ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಗ್ರಾಮ ಪಂಚಾಯಿತಿ ಅಧಿಕಾರಿ ೧೫ನೇ ಹಣಕಾಸು ಯೋಜನೆಯ ಹಾಗೂ ವರ್ಗ ೧ ರಲ್ಲಿ ವಸೂಲಿ ಮಾಡಲಾದ ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರು ಆರೋಪಿಸಿದ್ದಾರೆ.
ತಾಲ್ಲೂಕಿನ ಹರನಾಳ ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಸೇರಿ ಅಧ್ಯಕ್ಷ ಶಿವಾನಂದ ಯಾತಗೇರಿ ಈ ಆರೋಪ ಮಾಡಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸಮ್ಮ ದೊಡಮನಿ ಇವರು ಅಧಿಕಾರ ದುರುಪಯೋಗ ಮಾಡಿಕೊಂಡು ಅಂದಾಜು ೧೯ ಲಕ್ಷ ೨೨ ಸಾವಿರ ಎಂಟನೂರ ರೂ.ಗಳನ್ನು ದಿ:೧೮ ಫೆಬ್ರುವರಿ ಹಾಗೂ ದಿ:೧ ಮಾರ್ಚ ಒಳಗಾಗಿ ತೆಗೆದಿರುತ್ತಾರೆ.
ಗ್ರಾಮ ಪಂಚಾಯಿತಿಯಲ್ಲಿ ದಿ:೩ ಜನೇವರಿಯಂದು ಅಧ್ಯಕ್ಷರ ಅವಿಶ್ವಾಸ ಗೊತ್ತುವಳಿ ಮಂಡನೆ ಆಗಿರುತ್ತದೆ. ನಂತರ ದಿ: ೨೭ ಫೆಬ್ರುವರಿಯಂದು ನೂತನ ಅಧ್ಯಕ್ಷರ ಆಯ್ಕೆಯಾಗಿದೆ. ಈ ಎರಡರ ನಡುವಿನ ಅವಧಿಯಲ್ಲಿ ಈ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣರಾದ ಪಿಡಿಓ ಹಾಗೂ ತಾಲ್ಲೂಕು ಪಂಚಾಯಿತಿ ೧೫ನೇ ಹಣಕಾಸು ಯೋಜನೆಯ ಅಧಿಕಾರಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಕೂಡಲೇ ಪ್ರಕರಣದಲ್ಲಿ ಇರುವವರನ್ನು ಸೇವೆಯಿಂದ ವಜಾಗೊಳಿಸಿ, ದುರುಪಯೋಗವಾದ ಹಣವನ್ನು ಸರ್ಕಾರಕ್ಕೆ ಮರಳಿ ಭರಣಾ ಮಾಡಬೇಕು ಎಂದು ಆಗ್ರಹಿಸಿ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು.
ಸದಸ್ಯರಾದ ವಿಜಯಲಕ್ಷ್ಮಿ ಬಿರಾದಾರ, ದುಂಡಮ್ಮ ಹದ್ನೂರ, ಸುಷ್ಮಾ ಸಾರವಾಡ, ಸುಜ್ಞಾನಿ ಪೂಜಾರಿ, ಸೀತಾ ನಾಯ್ಕೋಡಿ, ಸೋಮವ್ವ ರತ್ನಾಕರ, ಸಿದ್ದಪ್ಪ ಹಿರೇಕುರುಬರ, ಸುರೇಶ ಅಂಬಳನೂರ ಇದ್ದರು.

