ವಿಜಯಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರ ಆರೋಪ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಎಸ್ಐಆರ್ ಪ್ರಕ್ರಿಯೆ ನಿಷ್ಕ್ರೀಯಗೊಳಿಸುವ ಷಡ್ಯಂತ್ರದ ಭಾಗವಾಗಿ ಶಾಶ್ವತ ರಹವಾಸಿ ಪ್ರಮಾಣಪತ್ರ ಪ್ರಕ್ರಿಯೆ ಆರಂಭಿಸಲು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ, ಇಷ್ಟು ದಿನ ಈ ಪ್ರಕ್ರಿಯೆ ನೆನಪಾಗಲಿಲ್ಲವೇ? ಈಗ ಎಸ್ಐಆರ್ ನಡೆದಿರುವಾಗ ಇದರ ಔಚಿತ್ಯವೇನಿತ್ತು ಎಂದು ಬಿಜೆಪಿ ಮುಖಂಡ ಕೃಷ್ಣಾ ಗುನ್ನಾಳಕರ ಖಾರವಾಗಿ ಪ್ರಶ್ನಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ವಲಸಿಗರಿಗೆ ರಕ್ಷಣೆ ನೀಡುವ ಎಂಬ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಈ ಪಿಆರ್ಸಿ ಎಂಬ ಪ್ರಕ್ರಿಯೆ ಜಾರಿಗೆ ತರುತ್ತಿದೆ, ಇಲ್ಲಿರುವ ಅಕ್ರಮ ವಲಸಿಗರಿಗೆ ಶಾಶ್ವತ ರಹವಾಸಿ ಪ್ರಮಾಣ ಪತ್ರ ನೀಡುವ ಮೂಲಕ ತನ್ನ ವೋಟ್ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ, ಈ ರೀತಿ ಅಕ್ರಮ ವಲಸಿಗರಿಗೆ ಈ ರೀತಿಯ ರಕ್ಷಣೆ ದೊರಕಿದರೆ ಅವರು ಇಲ್ಲಿ ಶಾಶ್ವತವಾಗಿ ನೆಲೆಸಲು ಬಲ ನೀಡಲಿದೆ, ಇದು ರಾಷ್ಟ್ರದ ಭದ್ರತೆಗೆ ದೊಡ್ಡ ಅಪಾಯವಾಗಿದೆ, ಕೂಡಲೇ ಈ ಅವೈಜ್ಞಾನಿಕ ಪ್ರಕ್ರಿಯೆಯನ್ನು ಕೈ ಬಿಡಬೇಕು ಎಂದರು.
ಈ ಅವೈಜ್ಞಾನಿಕ ಹಾಗೂ ತರ್ಕರಹಿತ ಪ್ರಕ್ರಿಯೆಯ ಬಗ್ಗೆ ಕೇಂದ್ರದ ಅನೇಕ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಯಾವ ರಾಜ್ಯದಲ್ಲಿಯೂ ಸಹ ಶಾಶ್ವತ ರಹವಾಸಿ ಪತ್ರ ನೀಡುವುದಿಲ್ಲ, ಇದು ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಯಲ್ಲಿಯೂ ಇಲ್ಲ, ಇದೊಂದು ಸಂವಿಧಾನ ಬಾಹಿರ ಪ್ರಕ್ರಿಯೆ ಎಂದು ಗುನ್ನಾಳಕರ ಹೇಳಿದರು.
ಕಾಂಗ್ರೆಸ್ ಪಕ್ಷದವರು ಅತ್ಯಂತ ಸರಳವಾಗಿರುವ ಎಸ್ಐಆರ್ ಪ್ರಕ್ರಿಯೆಯನ್ನು ಇನ್ನಷ್ಟೂ ಕಠಿಣಗೊಳಿಸುವ ಕಾರ್ಯ ಮಾಡಿ ಗೊಂದಲ ಸೃಜಿಸುತ್ತಿದ್ದಾರೆ, ಶಾಶ್ವತ ರಹವಾಸಿ ಪ್ರಮಾಣ ಪತ್ರ ಎಂಬ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ, ಶಾಶ್ವತ ರಹವಾಸಿ ಪ್ರಮಾಣ ಪತ್ರ ಈಗ ನೀಡುವ ಔಚಿತ್ಯವೇನಿತ್ತು? ರಾಷ್ಟಿçÃಯ ಭದ್ರತೆಗೆ ಇದು ದೊಡ್ಡ ಅಪಾಯಕಾರಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಲಸಂಪನ್ಮೂಲ ಸಚಿವ ಸ್ಥಾನ ವಿಜಯಪುರದವರಿಗೆ ನೀಡಿ
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಮಹಾರಾಷ್ಟ್ರದಲ್ಲಿ ಮಳೆ ಸುರಿಯುತ್ತಿದೆ, ಆಲಮಟ್ಟಿ ಜಲಾಶಯದಲ್ಲಿ ನೀರು ಹರಿದು ಬರುತ್ತಿದೆ, ಆದರೂ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ, ಬೆಂಗಳೂರಿನವರು ನೀರಾವರಿ ಮಂತ್ರಿಯಾದರೆ ಯಾವ ಪ್ರಯೋಜನವಾಗುವುದಿಲ್ಲ, ಹೀಗಾಗಿ ವಿಜಯಪುರ ಭಾಗದವರು ಜಲಸಂಪನ್ಮೂಲ ಸಚಿವರಾಗಬೇಕು, ಆಲಮಟ್ಟಿ ಜಲಾಶಯದ ಸಮಸ್ಯೆ ಮುಖ್ಯಮಂತ್ರಿ ಹಾಗೂ ಬೆಂಗಳೂರಿನವರಾದ ಜಲಸಂಪನ್ಮೂಲ ಸಚಿವರಿಗೆ ಅರ್ಥವಾಗುವುದೇ ಇಲ್ಲ. ಹೀಗಾಗಿ ನಮ್ಮ ವಿಜಯಪುರದವರಿಗೆ ಈ ಖಾತೆ ವಹಿಸಿ ಎಂದರು. ವಿಶೇಷ ಪ್ರಕರಣ ಎಂದು ವಿಜಯಪುರ ಜನತೆಗೆ ಜಲಾಶಯದಿಂದ ನೀರು ಬಿಡುಗಡೆ ಮಾಡಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸಬೇಕು ಎಂದರು.
ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಸಾಬು ಮಾಶ್ಯಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ರಾವೂರ, ಮಾಧ್ಯಮ ಪ್ರಮುಖ ವಿಜಯ ಜೋಶಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

