ಲೇಖನ
– ರಶ್ಮಿ ಕೆ. ವಿಶ್ವನಾಥ್
ಮೈಸೂರು
ಉದಯರಶ್ಮಿ ದಿನಪತ್ರಿಕೆ
“ನಗುವಿರಲಿ ಅಳುವಿರಲಿ
ಎರಡನ್ನು ನಂಬೆ
ನಗೆ ನಂಜು
ಅಳು ಮಂಜು
ಇದ್ದಿತು ಎಂಬೆ “
ಎಂದು ವರಕವಿ ದ. ರಾ. ಬೇಂದ್ರೆ ಅವರು ಒಂದು ಕಡೆ ಹೇಳುವ ಹಾಗೆ, ಇದೇ ಪರಿಸ್ಥಿತಿ ಈಗಿನ ಒಬ್ಬಂಟಿ ಜೀವಗಳನ್ನು ಕಾಡುತ್ತಿದೆ.
ಯಾರನ್ನು ನಂಬಬೇಕೋ ಯಾರನ್ನು ನಂಬಬೇಡವೋ ಯಾವುದು ಬೇಕು ಯಾವುದು ಬೇಡಾ ಹೀಗೆ ಸಾಗುತ್ತದೆ ತೊಳಲಾಟಗಳ ತುಡಿತ.

ಒಂಟಿ ಜೀವಗಳ ಜೀವನ ಹೇಗಿರಬಹುದೆಂಬುದನ್ನು ನಾವು ಕಲ್ಪಿಸಿಕೊಳ್ಳಬೇಕಾಗಿಲ್ಲ. ನಮ್ಮ ಸುತ್ತ ಮುತ್ತಲೇ ಹಲವಾರು ಉದಾಹರಣೆಗಳು ಕಾಣಸಿಗುತ್ತವೆ.
ಎಲ್ಲರನ್ನು ಹೊಂದಿಕೊಂಡು ಹೊಂದಿಸಿಕೊಂಡು ಹೋಗುವ ಮನಸುಗಳಿದ್ದರೆ ಒಂಟಿತನ ಸ್ವಲ್ಪವಾದರೂ ಕರಗೀತು.
ಆದರೆ ಹೆಚ್ಚು ಶಿಸ್ತು, ನೇರ ನಡೆ ಅಥವಾ ಜಗಳುಗಂಟಿತನ ಇವಾವುದೇ ಇದ್ದರೂ ಇಂತವರಿಗೆ ಜೀವನ ಸಾಗಿಸೋದು ಬಹಳ ಕಷ್ಟ.
ಅಲ್ಲೊಂದು ಅಜ್ಜಿ ಇದ್ದಾರೆ. ದೊಡ್ಡ ಮನೆ. ಅದರಲ್ಲಿ ಅವರೊಬ್ಬರೆ. ಶಿಸ್ತಿನ ಸಿಪಾಯಿ. ಅಷ್ಟೇ ಜಿಪುಣಿ ಕೂಡಾ. ಪತಿ ಮರಣ ಹೊಂದಿದ್ದಾರೆ. ಒಂದೇ ಊರಿನಲ್ಲಿರುವ ಮಕ್ಕಳು ಮಾತನಾಡಿಸುತ್ತಿಲ್ಲ. ‘ಕೆಲಸಕ್ಕೆ ಬರುವವರು ಏನಾದರು ಪ್ಲ್ಯಾನ್ ಮಾಡಿ ಕಳ್ಳತನ ಮಾಡಿಬಿಟ್ಟರೆ?’ ಎಂಬ ಭಯದಲ್ಲಿ “ನನ್ನ ಮೊಮ್ಮಗ ರಾತ್ರಿ ಬಂದು ಬೆಳಗ್ಗೆ ಹೋಗ್ತಾನಮ್ಮ” ಎಂದು ಕೆಲಸದವರ ಹತ್ತಿರ ಹೇಳ್ಕೊತ್ತಾರೆ.
