ಡಿ.೩೦ ರಿಂದ ಜ.೫ ರವರೆಗೆ ರೇವತಗಾಂವದ ಸಿಂಹಗಢ ಮಹಾರಾಜರ ೫೫ ನೇ ಪುಣ್ಯಾರಾಧನೆ
ಉದಯರಶ್ಮಿ ದಿನಪತ್ರಿಕೆ
ವರದಿ: ಸಿದ್ರಾಮ ಮಾಳಿ
ಚಡಚಣ: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ರೇವತಗಾಂವ ಗ್ರಾಮವು ಮಹಾರಾಷ್ಟ್ರದ ಗಡಿಭಾಗದ ದೇಗುಲವು, ಸೂಕ್ಷ್ಮ ವಾಸ್ತುಶಿಲ್ಪ ಶೈಲಿಯ ದೇವಾಲಯವು ಪ್ರವಾಸಿಗರ ಗಮನವನ್ನು ಸೆಳೆಯುತ್ತದೆ. ಗ್ರಾಮದಲ್ಲಿರುವ ಶ್ರೀ ಸದ್ಗುರು ಸಿಂಹಗಢ ಮಹಾರಾಜರ ದೇವಾಲಯವು ಅತ್ಯಂತ ಪ್ರಸಿದ್ಧಿ ಪಡೆದ ಈ ದೇವಾಲಯವು ಹಲವಾರು ವರ್ಷಗಳ ಇತಿಹಾಸ ಹೊಂದಿದೆ.
ಈ ಸಿಂಹಗಢ ಮಹಾರಾಜರ ದೇವಾಲಯವು ದ್ರಾವಿಡ ಶೈಲಿಯ ಸಭಾಮಂಟಪ , ಪ್ರದಕ್ಷಣಾಪಥ ಕುರುಹುಗಳನ್ನು ಇರುವದು ನೋಡಿದರೆ, ಈ ದೇವಾಲಯಗಳು ಹಂಪಿ ಮಾದರಿಯಲ್ಲಿ ನಿರ್ಮಿಸಲಾಗಿದೆ ಎಂಬುದು ತಿಳಿದುಬರುತ್ತದೆ. ಈ ದೇವಾಲಯದಲ್ಲಿ ಬೃಹತ್ ಗಾತ್ರದ ಮಹಾದೇವನ ಲಿಂಗವೂ ಇದೆ. ಸುಮಾರು ೬೫ ವರ್ಷಗಳ ಹಿಂದೆ ಅಂದರೆ, ೧೯೫೯ ರಲ್ಲಿ ಮಹಾದೇವನ ದೇವಾಲಯವೆಂದು ಕರೆಯುತ್ತಾರೆ.
ಮಹಾರಾಜರು ನೆಲೆ ಕಂಡದ್ದು: ಸುಮಾರು ೬೫ ವರ್ಷಗಳ ಹಿಂದೆ ರೇವತಗಾಂವ ಗ್ರಾಮಕ್ಕೆ ಆಗಮಿಸಿದ ಸಿಂಹಗಢ ಮಹಾರಾಜರು ಮೂಲತಃ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಸಮೀಪದಲ್ಲಿರುವ ಸಿಂಹಗಢ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದರು. ವಾಹನ ಚಾಲಕರಾಗಿ ಕಾರ್ಯ ನಿರ್ವಹಿಸುತಿದ್ದ ಸಮಯದಲ್ಲಿ ಆ ವಾಹನವು ಅಪಘಾತಕ್ಕಿಡಾಗಿ ಬದುಕಿ ಉಳಿದ ಅವರು ಮುಂದೆ ವಾಹನ ಚಾಲಕನ ಕಾರ್ಯವನ್ನು ಬಿಟ್ಟು ಮಹಾರಾಷ್ಟçದ ಸುಕ್ಷೇತ್ರವಾದ ಪಂಢರಪುರದ ಪಾಂಡುರಂಗ ವಿಠ್ಠಲನ ದೇವಾಲಯದಲ್ಲಿ ಬಂದು ನೆಲೆಸಿದರು. ನಂತರ ಸಮೀಪದ ಮರವಾಡ ಗ್ರಾಮದಲ್ಲಿ ಹಲವು ವರ್ಷಗಳ ಕಾಲ ನೆಲೆಸಿ ನಂತರ ಕರ್ನಾಟಕದ ಗಡಿ ಭಾಗದಲ್ಲಿರುವ ರೇವತಗಾಂವ ಗ್ರಾಮಕ್ಕೆ ಆಗಮಿಸಿ ಪರಕೀಯರ ದಾಳಿಗೆ ತುತ್ತಾದ ಮಹಾದೇವನ ದೇವಾಲಯದಲ್ಲಿ ನೆಲೆ ಕಂಡರು.
