ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಆರ್ಥಿಕ ತಜ್ಞ ಜಾಕ್ವೆಸ್ ಕೂಸ್ಟೋ ಅವರು “ಮಿತಿಮೀರಿದ ಬೆಳೆಯುವ ಜನಸಂಖ್ಯೆಯಿಂದ ಇಂದು ನಾವು ಎದುರಿಸುತ್ತಿರುವ ಪ್ರತಿಯೊಂದು ಪರಿಸರ ಸಮಸ್ಯೆಗೆ ಮೂಲ ಕಾರಣವಾಗಿದೆ”. ಎಂದು ಹೇಳಿದ್ದಾರೆ. ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗುವ ಸಮಸ್ಯೆಗಳಾದ ಬಡತನ, ನಿರುದ್ಯೋಗ ಮತ್ತು ಸಂಪನ್ಮೂಲಗಳ ಕೊರತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಇಂದಿನ ಅಗತ್ಯತೆಯಾಗಿದೆ.
ಜಗತ್ತಿನಾದ್ಯಂತ ಜನಸಂಖ್ಯೆ ನಿಯಂತ್ರಣದ ಜಾಗೃತಿ, ಅರಿವು ಮೂಡಿಸುವುದು ಹಾಗೂ ಸಾರ್ವಜನಿಕರಲ್ಲಿ ಜನಸಂಖ್ಯಾ ಸ್ಪೋಟ ಮತ್ತು ಅದರಿಂದುಂಟಾಗುವ ಸಮಸ್ಯೆಗಳ ಬಗ್ಗೆ ಗಮನ ಹರಿಸುವಂತೆ ಮಾಡುವುದೇ ಈ ವಿಶ್ವ ಜನಸಂಖ್ಯಾ ದಿನಾಚರಣೆಯ ಪ್ರಮುಖ ಉದ್ಧೇಶವಾಗಿದೆ. ಈ ದಿನಾಚರಣೆಯನ್ನು ಪ್ರತಿವರ್ಷ ಜುಲೈ ೧೧ ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.
ಮೊಟ್ಟಮೊದಲು ಈ ದಿನಾಚರಣೆಯನ್ನು ೧೯೮೯ ರಲ್ಲಿ ಸಂಯುಕ್ತ ರಾಷ್ಟçಗಳ ಅಭಿವೃದ್ಧಿ ಕಾರ್ಯಕ್ರಮ ಆಡಳಿತ ಮಂಡಳಿಯ ವತಿಯಿಂದ ಆಚರಿಸಲಾಯಿತು.
ಜಾಗೃತಿ ಆಂದೋಲನವಾಗಬೇಕು
ವಿಶ್ವ ಜನಸಂಖ್ಯಾ ದಿನಾಚರಣೆಯು ಒಂದು ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುವ ಆಂದೋಲನವಾಗಿದ್ದು, ಈ ದಿನದ ಆಚರಣೆಯ ಮೂಲಕ ವರ್ಷದಿಂದ ವರ್ಷಕ್ಕೆ ತೀವ್ರಗತಿಯಲ್ಲಿ ಬೆಳೆಯುತ್ತಿರುವ ಮತ್ತು ಗಂಭೀರ ಸ್ವರೂಪವನ್ನು ಪಡೆಯುತ್ತಿರುವ ಜನಸಂಖ್ಯಾ ಸ್ಪೋಟಕ್ಕೆ ಕಾರಣಗಳು, ಅದರ ನಿಯಂತ್ರಣ ಮತ್ತು ಅದರಿಂದ ಮನುಕುಲದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ಹಾಗೂ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಂಡು ಜನರಲ್ಲಿ ಒಂದೇ ವೇದಿಕೆಯಲ್ಲಿ ಕರೆತರುವ ಹಾಗೂ ಜಾಗೃತಿ ಮೂಡಿಸುವ ಈ ದಿನದ ಪ್ರಮುಖ ಧ್ಯೇಯವಾಗಿದೆ.
