ಲೇಖನ
– ಸಂತೋಷ್ ರಾವ್ ಪೆರ್ಮುಡ.
ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು
ದ.ಕ ಜಿಲ್ಲೆ-೫೭೪೧೯೮
ದೂ: ೯೭೪೨೮೮೪೧೬೦
ಉದಯರಶ್ಮಿ ದಿನಪತ್ರಿಕೆ
ಒಂದು ಬೇಸಿಗೆಯ ಮಧ್ಯಾಹ್ನದ ವೇಳೆಗೆ ಹೆಬ್ಬುಲಿಯೊಂದು ಕಾಡು ಕೋಣವೊಂದನ್ನು ಭರ್ಜರಿ ಬೇಟೆಯಾಡಿ, ಹೊಟ್ಟೆ ತುಂಬುವಷ್ಟು ತಿಂದು ಮರವೊಂದರ ನೆರಳಿನಲ್ಲಿ ಹಾಯಾಗಿ ಮಲಗಿತ್ತು. ಆಗ ಹೆಬ್ಬುಲಿಯ ಕಿವಿಯ ಬಳಿ ನೊಣವೊಂದು ಗುಯ್ ಎನ್ನುತ್ತಾ ಹಾರಾಡತೊಡಗಿದಾಗ ಹುಲಿಗೆ ಎಚ್ಚರವಾಯಿತು. ಚೆನ್ನಾಗಿ ನಿದ್ರೆ ಮಾಡುತ್ತಿದ್ದ ಹುಲಿಗೆ ಇದರಿಂದ ಬಹಳ ಕೋಪ ಬಂತು. ನೊಣವನ್ನು ಓಡಿಸಲು ತನ್ನ ಮುಖ ಮತ್ತು ದೇಹವನ್ನು ಪಟಪಟನೇ ಕೊಡವಿತು. ಆಗ ಆ ನೊಣವು ಮೇಲಕ್ಕೆ ಹಾರಿ ಗರಗರನೇ ಸುತ್ತಿ ಬಂದು ಹುಲಿಯನ್ನು ಕೆರಳಿಸುವಂತೆ ಅದರ ಮೂಗಿನ ಮೇಲೆ ಕುಳಿತುಕೊಂಡಿತು. ನೊಣದ ಉದ್ಧಟತನವನ್ನು ಕಂಡ ಹೆಬ್ಬುಲಿಯ ಸಿಟ್ಟು ಹೆಚ್ಚಾಗಿ ತನ್ನ ಬಲಗಾಲನ್ನೆತ್ತಿ ನೊಣಕ್ಕೆ ಹೊಡೆಯಲು ಪ್ರಯತ್ನಿಸಿತು.
ಆದರೆ ಜಾಣ ನೊಣವು ಅಲ್ಲಿಂದ ಪಾರಾಗಿ ಮೇಲಕ್ಕೆ ಹಾರಿದಾಗ ಹುಲಿಯ ಕಾಲು ಅದರ ಮುಖಕ್ಕೇ ಅಪ್ಪಳಿಸಿ ಅತಿಯಾದ ನೋವಾಯಿತು, ಹುಲಿಯ ಕಣ್ಣಲ್ಲಿ ನೀರು ಬಂದಿತು. ಇದನ್ನು ನೋಡಿದ ನೊಣವು ಗಹಗಹಿಸಿ ನಗುತ್ತಾ, ‘ನೀನ್ಯಾವ ಸೀಮೆಯ ರಾಜನಯ್ಯ? ನನ್ನಂಥ ಸಣ್ಣ ನೊಣವನ್ನು ಹಿಡಿಯಲೂ ನಿನ್ನಿಂದಾಗದು’ ಎಂದಿತು.
ಈಗ ಹುಲಿಯು ಎದ್ದು ನಿಂತು ನೊಣದೊಂದಿಗೆ ಹೋರಾಟಕ್ಕೆ ಮುಂದಾಯಿತು.

