ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಈರಕಾರ ಮುತ್ಯಾ ದೇವಸ್ಥಾನದ ಆವರಣದಲ್ಲಿ ಜ.೩ ರಂದು ಬೆಳಗ್ಗೆ ೧೦.೩೦ ಗಂಟೆಗೆ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆಯ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಕ್ರಾಂತಿವೀರ ಬ್ರಿಗೇಡ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮರೇಶಣ್ಣ ಕಾಮನಕೇರಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದು ಧರ್ಮದ ರಕ್ಷಣೆಗಾಗಿ ರಾಜ್ಯದಲ್ಲಿ ಕ್ರಾಂತಿವೀರ ಬ್ರಿಗೇಡ್ ಸಂಘಟನೆ ಅಸ್ತಿತ್ವಕ್ಕೆ ಬರಲಿದೆ. ಈ ಸಂಘಟನೆಯು ಫೆ.೪ ರಂದು ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿಯಲ್ಲಿ ನಾಡಿನ ವಿವಿಧ ೧೦೦೮ ಪೂಜ್ಯರ, ಮಠಾಧೀಶರ ಪಾದಪೂಜೆಯೊಂದಿಗೆ ಉದ್ಘಾಟನೆಯಾಗಲಿದೆ. ಇದೊಂದು ಜಾತ್ಯಾತೀತ, ಪಕ್ಷಾತೀತ ಸಂಘಟನೆಯಾಗಿದೆ. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಸಾಕಷ್ಟು ಸಣ್ಣ-ಪುಟ್ಟ ಸಮಾಜಗಳು ಮರೆಯಾಗುತ್ತಿರುವದು ವಿಷಾದಕರ ಸಂಗತಿ. ಸರ್ಕಾರದ ಯಾವುದೇ ಸೌಲಭ್ಯಗಳು ಸರಿಯಾಗಿ ತಲುಪುತಿಲ್ಲ. ಈ ನಿಟ್ಟಿನಲ್ಲಿ ಸಮಾಜದಲ್ಲಿ ತುಳಿತಕ್ಕೊಳಗಾದ, ಸರ್ಕಾರದ ಸೌಲಭ್ಯದಿಂದ ವಂಚಿತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಈ ಸಂಘಟನೆ ಧ್ವನಿ ಎತ್ತಲಿದೆ. ಸಮಾಜದಲ್ಲಿ ತುಳಿತಕ್ಕೊಳಗಾದ ಸಣ್ಣ ಸಣ್ಣ ಸಮಾಜಗಳನ್ನು ಮೇಲೆತ್ತುವ ಸದುದ್ದೇಶವನ್ನು ಸಂಘಟನೆ ಹೊಂದಿದೆ ಎಂದರು.
ಕಾರ್ಯಕ್ರಮದ ಉಸ್ತುವಾರಿ ಕಲ್ಲು ಸೊನ್ನದ ಮಾತನಾಡಿ, ಫೆ. ೪ ರಂದು ಬಸವ ಜನ್ಮಸ್ಥಳದಲ್ಲಿ ಕ್ರಾಂತಿವೀರ ಬ್ರಿಗೇಡ್ ಸಂಘಟನೆ ಉದ್ಘಾಟನೆಗೊಳ್ಳುವ ಮೂಲಕ ಬೃಹತ್ ರಾಜ್ಯಮಟ್ಟದ ಸಮಾರಂಭ ಈ ನೆಲದಲ್ಲಿ ನಡೆಯಲಿದೆ. ಜ.೩ ರಂದು ಬಸವನಬಾಗೇವಾಡಿಯ ಈರಕಾರ ಮುತ್ಯಾ ದೇವಸ್ಥಾನದಲ್ಲಿ, ಜ. ೫ ರಂದು ವಿಜಯಪುರದಲ್ಲಿ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆ ಕರೆಯಲಾಗಿದೆ. ಈ ಸಭೆಗಳಿಗೆ ಎಲ್ಲ ಸಮಾಜದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ-ಸೂಚನೆ ನೀಡುವ ಮೂಲಕ ಯಶಸ್ವಿಗೊಳಿಸಬೇಕೆಂದರು. ಸುದ್ದಿಗೋಷ್ಠಿಯಲ್ಲಿ ಮುದಕಣ್ಣ ಹೊರ್ತಿ, ಸಿದ್ದಣ್ಣ ಹೆರಕಲ್, ಸುನೀಲ ಜಮಖಂಡಿ, ಶಿವರಾಯ ಕಲಬುರ್ಗಿ, ಸಂಗಣ್ಣ ಹಚ್ಯಾಳ, ರವಿ ನಾಯ್ಕೋಡಿ ಇತರರು ಇದ್ದರು.