“ರೀ ಮಾಯಾ, ನಾ ಏನಾದ್ರು ವಾಕ್ ಬರಲಿಲ್ಲ ಅಂದ್ರೆ, ಈಚೆ ಕಾಣಿಸಲಿಲ್ಲ ಅಂದ್ರೆ, ಬಂದು ಮನೆ ಬಾಗಿಲು ತಟ್ಟಿ ನೋಡಿ ಪ್ಲೀಸ್” ಎಂದು ಮುಂದಿನ ಮನೆಯ ಅಂಟಿಯಲ್ಲಿ ವಿನಂತಿಸಿಕೊಳ್ಳುತ್ತಾರೆ.
ಇಷ್ಟೆಲ್ಲಾ ಆಗಬೇಕಾದರೆ ಆ ಅಜ್ಜಿಯ ಮನಸಿನಲ್ಲಿ ಎಂಥೆಂತ ಯೋಚನೆಗಳು ಹೊಯ್ದಾಡಿದ್ದಿರಬೇಕು?
ಅದೆಷ್ಟು ಒಬ್ಬಂಟಿ ಘಳಿಗೆಗಳು ಘನಘೋರವಾಗಿ ಕಾಡಿದ್ದಿರಬೇಕು?
ಮತ್ತೊಂದು ಮನೆಯ ಆಂಟಿಯ ಮಗ ತಾನು ಕೆಲಸದ ನಿಮಿತ್ತ ದೂರದಲ್ಲಿರುವುದರಿಂದ ಮನೆಯಲ್ಲಿ ಏನೂ ಹೆಚ್ಚಿಗೆ ಕೆಲಸವಿಲ್ಲದಿದ್ದರೂ, ಕೆಲಸದವರನ್ನು ಇಟ್ಟಿದ್ದಾನೆ.

“ಮನೆಯಲ್ಲಿ ಅಷ್ಟೇನು ಕೆಲಸ ಇಲ್ಲಾ ಕಣೊ, ನಾನೇ ಮಾಡಿಕೊಳ್ತೀನಿ” ಎಂದು ಆಂಟಿ ಹೇಳಿದರೆ, “ಅಮ್ಮಾ, ಮನೆಯಲ್ಲಿ ಯಾರೂ ಇಲ್ಲ. ಏನಾದರು ಹೆಚ್ಚು ಕಡಿಮೆ ಆದ್ರೂ ಗೊತ್ತಾಗೋಲ್ಲ. Atleast ಕೆಲಸದವರಾದರೂ ದಿನಕ್ಕೊಮ್ಮೆ ಬಂದು ಹೋಗಲಿ” ಎನ್ನುತ್ತಾನೆ.
ಆ ಕೆಲಸದಾಕೆ ಮನೆಕೆಲಸಕ್ಕಿನ್ನ ಹೆಚ್ಚಾಗಿ ಆ ಆಂಟಿಯ ಮನದ ಮಾತಿಗೆ ಕಿವಿಯಾಗಿ, ಆಂಟಿಯ ಮಾತಿಗೆ ಮಾತಾಗಿ ಹೋಗಿದ್ದಾಳೆ.
ಇಷ್ಟೆಲ್ಲಾ ಕೆಲಸದಾಕೆಯ ಜೊತೆಗೆ ಮಾತನಾಡಬೇಕಾದರೆ ಆ ಅಂಟಿಯ ಮನದಲ್ಲಿ ಮಾತಿನ ರೂಪ ಪಡೆಯದ ಅದೆಷ್ಟು ಮಾತುಗಳಿರಬಹುದು? ಕೆಲಸದಾಕೆಯ ಹತ್ತಿರ ಮಾತನಾಡುವ ಮಾತು ಒಂದು ಪರಿಮಿತಿಯೊಳಗೆ ಬಂದು ಮುಗಿದುಹೋಗುತ್ತದೆ. ಎಷ್ಟೇ ಆದರೂ ಪರರು ಮನೆಯವರಾಗಲಾರರು ಅಲ್ವಾ? ಹಾಗಾಗಿ ಇನ್ನೂ ಅದೆಷ್ಟೋ ಮಾತುಗಳು ಮನದೊಳಗೇ ಮುದುಡಿಹೋಗುತ್ತವೆ.
