ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ.
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಥಾಮಸ್ ಅಲ್ವಾ ಎಡಿಸನ್ ವಿದ್ಯುತ್ ದ್ವೀಪವನ್ನು ಕಂಡು ಹಿಡಿಯುವ ಮುನ್ನ ಸಾವಿರಾರು ಬಾರಿ ವಿಫಲರಾಗಿದ್ದರು. ಅವರು ಪ್ರತಿ ಬಾರಿಯೂ ಆತಂಕಪಟ್ಟು ಪ್ರಯತ್ನವನ್ನು ನಿಲ್ಲಿಸಿದ್ದರೆ ಇಂದು ಜಗತ್ತು ಕತ್ತಲಲ್ಲಿ ಮುಳುಗಿರುತ್ತಿತ್ತು. ವೈಫಲ್ಯಗಳಿಗೆ ಆತಂಕ ಪಟ್ಟು, ಪ್ರಯತ್ನಗಳಿಗೆ ಬೆನ್ನು ತೋರುವ ಬದಲು ಆತಂಕವನ್ನು ಹೊಸ ಪಾಠವೆಂದು ಸ್ವೀಕರಿಸಬೇಕು ಎಂಬ ಸಂದೇಶವನ್ನು ಎಡಿಸನ್ ಜೀವನದಿಂದ ಕಲಿಯಬೇಕು.
ಆತಂಕವೆಂದರೆ…?
ಆತಂಕ ಎನ್ನುವುದು ಭವಿಷ್ಯದಲ್ಲಿ ನಡೆಯಬಹುದಾದ ಕಾಲ್ಪನಿಕ ಅಪಾಯ ಅಥವಾ ತೊಂದರೆಯ ಬಗ್ಗೆ ಮನಸ್ಸಿನಲ್ಲಿ ಮೂಡುವ ಅತಿಯಾದ ಭಯ ಮತ್ತು ಒತ್ತಡದ ಸ್ಥಿತಿ. ಸ್ವಾಮಿ ವಿವೇಕಾನಂದರ ಪ್ರಕಾರ ಆತಂಕ ಎನ್ನುವುದು ಹೊರಗಿನ ಜಗತಿನಿಂದ ಬರುವುದಿಲ್ಲ. ನಮ್ಮ ಮನಸ್ಸು ಸೃಷ್ಟಿಸುವ ದುರ್ಬಲ ಆಲೋಚನೆಗಳೇ ಆತಂಕಕ್ಕೇ ಮೂಲ. ಅದಕ್ಕೆ ಅವರು ಹೇಳಿದ್ದು,’ ನಿಮ್ಮ ಆಲೋಚನೆಗಳೇ ನಿಮ್ಮ ಆತಂಕಕ್ಕೆ ಕಾರಣ.’ ಎಂದು. ಆತಂಕವೆಂದರೆ ‘ನಡೆಯದ ಘಟನೆಗಳ ಬಗ್ಗೆ ಮುಂಚಿತವಾಗಿಯೇ ಹೆದರುವುದು.’ ನನ್ನ ಜೀವನದಲ್ಲಿ ಸಾವಿರಾರು ಸಮಸ್ಯೆಗಳನ್ನು ಎದುರಿಸಿದ್ದೇನೆ, ಆದರೆ ಅವುಗಳಲ್ಲಿ ಬಹುಪಾಲು ಸಮಸ್ಯೆಗಳು ಕೇವಲ ನನ್ನ ಕಲ್ಪನೆಯಲ್ಲಿದ್ದವು, ನಿಜ ಜೀವನದಲ್ಲಿ ಎಂದಿಗೂ ಸಂಭವಿಸಲೇ ಇಲ್ಲ. ಎಂದಿದ್ದಾನೆ ಅಮೆರಿಕನ್ ಪ್ರಸಿದ್ಧ ಲೇಖಕ ಮಾರ್ಕ್ ಟ್ವೇನ್.
