ಲೇಖನ
– ಅವಿನಾಶ ಸೆರೆಮನಿ
ಬೈಲಹೊಂಗಲ
ಬೆಳಗಾವಿ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಪ್ರತಿ ವರ್ಷ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ. ಜನಸಂಖ್ಯೆಯ ಬೆಳವಣಿಗೆ, ಅದರ ಸವಾಲುಗಳು, ಸಂಪನ್ಮೂಲಗಳ ಸಮರ್ಪಕ ಬಳಕೆ ಹಾಗೂ ಸುಸ್ಥಿರ ಅಭಿವೃದ್ಧಿಯ ಕುರಿತು ಜನರಲ್ಲಿ ಅರಿವು ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
ಜನಸಂಖ್ಯೆ ಒಂದು ದೇಶದ ಶಕ್ತಿಯೂ ಹೌದು, ಸವಾಲೂ ಹೌದು. ಅದು ಎಷ್ಟರ ಮಟ್ಟಿಗೆ ಅವಕಾಶವಾಗುತ್ತದೆ ಮತ್ತು ಎಷ್ಟರ ಮಟ್ಟಿಗೆ ಭಾರವಾಗುತ್ತದೆ ಎಂಬುದು ಆ ದೇಶದ ಯೋಜನೆ, ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಸಂಪನ್ಮೂಲ ನಿರ್ವಹಣೆಯ ಮೇಲೆ ಅವಲಂಬಿತವಾಗಿದೆ.

2026ರ ವಿಶ್ವ ಜನಸಂಖ್ಯಾ ದಿನದ ಧ್ಯೇಯವಾಕ್ಯ
“ಇಂದಿನ ಮತ್ತು ಭವಿಷ್ಯದ ಯುವಜನರ ಭರವಸೆಗಳು ಮತ್ತು ಆಕಾಂಕ್ಷೆಗಳನ್ನು ಸಾಕಾರಗೊಳಿಸುವುದು”ಎಂದರೆ ಪ್ರಸ್ತುತ ಇರುವ ಮತ್ತು ಮುಂದಿನ ಪೀಳಿಗೆಯ ಯುವಕರ ಕನಸುಗಳು, ಗುರಿಗಳು ಮತ್ತು ಆಸೆಗಳನ್ನು ಈಡೇರಿಸುವುದು ಎಂದರ್ಥ.
ಒಂದು ಕಾಲದಲ್ಲಿ ಮನೆಯಲ್ಲಿ ಹೆಚ್ಚು ಜನಸಂಖ್ಯೆ ಇದ್ದರೆ ಹೆಚ್ಚು ಕೆಲಸದ ಕೈಗಳು” ಇವೆ ಎಂಬ ಮೂಢ ಅಭಿಪ್ರಾಯವಿತ್ತು. ಇಂದಿನ ಪರಿಸ್ಥಿತಿಯಲ್ಲಿ ಅನಿಯಂತ್ರಿತ ಜನಸಂಖ್ಯೆ ಹೆಚ್ಚಳವು ಅಭಿವೃದ್ಧಿಯ ಹಾದಿಯಲ್ಲಿ ದೊಡ್ಡ ಅಡೆತಡೆಯಾಗಿ ಪರಿಣಮಿಸಿದೆ. ಅಭಿವೃದ್ಧಿಯ ಕನಸುಗಳು ಕಾಣುತಿದ್ದೇವೆ ಆದರೆ ವಾಸ್ತವದಲ್ಲಿ ಅವು ಮರೀಚಿಕೆಯಂತೆ ದೂರ ಸರಿಯುತ್ತವೆ. ಆದ್ದರಿಂದಲೆ ಅತಿಯಾಗುತ್ತಿರುವ ಜನಸಂಖ್ಯೆಯಿಂದ ಅಭಿವೃದ್ಧಿ ಕುಂಠಿತವಾಗಿದೆ.
ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ಆಹಾರ, ನೀರು, ವಸತಿ, ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಸಾರಿಗೆ ಸೇರಿದಂತೆ ಪ್ರತಿಯೊಂದು ಮೂಲಭೂತ ಅಗತ್ಯದ ಮೇಲೂ ಒತ್ತಡ ಹೆಚ್ಚಾಗಿ ಕೊರತೆ ಉಂಟಾಗುತ್ತದೆ. ಸರ್ಕಾರಗಳು ಹೊಸ ಯೋಜನೆಗಳನ್ನು ರೂಪಿಸಿದರೂ, ಹೆಚ್ಚುತ್ತಿರುವ ಜನಸಂಖ್ಯೆಯ ವೇಗಕ್ಕೆ ತಕ್ಕಂತೆ ಸೌಲಭ್ಯಗಳನ್ನು ಒದಗಿಸುವುದು ಕಷ್ಟಕರವಾಗುತ್ತದೆ. ಪರಿಣಾಮವಾಗಿ ಅಭಿವೃದ್ಧಿಯ ಲಾಭ ಎಲ್ಲರಿಗೂ ಸಮಾನವಾಗಿ ತಲುಪುವುದಿಲ್ಲ.
ನಗರಗಳಲ್ಲಿ ದಿನದಿಂದ ದಿನಕ್ಕೆ ಜನಸಂದಣಿ ಹೆಚ್ಚುತ್ತಿದೆ. ಗ್ರಾಮಗಳಿಂದ ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗುವವರ ಸಂಖ್ಯೆ ಏರುತ್ತಿದೆ. ಇದರ ಪರಿಣಾಮವಾಗಿ ಕೊಳಚೆ ಪ್ರದೇಶಗಳು ವಿಸ್ತರಿಸುತ್ತಿವೆ, ಸಂಚಾರ ದಟ್ಟಣೆ ಹೆಚ್ಚುತ್ತಿದೆ, ಮಾಲಿನ್ಯ ತೀವ್ರಗೊಳ್ಳುತ್ತಿದೆ ಮತ್ತು ಜೀವನದ ಗುಣಮಟ್ಟ ಕುಸಿಯುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಕಟ್ಟಡಗಳು ಏಳುತ್ತಿವೆ; ಆದರೆ ಮಾನವನ ನೆಮ್ಮದಿ ಮಾತ್ರ ಕುಸಿಯುತ್ತಿದೆ.ಶಿಕ್ಷಣ ಕ್ಷೇತ್ರವೂ ಜನಸಂಖ್ಯೆಯ ಒತ್ತಡವನ್ನು ಅನುಭವಿಸುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಗುಣಮಟ್ಟದ ಶಿಕ್ಷಣ, ಸಮರ್ಪಕ ಶಿಕ್ಷಕರು ಹಾಗೂ ಮೂಲಸೌಕರ್ಯ ಎಲ್ಲೆಡೆ ಸಮರ್ಪಕವಾಗಿ ದೊರೆಯುತ್ತಿಲ್ಲ. ಶಿಕ್ಷಣದ ಉದ್ದೇಶ ಕೇವಲ ಪದವಿ ನೀಡುವುದಲ್ಲ ಉತ್ತಮ ನಾಗರಿಕರನ್ನು ರೂಪಿಸುವುದಾಗಿದೆ. ಆದರೆ ಅತಿಯಾದ ಒತ್ತಡದಿಂದ ಶಿಕ್ಷಣದ ಗುಣಮಟ್ಟಕ್ಕೆ ಧಕ್ಕೆಯಾಗುವ ಅಪಾಯ ಎದುರಾಗಿದೆ.

ಉದ್ಯೋಗದ ಕ್ಷೇತ್ರದಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ಪ್ರತಿವರ್ಷ ಲಕ್ಷಾಂತರ ಯುವಕರು ವಿದ್ಯಾಭ್ಯಾಸ ಮುಗಿಸಿ ಉದ್ಯೋಗಕ್ಕಾಗಿ ಕಾಯುತ್ತಾರೆ. ಆದರೆ ಉದ್ಯೋಗಾವಕಾಶಗಳ ಪ್ರಮಾಣದಲ್ಲಿ ತೀರಾ ಕಡಿಮೆ. ಇದರ ಪರಿಣಾಮವಾಗಿ ನಿರುದ್ಯೋಗ, ಅರೆನಿರುದ್ಯೋಗ ಸಮಸ್ಯೆಗಳು ಹೆಚ್ಚಾಗುತ್ತಿವೆ ಕೆಲವರು ವಿದೇಶಗಳತ್ತ ಮುಖ ಮಾಡುತ್ತಾರೆ; ಇನ್ನೂ ಕೆಲವರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಅವಕಾಶವಿಲ್ಲದೆ ಸಂಕಷ್ಟ ಅನುಭವಿಸುತ್ತಾರೆ.
