ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಭಿವೃದ್ಧಿಯಿಂದಾಗಿ ರೈತರ ಜಮೀನಿಗೆ ಭಾರಿ ಬೆಲೆ ಬಂದಿದ್ದು, ಅನ್ನದಾತರರು ತಮ್ಮ ಭೂಮಿಯನ್ನು ಮಾರಾಟ ಮಾಡಬಾರದು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಕಿವಿಮಾತು ಹೇಳಿದ್ದಾರೆ.
ಶನಿವಾರ ಬಬಲೇಶ್ವರ ತಾಲೂಕಿನ ಬೋಳಚಿಕ್ಕಲಕಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಗ್ರಾ. ಪಂ. ಕಟ್ಟಡ, ಎಸ್.ಡಬ್ಲ್ಯೂ.ಎಂ ಘಟಕ, ಗೋದಾಮು, ಎನ್.ಆರ್.ಎಲ್.ಎಂ ಘಟಕ ಮತ್ತು ಪ್ರೌಢಶಾಲೆ ಕಟ್ಟಡ ಉದ್ಘಾಟಿಸಿ ಆವರು ಮಾತನಾಡಿದರು.
ಅಭಿವೃದ್ಧಿ ಕಾರ್ಯಗಳಿಂದಾಗಿ ಆರ್ಥಿಕವಾಗಿ ಸಮರ್ಥರಾಗಿರುವ ರೈತರು ತಮ್ಮ ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ರೂ. 100 ಕೋ. ಸಿ.ಎಸ್.ಆರ್ ಅನುದಾನದಲ್ಲಿ ಬಬಲೇಶ್ವರ ಮತಕ್ಷೇತ್ರದ ಗ್ರಾಮೀಣ ಭಾಗದ ಶಾಲೆಗಳನ್ನು ಬೆಂಗಳೂರು ಮಾದರಿಯಲ್ಲಿ ಸುಧಾರಣೆ ಮಾಡಲಾಗುವುದು. ಶಾಲಾ ಆವರಣದಲ್ಲಿ ಕ್ರೀಡಾ ಸಲಕರಣೆ ವ್ಯವಸ್ಥೆ, ಅಂಗನವಾಡಿಗಳಲ್ಲಿ ಪ್ಲೆ ಸ್ಕೂಲ್ ಮಾದರಿ ಸೌಲಭ್ಯ ಒದಗಿಸಲಾಗುವುದು. ಶಾಲಾ ಕಟ್ಟಡಗಳ ನಿರ್ಮಾಣ, ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ, ಮೂಲಭೂತ ಸೌಕರ್ಯ ಒದಗಿಸಲಾಗುತ್ತಿದೆ. ಯುವಕರಿಗೆ ಓಪನ್ ಜಿಮ್ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೇ, ಮತಕ್ಷೇತ್ರ ವ್ಯಾಪ್ತಿಯಲ್ಲಿ ರೂ. 319 ಕೋ. ವೆಚ್ಚದಲ್ಲಿ ನೀರಾವರಿ ಬಾಕಿ ಕಾಮಗಾರಿ ಪೂರ್ಣಗೊಳಿಸಿ ಬಾಕಿ ಇರುವ 25 ಸಾವಿರ ಎಕರೆಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು ಎಂದು ಅವರು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿ. ಪಂ. ಸಿಇಓ ರಿಷಿ ಆನಂದ, ಜಿಲ್ಲೆಯಲ್ಲಿ ಜಲ, ವೃಕ್ಷ, ಗುಣಮಟ್ಟದ ಶಿಕ್ಷಣ ಒದಗಿಸುವ ಮೂಲಕ ಸಚಿವ ಎಂ. ಬಿ. ಪಾಟೀಲ ಅವರು ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದಾರೆ. ದೇಶದ ಬಹುಪಾಲು ಜನರು ಹಳ್ಳಿಗಳಲ್ಲಿ ನೆಲೆಸಿದ್ದಾರೆ. ಹೀಗಾಗಿ ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ. ಪಂಚಾಯಿತಿ ವ್ಯವಸ್ಥೆ ಜಾರಿಗೆ ಬಂದ ಗ್ರಾ.ಪಂ ಜನಪ್ರತಿನಿಧಿಗಳು ತಂತಮ್ಮ ಗ್ರಾಮಗಳ ಅಭಿವೃದ್ಧಿಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಸರಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಆದರ್ಶ ಗ್ರಾಮ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಇದೇ ವೇಳೆ ಸಚಿವರು ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ವಿತರಿಸಿದರು.