ಎದುರಿಸುವ ಆತಂಕಗಳು
ದೈನಂದಿನ ಜೀವನದಲ್ಲಿ ನಾವು ಅನೇಕ ವಿಷಯದ ಬಗ್ಗೆ ಆತಂಕವನ್ನು ಎದುರಿಸುತ್ತಲೇ ಇರುತ್ತೇವೆ. ಟ್ರಾಫಿಕ್ನಲ್ಲಿ ಸಿಲುಕಿಕೊಂಡಾಗ ಗಡಿಯಾರ ನೋಡುತ್ತ, ಬಸ್/ಟ್ರೇನ್ ಮಿಸ್ ಆದ್ರೆ ಹೇಗೆ ಎಂದು ಒದ್ದಾಡುವುದು. ಯುದ್ಧದ ಸುದ್ದಿಯಿಂದಾಗಿ ಪ್ರತಿಯೊಬ್ಬರಲ್ಲಿ ಆತಂಕ ಮೂಡುತ್ತದೆ. ಆಫೀಸ್ ಮೀಟಿಂಗ್ನಲ್ಲಿ ಎಲ್ಲರ ಮುಂದೆ ನಿಂತು ಪ್ರಾಜೆಕ್ಟ್ ವಿವರಿಸುವ ಮುನ್ನ, ಸಾರ್ವಜನಿಕ ಭಾಷಣದ ಮುನ್ನ ಎದೆಬಡಿತ ಜೋರಾಗುವುದು. ಸಂದರ್ಶನದ ಸಮಯದಲ್ಲಿ ಕೈಕಾಲು ಬೆವರುವುದು. ಮನೆಯಿಂದ ಹೊರಗೆ ಹೋದಾಗ ಮೊಬೈಲ್ ಬ್ಯಾಟರಿ ಕಡಿಮೆ ಆಯಿತೆಂದರೆ ಮತ್ತು ಚಾರ್ಜರ್ ಇಲ್ಲದಿದ್ದಾಗ ಸಂಪರ್ಕ ಕಡಿತಗೊಳ್ಳುತ್ತದೆ ಎಂದು ಗಾಬರಿಯಾಗುವುದು. ನ್ಯೂಸ್ನಲ್ಲಿ ಲೇ-ಆಫ್ ಬಗ್ಗೆ ಕೇಳಿದಾಗ, ಮುಂದಿನ ಸರತಿ ನನ್ನದೇ ಇರಬಹುದೇ? ಎಂದು ಚಿಂತಿಸುವುದು. ಅಪರಿಚಿತ ನಂಬರಿನಿಂದ ಫೋನ್ ಬಂದಾಗ ಅಥವಾ ಯಾರಿಗಾದರೂ ಫೋನ್ ಮಾಡಿ ಮಾತನಾಡಬೇಕಾದಾಗ ಮನಸ್ಸಿನಲ್ಲಿ ಸಣ್ಣ ಆತಂಕ ಮೂಡುವುದು. ಸಾಮಾನ್ಯವಾಗಿ ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಫಲಿತಾಂಶದ ಕುರಿತು ಆತಂಕವಿರುತ್ತದೆ. ಆತಂಕದ ಬಗ್ಗೆ ಹೇಳುತ್ತ ಹೋದರೆ ಹನುಮನ ಬಾಲದಂತೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಅತಿಯಾದ ಯೋಚನೆ
ಹೆಚ್ಚು ಜನರಿರುವ ಪಾರ್ಟಿಗೆ ಇಲ್ಲವೇ ಮದುವೆ ಸಮಾರಂಭಗಳಿಗೆ ಹೋದಾಗ ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆ ಎಂದು ಮುಜುಗರ ಪಡುವುದು. ತಡರಾತ್ರಿಯಾದರೂ ಮಕ್ಕಳು ಮನೆಗೆ ಮರಳದೇ ಇದ್ದಾಗ ಮತ್ತು ಫೋನ್ ಕನೆಕ್ಟ್ ಆಗದೇ ಇದ್ದಾಗ ಪೋಷಕರಲ್ಲಿ ಮೂಡುವ ಕೆಟ್ಟ ಆಲೋಚನೆಗಳು ಮತ್ತು ತಳಮಳವನ್ನು ಕಾಣುತ್ತೇವೆ. ವಾಟ್ಸಪ್ನಲ್ಲಿ ಕಳುಹಿಸಿದ ಪ್ರಮುಖ ಮೆಸೇಜ್ಗೆ ಬ್ಲೂ ಟಿಕ್ ಬಂದರೂ ಆ ಕಡೆಯಿಂದ ಗಂಟೆಗಳ ಕಾಲ ರಿಪ್ಲೈ ಬರದಿದ್ದಾಗ ಅತಿಯಾಗಿ ಯೋಚಿಸುವುದು.
