ಲೇಖನ
– ಡಾ. ರಾಜಶೇಖರ ನಾಗೂರ
ಸಂಚಾಲಕರು
’ನಮ್ಮ ಕಥಾ ಅರಮನೆ’
ಉದಯರಶ್ಮಿ ದಿನಪತ್ರಿಕೆ
ಮನುಷ್ಯನ ಜೀವನವನ್ನು ರೂಪಿಸುವುದು ಘಟನೆಗಳಲ್ಲ. ಅವುಗಳಿಗೆ ಅವನು ನೀಡುವ ಪ್ರತಿಕ್ರಿಯೆಗಳು.
ಯಾವುದೇ ಘಟನೆ ನಡೆದ ಕ್ಷಣ ಮತ್ತು ಅದಕ್ಕೆ ನಾವು ಪ್ರತಿಕ್ರಿಯಿಸುವ ಕ್ಷಣದ ನಡುವೆ ಒಂದು ಸೂಕ್ಷ್ಮ ವಿರಾಮವಿರುತ್ತದೆ. ಅದು ಕಣ್ಣಿಗೆ ಕಾಣದಷ್ಟು ಚಿಕ್ಕದಾಗಿರಬಹುದು. ಆದರೆ ಬದುಕಿನ ಅತಿ ದೊಡ್ಡ ರಹಸ್ಯ ಅಡಗಿರುವುದು ಅಲ್ಲಿಯೇ.
ಮಳೆ ಬೀಳುವುದು ನಮ್ಮ ಕೈಯಲ್ಲಿಲ್ಲ. ಆದರೆ ಛತ್ರಿ ಹಿಡಿಯಬೇಕೋ, ಮಳೆಯನ್ನು ಆಸ್ವಾದಿಸಬೇಕೋ, ಅಥವಾ ಮಳೆಯನ್ನು ದೂಷಿಸುತ್ತಾ ನಿಲ್ಲಬೇಕೋ ಎಂಬುದು ನಮ್ಮ ಆಯ್ಕೆ. ಇದೇ ರೀತಿ ಜೀವನದಲ್ಲಿಯೂ ಅನೇಕ ಘಟನೆಗಳು ನಮ್ಮ ಅನುಮತಿಯಿಲ್ಲದೆ ಸಂಭವಿಸುತ್ತವೆ. ಆದರೆ ಅವುಗಳ ಮುಂದೆ ನಾವು ಹೇಗೆ ನಿಲ್ಲುತ್ತೇವೆ ಎಂಬುದೇ ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ.
ಆ ಒಂದು ಕ್ಷಣ ಕೋಪವನ್ನು ತಾಳ್ಮೆಯಾಗಿ ಪರಿವರ್ತಿಸಬಹುದು. ದ್ವೇಷವನ್ನು ಕರುಣೆಯಾಗಿ ಬದಲಿಸಬಹುದು. ಪ್ರತೀಕಾರವನ್ನು ಕ್ಷಮೆಯಾಗಿ ರೂಪಿಸಬಹುದು. ಭಯವನ್ನು ಧೈರ್ಯವಾಗಿ ಪರಿವರ್ತಿಸಬಹುದು. ಆತುರವನ್ನು ವಿವೇಕವನ್ನಾಗಿ ಮಾಡಬಹುದು.
ಆ ಕ್ಷಣವನ್ನು ಕಳೆದುಕೊಂಡರೆ ಭಾವನೆಗಳು ನಮ್ಮನ್ನು ಮೀರುತ್ತವೆ ಎಂಬುದು ನನ್ನ ಅಭಿಪ್ರಾಯ. ಆದರೆ ಆ ಕ್ಷಣವನ್ನು ಅರಿತು ಬಳಸಿದರೆ ವಿವೇಕ ನಮ್ಮನ್ನು ಮುನ್ನಡೆಸುತ್ತದೆ. ಇದೇ ಆತ್ಮನಿಗ್ರಹ. ಇದೇ ಪ್ರಬುದ್ಧತೆ.