ಗುರುಬಸಯ್ಯ ಹಿರೇಮಠ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮುಖಂಡರಾದ ಈರಗೊಂಡ ಬಿರಾದಾರ, ಉಮೇಶ ಮಲ್ಲಣ್ಣವರ, ಬಾಪುಗೌಡ ಪಾಟೀಲ ಶೇಗುಣಸಿ, ರಾಮಲಿಂಗ ಕೊಕಟನೂರ, ಎಸ್. ಎಂ. ಸಜ್ಜನ, ಹಣಮಂತ ದಳವಾಯಿ, ಮುತ್ತಪ್ಪ ಶಿವಣ್ಣವರ, ಗ್ರಾ. ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಅಂಗಡಿ, ಉಪಾಧ್ಯಕ್ಷೆ ಸಂಗೀತಾ ನರಳಿ, ಜಿ. ಪಂ. ಸಿಇಓ ರಿಷಿ ಆನಂದ, ತಾ. ಪಂ. ಇಓ ಜೆ. ಎಸ್. ಪಠಾಣ, ಗ್ರಾಮೀಣ ವಲಯ ಬಿಇಓ ಪ್ರಮೋದಿನಿ ಬಳೂಲಮಟ್ಟಿ, ನಾನಾ ಇಲಾಖೆ ಅಧಿಕಾರಿಗಳು, ನಾನಾ ಮುಖಂಡರು, ಗ್ರಾಮದ ಹಿರಿಯರು, ಮಹಿಳೆಯರು, ಯುವಕರು, ವಿದ್ಯಾರ್ಥಿಗಳು ಮುಂತಾದವರು ಉಪಸ್ಥಿತರಿದ್ದರು.
ಪ್ರೌಢಶಾಲೆ ವಿದ್ಯಾರ್ಥಿನಿಯರು ಪ್ರಾರ್ಥನೆ ಮತ್ತು ಸ್ವಾಗತ ಗೀತೆ ಹಾಡಿದರು. ಪಿಡಿಓ ರವಿ ವೆಂಕಣ್ಣ ಮಾಸರಡ್ಡಿ ಸ್ವಾಗತಿಸಿದರು. ಶಿಕ್ಷಕ ಶ್ರೀಶೈಲ ಮಠಪತಿ ನಿರೂಪಿಸಿದರು.
ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಗತವೈಭವಕ್ಕೆ ತರಲು ಪ್ರಯತ್ನ
ಸಂಜೆ ಕೃಷ್ಣಾನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಬಳಿ ಯರಗಟ್ಟಿ-ಬಬಲೇಶ್ವರ ರಸ್ತೆ ಚಿಕ್ಕಗಲಗಲಿಯಿಂದ ಶಿರಬೂರವರೆಗೆ 10 ಕಿ.ಮೀ ರಸ್ತೆ ಸುಧಾರಣೆ ಕಾಮಗಾರಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಒಂದು ಕಾಲದಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದ್ದ ಮತ್ತು ಈ ಭಾಗದ ಅಸ್ಮಿತೆಯಾಗಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಗತವೈಭವಕ್ಕೆ ತರಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಸರಕಾರದಿಂದ ಕನಿಷ್ಠ ರೂ. 50 ಕೋಟಿ. ಅನುದಾನ ನೀಡುವಂತೆ ಸಿಎಂ ಭೇಟಿ ಮಾಡಿ ಮನವಿ ಮಾಡಲಾಗಿದೆ. ರೈತರು, ಜನಪ್ರತಿನಿಧಿಗಳು ಸೇರಿದಂತೆ ಎಲ್ಲರೂ ಈ ಕಾರ್ಖಾನೆಯ ಅಭಿವೃದ್ಧಿಗೆ ಕೈ ಜೋಡಿಸೋಣ. ಈ ಭಾಗದ ಅಭಿವೃದ್ಧಿಗೆ ಬದ್ಧನಾಗಿದ್ದು, ಶಕ್ತಿಮೀರಿ ಶ್ರಮಿಸುತ್ತೇನೆ ಎಂದು ಹೇಳಿದರು.
ಸಚಿವರಿಗೆ ಬೆಂಗಳೂರು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ರೈತರು ಎಂ. ಬಿ. ಪಾಟೀಲ ಅವರಿಗೆ ಗೌರವ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಆನಂದಕುಮಾರ ದೇಸಾಯಿ, ಉಪಾಧ್ಯಕ್ಷ ಅಶೋಕ ಲೆಂಕೆಣ್ಣವರ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಮಾಜಿ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ, ನಿರ್ದೇಶಕರಾದ ಎಚ್. ಎಸ್. ಕೋರಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ಮುತ್ತು ದೇಸಾಯಿ ನಿರ್ದೇಶಕ, ರಾಷ್ಟ್ರೀಯ ಹೆದ್ದಾರಿ ವಿಭಾಗದ ಎಕ್ಸಿಕ್ಯೂಟಿವ್ ಎಂಜಿನಿಯರ್ ವಿಜಯ ಪಾಟೀಲ, ಸಹಾಯಕ ಎಕ್ಸಿಕ್ಯೂಟಿವ್ ಎಂಜಿನಿಯರ್ ವಿವೇಕ ಮಠ ಮುಂತಾದವರು ಉಪಸ್ಖಿತರಿದ್ದರು.