ಪರಿಸರದ ಮೇಲೂ ಜನಸಂಖ್ಯೆಯ ಒತ್ತಡ ಸ್ಪಷ್ಟವಾಗಿ ಗೋಚರಿಸುತ್ತದೆ. ಕಾಡುಗಳು ಕಡಿಮೆಯಾಗುತ್ತಿವೆ ಜಲಮೂಲಗಳು ಒಣಗುತ್ತಿವೆ, ಕೃಷಿಭೂಮಿಗಳು ವಸತಿ ಪ್ರದೇಶಗಳಾಗಿ ಮಾರ್ಪಡುತ್ತಿವೆ. ಭೂಮಿಯ ಸಂಪನ್ಮೂಲಗಳು ಸೀಮಿತವಾಗಿದ್ದರೂ, ಅವುಗಳ ಮೇಲಿನ ಬೇಡಿಕೆ ದಿನೇದಿನೇ ಹೆಚ್ಚುತ್ತಿದೆ. ಇದರಿಂದ ಭವಿಷ್ಯದ ಪೀಳಿಗೆಗೆ ಅಗತ್ಯವಾದ ನೈಸರ್ಗಿಕ ಸಂಪತ್ತು ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚುತ್ತಿದೆ.
ಆರೋಗ್ಯ ಕ್ಷೇತ್ರದಲ್ಲಿಯೂ ಇದೇ ಸಮಸ್ಯೆ ಕಾಣಿಸುತ್ತದೆ. ಆಸ್ಪತ್ರೆಗಳಲ್ಲಿ ಜನದಟ್ಟಣೆ, ವೈದ್ಯರ ಕೊರತೆ, ಔಷಧಿಗಳ ಮೇಲಿನ ಹೆಚ್ಚಿದ ಬೇಡಿಕೆ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತಡ ಹೆಚ್ಚುತ್ತಿವೆ. ಉತ್ತಮ ಆರೋಗ್ಯ ಸೇವೆ ಎಲ್ಲರಿಗೂ ತಲುಪಬೇಕಾದರೆ ಜನಸಂಖ್ಯೆಯ ಬೆಳವಣಿಗೆ ಮತ್ತು ಆರೋಗ್ಯ ಮೂಲಸೌಕರ್ಯಗಳ ಅಭಿವೃದ್ಧಿ ಸಮತೋಲನದಲ್ಲಿರಬೇಕು.
ಆದಾಗ್ಯೂ ಜನಸಂಖ್ಯೆಯನ್ನೇ ಸಂಪೂರ್ಣ ಸಮಸ್ಯೆ ಎಂದು ನೋಡುವುದು ಸರಿಯಲ್ಲ. ಆರೋಗ್ಯವಂತ, ವಿದ್ಯಾವಂತ, ಕೌಶಲ್ಯಯುತ ಮತ್ತು ಉತ್ಪಾದಕ ಜನಸಂಖ್ಯೆ ಯಾವುದೇ ರಾಷ್ಟ್ರದ ದೊಡ್ಡ ಆಸ್ತಿಯಾಗಬಹುದು. ಆದ್ದರಿಂದ ಸಮಸ್ಯೆ ಜನಸಂಖ್ಯೆಯ ಅಸ್ತಿತ್ವದಲ್ಲಲ್ಲ; ಅದರ ಅನಿಯಂತ್ರಿತ ಬೆಳವಣಿಗೆಯಲ್ಲಿ ಮತ್ತು ಸಮರ್ಪಕ ಯೋಜನೆಯ ಕೊರತೆಯಲ್ಲಿದೆ.
ಈ ಸವಾಲನ್ನು ಎದುರಿಸಲು ಜನರಲ್ಲಿ ಜಾಗೃತಿ ಅತ್ಯಗತ್ಯ. ಕುಟುಂಬ ಯೋಜನೆ, ಮಹಿಳಾ ಶಿಕ್ಷಣ, ಹೆಣ್ಣುಮಕ್ಕಳ ಸಬಲೀಕರಣ, ತಾಯಿ-ಮಗು ಆರೋಗ್ಯ, ಸಮಾನ ಅವಕಾಶಗಳು ಮತ್ತು ಜವಾಬ್ದಾರಿಯುತ ಪೋಷಕತ್ವಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಶಿಕ್ಷಣ ಪಡೆದ ಮಹಿಳೆಯರು ಮತ್ತು ಆರೋಗ್ಯಕರ ಕುಟುಂಬ ವ್ಯವಸ್ಥೆ ಸಮಾಜದ ಅಭಿವೃದ್ಧಿಗೆ ಬಲವಾದ ಅಡಿಪಾಯವಾಗುತ್ತವೆ.