ನೊಣಕ್ಕೂ ಈ ರೀತಿಯ ಯುದ್ಧ ಖುಷಿಯೆನಿಸಿ ಹುಲಿಯ ತಲೆಯನ್ನು ಸುತ್ತುತ್ತಾ, ಕ್ಷಣಮಾತ್ರದಲ್ಲಿ ಅದರ ಕಣ್ಣಿನ ಹತ್ತಿರ ಬಂದು, ಮತ್ತೆ ಅದರ ಕಿವಿಯೊಳಗೆ ಹೋಗಿ, ಮತ್ತೆ ಹೊರಬಂದು ಹುಲಿಯ ಬಾಯಿಯ ಹತ್ತಿರವೇ ಬಂದಿತು. ಅದನ್ನು ಕಚ್ಚಿ ಬಿಡಬೇಕೆಂದು ಸಿಂಹ ಬಾಯ್ತೆರೆದು ಮುನ್ನುಗ್ಗಿದಾಗ, ಮುಂದಿದ್ದ ಮರಕ್ಕೆ ಹುಲಿಯ ಮುಖವು ಜೋರಾಗಿ ಬಡಿದು ಹುಲಿ ಕುಸಿತು ಬಿತ್ತು. ನೆಲಕ್ಕೆ ಉರುಳಿದ ಹುಲಿಯನ್ನು ನೋಡಿ ನೊಣಕ್ಕೆ ಬಹಳ ಖುಷಿಯಾಯಿತು. ಹ್ಹ..ಹ್ಹ.ಹಹ್ಹ… ಕಾಡಿನ ರಾಜ ಹುಲಿರಾಯ ನೆಲಕ್ಕುರುಳಿ ಹೊರಳಾಡುತ್ತಿದ್ದಾನೆ.
ಒಂದು ನೊಣದಿಂದ ತಪ್ಪಿಸಿಕೊಳ್ಳುವುದು ನಿನ್ನಿಂದ ಸಾಧ್ಯವಿಲ್ಲ. ನನ್ನ ಶಕ್ತಿ ಎಂಥದ್ದು ಎಂದು ನಿನಗೆ ತಿಳಿಯಿತೇ? ಎಷ್ಟು ದೊಡ್ಡದಾದ ದೇಹವನ್ನು ನೀನು ಹೊಂದಿದ್ದರೂ ನಿನ್ನ ಕಾಲಿನಲ್ಲಿ ಶಕ್ತಿಯಿಲ್ಲ, ನಿನ್ನ ಅಬ್ಬರದ ಘರ್ಜನೆಯನ್ನು ಕೇಳಿ ದೊಡ್ಡ ದೊಡ್ಡ ಪ್ರಾಣಿಗಳೂ ಹೆದರುತ್ತವಂತೆ, ಅವೆಷ್ಟು ಹೇಡಿಗಳಿರಬೇಕು? ನಿನ್ನ ಶಕ್ತಿಯು ನನ್ನ ಪುಟ್ಟ ರೆಕ್ಕೆಗಳಿಗೂ ಸಮವಲ್ಲ. ನಿನ್ನಂಥ ಹತ್ತಾರು ಹೆಬ್ಬುಲಿಗಳನ್ನು ನಾನು ಕ್ಷಣ ಮಾತ್ರದಲ್ಲಿ ಸೋಲಿಸಬಲ್ಲೆ’ ಎಂದೆಲ್ಲಾ ನೊಣವು ಬಡಾಯಿಯ ಮಾತನ್ನು ಆಡತೊಡಗಿತು.
ನೊಣದ ಬಡಾಯಿಯನ್ನು ಮರದ ಮೇಲಿಂದ ಗಮನಿಸುತ್ತಿದ್ದ ಗಿಳಿಯೊಂದು ನೊಣದ ಹತ್ತಿರಕ್ಕೆ ಹಾರಿ ಬಂದು, ‘ಗೆಳೆಯಾ, ನಿನ್ನ ಶಕ್ತಿಯು ನಿಜವಾಗಿಯೂ ಅದ್ಭುತವೇ. ಆದರೆ, ನನ್ನೊಂದಿಗೆ ಈ ಮರದ ಮೇಲಿನ ಕೊಂಬೆಯವರೆಗೆ ಬರಬಲ್ಲೆಯಾ’ ಎಂದು ಕೇಳಿತು. ಆಗಷ್ಟೇ ಹುಲಿಯನ್ನು ಸೋಲಿಸಿದ್ದ ಅಮಲಿನಲ್ಲಿದ್ದ ನೊಣವು ಅದೇ ಅಹಂಕಾರದಿಂದ ಗಿಳಿಯೊಂದಿಗೆ ಹಾರಿ, ಅದನ್ನೇ ಹಿಂಬಾಲಿಸಿಕೊಂಡು ಹಾರತೊಡಗಿತು.