ಹಾಗೆ ನೋಡಿದರೆ ಆತಂಕವೆನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಎದುರಾಗುವ ಒಂದು ಸಾಮಾನ್ಯ ಭಾವನೆ. ಅದರಿಂದ ಆಚೆ ಬರುವುದು ಹೇಗೆ ಎಂಬುದಕ್ಕೆ ಇಲ್ಲಿವೆ ಕೆಲವು ತಂತ್ರಗಳು.
ಧನಾತ್ಮಕ ಆಲೋಚನೆ
ಆತಂಕದಲ್ಲಿದ್ದಾಗ ಮೆದುಳು ಕೇವಲ ಸಮಸ್ಯೆಗಳ ಬಗ್ಗೆ ಮಾತ್ರ ಯೋಚಿಸುತ್ತದೆ. ಆದರೆ ಧನಾತ್ಮಕ ಮನಸ್ಥಿತಿಯು ಸಮಸ್ಯೆಯನ್ನು ಬಿಟ್ಟು, ‘ಇದನ್ನು ಹೇಗೆ ಬಗೆಹರಿಸಬಹುದು?’ಎಂದು ಪರಿಹಾರದ ಕಡೆಗೆ ಗಮನ ಹರಿಸುತ್ತದೆ. ಇದರಿಂದ ಆತಂಕ ನಿವಾರಣೆಯಾಗುತ್ತದೆ. ‘ಒಂದು ಸಮಸ್ಯೆಗೆ ಪರಿಹಾರವಿದ್ದರೆ, ಚಿಂತಿಸುವ ಅಗತ್ಯವಿಲ್ಲ. ಒಂದು ಸಮಸ್ಯೆಗೆ ಪರಿಹಾರವೇ ಇಲ್ಲದಿದ್ದರೆ ಚಿಂತಿಸುವುದರಿಂದ ಯಾವುದೇ ಪ್ರಯೋಜನವಿಲ್ಲ.’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ ದಲೈ ಲಾಮಾ. ಅವರ ಪ್ರಕಾರ ಆತಂಕ ಎನ್ನುವುದು ಪ್ರಸ್ತುತ ಕ್ಷಣದಲ್ಲಿ ಬದುಕದೆ ಇರುವುದರ ಪರಿಣಾಮ.’ ನಿಯಂತ್ರಣದಲ್ಲಿ ಇಲ್ಲದ ವಿಷಯಗಳ ಬಗ್ಗೆ ಅತಿಯಾಗಿ ಯೋಚಿಸುವುದು ಆತಂಕಕ್ಕೆ ಎಡೆಮಾಡುತ್ತದೆ. ಆದ್ದರಿಂದ ಭವಿಷ್ಯದ ಬಗ್ಗೆ ಅತಿಯಾಗಿ ಆಲೋಚಿಸುವುದನ್ನು ನಿಲ್ಲಿಸಬೇಕು. ಪ್ರಸ್ತುತ ಕ್ಷಣದಲ್ಲಿ ಬದುಕುವುದನ್ನು ಕಲಿಯಬೇಕು.