ರಾಷ್ಟ್ರದ ಆರ್ಥಿಕ ಪ್ರಗತಿಗೆ ಜನಸಂಖ್ಯೆ ನಿಯಂತ್ರಣ ಅಗತ್ಯ
ಭಾರತದಂತಹ ಮಿಶ್ರ ಆರ್ಥಿಕ ವ್ಯವಸ್ಥೆ ಹೊಂದಿದ ರಾಷ್ಟçಕ್ಕೆ ಜನಸಂಖ್ಯೆಯು ಪ್ರಮುಖ ಸಮಸ್ಯೆಯಾಗಿದೆ. ದೇಶದಲ್ಲಿನ ಜನಸಂಖ್ಯೆಯ ಸಮಸ್ಯೆಯನ್ನು ಕಿತ್ತೊಗೆಯಲು ಹಲವು ಪ್ರಯತ್ನಗಳು ನಡೆಯುತ್ತಿವೆ. ಆದ್ದರಿಂದ ಜನಸಂಖ್ಯೆಯ ಹೆಚ್ಚಳದ ಮೇಲೆ ನಿಯಂತ್ರಣವನ್ನು ಹೊಂದುತ್ತಾ ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟçಗಳ ನಡುವೆ ಆರ್ಥಿಕ ಪ್ರಗತಿಯನ್ನು ಸಾಧಿಸುವಲ್ಲಿ ಸಮತೋಲನ ಕಾಯ್ದುಕೊಳ್ಳಬೇಕಾಗಿದೆ. ತೀವ್ರಗತಿಯಲ್ಲಿ ಬೆಳೆಯುತ್ತಿರುವ ಜನಸಂಖ್ಯೆಯಿಂದ ದೇಶದಲ್ಲಿ ಅಜ್ಞಾನ, ಅನಕ್ಷರತೆ, ಬಡತನ, ನಿರುದ್ಯೋಗ, ಅನಾರೋಗ್ಯ ಜೀವನ ಹಾಗೂ ಆಹಾರ ಸಮಸ್ಯೆಯಂತಹ ಅನೇಕ ಸಮಸ್ಯೆಗಳು ದೇಶವನ್ನು ಬೆಂಬಿಡದೇ ಕಾಡುತ್ತಿವೆ. ಈ ದಿನಾಚರಣೆಯ ಮೂಲಕ ಜನರಲ್ಲಿ ಜನಸಂಖ್ಯಾ ನಿಯಂತ್ರಣದ ಕುರಿತು ಗಂಭೀರವಾಗಿ ಚರ್ಚೆ, ಆಲೋಚನೆ, ಕಠಿಣ ನಿರ್ಧಾರ, ಚಿಕ್ಕ ಕುಟುಂಬ ಮತ್ತು ಕುಟುಂಬ ಕಲ್ಯಾಣ ಯೋಜನೆಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಕಾರ್ಯರೂಪದಲ್ಲಿ ತರಬೇಕಾಗಿರುವದು ಇಂದಿನ ಅಗತ್ಯವಾಗಿದೆ.

