ಲೀನ್ ಯೋಜನೆ ಮತ್ತು ಝಡ್.ಇ.ಡಿ ಹಾಗೂ ರಫ್ತು ಕುರಿತು ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸಲಹೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯು ಕೃಷಿ ಪ್ರಧಾನವಾದ ಜಿಲ್ಲೆಯಾಗಿದೆ. ಶೇ ೮೦ ರಷ್ಟು ಕೃಷಿ ಚಟುವಟಿಕೆಯಿಂದ ಆರ್ಥಿಕ ವ್ಯವಹಾರಗಳು ನಡೆಯುತ್ತಿವೆ ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳು ಹೆಚ್ಚು ಹೆಚ್ಚು ಸ್ಥಾಪನೆಯಾದಲ್ಲಿ ಉದ್ಯೋಗ ಸೃಷ್ಟಿ, ಸಾರ್ವಜನಿಕ ವಹಿವಾಟು, ರಫ್ತು, ಆದಾಯ ಹೆಚ್ಚಿಗೆ ನಿರೀಕ್ಷಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.
ಬುಧವಾರ ನಗರದ ಸ್ಪೂರ್ತಿ ರೆಸಾರ್ಟನಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರ ವ್ಯಾಪಾರ ಉತ್ತೇಜನಾ ಕೇಂದ್ರ, ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಎಂ.ಎಸ್.ಎಂ.ಇ ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವು ಯೋಜನೆಯಡಿಯಲ್ಲಿ ಲೀನ್ ಯೋಜನೆ ಮತ್ತು ಝಡ್.ಇ.ಡಿ ಹಾಗೂ ರಫ್ತು ಕುರಿತು ಒಂದು ದಿನದ ಕಾರ್ಯಾಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ನಮ್ಮ ಜಿಲ್ಲೆಯಲ್ಲಿರುವ ಸಂಪನ್ಮೂಲಗಳನ್ನು ಸದುಪಯೋಗ ಪಡಿಸಿಕೊಂಡು ಸರ್ಕಾರ, ಜಿಲ್ಲಾಡಳಿತ ಹಾಗೂ ವಿವಿಧ ಸಂಸ್ಥೆಗಳು ಸಹಕಾರ ನೀಡಿದಲ್ಲಿ ಜಿಲ್ಲೆಯಲ್ಲಿರುವ ಸಣ್ಣ ಕೈಗಾರಿಕೆಗಳು ಯಾವುದೇ ನಷ್ಟ ಇಲ್ಲದೆ ಸರಳ ರೀತಿಯಲ್ಲಿ ಉದ್ಯೋಗವನ್ನು ನಡೆಸಿಕೊಂಡು ಹೋಗಬಹುದು.
ನಮ್ಮ ಜಿಲ್ಲೆಯಿಂದ ಲಿಂಬೆ, ದ್ರಾಕ್ಷಿ, ದಾಳಿಂಬೆ ಬೆಳೆಗಳು ವಿಫುಲವಾಗಿ ಬೆಳೆದು ದೇಶ ಹಾಗೂ ವಿದೇಶಗಳಿಗೆ ರಫ್ತು ಆಗುತ್ತಿವೆ. ಆದರೆ ಸಣ್ಣ ಕೈಗಾರಿಕೆಗಳಿಂದ ರಫ್ತು ಕಡಿಮೆ ಇದೆ. ಇದನ್ನು ಸರಿದೂಗಿಸಲು ನಮ್ಮ ಜಿಲ್ಲೆಯಲ್ಲಿ ಸಣ್ಣ ಉದ್ದಿಮೆಗಳು ಬರಬೇಕು. ಉತ್ಪಾದನೆಗಳನ್ನು ಹೆಚ್ಚಿಸಿ ರಫ್ತು ಕೂಡ ಹೆಚ್ಚಿಸಿ ಜಿಲ್ಲೆಯನ್ನು ಸಮೃದ್ಧಿಗೊಳಿಸಬೇಕು ಎಂದು ಅವರು ಹೇಳಿದರು.
