ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ತಾಲೂಕಿನ ಸಿದ್ದನಾಥ ಗ್ರಾಮದಲ್ಲಿ ಮಂಗಳವಾರ ಮಳೆಗಾಗಿ ಗ್ರಾಮಸ್ಥರು ಗುರ್ಜಿ ಪೂಜೆಗೆ ಮೊರೆ ಹೋಗಿದ್ದು, ಗ್ರಾಮದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ವಿಜಯಪುರ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಇದುವರೆಗೂ ಸಮರ್ಪಕ ಮಳೆಯಾಗದೇ ಇರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತಿದ ಬೆಳೆಗಳ ಭವಿಷ್ಯ ಏನು ಎಂಬ ಆತಂಕ ರೈತರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮಳೆಯಿಗಾಗಿ ಗ್ರಾಮಸ್ಥರು ಪಾರಂಪರಿಕ ಗುರ್ಜಿ ಪೂಜೆಯನ್ನು ನೆರವೇರಿಸಿದರು.
ಮಳೆ ಬಾರದೆ ಇದ್ದಾಗ ಪೂರ್ವಜರ ಕಾಲದಿಂದಲೂ ಗ್ರಾಮೀಣ ಪ್ರದೇಶಗಳಲ್ಲಿ ಶತಮಾನಗಳಿಂದ ಆಚರಣೆಯಲ್ಲಿರುವ ಈ ಗುರ್ಜಿ ಪೂಜೆ ವಿಶಿಷ್ಟವಾಗಿದೆ. ಈ ಪೂಜೆಯಲ್ಲಿ ವ್ಯಕ್ತಿ ಅಥವಾ ಬಾಲಕನ ತಲೆಯ ಮೇಲೆ ತವೆ ಇಟ್ಟು, ಅದರ ಮೇಲೆ ಆಕಳ ಸಗಣೆಯಿಂದ ತಯಾರಿಸಿದ ಗುರ್ಜಿ ಇಡಲಾಗುತ್ತದೆ.
ನಂತರ, ಗುರ್ಜಿ ಹೊತ್ತ ವ್ಯಕ್ತಿಯ ಹಿಂದೆ ಗ್ರಾಮಸ್ಥರು “ಗುರ್ಜಿ ಗುರ್ಜಿ ಯಲ್ಲಾಡಿ ಬಂದಿ, ಹಳ್ಳ ಕೊಳ್ಳ ತಿರಗಾಡಿ ಬಂದಿ, ಬಾ ಮಳಿಯ ಬಾ ಮಳಿಯ” ಎಂದು ಹಾಡುತ್ತಾ ಗ್ರಾಮದ ಪ್ರತಿಯೊಂದು ಮನೆ ಮುಂದೆ ತೆರಳಿ ನಿಲ್ಲುತ್ತಾರೆ. ಮನೆಮಂದಿ ಬಂದು ಗುರ್ಜಿ ಹೊತ್ತವನ ತಲೆಯ ಮೇಲೆ ನೀರು ಸುರಿದು ಪೂಜೆ ಮಾಡುತ್ತಾರೆ. ಈ ರೀತಿ ಪೂಜೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ.
ಈ ಸಂದರ್ಭದಲ್ಲಿ ಪರಸಪ್ಪ ಕಲಾದಗಿ, ಲಕ್ಷ್ಮಣ ಕಲಾದಗಿ, ಗಣೇಶ ಮಾದರ (ಗುರ್ಜಿ), ಲಾಲಾಸಬ್ ಮುಲ್ಲಾ, ದುರಗಪ್ಪ ಮಾದರ, ಶ್ರೀಶೈಲ ಗುಂಡನಪಲ್ಲೇ, ಸೋಮಲಿಂಗ ಮಾದರ, ಲಕ್ಕಪ್ಪ ಶಿರಬೂರ ಹಾಗೂ ಹಣಮಂತ ಕೋಳಮಲಿ ಉಪಸ್ಥಿತರಿದ್ದರು.

