ಭವಿಷ್ಯಕ್ಕಾಗಿ ಠೇವಣಿ ಇಟ್ಟಿದ್ದ ಹಣವನ್ನು ಮರಳಿಸುವಂತೆ ಸರ್ಕಾರಕ್ಕೆ ನೊಂದ ಠೇವಣಿದಾರರ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ಬೆಳಗಾವಿ: ಬಹು ಕೋಟಿ ವಂಚನೆ ಹಗರಣದ ಬೆಳಗಾವಿ ಮೂಲದ ಸಂಗೊಳ್ಳಿ ರಾಯಣ್ಣ ಸಹಕಾರಿ ಸಂಸ್ಥೆಯಲ್ಲಿ ಸಾವಿರಾರು ಜನರು ತಮ್ಮ ಉಳಿತಾಯಕ್ಕಾಗಿ ಭವಿಷ್ಯಕ್ಕಾಗಿ ಠೇವಣಿ ಇಟ್ಟಿದ್ದ ಹಣವನ್ನು ಮರಳಿಸುವಂತೆ ನೊಂದ ಠೇವಣಿದಾರರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ನೊಂದ ಠೇವಣಿದಾರರು, ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅರ್ಬನ್ ಕೋಆಪರೇಟಿವ್ ಸೊಸೈಟಿಯ ಉದ್ಯಮಿ ಆನಂದ ಅಪ್ಪುಗೋಳ ಎಂಬುವವರು ಠೇವಣಿದಾರರಿಗೆ ಪಂಗನಾಮ ಹಾಕಿದ್ದು, ಸಾವಿರಾರು ಕೋಟಿ ಆಸ್ತಿಯ ದಾಖಲೆ ಇದ್ದರೂ ಸಹ ಕಳೆದ ಏಳು ವರ್ಷದಿಂದ ಸಂಗೊಳ್ಳಿ ರಾಯಣ್ಣ ಸಹಕಾರಿ ಹಣಕಾಸು ಸಂಸ್ಥೆಯ ಅವ್ಯವಹಾರ ಇನ್ನೂ ಇತ್ಯರ್ಥವಾಗಿಲ್ಲ. 2020 ರಲ್ಲಿ ಬೆಳಗಾವಿ ಅಸಿಸ್ಟೆಂಟ್ ಕಮಿಷನರ್ ಕಚೇರಿಯಲ್ಲಿ ಎಲ್ಲರಿಗೂ ಠೇವಣಿ ಪಾತ್ರದ ನಕಲು ಪ್ರತಿಗಳನ್ನು ಹಚ್ಚಲು ಹೇಳಿ ಅರ್ಜಿಗಳನ್ನು ಸ್ವೀಕರಿಸಿದರು. ಬಡವರು ಕಾರ್ಮಿಕರು ಮದ್ಯಮ ವರ್ಗದವರು ಅರ್ಜಿ ಸಲ್ಲಿಸಿ ತಾವು ತುಂಬಿದ ಠೇವಣಿ ಹಣ ಬರುವುದೆಂದು ದಾರಿ ಕಾಯ್ದರು. ನಾಲ್ಕು ವರ್ಷ ಗತಿಸಿದವು. ಕಳೆದ ಡಿಸೆಂಬರ್ ನಲ್ಲಿ ವಿಶೇಷಾಧಿಕಾರಿ ( KPID ) ಕಂದಾಯ ಇಲಾಖೆಗೆ ಒಳಪಟ್ಟ ಸಂಸ್ಥೆ ಮತ್ತೆ ಪತ್ರಿಕೆಯಲ್ಲಿ ಜಾಹಿರಾತು ಮಾಡಿ, ಠೇವಣಿದಾರರು ಮತ್ತೆ ಅರ್ಜಿ ಸಲ್ಲಿಸಲು ಹೇಳಿದರು. ಬಡವರು ಕೂಲಿ ಕಾರ್ಮಿಕರು ಬೆಂಗಳೂರಿನ ಮಹಾನಗರದಲ್ಲಿ ರಸ್ತೆ ಬದಿ ಮಲಗಿ ತಮ್ಮ ಕಾಗದ ಪತ್ರಗಳನ್ನು ಸಲ್ಲಿಸಿದರು. ಅದನ್ನು ಅತ್ಯಂತ ಶಿಸ್ತುಬದ್ಧವಾಗಿ ಪರಿಶೀಲಿಸಿ ಅದಕ್ಕೆ ರಸೀದಿ ನೀಡಿದರು. ಹಣ ಬರುತ್ತದೆ ಎಂದು ಈವರೆಗೆ ಕಾದ ಜನರ ನಂಬಿಕೆ ಈಗ ಹುಸಿಯಾಗಿದೆ. 12 ತಿಂಗಳು ಕಳೆದ ನಂತರ ಈಗ ಅಸಿಸ್ಟೆಂಟ್ ಕಮಿಷನರ್ ಕೆ ಪಿ ಐ ಡಿ ಮೂರನೆಯ ಮತ್ತು ನಾಲ್ಕನೆಯ ಮಹಡಿ ಪೋಡಿಯಂ ಬ್ಲಾಕ್ ಡಾ ಅಂಬೇಡ್ಕರ ವೀಧಿ ಬೆಂಗಳೂರ ಕಚೇರಿಯಲ್ಲಿ ದಿನವಿಡೀ ತಪಾಸಣೆ ಮಾಡಿ, ಮುದುಕರು, ಮಹಿಳೆಯರು ಸಲ್ಲಿಸಿದ ಅರ್ಜಿಗಳು ಈಗ ಮತ್ತೆ ತಿರಸ್ಕ್ರತವೆಂದು ಪತ್ರ ಹಾಕಿದ್ದಾರೆ.
