ಕರಿ ಮಸೂತಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ ಶಾಸಕ ಲಕ್ಷ್ಮಣ ಸವದಿ ಭರವಸೆ
ಉದಯರಶ್ಮಿ ದಿನಪತ್ರಿಕೆ
ಅಥಣಿ: ತಾಲೂಕಿನ ರೈತರ ಬಹುದಿನದ ಬೇಡಿಕೆಯಾಗಿದ್ದ ಕರಿ ಮಸೂತಿ ಏತ ನೀರಾವರಿ ಯೋಜನೆಯ ಜಾಕ್ವೆಲ್ ಕಂ ಪಂಪ್ಹೌಸ್ನಲ್ಲಿ ಬುಧವಾರ ಹಲ್ಯಾಳ ಗ್ರಾಮದಲ್ಲಿ ಶಾಸಕ ಲಕ್ಷ್ಮಣ ಸವದಿ ಅವರು ಪಂಪ್ಸೆಟ್ಗೆ ಚಾಲನೆ ನೀಡುವ ಮೂಲಕ ಕೆನಾಲ್ಗಳಿಗೆ ನೀರು ಹರಿಸುವ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ಈ ವೇಳೆ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಕೆನಾಲ್ಗಳನ್ನು ಸುಮಾರು ಒಂದು ತಿಂಗಳ ಮೊದಲೇ ಆರಂಭಿಸುವ ಉದ್ದೇಶವಿತ್ತು. ಆದರೆ ಕೃಷ್ಣಾ ನದಿಗೆ ನೀರಿನ ಹರಿವು ತಡವಾಗಿ ಬಂದ ಕಾರಣ ಕೆನಾಲ್ಗಳಿಗೆ ನೀರು ಹರಿಸುವಲ್ಲಿ ವಿಳಂಬವಾಯಿತು. ಆದರೂ ಜೂನ್ ತಿಂಗಳಲ್ಲಿ ಎರಡು ಬಾರಿ ಉತ್ತಮ ಮಳೆಯಾಗಿದ್ದರಿಂದ ರೈತರು ಮುಂಗಾರು ಬಿತ್ತನೆಯನ್ನು ಪೂರ್ಣಗೊಳಿಸಿದ್ದಾರೆ. ಈಗ ಕೆನಾಲ್ ನೀರನ್ನು ಮೊದಲ ಆದ್ಯತೆಯಾಗಿ ರೈತರ ಬೆಳೆಗಳಿಗೆ ತಲುಪಿಸಲಾಗುವುದು. ರೈತರು ತಮ್ಮ ಬೆಳೆಗಳಿಗೆ ಅಗತ್ಯವಿರುವಷ್ಟು ನೀರನ್ನು ಬಳಸಿಕೊಂಡು ಉತ್ತಮ ಇಳುವರಿ ಪಡೆಯಬೇಕು ಹಾಗೂ ಬೆಳೆಗಳಿಗೆ ನೀರು ಹರಿಸಿದ ಬಳಿಕ ಕೆರೆಗಳು ಬಂದಾರಗಳು ಹಾಗೂ ಇತರೆ ಜಲ ಮೂಲಗಳಿಗೂ ನೀರು ಹರಿಸಲಾಗುವುದು ಎಂದು ಹೇಳಿದ ಅವರು, ನೀರಿನ ಸಮರ್ಪಕ ಬಳಕೆಗಾಗಿ ರೈತರು ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಹಕಾರ ನೀಡಬೇಕು. ಅನಗತ್ಯವಾಗಿ ನೀರು ವ್ಯರ್ಥ ಮಾಡದೆ ಎಲ್ಲರಿಗೂ ಸಮಾನವಾಗಿ ತಲುಪುವಂತೆ ಸಹಕರಿಸಬೇಕು. ಸರ್ಕಾರ ರೈತರ ಹಿತಾಸಕ್ತಿಯನ್ನು ಸದಾ ಕಾಪಾಡಲು ಬದ್ಧವಾಗಿದೆ
ನೀರಾವರಿ ಸೌಲಭ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಕೃಷಿ ಉತ್ಪಾದನೆ ಹೆಚ್ಚಾಗಿ ರೈತರ ಆದಾಯವೂ ವೃದ್ಧಿಯಾಗುತ್ತದೆ. ಪ್ರತಿಯೊಬ್ಬ ರೈತನ ಹೊಲಕ್ಕೆ ನೀರು ತಲುಪಿಸುವುದು ನಮ್ಮ ಸಂಕಲ್ಪವಾಗಿದೆ ಎಂದರು.
ಈ ಸಂದರ್ಭದಲ್ಲಿ ಶೇಖರ ನ್ಯಾಮಗೌಡ, ಶಿವಾನಂದ ದಿವಾನಮಳ, ಶಾಂತಿನಾಥ ನಂದೇಶ್ವರ, ಮಹಾದೇವ ಬಿಳಿಕುರಿ, ಶಿವು ಗುಡ್ಡಾಪುರ, ನೀರಾವರಿ ಇಲಾಖೆ ಅಭಿಯಂತರ ನಾಗರಾಜ್ ಬಿ., ಪ್ರವೀಣ ಹುಣಸಿಕಟ್ಟಿ, ಸಾಯಬಣ್ಣ ಕಮತಗಿ, ಮಾನಸಿಂಗ್ ಬೋರಾಡೆ, ಪುಷ್ಪಕ ಪಾಟೀಲ್, ಅಶೋಕ ಮಗದು, ಕಲ್ಲೇಶ ಮಡ್ಡಿ, ರಾಮನಗೌಡ ಪಾಟೀಲ, ಪ್ರದೀಪ ನಂದಗಾಂವ, ಮಲ್ಲು ಕೂಳ್ಳೋಲಿ ಸೇರಿದಂತೆ ಹಲವಾರು ರೈತರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