ಮಿತ ಸಂತಾನ ಸುಖೀ ಜೀವನವೆಂಬ ಮಂತ್ರ ಜಪಿಸಿ
“ನಾವಿಬ್ಬರೂ ನಮಗಿಬ್ಬರು” ಹಾಗೂ “ಆರತಿಗೊಬ್ಬ ಮಗಳು ಕೀರ್ತಿಗೊಬ್ಬ ಮಗ” ಎಂಬ ಘೋಷಣೆಯಡಿಯಲ್ಲಿ ಅನೇಕ ಮಹತ್ತರವಾದ ಹಾಗೂ ಪ್ರೋತ್ಸಾಹದಾಯಕವಾದ ಯೋಜನೆಗಳನ್ನು ಕುಟುಂಬ ಕಲ್ಯಾಣ ಇಲಾಖೆಯು ರೂಪಿಸಿ ತನ್ಮೂಲಕ ಜನಸಂಖ್ಯೆ ಏರಿಕೆಯನ್ನು ತಡೆಗಟ್ಟುವದು ಹಾಗೂ ನಿಯಂತ್ರಣ ಸಾಧಿಸವುದು ಇಂದಿನ ಅವಶ್ಯಕತೆಯಾಗಿದೆ. ಚಿಕ್ಕ, ಸ್ವಾಸ್ಥ್ಯ, ಆರೋಗ್ಯಯುತ ಹಾಗೂ ಸುಸ್ಥಿರ ಸಮಾಜದ ನಿರ್ಮಾಣಕ್ಕಾಗಿ ಹಾಗೂ ದೇಶದ ಆರ್ಥಿಕಾಭಿವೃದ್ಧಿಗೆ ಪೂರಕವಾಗುವಂತೆ ಜನಸಂಖ್ಯೆ ನಿಯಂತ್ರಣದ ದೃಢವಾದ ಹೆಜ್ಜೆಯನ್ನಿಡಬೇಕಾಗಿದೆ. ೨೦೧೧ ರಲ್ಲಿ ಪ್ರಪಂಚದ ಒಟ್ಟು ಜನಸಂಖ್ಯೆಯು ಅಂದಾಜು ೭೦೦ ಕೋಟಿಗಳಷ್ಟು ತಲುಪಿದಾಗ ಜಾಗತಿಕ ಮಟ್ಟದಲ್ಲಿ ರಾಷ್ಟ್ರಗಳ ಅಭಿವೃದ್ಧಿ ಮತ್ತು ಪ್ರಗತಿಯೆಂಬುದು ಒಂದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಹೀಗೆ ದೇಶದ ಪ್ರಗತಿಗೆ ಮಾರಕವಾಗುತ್ತಿರುವ ಜನಸಂಖ್ಯಾ ಸ್ಪೋಟದ ಪರಿಣಾಮಗಳನ್ನು ಮನಗಂಡು, ಗುರುತಿಸಿ ಅದಕ್ಕೆ ನೈಜ ಪರಿಹಾರ ಕಂಡಕೊಳ್ಳಲು ಹಾಗೂ ಜನಸಂಖ್ಯೆ ಹೆಚ್ಚಳದ ಬಗ್ಗೆ ಸಾರ್ವಜನಿಕರ ಗಮನ ಸೆಳೆಯಲು ಈ ದಿನಾಚರಣೆಯನ್ನು ಪ್ರಾರಂಭಿಸಲಾಯಿತು.
ಜನಸಂಖ್ಯಾ ಸ್ಪೋಟದಿಂದ ಆರ್ಥಿಕತೆ ಕುಂಠಿತ: ೧೯೫೧ ರಲ್ಲಿ ಕೇವಲ ೩೬ ಕೋಟಿಗಳಷ್ಟಿದ್ದ ಭಾರತದ ಜನಸಂಖ್ಯೆಯು ೧೯೮೧ ರ ಹೊತ್ತಿಗೆ ಅದು ೭೦ ಕೋಟಿಗೆ ತಲುಪಿತು. ಜೂನ್ ೨೦೨೬ರ ಅಂತ್ಯದ ವೇಳಗೆ ಭಾರತದ ಜನಸಂಖ್ಯೆ ಅಂದಾಜು ೧೪೭. ೬೫ ಕೋಟಿ ಮೀರಿದೆ. ಅದೇ ರೀತಿ ವಿಶ್ವದ ಜನಸಂಖ್ಯೆಯು ೨೦೧೬ ರಲ್ಲಿ ೭೪೦ ಕೋಟಿಯಷ್ಟು ಇದ್ದದ್ದು, ಏಪ್ರೀಲ್ ೨೦೧೭ ರ ವೇಳೆಗೆ ಅದು ೭೫೦ ಕೋಟಿಯಷ್ಟಿತ್ತು. ಪ್ರಸ್ತುತ ೮೩೦ ಕೋಟಿಗೂ ಮೀರಿದ ಬೆಳೆಸಯುತ್ತಿರುವದು ನಿಜಕ್ಕೂ ಕಳವಳಕಾರಿ ಸಂಗತಿ. ಜನನ ಪ್ರಮಾಣದಲ್ಲಿ ಏರಿಕೆ ಹಾಗೂ ಆಧುನಿಕ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಾಗುತ್ತಿರುವ ಅಮೂಲಾಗ್ರ ಸುಧಾರಣೆಗಳು ಹಾಗೂ ಸೌಲಭ್ಯಗಳಿಂದ ಮರಣ ಪ್ರಮಾಣವು ಗಣನೀಯವಾಗಿ ಇಳಿಕೆಯಾಗುತ್ರಿರುವ ಜನಸಂಖ್ಯಾ ಸ್ಪೋಟಕ್ಕೆ ಮುಖ್ಯ ಕಾರಣವೆನ್ನಬಹುದು. ಅಷ್ಟೇ ಅಲ್ಲದೆ ಜನಸಂಖ್ಯೆ ಹೆಚ್ಚಳವಾದಷ್ಟು ಸಮಸ್ಯೆಯು ಹೆಚ್ಚಾಗುತ್ತಲೇ ಹೋಗುತ್ತಿವೆ. ಹಿಂದಿನ ಕಾಲದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸಂಪನ್ಮೂಲವಿತ್ತು. ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅಗತ್ಯ ಸಂಪನ್ಮೂಲದ ಕೊರತೆ ಉಂಟಾಗುತ್ತಿರುವದರಿಂದ ದೇಶದ ಆರ್ಥಿಕ ಪ್ರಗತಿ ಕುಂಠಿತಗೊಳ್ಳಲು ಕಾರಣೀಭೂತವಾಗಿದೆ. ಇದರಿಂದ ದೇಶದಲ್ಲಿ ಬಡತನ, ನಿರುದ್ಯೋಗದಂತಹ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ.
೨೦೨೬ ನೇಯ ವರ್ಷದ ಘೋಷವಾಕ್ಯ
ಈ ವರ್ಷದ ವಿಶ್ವ ಜನಸಂಖ್ಯಾ ದಿನವು “ಯುವಜನರ ಭರವಸೆಗಳು ಮತ್ತು ಆಕಾಂಕ್ಷೆಗಳನ್ನು ನನಸು ಮಾಡುವುದು; ಇಂದು ಮತ್ತು ಭವಿಷ್ಯಕ್ಕಾಗಿ” ಎಂಬ ಧ್ಯೇಯವಾಕ್ಯದೊಂದಿಗೆ ನಾಳಿನ ಭವಿಷ್ಯದಲ್ಲಿ ಯುವಜನತೆಯ ಆಶೋತ್ತರಗಳನ್ನು ಈಡೇರಿಸಬೇಕಾದರೆ ಇಂದೇ ನಾವು ಜನಸಂಖ್ಯೆಯನ್ನು ನಿಯಂತ್ರಿಸಿಕೊಂಡು, ರಾಷ್ಟ್ರದ ಆರ್ಥಿಕಾಭಿವೃದ್ಧಿಗೆ ನಾಂದಿ ಹಾಡಬೇಕು ಎನ್ನುವ ಸಂದೇಶವಿದೆ. ಭವಿಷ್ಯದಲ್ಲಿ ಯುವಕರ ಸಬಲೀಕರಣದ ಜತೆಗೆ ರಾಷ್ಟ್ರವನ್ನು ಆರ್ಥಿಕತೆಯಲ್ಲಿ ಸಂಪನ್ಮೂಲ, ಸುಸ್ಥಿರ ಮತ್ತು ಪ್ರಗತಿಗೆ ಬುನಾದಿಯಾಗಬೇಕು.