ಸರ್ಕಾರಗಳು ಜನಸಂಖ್ಯೆ ನಿಯಂತ್ರಣದ ಜೊತೆಗೆ ಗುಣಮಟ್ಟದ ಶಿಕ್ಷಣ, ಉದ್ಯೋಗ ಸೃಷ್ಟಿ, ಗ್ರಾಮೀಣ ಅಭಿವೃದ್ಧಿ, ಸುಸ್ಥಿರ ಕೃಷಿ, ಪರಿಸರ ಸಂರಕ್ಷಣೆ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ದೀರ್ಘಕಾಲೀನ ಯೋಜನೆಗಳನ್ನು ರೂಪಿಸಬೇಕು. ಕೇವಲ ಅಂಕಿಅಂಶಗಳ ಅಭಿವೃದ್ಧಿಯಲ್ಲ, ಪ್ರತಿಯೊಬ್ಬ ನಾಗರಿಕನ ಜೀವನಮಟ್ಟ ಸುಧಾರಿಸುವ ಅಭಿವೃದ್ಧಿಯೇ ನಿಜವಾದ ಪ್ರಗತಿ.
ವಿಶ್ವ ಜನಸಂಖ್ಯಾ ದಿನವು ಕೇವಲ ಆಚರಣೆಯ ದಿನವಲ್ಲ ಅದು ಆತ್ಮಾವಲೋಕನದ ದಿನ. ನಾವು ನಮ್ಮ ಕುಟುಂಬ, ಸಮಾಜ ಮತ್ತು ದೇಶದ ಭವಿಷ್ಯದ ಬಗ್ಗೆ ಯೋಚಿಸಬೇಕಾದ ದಿನ. ಅಭಿವೃದ್ಧಿ ಎನ್ನುವುದು ಎತ್ತರದ ಕಟ್ಟಡಗಳು, ಅಗಲವಾದ ರಸ್ತೆಗಳು ಅಥವಾ ದೊಡ್ಡ ಕೈಗಾರಿಕೆಗಳಿಂದ ಮಾತ್ರ ಅಳೆಯಲಾಗುವುದಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ಶಿಕ್ಷಣ, ಆರೋಗ್ಯ, ಉದ್ಯೋಗ, ಸುರಕ್ಷಿತ ಪರಿಸರ ಮತ್ತು ಘನತೆಯ ಜೀವನ ದೊರೆತಾಗ ಮಾತ್ರ ಅದನ್ನು ನಿಜವಾದ ಅಭಿವೃದ್ಧಿ ಎನ್ನಬಹುದು. ಜನಸಂಖ್ಯೆ ಹೆಚ್ಚಿದಷ್ಟೇ ದೇಶ ಅಭಿವೃದ್ಧಿಯಾಗುವುದಿಲ್ಲ. ಮಾನವ ಸಂಪನ್ಮೂಲದ ಗುಣಮಟ್ಟ ಹೆಚ್ಚಿದಾಗ ಮಾತ್ರ ರಾಷ್ಟ್ರ ಸಮೃದ್ಧಿಯಾಗುತ್ತದೆ. ಇಲ್ಲವಾದರೆ ಅಭಿವೃದ್ಧಿಯ ಕನಸು ಮರಳುಗಾಡಿನ ಮರೀಚಿಕೆಯಂತೆ ಕಾಣುತ್ತಲೇ ಇರುತ್ತದೆ ಹತ್ತಿರ ಹೋದಂತೆ ಮತ್ತಷ್ಟು ದೂರ ಸರಿಯುತ್ತದೆ. ದೇಶದ ಜನಸಂಖ್ಯೆ ಹೆಚ್ಚುತ್ತಾ ಹೋಗಿ ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ.
ಆಗ ಅಭಿವೃದ್ಧಿ ಕನಸಾಗಿಯೇ ಉಳಿಯುತ್ತದೆ.