ಗಿಳಿ ಮೇಲೆ ಹಾರುತ್ತಿದ್ದಂತೆ ನೊಣವೂ ಸಹಿತ ಅದನ್ನು ಹಿಂಬಾಲಿಸಿತು. ಗಿಳಿಯು ಹಾರುತ್ತಾ ಕೂಡಲೇ ಬದಿಗೆ ಸರಿಯಿತು. ಗಿಳಿಯ ಹಿಂದೆಯೇ ಸಾಗುತ್ತಿದ್ದ ನೊಣವು ಇದನ್ನು ಗಮನಿಸದೇ ಮುನ್ನುಗ್ಗಿದಾಗ ಅಲ್ಲಿ ಹರಡಿಕೊಂಡಿದ್ದ ಜೇಡರ ಬಲೆಯೊಳಗೆ ಸಿಕ್ಕಿಕೊಂಡಿತು. ಏನೇ ಮಾಡಿದರೂ, ಎಷ್ಟೇ ಒದ್ದಾಟ ಮಾಡಿದರೂ ಬಲೆಯಿಂದ ಬಿಡಿಸಿಕೊಳ್ಳಲು ಆಗಲಿಲ್ಲ. ಅಷ್ಟರಲ್ಲಿ ಜೇಡರ ಹುಳವು ತನ್ನ ಬಲೆಯನ್ನು ಮತ್ತಷ್ಟು ಬಿಗಿದು ನೊಣದ ಪ್ರಾಣವನ್ನು ಹೀರಲು ಆರಂಭಿಸಿತು. ಆಗ ಗಿಳಿಯು ‘ಅಯ್ಯಾ, ಕಾಡಿನ ರಾಜ ಹುಲಿಯನ್ನು ಸೋಲಿಸಿದೆ ಎಂದು ಬೀಗುತ್ತಿದ್ದ ನೀನು ಈ ಪುಟ್ಟ ಬಲೆಯಿಂದ ಮತ್ತು ಜೇಡರ ಹುಳದಿಂದ ತಪ್ಪಿಸಿಕೊಳ್ಳಲಾರೆ. ಇನ್ನು ನಿನ್ನ ಅಹಂಕಾರಕ್ಕೆ ಅವಕಾಶವೇ ಇಲ್ಲ’ ಎಂದು ಹೇಳಿ ಅಲ್ಲಿಂದ ಹಾರಿ ಹೋಯಿತು.
ಯಾವುದೋ ಪುಣ್ಯದ ಫಲದಿಂದ ಮತ್ತು ಇತರರ ಸಹಕಾರದಿಂದ ಕೆಲವೊಮ್ಮೆ ದೊಡ್ಡ ಸಾಧನೆಗಳು ನಮ್ಮಿಂದ ಮೂಡಿ ಬರುತ್ತವೆ. ಅದೇ ರೀತಿ ಇತರರ ಮತ್ತು ಸಾಧಕರ ಸಾಧನೆಯನ್ನು ಸರಿಗಟ್ಟುವ ಅವಕಾಶಗಳೂ ನಮಗೆ ಬರುತ್ತವೆ. ಅಂತಹ ಸಾಧನೆಯು ನಮ್ಮಿಂದ ಮೂಡಿ ಬಂದಾಗ ಆ ಅಹಂ ನಮ್ಮ ತಲೆಗೆ ಏರಬಾರದು. ಪ್ರತಿ ಬಾರಿಯೂ ಉತ್ಕೃಷ್ಟ ಮಟ್ಟದ ಸಾಧನೆಯನ್ನು ಮಾಡಲು ಸಾಧ್ಯವಾಗದೇ ಇರಬಹುದು. ಅದಕ್ಕಾಗಿ ಈ ಹಿಂದಿನ ಸಾಧನೆಯನ್ನೇ ತಲೆಗೆ ಏರಿಸಿಕೊಂಡು ಅದರ ಬಗ್ಗೆ ಗರ್ವಪಡುತ್ತಿದ್ದರೆ ಒಂದಲ್ಲ ಒಂದು ದಿನ ತೀರ ಸಣ್ಣವರಿಂದ ಮತ್ತು ಅಶಕ್ತರಿಂದ ಸೋಲು ಎದುರಾಗಿ ಮುಖಭಂಗಕ್ಕೆ ಈಡಾಗಬೇಕಾಗುತ್ತದೆ. ಮತ್ತು ಅದಕ್ಕೆ ಖುದ್ದು ನಾವೇ ಜವಾಬ್ದಾರರು ಆಗುತ್ತೇವೆ. ಸಾಧನೆಯ ೧೦೦% ಪಾಲನ್ನು ಎಲ್ಲರಿಗೂ ಹಂಚುವವನು ಸದಾ ಗೆಲ್ಲಬಲ್ಲ.


