ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹುಟ್ಟುಕಿವುಡುತನದಿಂದ ಬಳಲುವ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ವರದಾನವಾಗಿದ್ದು, ಇದರಿಂದ ಬಡ ಮತ್ತು ಕೂಲಿಕಾರ್ಮಿಕರ ಮಕ್ಕಳಿಗೆ ಸಾಕಷ್ಟು ಅನುಕೂಲಾವಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ನಗರದ ಬಿ.ಎಲ್.ಡಿ.ಇ ಆಸ್ಪತ್ರೆಯ ಟ್ರಾಮಾ ಸೆಂಟರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹುಟ್ಟುಕಿವುಡುತನದಿಂದ ಬಳಲುತ್ತಿದ್ದ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ನಡೆಸಿ ಕಿವಿ ಕೇಳಿಸುವಂತೆ ಮಾಡಲು ಸಾಫ್ಟವೇರ್ ಅಳವಡಿಸಲಾಗಿದೆ. ಈ ಧ್ವನಿ ಆಲಿಸುವ ತಂತ್ರಜ್ಞಾನದ ಸ್ವಿಚ್ ಆನ್(Switch on) ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗೆ ಸುಮಾರು ರೂ. 7.50 ಲಕ್ಷದಿಂದ ರೂ. 15 ಲಕ್ಷದ ವರೆಗೆ ವೆಚ್ಚ ತಗಲುತ್ತದೆ. ಆದರೆ, ಸರಕಾರದ ಯೋಜನೆಯಡಿ ಈ ಸೌಲಭ್ಯವನ್ನು ಪಡೆಯುವ ಅವಕಾಶವಿದ್ದು, ಇಂಥ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಲು ಬಿ.ಎಲ್.ಡಿ.ಈ ಆಸ್ಪತ್ರೆಯಲ್ಲಿ ಸಕಲ ಸೌಲಭ್ಯಗಳು ಲಭ್ಯವಿವೆ. ಇಲ್ಲಿನ ವೈದ್ಯರು ಇದೇ ಮೊದಲ ಬಾರಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ವಿಜಯಪುರ ಮತ್ತು ಸುತ್ತಮುತ್ತಲಿನ ಭಾಗದಲ್ಲಿ ಈ ಸಮಸ್ಯೆ ಎದುರಿಸುತ್ತಿರುವ ಮಕ್ಕಳಿಗೆ ಈ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಹುಟ್ಟು ಕಿವುಡುತನ ಸಮಸ್ಯೆ ಎದುರಿಸುತ್ತಿರುವ ಮಕ್ಕಳು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಇದಕ್ಕೂ ಮೊದಲು ಹೊಸ ಆ್ಯಂಬೂಲನ್ಸ್ ಉದ್ಘಾಟಿಸಿದರು. ಅಲ್ಲದೇ, ನೂತನವಾಗಿ ಪ್ರಾರಂಭಿಸಲಾಗಿರುವ 128 ಸ್ಲೈಸ್ ಕಂಪ್ಯೂಟೆಡ್ ಟೊಮೊಗ್ರಾಫಿ ಮತ್ತು ಕಾರ್ಡಿಯಾಕ್ ಸಿಟಿ ಸ್ಕ್ಯಾನ್(128 Slice Computed Tomography And Cardiac CT Scan)ನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ ಸದಸ್ಯರಾದ ಬಲ್ಕಿಷ ಬಾನು, ವಸಂತಕುಮಾರ, ಜಗದೇವ ಗುತ್ತೇದಾರ, ತಿಪ್ಪಣ್ಣ ಕಮತನೂರ, ಬೆಂಗಳೂರಿನ ಕಾಕ್ಲಿಯರ್ ಇಂಪ್ಲಾಂಟ್ ಸರ್ಜನ್ ಡಾ. ವಾಸಂತಿ ಆನಂದ, ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಪತಿ ಡಾ. ಆರ್. ಎಸ್. ಮುಧೋಳ, ಫಾಕಲ್ಟಿ ಆಫ್ ಮೆಡಿಸೀನ್ ಡೀನ್ ಡಾ. ತೇಜಸ್ವಿನಿ ವಲ್ಲಭ, ಆಸ್ಪತ್ರೆಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಉಪಪ್ರಾಚಾರ್ಯ ಡಾ. ಎಂ. ಬಿ. ಪಾಟೀಲ, ಡಾ. ಸುಮಂಗಲಾ ಪಾಟೀಲ, ವೈದ್ಯೆ ಡಾ. ಲತಾದೇವಿ ಎಚ್. ಟಿ. ಡಾ. ಆರ್. ಎನ್. ಕರಡಿ, ಡಾ. ಅಶೋಕ ಥರಡಿ, ಡಾ. ಶರಣಪ್ಪ ಕಟ್ಟಿ, ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪಗೊಳ, ರೇಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ. ರಾಜಶೇಖರ ಮುಚ್ಚಂಡಿ ಉಪಸ್ಥಿತರಿದ್ದರು.