ಈ ದೇವಾಲಯ ಭೂತಗಳ ವಾಸಸ್ಥಾನವೆಂದು ತಿಳಿದು ಗ್ರಾಮಸ್ಥರು ಆ ದೇವಾಲಯದ ಸಮೀಪ ಸುಳಿಯುತ್ತಿರಲಿಲ್ಲ. ಆದರೆ ಸದ್ಗುರು ಸಿಂಹಗಢ ಮಹಾರಾಜರು ಈ ದೇವಾಲಯದಲ್ಲಿ ವಾಸ ಮಾಡುತ್ತ ನಂತರ ಕ್ರಮೇಣ ಭಕ್ತರು ಇವರ ದರ್ಶನಕ್ಕೆ ಬರತೊಡಗಿದರು.
ಸಿಂಹಗಢ ಮಹಾರಾಜರು ಶಿಥಿಲಗೊಂಡಿರುವ ಈ ಮಹಾದೇವನ ದೇವಸ್ಥಾನವನ್ನು ಜಿರ್ಣೋದ್ಧಾರಗೊಳಿಸುವ ಸಲುವಾಗಿ ಶ್ರಮಪಟ್ಟಿದ್ದಾರೆ. ಅವರ ಶ್ರಮ ಕಂಡು ಗ್ರಾಮಸ್ಥರು ತಾವೂ ಕೈಜೋಡಿಸಿ ಕೆಲಸ ಮಾಡಿದ ಸಾಕಷ್ಟು ಉದಾಹರಣೆಗಳೂ ಇವೆ. ದೇವಾಲಯದಲ್ಲಿ ಪ್ರತಿ ದಿನ ಸಾಯಂಕಾಲ ಪಾಂಡುರಂಗನ ಹೆಸರಿನಲ್ಲಿ ಭಜನೆ ಜಪ ಮಾಡಲಾಗುತಿತ್ತು. ಸಿಂಹಗಢ ಮಹಾರಾಜರು ಅನೇಕ ಪವಾಡಗಳನ್ನು ಮಾಡಿದ ಇವರು ಸುತ್ತಮುತ್ತಲಿನ ಗ್ರಾಮದ ಜನರ ನಂಬಿಕೆ ವಿಶ್ವಾಸಕ್ಕೆ ಭಾಜನರಾಗಿದ್ದರು.
ಈ ಸಿಂಹಗಢ ಮಹಾರಾಜರು ೧೯೭೧ ರಲ್ಲಿ ಎಳ್ಳ ಅಮವಾಸ್ಯೆಯ ಆರನೇಯ ದಿನಕ್ಕೆ ಇಹಲೋಕ ತ್ಯಜಿಸಿದರು. ಅಂದಿನಿಂದ ಗ್ರಾಮದಲ್ಲಿ ಪ್ರತಿ ವರ್ಷ ಎಳ್ಳ ಅಮವಾಸ್ಯೆ ಮುಗಿದ ಆರನೆಯ ದಿನಕ್ಕೆ ಅವರ ಪುಣ್ಯಾರಾಧನೆ ದಿನವೆಂದು ವಿಶೇ಼ಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುತಿದ್ದು ಸಾವಿರಾರು ಭಕ್ತಾದಿಗಳು ಪಾಲ್ಗೊಳ್ಳುತ್ತಾರೆ.