ಉಪಸಂಹಾರ
“ಹುಟ್ಟಿದ ದೇವರು ಹುಲ್ಲು ಮೇಯಿಸುತ್ತಾನೆಯೇ” ಎಂಬಂತಹ ಮೌಢ್ಯತೆಯನ್ನು ಹೋಗಲಾಡಿಸಬೇಕು. ಆದ್ದರಿಂದ ಜನಸಂಖ್ಯೆಯಲ್ಲಿ ಏರಿಕೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡು ರಾಷ್ಟçದ ಅಭಿವೃದ್ಧಿಗೆ ಕಾರ್ಯಕ್ರಮಗಳು ಪರಿಣಾಮಕಾರಿ ಹಾಗೂ ಯಶಸ್ವಿಯಾಗಬೇಕಾದರೆ ಹಾಗೂ ಭಾರತವು ಸಂಪದ್ಭರಿತವಾಗಲು ಜನಸಂಖ್ಯೆ ನಿಯಂತ್ರಣ ಅತಿ ಅವಶ್ಯಕವಾಗಿದೆ. ಜನರಲ್ಲಿರುವ ಆದರೆ ಈ ವಿಶ್ವ ಜನಸಂಖ್ಯಾ ದಿನಾಚರಣೆಯ ಹೆಸರಿನಲ್ಲಿ ಜನಸಂಖ್ಯಾ ಸ್ಪೋಟದ ಸಮಸ್ಯೆಗಳನ್ನು ತಡೆಯುವ ಸಲುವಾಗಿ ಸಮಾಜ, ಸಮುದಾಯ ಮತ್ತು ಜನರೊಂದಿಗೆ ಕೈ ಜೋಡಿಸುವ ನಿಟ್ಟಿನಲ್ಲಿ ಕೂಡಿ ಕೆಲಸ ಮಾಡಲು ವಿವಿಧ ಆರೋಗ್ಯ ಸಂಸ್ಥೆಗಳು, ಶೈಕ್ಷಣಿಕ ಸ್ಪರ್ಧೆಗಳಾದ ಚರ್ಚಾಕೂಟ, ಚಿತ್ರಕಲೆ ಆಯೋಜಿಸುವದು ಹಾಗೂ ರೇಡಿಯೋ, ದೂರದರ್ಶನಗಳಲ್ಲಿ ಪ್ರಸಾರ ಸಂವಾದ ಹಾಗೂ ಜನಸಂಖ್ಯಾ ಸಂಬಂಧಿತ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವದು ಅವಶ್ಯಕ. ಈ ದೇಶದ ಪ್ರಜೆಗಳಾದ ನಾವು-ನಿವೆಲ್ಲರೂ “ಮಿತ ಸಂತಾನ ಹಿತ ಸಂತಾನ” ಎಂಬುದನ್ನು ಅರಿತು ಜನಸಂಖ್ಯೆ ನಿಯಂತ್ರಿಸುವಲ್ಲಿ ಕ್ರಮ ವಹಿಸಬೇಕಾಗಿದೆ ಮತ್ತು ಜವಾಬ್ದಾರಿಯನ್ನು ಹೊಂದಬೇಕಾಗಿದೆ. ಈ ಕಾರ್ಯವು ಕೇವಲ ಸರಕಾರದ ಯೋಜನೆ, ಕಾರ್ಯಕ್ರಮ ಅಥವಾ ಆಂದೋಲನವಾಗಬಾರದು. ದೇಶದ ಜವಾಬ್ದಾರಿಯುತ ಪ್ರಜೆಗಳಾದ ನಾವೆಲ್ಲರೂ ನಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಜನಸಂಖ್ಯಾ ನಿಯಂತ್ರಣದಲ್ಲಿ ಸರಕಾರ, ಸಂಘ-ಸಂಸ್ಥೆ ಹಾಗೂ ಸರಕಾರೇತರ ಸಂಸ್ಥೆಗಳೊಂದಿಗೆ ಕೈ ಜೋಡಿಸಿದಾಗ ಮಾತ್ರ ವಿಶ್ವ ಜನಸಂಖ್ಯಾ ದಿನಾಚರಣೆಯು ಒಂದು ಅರ್ಥಪೂರ್ಣವಾಗಲು ಸಾಧ್ಯ. ಶಾಲೆ-ಕಾಲೇಜುಗಳಲ್ಲಿ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಾ, ವಿದ್ಯಾರ್ಥಿಗಳಿಗೆ ಜನಸಂಖ್ಯಾ ನಿಯಂತ್ರಣವಿಲ್ಲದೇ ಹೋದರೆ ಏನೆಲ್ಲ ಸಮಸ್ಯೆಗಳು ಉಂಟಾಗುತ್ತವೆ ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕು.


