ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಸಮಾಜದಲ್ಲಿ ಪ್ರತಿಯೊಬ್ಬರೂ ಸಾಮರಸ್ಯದಿಂದ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಮೂಲಕ ಮಾನವ ಧರ್ಮವನ್ನು ಬೆಳಗಿಸಿ ಮನುಷ್ಯ ಜನ್ಮದ ನಿಜ ಸಾರ್ಥಕತೆಯನ್ನು ಸಾಧಿಸಲು ಮುಂದಾಗಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಗುರುವಾರ ಕಲಕೇರಿ ಸುಕ್ಷೇತ್ರದ ಶ್ರೀ ಗುರು ಮರುಳಾರಾಧ್ಯ ಸಂಸ್ಥಾನ ಹಿರೇಮಠದಲ್ಲಿ ಲಿಂ.ಬಸವಲಿಂಗ ಮರುಳಸಿದ್ಧ ಶಿವಾಚಾರ್ಯರ ಅಮೃತ ಶಿಲಾಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪ್ರತಿಯೊಬ್ಬ ಜೀವಿಯ ಜೀವನದಲ್ಲಿ ಗುರುವಿನ ಕೃಪೆ, ಅಂತ:ಕರಣ ಮತ್ತು ಸತ್ಯದರ್ಶನದ ಮಾರ್ಗ ದೊರೆತಾಗ ಜೀವಾತ್ಮ ಪರಮಾತ್ಮನಾಗಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಸದಾ ಗುರುಗಳ, ಸಂತರ, ಶರಣರ ಸದ್ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆಯಬೇಕು ಎಂದು ಹೇಳಿದ ಅವರು ಈಗಿನ ಪಟ್ಟಾಧ್ಯಕ್ಷರಾದ ಸಿದ್ಧರಾಮ ಶಿವಾಚಾರ್ಯ ಸ್ವಾಮಿಗಳು ಹಲವಾರು ವೈಶಿಷ್ಠö್ಯಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ತಮಗೆ ಸಂತೋಷ ತಂದಿದೆ ಎಂದು ಶುಭ ಹಾರೈಸಿದರು.
ಕಲಕೇರಿ ಹಿರೇಮಠದ ಸಿದ್ಧರಾಮ ಶಿವಾಚಾರ್ಯ ಸ್ವಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ಜಳಕೋಟ ಶಿವಾನಂದ ಶಿವಾಚಾರ್ಯರು, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು, ಹಲಕರ್ಟಿ ಅಭಿನವ ಮುನೀಂದ್ರ ಶಿವಾಚಾರ್ಯರು, ಕಲಕೇರಿ ಗದ್ದಿಗಿಮಠದ ಗುರು ಮಡಿವಾಳೇಶ್ವರ ಶಿವಾಚಾರ್ಯರು, ದೇವರಹಿಪ್ಪರಗಿ ಜಡಿ ಸಿದ್ಧೇಶ್ವರ ಶಿವಾಚಾರ್ಯರು, ಚಬನೂರ ಹಿರೇಮಠದ ಜ್ಯೋತಿಷ್ಯರತ್ನ ರಾಮಲಿಂಗಯ್ಯ ಸ್ವಾಮಿಗಳು, ತಾಳಿಕೋಟಿಯ ವಿರುಪಾಕ್ಷಯ್ಯ ಹಿರೇಮಠ, ನೀಲೂರಿನ ಶರಣಯ್ಯ ಸ್ವಾಮಿಗಳು, ದೇವರಹಿಪ್ಪರಗಿ ಆವುಗೇಶ್ವರ ತಪೋಧಾಮದ ಶಿವಯೋಗಿ ಸ್ವಾಮಿಗಳು, ಅಳ್ಳೊಳ್ಳಿ ಸಾವಿರದೇವರಮಠದ ಸಂಗಮನಾಥ ದೇವರು, ರಾಜಗುರು ಗುರುಸ್ವಾಮಿ ಗವಾಯಿಗಳು ಕಲಕೇರಿ, ಚಾಣಕ್ಯ ಕರಿಯರ್ನ ಎನ್.ಎಮ್.ಬಿರಾದಾರ, ಕಾಂಗ್ರೆಸ್ ಮುಖಂಡರಾದ ಮಾಗಣಗೇರಿಯ ಗೊಲ್ಲಾಳಪ್ಪಗೌಡ ಎಂ.ಪಾಟೀಲ, ಬಿಜೆಪಿ ಮುಖಂಡರಾದ ಪ್ರಭುಗೌಡ ಬಿರಾದಾರ ಅಸ್ಕಿ, ಸಿದ್ದು ಬುಳ್ಳಾ, ಸೇರಿದಂತೆ ಹಲವಾರು ರಾಜಕೀಯ ಧುರೀಣರು, ಗಣ್ಯಮಾನ್ಯರು ಇದ್ದರು.
ಇದೇ ವೇಳೆ ಕಾಲಜ್ಞಾನಿ ಕಡಕೋಳದ ಮಡಿವಾಳೇಶ್ವರ ಪುರಾಣ ಪ್ರವಚನಗೈದಿರುವ ಗದಗ ಚುರ್ಚಿಹಾಳದ ಪಂಡಿತ ಪುಟ್ಟರಾಜ ಶಾಸ್ತಿçಗಳಿಗೆ ಶ್ರೀಮಠದಿಂದ ಗುರು ಮರುಳಾರಾಧ್ಯ ಸಿರಿ ಪ್ರಶಸ್ತಿ, ಗವಾಯಿಗಳಾದ ಕಲಬುರಗಿಯ ಸಂಗಮೇಶ ಪಾಟೀಲ ಅವರಿಗೆ ಗಂಧರ್ವ ಸಿರಿ ಪ್ರಶಸ್ತಿ ಮತ್ತು ತಬಲಾವಾದಕರಾದ ಶಹಾಪೂರದ ನಾಗರಾಜ ಹುಣಸಿಗಿಡದ ಅವರಿಗೆ ತಬಲಾ ಚತುರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮತ್ತು ಲಿಂ.ಬಸವಲಿಂಗ ಮರುಳಸಿದ್ಧ ಶಿವಾಚಾರ್ಯರ ಅಮೃತ ಶಿಲಾಮೂರ್ತಿ ತಯಾರಿಸಲು ಸೇವೆ ಸಲ್ಲಿಸಿದ ಶರಣಯ್ಯ ಪಠಪತಿ ಕುಟುಂಬದವನ್ನು ಹಾಗೂ ಶ್ರೀಮಠದ ವಿವಿಧ ಸೇವಾಕಾರ್ಯಗಳನ್ನು ಕೈಗೊಂಡ ಸದ್ಭಕ್ತರನ್ನು ಮತ್ತು ಸಾಧಕರನ್ನು ಶ್ರೀಮಠದ ಪರವಾಗಿ ಜಗದ್ಗುರುಗಳು ಆಶಿರ್ವದಿಸಿ ಶ್ರೀರಕ್ಷೆ ನೀಡಿದರು.
ಪೂಜ್ಯರ ನೇತೃತ್ವದಲ್ಲಿ ಜಂಗಮ ವಟುಗಳಿಗೆ ಶಾಸ್ತೊಸ್ತ್ರೋಕ್ತವಾಗಿ ಅಯ್ಯಾಚಾರ, ಲಿಂಗದೀಕ್ಷೆ ಕಾರ್ಯಕ್ರಮಗಳು ಜರುಗಿದವು. ನಂತರ ಶ್ರೀಮಠದ ದಾಸೋಹದ ಮಹಾಮನೆಯಲ್ಲಿ ವಿಶೇಷ ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