ನಿಭಾಯಿಸಿ
ಪರಿಸ್ಥಿತಿಗಳು ನಮ್ಮ ಕೈಯಲ್ಲಿರುವುದಿಲ್ಲ. ಆದರೆ ಅವುಗಳ ನಿಭಾಯಿಸುವ ರೀತಿ ಖಂಡಿತ ನಮ್ಮ ಕೈಯಲ್ಲಿರುತ್ತದೆ. ಇನ್ನೊಂದು ನಿಜಾಂಶವೆಂದರೆ, ಯಾವುದೇ ಪರಿಸ್ಥಿತಿಗಳು ಆತಂಕವನ್ನು ಹೊಂದಿರುವುದಿಲ್ಲ. ಆ ಪರಿಸ್ಥಿತಿಯ ಬಗೆಗೆ ಯೋಚಿಸುತ್ತ ನಾವು ಆತಂಕಕ್ಕೆ ಒಳಗಾಗುತ್ತೇವೆ. ಪರಿಸ್ಥಿತಿಗಳನ್ನು ನಾವು ಹೇಗೆ ನೋಡುತ್ತೇವೆ ಮತ್ತು ಹೇಗೆ ಸ್ವೀಕರಿಸುತ್ತೇವೆ ಎಂಬುದು ಆತಂಕವನ್ನು ನಿರ್ಧರಿಸುತ್ತದೆ. ರೋಮನ್ ಚಕ್ರವರ್ತಿ ಮತ್ತು ತತ್ವಜ್ಞಾನಿ ಮಾರ್ಕಸ್ ಔರೆಲಿಯಸ್ ಹೇಳಿದ ಮಾತು ಹೀಗಿದೆ. ‘ಇಂದು ನಾನು ಆತಂಕದಿಂದ ಹೊರಬಂದೆ. ಅಥವಾ, ನಾನು ಆತಂಕವನ್ನು ನನ್ನಿಂದ ಹೊರಹಾಕಿದೆ ಎಂದು ಹೇಳಬಹುದು; ಏಕೆಂದರೆ ಆತಂಕವು ನನ್ನ ಒಳಗೇ ಇತ್ತು, ನನ್ನ ಹೊರಗಿನ ಪರಿಸ್ಥಿತಿಯಲ್ಲಲ್ಲ.’ ಆದ್ದರಿಂದ ನಾವು ಪರಿಸ್ಥಿತಿಗಳ ಬಗ್ಗೆ ತಲೆಕಿಡಿಸಿಕೊಳ್ಳದೇ ನಿಭಾಯಿಸುವುದರತ್ತ ಚಿತ್ತ ಹರಿಸಬೇಕು.
ದೃಷ್ಟಿಕೋನ

ನಮ್ಮ ಹಳೆಯ ಸೋಲುಗಳನ್ನು ಹರವಿಕೊಂಡು ಹೆದರುತ್ತೇವೆ. ಸಾಮರ್ಥ್ಯಗಳನ್ನು ನಂಬದೇ ಎದೆಗುಂದುತ್ತೇವೆ. ಎಡಿಸನ್ ಅವರ ಉದಾಹರಣೆಯಂತೆ ಅವರು ಸೋತಿದ್ದರು, ಆದರೆ ಗೆದ್ದರು; ನಾನೂ ಗೆಲ್ಲಬಲ್ಲೆ.’ ಎಂಬ ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದುವುದು ಉತ್ತಮ. ಭವಿಷ್ಯದ ಅನಿಶ್ವಿತತೆಯ ಕುರಿತು ಯೋಚಿಸುತ್ತ ಇಂದಿನ ದಿನವನ್ನು ಹಾಳು ಮಾಡಿಕೊಳ್ಳುವುದು ಆತಂಕ. ಇದನ್ನೇ ಪ್ರಸಿದ್ಧ ಮಾಧ್ಯಮ ವ್ಯಕ್ತಿತ್ವವಾಗಿರುವ ಒಪ್ರಾ ವಿನ್ಫ್ರೇ ಹೀಗೆ ಹೇಳಿದ್ದಾರೆ ‘ಆತಂಕ ಎನ್ನುವುದು ನಿಮ್ಮ ಶಕ್ತಿಯನ್ನು ಪ್ರಸ್ತುತ ಕ್ಷಣದಿಂದ ಕಸಿದುಕೊಂಡು, ಇನ್ನೂ ಬಾರದ ಭವಿಷ್ಯದ ಮೇಲೆ ವ್ಯರ್ಥ ಮಾಡುವುದಾಗಿದೆ.