ಡಿಸ್ಟ್ರಿಕ್ಟ್ ಇಂಡಸ್ಟ್ರಿಯಲ್ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ಎಸ್.ವಿ ಪಾಟೀಲ್ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಣ್ಣ ಕೈಗಾರಿಕೆ ಉದ್ದಿಮೆದಾರರ ಹಾಗೂ ಸಂಸ್ಥೆಗಳ ಸಂಘದ ಅಧ್ಯಕ್ಷರಾದ ಗಂಗಾಧರ ಸಂಬಣ್ಣಿ, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರಾದ ಪೀಟರ್ ಅಲೇಕ್ಸಾಂಡರ, ವಿ.ಟಿ.ಪಿ.ಸಿ ಕಲಬುರ್ಗಿ ಶಾಖಾ ಸಹಾಯಕ ನಿರ್ದೇಶಕರಾದ ಜಾಫರ ಖಾಸಿಂ ಅನ್ಸಾರಿ, ಕಾಸಿಯಾ ಉಪಾಧ್ಯಕ್ಷರಾದ ಗಣೇಶ ರಾವ್.ಬಿ.ಆರ್, ಗೌರವ ಪ್ರಧಾನ ಕಾರ್ಯದರ್ಶಿ ಸುರೇಶ ಎನ್. ಸಾಗರ, ಜಂಟಿ ಕಾರ್ಯದರ್ಶಿ ಸತೀಶ ಎನ್, ಖಜಾಂಚಿ ಮಂಜುನಾಥ ಹೆಚ್, ಜಿಲ್ಲಾಭಿವೃದ್ಧಿ ಸಮಿತಿ ಉಪಸಮಿತಿ ಅಧ್ಯಕ್ಷರಾದ ನಿಂಗಣ್ಣ ಎಸ್. ಬಿರಾದಾರ, ಉದ್ದಿಮೆದಾರರು ಹಾಗೂ ಇತರರು ಉಪಸ್ಥಿತರಿದ್ದರು.
![1000944311](https://udayarashminews.com/wp-content/uploads/2025/01/1000944311.jpg)
“ಇಲ್ಲಿ ಬೆಳೆದ ಕೃಷಿ ಉತ್ಪನ್ನಗಳು ಹಾಗೂ ಸಿರಿದಾನ್ಯಗಳಿಗೆ ಬಹಳ ಬೇಡಿಕೆ ಇದೆ. ದೇಶ ವಿದೇಶಗಳಲ್ಲಿ ಹೆಚ್ಚು ಬೇಡಿಕೆ ಇದೆ. ಆದರೆ ಉತ್ಪಾದನೆ ಕಡಿಮೆ ಇದೆ. ಸಣ್ಣ ಕೈಗಾರಿಕೆಗಳು ಸ್ಥಾಪನೆಗೆ ಉತ್ತರ ಕರ್ನಾಟಕ ಹಾಗೂ ಈ ಬಾಗಕ್ಕೆ ಹೆಚ್ಚು ಆಧ್ಯತೆ ಪ್ರಾತಿನಿದ್ಯ ಸಿಗಬೇಕು. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಜಿಲ್ಲೆಯಲ್ಲಿ ಲಿಂಬೆ, ದ್ರಾಕ್ಷಿಗೆ ಸಿಗುವ ಮನ್ನಣೆ ಸಿರಿ ದಾನ್ಯಕ್ಕೂ ಸಿಗುವಂತಾಗಬೇಕು.”
– ಎಸ್.ವಿ.ಪಾಟೀಲ್
ಅಧ್ಯಕ್ಷರು, ಡಿಸ್ಟ್ರಿಕ್ಟ್ ಇಂಡಸ್ಟ್ರಿಯಲ್ ಓನರ್ಸ್ ಅಸೋಸಿಯೇಶನ್