ಇನ್ನಾದರೂ ಬಡವರ ಅಳಲನ್ನು ಅರ್ಥಮಾಡಿಕೊಂಡು ಮುಖ್ಯಮಂತ್ರಿ ಸಿದ್ಧರಾಮಯ್ಯ, ಕಂದಾಯ ಮಂತ್ರಿ ಕೃಷ್ಣಾ ಭೈರೇಗೌಡ, ಸಹಕಾರ ಮಂತ್ರಿ ಕೆ ಏನ್ ರಾಜಣ್ಣ ಈ ಕೂಡಲೇ ಜನರಿಗೆ ಸಹಾಯ ಮಾಡಿ ನ್ಯಾಯ ಒದಗಿಸಬೇಕೆಂದು ಕೋರಿದ್ದಾರೆ.
ಈಗಾಗಲೇ ಸಾಕಷ್ಟು ವಿಳಂಬವಾಗಿದ್ದಕ್ಕೆ ಠೇವಣಿದಾರರಿಗೆ ಮೋಸ ಮಾಡಿದ ಆನಂದ ಅಪ್ಪುಗೋಳ ಇವರ ಅಸ್ತಿ ಜಪ್ತಿ ಮಾಡಿ, ತನಿಖೆ ನಡೆಸಿ, ಶಿಕ್ಷೆ ಕೊಡದ ಸರಕಾರದ ಮೇಲೆ ಠೇವಣಿದಾರರಿಗೆ ಸಂಶಯ ಮೂಡುತ್ತಿದೆ. ಈಗಾಗಲೇ ಇದರಲ್ಲಿ ಎಷ್ಟೋ ಜನರು ಸತ್ತಿದ್ದಾರೆ. ಒಂದು ವೇಳೆ ಸಮಯಕ್ಕೆ ಸರಿಯಾಗಿ ಹಣ ಬರದಿದ್ದರೆ ಮತ್ತಷ್ಟು ಜನರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗ ಬಂದಿದೆ. ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳ ಕಿರುಕಳ ತಪ್ಪಿಸಿ ಸನ್ಮಾನ್ಯ ಮುಖ್ಯ ಮಂತ್ರಿಗಳು ಈ ಕೂಡಲೇ ಠೇವಣಿ ಇಟ್ಟ ಹಣವನ್ನು ಸಂಗೊಳ್ಳಿ ರಾಯಣ್ಣ ಅರ್ಬನ್ ಸಹಕಾರ ಸಂಸ್ಥೆಯಿಂದ ಮರುಪಾವತಿಸದಿದ್ದರೆ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತಗೆ ಎಂದು ಎಚ್ಚರಿಸಿದ್ದಾರೆ.
ಕಾರಣ ಕೂಡಲೇ ಸರ್ಕಾರ ಆನಂದ ಅಪ್ಪುಗೋಳ ಆಸ್ತಿಯನ್ನು ಹರಾಜು ಹಾಕಿ ಎಲ್ಲ ಸ್ಥಿರ ಚರ ಆಸ್ತಿ ಜಪ್ತಿ ಮಾಡಿ, ಅವನ ಬೇನಾಮಿ ಆಸ್ತಿ ಸರಕಾರ ಮುಟ್ಟುಗೋಲು ಹಾಕಿ, ಬಡವರ ಕಾರ್ಮಿಕರ ಮಾಧ್ಯಮ ವರ್ಗದವರ ಮಹಿಳೆಯರ ಹಣವನ್ನು ನ್ಯಾಯಾಲಯದ ಆದೇಶದಂತೆ ಮರು ಪಾವತಿಸಬೇಕೆಂದು ನೊಂದ ಠೇವಣಿದಾರರು ಪ್ರಕಟಣೆ ಮೂಲಕ ಅಲವತ್ತುಕೊಂಡಿದ್ದಾರೆ.