ಜೀವನದ ಅನೇಕ ವಿಷಾದಗಳಿಗೆ ಕಾರಣ ಘಟನೆಗಳಲ್ಲ. ಯೋಚನೆ ಇಲ್ಲದೆ ನೀಡಿದ ಪ್ರತಿಕ್ರಿಯೆಗಳು. ಒಂದು ಮಾತು ಸಂಬಂಧವನ್ನು ಮುರಿಯಬಹುದು. ಅದೇ ಒಂದು ಕ್ಷಣದ ಮೌನ ಸಂಬಂಧವನ್ನು ಉಳಿಸಬಹುದು. ಒಂದು ಆತುರದ ನಿರ್ಧಾರ ವರ್ಷಗಳ ಪಶ್ಚಾತ್ತಾಪಕ್ಕೆ ಕಾರಣವಾಗಬಹುದು. ಅದೇ ಒಂದು ಕ್ಷಣದ ತಾಳ್ಮೆ ಬದುಕಿನ ದಿಕ್ಕನ್ನೇ ಬದಲಿಸಬಹುದು.
ಅಂದು ಸಿಯಾ ಒಂದು ಕ್ಷಣ ಆತುರ ಪಡದಿದ್ದರೆ ಇಂದು ಕೇತನ್ ಬದುಕಿರುತ್ತಿದ್ದ. ಸಿಯಾಳ ಬದುಕು ಜೈಲಿನ ಭಯದ ನೆರಳಲ್ಲಿ ಇರುತ್ತಿರಲಿಲ್ಲ.

ಆ ಹದಿಮೂರು ವರ್ಷದ ಹೆಣ್ಣು ಮಗುವಲ್ಲಿ ತನ್ನ ಮಗುವನ್ನು ಆ ಆಟೋ ಡ್ರೈವರ್ ಕಂಡಿದ್ದರೆ ಆ ಮಗುವಿನ ಭವಿಷ್ಯ ಉಳಿಯುತ್ತಿತ್ತು ಮತ್ತೂ ಈ ದುರುಳನ ಜೀವನವೂ ಕೂಡಾ ಕ್ಷೇಮವಾಗಿರುತ್ತಿತ್ತು.
ಆದ್ದರಿಂದ ಪ್ರತಿಯೊಂದು ಸಂದರ್ಭದಲ್ಲೂ ನಮ್ಮನ್ನು ನಾವು ಕೇಳಿಕೊಳ್ಳಬೇಕು “ಈ ನನ್ನ ಪ್ರತಿಕ್ರಿಯೆ ನನ್ನ ಜೀವನದ ದಿಕ್ಕನ್ನು ಬದಲಿಸುತ್ತಿದೆಯೇ ಅಥವಾ ನನ್ನ ವಿವೇಕವನ್ನು ಮುಚ್ಚಿಡುತ್ತಿದೆಯೇ” ಎಂದು.
ಆ ಪ್ರಶ್ನೆಗೆ ಸಿಗುವ ಉತ್ತರವೇ ನಮ್ಮ ಭವಿಷ್ಯವನ್ನು ರೂಪಿಸುತ್ತದೆ.
ಜೀವನದ ನಿಜವಾದ ಸ್ವಾತಂತ್ರ್ಯ ಯಾವುದೇ ಪರಿಸ್ಥಿತಿಯಲ್ಲೂ ಘಟನೆ ಘಟಿಸಿದ ನಂತರ ನಮ್ಮ ಪ್ರತಿಕ್ರಿಯೆಯನ್ನು ಆಯ್ಕೆ ಮಾಡುವ ಸಾಮರ್ಥ್ಯ.
ಹೀಗಾಗಿ ಘಟನೆ ಮತ್ತು ಪ್ರತಿಕ್ರಿಯೆಯ ನಡುವಿನ ಆ ಸಣ್ಣ ವಿರಾಮವನ್ನು ಗೌರವಿಸಿ. ಏಕೆಂದರೆ ಅದೇ ವಿರಾಮದಲ್ಲಿ ನಿಮ್ಮ ವ್ಯಕ್ತಿತ್ವ ಹುಟ್ಟುತ್ತದೆ. ನಿಮ್ಮ ಸಂಬಂಧಗಳು ಉಳಿಯುತ್ತವೆ. ನಿಮ್ಮ ಭವಿಷ್ಯ ರೂಪುಗೊಳ್ಳುತ್ತದೆ ಮತ್ತು ನಿಮ್ಮ ಜೀವನದ ನಿಜವಾದ ರಹಸ್ಯ ಅನಾವರಣಗೊಳ್ಳುತ್ತದೆ.