ಸೂಕ್ತವಾದ ರಕ್ಷಣೆ, ನಿರ್ವಹಣೆಯ ಕೊರತೆಯಿಂದಾಗಿ ದೇವಾಲಯದ ಗೋಡೆಗಳು ಶಿಥಿಲವಾಗುತ್ತಿವೆ. ಈ ಐತಿಹಾಸಿಕ ಪೌರಾಣಿಕವಾಗಿ ಪ್ರಸಿದ್ಧಿ ಪಡೆದ ಈ ದೇವಾಲಯವನ್ನು ಜೀಣೋದ್ಧಾರಗೊಳಿಸಬೇಕಾಗಿರುವುದು, ಅತ್ಯಂತ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಸಂಬಂಧಪಟ್ಟ ಇಲಾಖೆಯವರು ಕೂಡಲೇ ಗಮನಹರಿಸಿ ಜೀಣೋದ್ಧಾರ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

ವಿವಿಧ ಕಾರ್ಯಕ್ರಮಗಳು
ಗ್ರಾಮದ ಸಿಂಹಗಢ ಮಹಾರಾಜರ ೫೫ ನೇ ಪುಣ್ಯಾರಾಧನೆ ಕಾರ್ಯಕ್ರಮವು ಡಿ.೩೦ ರಿಂದ ಆರಂಭಗೊಂಡು ಜ.೫ ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಡಿ.೩೦ ರ ಸೋಮವಾರ ಎಳ್ಳ ಅಮವಾಸ್ಯೆಯ ರಾತ್ರಿ ೯ ಗಂಟೆಗೆ ವೀಣೆ ನಿಲ್ಲಿಸುವುದು ಹಾಗೂ ಮರಾಠಾ ಭಜನಾ ಕಾರ್ಯಕ್ರಮಗಳೊಂದಿಗೆ ಪುಣ್ಯಾರಾಧನೆ ಕಾರ್ಯಕ್ರಮಗಳು ಪ್ರಾರಂಭಗೊಂಡು ಜ.೫ ರ ರವಿವಾರದವರೆಗೆ “ಹರಿನಾಮ ಜಪಯಜ್ಞ” ನಡೆಯುವುದು.
ಜ.೦೧ ರ ಬುಧವಾರ ಸಾಯಂಕಾಲ ೬ ಗಂಟೆಗೆ ಪ್ರವಚನ ಮತ್ತು ಕೀರ್ತನೆಗಳ ಉದ್ಘಾಟನೆ ಕಾರ್ಯಕ್ರಮ ಜರುಗುವುದು. ರಾತ್ರಿ ೭ ಗಂಟೆಗೆ ಕಲಬುರ್ಗಿಯ ಸಿದ್ಧಾರೂಢ ಮಠದ ನೀಲಾಂಬಿಕಾ ತಾಯಿ ಹಾಗೂ ಬರೂರದ ಆನಂದ ಶಾಸ್ತ್ರಿಗಳಿಂದ ಪ್ರವಚನ ಕಾರ್ಯಕ್ರಮ ಜರುಗಲಿದೆ. ಆ.೨ ರ ಗುರುವಾರದ ಸಂಜೆ ೬ ಗಂಟೆಗೆ ನೀಲಾಂಬಿಕಾ ತಾಯಿ ಹಾಗೂ ಚಿಕ್ಕರೂಗಿಯ ಈರಣ್ಣ ಶಾಸ್ತ್ರಿಯವರಿಂದ ಪ್ರವಚನ. ಆ.೩ ರ ಶುಕ್ರವಾರದಂದು ಸಾಯಂಕಾಲ ೬ ಗಂಟೆಗೆ ಗದಗ ಶಾಖಾ ಮಠದ ಮೈತ್ರಾದೇವಿ ಹಾಗೂ ಕಾತ್ರಾಳದ ಅಮೃತಾನಂದ ಮಹಾಸ್ವಾಮಿಯವರಿಂದ ಪ್ರವಚನ.
