ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರ ‘ಶಿವಾನುಭವ’ ಪತ್ರಿಕೆಯ ಜನ್ಮ ಶತಮಾನೋತ್ಸವ ವರ್ಷ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೧೨ನೇ ಶತಮಾನದ ಬಸವಾದಿ ಶರಣರ ವಚನಗಳನ್ನು ಡಾ. ಫ.ಗು. ಹಳಕಟ್ಟಿ ಅವರು ಸಂಪಾದಿಸಿ ಪ್ರಕಟಿಸುತ್ತಿದ್ದ ‘ಶಿವಾನುಭವ’ ಪತ್ರಿಕೆಯ ಜನ್ಮಶತಮಾನೊತ್ಸವ ವರ್ಷವಿದು, ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂಪಾದಿಸಿ ಪ್ರಕಟಿಸದೇ ಹೋಗಿದ್ದರೆ ವಚನ ಸಾಹಿತ್ಯದ ಸಮಗ್ರ ದರ್ಶನ ನಮಗಾಗುತ್ತಿರಲಿಲ್ಲ ಎಂದು ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ. ಎಂ.ಎಸ್. ಮದಭಾವಿ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಸಾಂಸ್ಕೃತಿಕ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ೮೦ನೇ ಶಿವಾನುಭವ ಗೋಷ್ಠಿಯಲ್ಲಿ ಮಾತನಾಡಿದ ಅವರು ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರು ತಮ್ಮ ಸಮಸ್ತ ಬದುಕನ್ನೆ ಶರಣ ಸಾಹಿತ್ಯದ ಪುನರುಜ್ಜೀವನಕ್ಕಾಗಿ ಮೀಸಲಿಟ್ಟು, ‘ಶಿವಾನುಭವ’ ಪತ್ರಿಕೆ ಮೂಲಕ ಮುವತ್ತೈದು ವರ್ಷಗಳ ಕಾಲ ಶರಣ ಸಾಹಿತ್ಯವನ್ನು ಅವ್ಯಾಹತವಾಗಿ ಪ್ರಕಟಿಸಿ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚು ಮಾಡಿದರು. ಶಿವಶರಣರ ತತ್ವಗಳ ಉದ್ದೇಶವು ಶಿವನ ಅನುಭವ ಅಂದರೆ ಶಿವನನ್ನು ಕಾಣುವುದು, ಅರಿಯುವುದೇ ಮುಖ್ಯ. ಶಿವಾನುಭವ ಪತ್ರಿಕೆಯನ್ನು ಎಂತಹ ಗಂಡಾಂತರ ಬಂದರೂ ನಿಲ್ಲಿಸದೇ ಪ್ರಕಟಿಸಿದ್ದು ಅವರ ಶರಣ ಶೃದ್ದೆಗೆ ಹಿಡಿದ ಕನ್ನಡಿ ಪತ್ರಿಕೆಯು ಕನ್ನಡ ಧಾಮಿರ್ಕ, ಸಾಹಿತ್ತಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹತ್ವದ ಸ್ಥಾನವನ್ನು ಪಡೆದಿತ್ತು. ಉನ್ನತ ತತ್ವ ಪ್ರಚಾರ, ಧಾರ್ಮಿಕ ಚಿಂತನೆ ಸಾಹಿತ್ತಿಕ ಅರಿವು ಹಾಗೂ ಸಾಂಸ್ಕೃತಿಕ ಜಾಗೃತಿಯನ್ನು ಧ್ಯೇಯವನ್ನಾಗಿ ಮಾಡಿಕೊಂಡ ಪತ್ರಿಕೆಯು ಕನ್ನಡಿಗರಿಗೆ ಅಪಾರ ಜ್ಞಾನ ಸಂಪತ್ತು ಒದಗಿಸಿತು. ಅವರೊಬ್ಬ ೨೦ನೇ ಶತಮಾನದ ಸಂತ ಎಂದು ಹೇಳಿದರು.
ಮಹಾಸಭೆಯ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ ಡಾ. ಫ.ಗು. ಹಳಕಟ್ಟಿ ಅವರ ನೆಲ, ಜಲ, ನುಡಿ ಮೇಲಿರುವ ಅಭಿಮಾನ, ಬಡತನ ಆರೋಗ್ಯವನ್ನು ಕಾಪಾಡದೆ ವಚನ ಸಾಹಿತ್ಯವನ್ನು ಸಂಗ್ರಹಿಸಿದ ಮೊದಲಿಗರು. ಧಾರ್ಮಿಕ ಸಾಮಾಜಿಕವಾಗಿ ನಿಸ್ವಾರ್ಥದಿಂದ ತೊಡಗಿಸಿ ಕೊಂಡವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದರು ಎಂದರು.
ಇದೇ ಸಂದರ್ಭದಲ್ಲಿ ೨೦೨೬ರ ನಾಡಪ್ರಭು ಕೆಂಪೆಗೌಡ ಪ್ರಶಸ್ತಿಗೆ ಭಾಜನರಾದ ಬಿ.ಎಮ್. ಕೊಕರೆ ಅವರನ್ನು ಮಹಾಸಭೆಯ ಪದಾಧಿಕಾರಿಗಳು ಸನ್ಮಾನಿಸಿದರು.
ಅಪ್ಪಾಸಾಹೇಬ ಕೋರಿ, ನೂತನ ಬ್ಯಾಕೊಡ ವಚನಗೀತೆ ಪ್ರಸ್ತುತ ಪಡಿಸಿದರು. ಮಹಾಸಭೆಯ ಕಾರ್ಯದರ್ಶಿ ಬಿ.ಟಿ. ಈಶ್ವರಗೊಂಡ ಸ್ವಾಗತಿಸಿದರು. ಸಾಹಿತಿ ಸಂಗಮೇಶ ಬದಾಮಿ ನಿರೂಪಿಸಿದರು. ಮಹಾಸಭೆಯ ಉಪಾಧ್ಯಕ್ಷ ಸಹದೇವ ನಾಡಗೌಡರ ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ. ಎಸ್.ಕೆ. ಕೊಪ್ಪ, ರವೀಂದ್ರ ಬ್ಯಾಕೋಡ, ಭಾರತಿ ಬುಯ್ಯಾರ, ಮಹಾದೇವ ಹಾಲಳ್ಳಿ, ವಿಠ್ಠಲ ತೇಲಿ, ಮಲ್ಲಿಕಾರ್ಜುನ ಅಮರಣ್ಣವರ, ಕಮಲಾ ಗೆಜ್ಜಿ, ಡಾ. ಸಂಗಮೇಶ ಮೇತ್ರಿ, ಡಾ. ಸೋಮಶೇಖರ ವಾಲಿ, ಜಗದೀಶ ಮೊಟಗಿ, ಎಸ್.ವಾಯ್. ಶಿವಣಗಿ ಬಸವರಾಜ (ಅಪ್ಪು) ಇಟ್ಟಂಗಿ ದೊಡ್ಡಣ್ಣ ಭಜಂತ್ರಿ, ಸುಭಾಸ ಬೆಟಗೇರಿ, ಶಶಿಧರ ಶಿರಹಟ್ಟಿ, ಹಾಗೂ ಶರಣರು ಶರಣೆಯರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

