ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ: ಹಳೆ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ನಮ್ಮ ಕಾಂಗ್ರೆಸ್ ಸರ್ಕಾರ ಮುಜರಾಯಿ ಇಲಾಖೆ ವತಿಯಿಂದ 100 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಅದರಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಒಂದು ಕೋಟಿ 4 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಶುರುವಾಗಲಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ತಾಲೂಕಿನ ಹೆಚ್ ಮಟಕೆರೆ ಗ್ರಾಮದಲ್ಲಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಅನಿಲ್ ಚಿಕ್ಕಮಾದು ಅವರು, ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಸುತ್ತಮುತ್ತ ಕಾಂಪೌಂಡ್, ನೆಲೆಹಾಸಿಗೆ ಮತ್ತು ಸೋರಿಕೆ ತಡೆತಟ್ಟುವಂತೆ ಚಪ್ಪಡಿ ಕಲ್ಲು ಹಾಕುವುದಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದೇನೆ. ಮೈಸೂರು-ಮಾನಂದವಾಡಿ ಮುಖ್ಯರಸ್ತೆಯಿಂದ ದೇವಸ್ಥಾನದವರೆಗೆ ರಸ್ತೆ ನಿರ್ಮಾಣಕ್ಕೆ ಮನವಿ ಮಾಡಿದ್ದೀರಿ. ಮುಂದಿನ ದಿನಗಳಲ್ಲಿ ರಸ್ತೆ ದುರಸ್ತಿಗೆ ಪ್ರಾಮಾಣಿಕ ಕೆಲಸ ಮಾಡುತ್ತೇನೆ. ಹಂತ ಹಂತವಾಗಿ ನಿಮ್ಮ ಎಲ್ಲ ಬೇಡಿಕೆ ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು.
ಹೆಚ್ ಮಟಕೆರೆ ಗ್ರಾಮದಲ್ಲಿ ಯಾವುದೇ ಜಾತಿ, ಧರ್ಮ, ಭೇದಭಾವ ಮಾಡದೇ ಎಲ್ಲಾ ಸಮುದಾಯದವರು ಒಟ್ಟಾಗಿ ನಿಂತು ದೇವಸ್ಥಾನ ಜಿರ್ಣೋದಾರಕ್ಕೆ ಕೈ ಜೋಡಿಸುತ್ತಿರುವುದು ಸಂತಸದ ವಿಷಯ. ಹಲವಾರು ವರ್ಷಗಳಿಂದ ಎಲ್ಲಾ ಸಮಾಜದವರು ಒಟ್ಟಾಗಿ ನಿಂತುಕೊಂಡು ಶ್ರೀ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ಮಾಡಿಕೊಂಡು ಬರುತ್ತಿದ್ದು, ನನ್ನ ಕೈಲಾದ ಸಹಾಯ ಕೂಡ ಮಾಡಿದ್ದೇನೆ. ಕಳೆದ 7 ವರ್ಷಗಳಲ್ಲಿ ಅನೇಕ ಅಭಿವೃದ್ಧಿ ಕೆಲಸ ಕಾರ್ಯ ಮಾಡಿಕೊಂಡು ಬಂದಿದ್ದೇನೆ. ಮುಸ್ಲಿಂ ಬ್ಲಾಕ್ ನಲ್ಲಿ ಸಮುದಾಯ ಭವನಕ್ಕೆ 20 ಲಕ್ಷ, ಅಂಬೇಡ್ಕರ್ ಸಮುದಾಯ ಭವನಕ್ಕೆ 20 ಲಕ್ಷ, ಚಿಕ್ಕದೇವಮ್ಮ ದೇವಸ್ಥಾನಕ್ಕೆ 5 ಲಕ್ಷ, ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ 20 ಲಕ್ಷ , ಒಕ್ಕಲಿಗರ ಸಮುದಾಯ ಭವನಕ್ಕೆ 10 ಲಕ್ಷ ರೂಪಾಯಿ.. ಹೀಗೆ ನಾನು ಶಾಸಕರಾದ ಬಳಿಕ ನೂರಾರು ಕೋಟಿ ರೂಪಾಯಿ ಅನುದಾನ ತಂದು ಕೆಲಸ ಮಾಡಿಸಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ರಾಮಲಿಂಗೇಶ್ವರ ಸಮಿತಿ ಅಧ್ಯಕ್ಷ ಭಾಸ್ಕರ್ ಗೌಡ, ಉಪಾಧ್ಯಕ್ಷ ವಿರಾಜ್ ನಾಯಕ, ಕಾರ್ಯದರ್ಶಿ ರುದ್ರ, ತಾಲೂಕು ಕಾಂಗ್ರೆಸ್ ವಕ್ತಾರ ಅಶೋಕ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಅಜರುದ್ದೀನ್, ರಾಜುನಾಯಕ, ನಾಡಗೌಡರಾದ ಜಯಶಂಕರ್ ಗೌಡ, ಮುಖಂಡರಾದ ವೆಂಕಟೇಶ್, ವೀರಭದ್ರನಾಯಕ, ಕೃಷ್ಣ, ರಹಮತ್ ಅಲೀಬೇಗ್, ರಾಜೇಶ್, ಉಮೇಶ್, ಆಟೋ ನಾಗರಾಜು, ಡಿಸಿ ಸ್ವಾಮಿ, ಬೀದಿ ಬದಿ ವ್ಯಾಪಾರಿಗಳ ಜಿಲ್ಲಾ ಉಪಾಧ್ಯಕ್ಷರಾದ ಉಮೇಶ್, ಅರ್ಚಕ ಜಯಚಂದ್ರ ಸೇರಿದಂತೆ ಕಾಂಗ್ರೆಸ್ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.