ಜ.೪ ರ ಶನಿವಾರದಂದು ಕಕಮರಿಯ ಅಭಿನವ ಗುರುಲಿಂಗ ಜಂಗಮ ಮಹಾರಾಜರ ಅಧ್ಯಕ್ಷತೆಯಲ್ಲಿ ಸಾಯಂಕಾಲ ೬ ಗಂಟೆಗೆ ಪ್ರವಚನ ಹಾಗೂ ಕಿರ್ತನೆಗಳು ಜರುಗಲಿವೆ. ಹುನ್ನೂರದ ಪರಶುರಾಮ ವನಮೋರೆ, ನೀಲಾಂಬಿಕಾ ತಾಯಿ ಅಸುಂಡಿ, ಮೈತ್ರಾದೇವಿ, ಅಭಿನವ ಕೊಳಗೇರಿ ಮಹಾರಾಜರು ಅವರುಗಳಿಂದ ಪ್ರವಚನ ಮತ್ತು ಕಿರ್ತನೆಗಳು ಜರುಗುವುದು. ಮರವೇಡಾದ ಸ್ವಾಮಿ ಮಹಾರಾಜರ ಮರಾಠಿ ಭಜನಾ ಕಾರ್ಯಕ್ರಮಗಳು ಜರುಗಲಿವೆ. ರಾತ್ರಿ ೧೦:೪೫ಕ್ಕೆ ಶ್ರೀ ಸದ್ಗುರುವಿಗೆ ರುದ್ರಾಭಿಷೇಕ ಮತ್ತು ಪುಷ್ಪಾರ್ಚನೆ ಕಾರ್ಯಕ್ರಮ ಜರುಗುವುದು. ನಂತರ ಚಡಚಣದ ಚಂದ್ರಕಾಂತ ಕಾಮಗೊಂಡ ಮತ್ತು ಗುರುರಾಜ ಹಳ್ಳಿಖೇಡರವರಿಂದ ಸಂಗೀತ ಕಾರ್ಯಕ್ರಮ ಮುಂದುವರೆಯುವುದು.
ಜ.೫ ರ ರವಿವಾರದಂದು ಪ್ರಾತಃಕಾಲ ನೂರಾರು ಮುತ್ತೈದೆಯರಿಂದ ಆರತಿ, ಕುಂಭ ಕಳಸಗಳೊಂದಿಗೆ ವಿವಿಧ ವಾದ್ಯ ವೈಭವಗಳೊಂದಿಗೆ “ಶ್ರೀ ಸದ್ಗುರುವಿನ ಭಾವಚಿತ್ರ ಮೆರವಣಿಗೆ” ಹಾಗೂ ಮುಂಜಾನೆ ೧೦:೪೫ ಗಂಟೆಗೆ ಕಕಮರಿಯ ಅಭಿನವ ಗುರುಲಿಂಗ ಜಂಗಮ ಮಹಾರಾಜರ ಅಧ್ಯಕ್ಷತೆಯಲ್ಲಿ “ಧರ್ಮಸಭೆ” ನಡೆಯಲಿದೆ. ಹಲವರು ಶಿವಾಚಾರ್ಯರ ನೇತೃತ್ವದಲ್ಲಿ ಸದ್ಗುರುವಿಗೆ “ಹೂ ಬೀಳುವ ಕಾರ್ಯಕ್ರಮ” ಜರಗುವುದು. ನಂತರ ೧೧ ಗಂಟೆಗೆ “ಮಹಾ ಪ್ರಸಾದ ವಿತರಣೆ” ಜರುಗಲಿದೆ.

