ವಿಜಯಪುರ ಪೊಲೀಸರ ಸಾಧನೆ | 500 ರೂ. ಮುಖ ಬೆಲೆಯ ಒಟ್ಟು ರೂ.1.22,500/- ಮೊತ್ತದ 245 ಖೋಟಾ ನೋಟುಗಳು ಜಪ್ತಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ
ನಾಲ್ಕು ಜನರನ್ನು ಬಂಧಿಸಿರುವ ಘಟನೆ ಬುಧವಾರ ನಡೆದಿದೆ.
ನಗರದ ವಜ್ರ ಹನುಮಾನ ನಗರದ ನಿವಾಸಿ, ಕೆಎಸ್ಆರ್ಟಿಸಿ ಮೆಕ್ಯಾನಿಕ್ ಆಗಿರುವ ರಿಯಾಜ್ ಕಾಶಿಮಸಾಬ ವಾಲಿಕಾರ (44 ವರ್ಷ) ಡಿ.28 ರಂದು ರಾತ್ರಿ ವಾಟರ್ ಟ್ಯಾಂಕ್ ಹತ್ತಿರದ ಹಾಲಿನ ಅಂಗಡಿಯಲ್ಲಿ 500 ರೂ. ಮುಖ ಬೆಲೆಯ ಖೋಟಾ ನೋಟು ಕೊಡುತ್ತಿರುವ ಬಗ್ಗೆ ಮಾಹಿತಿ ಅರಿತ ಗಾಂಧಿಚೌಕ ಪಿಎಸ್ಐ ರಾಜು ಮಮದಾಪೂರ ಅವರು ಸಿಬ್ಬಂದಿಯೊಂದಿಗೆ ಆರೋಪಿಯನ್ನು ವಶಕ್ಕೆ ಪಡೆದು, ಆತನ ಹತ್ತಿರವಿದ್ದ 500 ರೂ. ಮುಖ ಬೆಲೆಯ 5 ಖೋಟಾ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದರು.
ಈ ಕುರಿತು ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣದ ಬೆನ್ನತ್ತಿದ ವಿಜಯಪುರ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಅವರು ಪ್ರಕರಣದ ತನಿಖೆಗಾಗಿ ಪಿಎಸೈ ಪ್ರದೀಪ ತಳಕೇರಿ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿದ್ದು, ಸದರಿ ತಂಡದವರು ಲಿಂಗಸೂರಿನ ದುರಗಪ್ಪ ಶಿವಣಪ್ಪ ರಾಮರಟ್ಟಿ, (44 ವರ್ಷ) ಈತನಿಂದ 500 ರೂ. ಮುಖ ಬೆಲೆಯ 20 ಖೋಟಾ ನೋಟುಗಳು, ಮಹಾಲಿಂಗಪೂರದ ಕಿರಣ @ ಭೀಮಪ್ಪ ರಾಮಪ್ಪ ಹರಿಜನ, (25 ವರ್ಷ) ಈತನಿಂದ 500 ರೂ. ಮುಖ ಬೆಲೆಯ 100 ಖೋಟಾ ನೋಟುಗಳು, ಕೋಲಾರ ಹತ್ತಿರದ ಹೊಳೆಹಂಗರಗಿ ಗ್ರಾಮದ ರಮೇಶ ಹಣಮಂತ ಸವಳತೋಟ, (44 ವರ್ಷ) ಇತನಿಂದ 500 ರೂ. ಮುಖ ಬೆಲೆಯ 120 ಖೋಟಾ ನೋಟುಗಳು ಹೀಗೆ ಒಟ್ಟು 4 ಜನ ಆರೋಪಿತರಿಂದ 500 ರೂ. ಮುಖ ಬೆಲೆಯ ಒಟ್ಟು ರೂ. 1.22,500/- ಮೊತ್ತದ 245 ಖೋಟಾ ನೋಟುಗಳನ್ನು ಜಪ್ತು ಮಾಡಿದ್ದಾರೆ.
ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಬಳಿಕ ನ್ಯಾಯಾಂಗ ಬಂಧನದಲ್ಲಿಡಲಾಗಿದೆ.

ತನಿಖಾ ತಂಡದ ಕಾರ್ಯಕ್ಕೆ ಎಸ್ಪಿ ಶ್ಲಾಘನೆ
ಪ್ರಕರಣವು ತನಿಖಾ ಹಂತದಲ್ಲಿದ್ದು, ಈ ಪ್ರಕರಣದ ತನಿಖಾ ತಂಡದಲ್ಲಿ ಭಾಗವಹಿಸಿದ ಪಿಎಸೈ ಪ್ರದೀಪ ತಳಕೇರಿ, ಪಿಎಸೈ ರಾಜು ಮಮದಾಪುರ, ಪಿಎಸೈ ಸುಷ್ಮಾ ನಂದಿಗೋಣ, ಸಿಬ್ಬಂದಿ ಅನೀಲ ದೊಡಮನಿ, ರಾಜು ನಾಯಕ, ಎಸ್ ಪಿ ಗದ್ಯಾಳ, ಜಿ ಎಚ್ ಮುಲ್ಲಾ, ಕೆ ಜೆ ರಾಠೋಡ, ವಿ ಎಚ್ ಕಡ್ಲಿಬಾಳು, ಆರ್ ಎಸ್ ಗೋದೆ, ಬಸವರಾಜ ದಿನ್ನಿ, ಎಚ್.ಎಚ್ ಜಮಾದಾರ ಹಾಗೂ ಕಂಪ್ಯೂಟರ್ ವಿಭಾಗದ ಗುಂಡು ಗಿರಣಿವಡ್ಡರ, ಸುನೀಲ್ ಗವಳಿ ಅವರ ಕಾರ್ಯವನ್ನು ಎಸ್ಪಿ ಲಕ್ಷ್ಮಣ ನಿಂಬರಗಿ ಶ್ಲಾಘಿಸಿದ್ದಾರೆ.

