಬರಿ ‘ಭಾರತ ಸಿಂಹಾಸನ ರಶ್ಮಿ’ ಬೇರೆ ಬೇರೆ ಭಾಷೆಗಳಿಗೆ ತರ್ಜುಮೆಗೊಂಡಿದೆ. ಮೂಲತಃ ಪಶುವೈದ್ಯರಾದ ಇವರು ಆಡುನುಡಿಗಳನ್ನು ಬಳಸಿ ಬರೆಯವ ರಚನೆಗಳು ಸ್ವಾನುಭವದ ಅಭಿವ್ಯಕ್ತಿಯಾಗಿವೆ ಎಂದು ಜಿಜ್ಞಾಸುಗಳು ವಿಮರ್ಶಿಸಿದ್ದಾರೆ.