ಗಮನ ಹರಿಸಿ
ನೈಜ ಪರಿಸ್ಥಿತಿಯತ್ತ ಗಮನಹರಿಸುವುದು ಆತಂಕವನ್ನು ನಿಯಂತ್ರಿಸಲು ಇರುವ ಅತ್ಯಂತ ಪರಿಣಾಮಕಾರಿ ಮಾರ್ಗ. ಮನದಲ್ಲಿ ಆತಂಕ ಮೂಡಿದಾಗ ‘ನಾನು ಯೋಚಿಸುತ್ತಿರುವುದು ಈಗ ನಿಜವಾಗಿಯೂ ನಡೆಯುತ್ತಿದೆಯೇ? ಎಂದು ಪ್ರಶ್ನಿಸಿಕೊಳ್ಳಿ. ನಾನು ಸುಮ್ಮನೆ ಹೆದರುತ್ತಿದ್ದೇನೆಯೇ? ಎಂದು ಯೋಚಿಸಿದಾಗ ಆತಂಕ ತಾನಾಗಿಯೇ ಕರಗಿ ಹೋಗುತ್ತದೆ. ಆತಂಕ ಎನ್ನುವುದು ಹೆಚ್ಚಾಗಿ ಭವಿಷ್ಯದಲ್ಲಿ ನಡೆಯಬಹುದಾದ ಕೆಟ್ಟ ಘಟನೆಗಳ ಕಲ್ಪನೆಯಾಗಿರುತ್ತದೆ. ಧನಾತ್ಮಕ ಚಿಂತನೆಯು ನಮ್ಮ ಗಮನವನ್ನು ಮುಂಬರುವ ಕಾಲ್ಪನಿಕ ಭಯದಿಂದ ಇಂದಿನ ನೈಜ ಪರಿಸ್ಥಿತಿಯ ಕಡೆಗೆ ತಿರುಗಿಸುತ್ತದೆ. ನಿಯಂತ್ರಣವಿಲ್ಲದ ವಿಷಯಗಳ ಮೇಲೆ ಗಮನ ಹರಿಸುತ್ತ ಆತಂಕಕ್ಕೆ ಬಲಿಯಾಗುವುದಕ್ಕಿಂತ ನೈಜ ಪರಿಸ್ಥಿತಿಯತ್ತ ಗಮನ ಹರಿಸುವುದು ಒಳಿತು.
ಕೊನೆ ಹನಿ
ಆತಂಕ ಎನ್ನುವುದು ಕೇವಲ ಮನಸ್ಸಿನ ಒಂದು ಕಲ್ಪನೆ. ಪ್ರಸ್ತುತ ಜೀವನವೇ ನಿಜವಾದ ಜೀವನ. ಆದರೆ ಮನಸ್ಸು ಕಾಲ್ಪನಿಕ ಚಿಂತೆಗಳತ್ತ ಓಡುವಾಗ ಅದನ್ನು ತಡೆಯುವುದು ನಮ್ಮ ಜವಾಬ್ದಾರಿ ಆಗಿದೆ. ಯಾವುದೇ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಸಾಧಕರು ಸಹ ಆತಂಕವನ್ನು ಎದುರಿಸಿದವರೇ ಆಗಿದ್ದಾರೆ. ಎಂಬುದನ್ನು ನೆನಪಿಡಿ. ‘ಸಮಸ್ಯೆಗಳು ಎಲ್ಲರ ಜೀವನದಲ್ಲೂ ಬರುತ್ತವೆ. ಆದರೆ ಆತಂಕಪಟ್ಟು ಕುಳಿತುಕೊಳ್ಳುವ ಬದಲು, ಆ ಸಮಸ್ಯೆಗಳನ್ನು ಎದುರಿಸುವ ಧೈರ್ಯವನ್ನು ನಾವು ಬೆಳಿಸಿಕೊಳ್ಳಬೇಕು. ಆಗ ಆತಂಕ ತಾವಾಗಿಯೇ ದೂರವಾಗುತ್ತದೆ.’ ಎಂದು ದಾರಿ ತೋರಿದ್ದಾರೆ ಎಪಿಜೆ ಅಬ್ದುಲ್ ಕಲಾಂ.
ಒಟ್ಟಿನಲ್ಲಿ ನಮ್ಮ ಮನಸ್ಸಿನಲ್ಲಿ ಮೂಡುವ ಅತಿಯಾದ ಚಿಂತೆ ಮತ್ತು ಭಯವೇ ಆತಂಕವಾಗಿ ಬದಲಾಗುತ್ತದೆ. ನಾಳೆ ಏನಾಗಬಹುದು ಎಂಬ ಆತಂಕ ಕಾಡುತ್ತಿರುವಾಗ,’ಈಗ ನಾನು ಏನು ಮಾಡಬಲ್ಲೆ.’ ಎಂದು ಯೋಚಿಸಿದಾಗ ಆತಂಕಕ್ಕೆ ಕೊನೆ ಹಾಡಬಲ್ಲೆವು. ಜೊತೆಗೆ ನೆಮ್ಮದಿಯ ತೀರದಲ್ಲಿ ಈ ಕ್ಷಣ ಬದುಕಬೇಕೆಂಬ ಹೊಸ ಪಯಣ ಶುರುವಾಗುವುದು.