ಹೆಂಗಸರಾದರೆ ಹೇಗೋ ಸ್ವಲ್ಪ ಹೊಂದಿಕೊಳ್ಳಬಹುದೇನೋ. ಆದರೆ ಪುರುಷರದು ಹಾಗಲ್ಲವೇ ಅಲ್ಲ.
ಗಂಡಸರ ಒಬ್ಬಂಟಿತನದ ಪರಿಣಾಮ ಮತ್ತೊಂದು ರೀತಿ. ತುಂಬಾ ಪುರುಷರ ಮಾತುಗಳು ಕ್ರಿಯೆಯ ರೂಪ ಪಡೆದುಬಿಡುತ್ತವೆ. ಒಳಗೆ ಸ್ವಾಭಿಮಾನ, ಹೊರಗೆ ಬಿಗುಮಾನ.
ಒಬ್ಬ ಮಡದಿ ಕಳೆದುಕೊಂಡ ನಿವೃತ್ತ ತಂದೆಯನ್ನು ಮಗನೇ ಕರೆದುಕೊಂಡು ಹೋಗಿ ಜೊತೆಯಲ್ಲಿ ಇಟ್ಟುಕೊಂಡ, ಆದರೆ ಆ ತಾತ ಮನೆಯಲ್ಲಿ ತಾನು ಹೇಳಿದ ಮಾತೇ ನಡೆಯಬೇಕು ಎಂಬ ಒಣದರ್ಪವನ್ನು ತೋರಿಸಿ ಮಗ-ಸೊಸೆ ವಿಚ್ಛೆದನ ಪಡೆಯುವ ಮಟ್ಟಿಗೆ ಮಾಡಿಬಿಟ್ಟರು. ಕೊನೆಗೆ ಆ ಮಗ ಅಪ್ಪನನ್ನು ವೃದ್ಧಾಶ್ರಮಕ್ಕೆ ಸೇರಿಸಿ ಮತ್ತೊಂದು ಮದುವೆಯಾದ. ಆ ತಾತ, ತನ್ನ ಮಗ ತನ್ನನ್ನು ವೃದ್ಧಾಶ್ರಮದಲ್ಲಿರಿಸಿದ ಎಂಬುದನ್ನೇ ಎಲ್ಲರ ಹತ್ತಿರ ಹೇಳಿಕೊಂಡು ಬರುತ್ತಾ ಇದ್ದಾರೆ. ಹೀಗೂ ಆಗುವ ಸಾಧ್ಯತೆಗಳಿವೆ.
ತಿರುತಿರುಗಿ ತಿರುಗುತ್ತೆ ಬುಗುರಿ ತಾನೇ ಸೋತು ।
ತಿರೆಗುರುಳುವುದು ತನ್ನ ಬಲವ ತಾಂ ಕಳೆದು ॥
ನರನುಮಂತೆಯೆ ಸುತ್ತಿ ಕಡೆಗೊಂದು ದಿನ ।
ತೆರುವನಸ್ಥಿಯ ಧರೆಗೆ – ಮಂಕುತಿಮ್ಮ
ಅಂದರೆ
“ಒಂದು ಬುಗುರಿಗೆ ಚಾಟಿಯನ್ನು ಸುತ್ತಿ ಜೋರಾಗಿ ತಿರುಗಿಸಿದಾಗ, ಅದು ನಾವು ಕೊಟ್ಟ ಜೋರು ಕಡಿಮೆಯಾಗುವತನಕ ಸುತ್ತುತ್ತದೆ. ಜೋರು ಕಡಿಮೆಯಾಗುತ್ತಾ ತನ್ನ ತಿರುಗುವ ವೇಗವನ್ನು ಕಡಿಮೆ ಮಾಡಿಕೊಂಡು ನಿಧಾನವಾಗಿ ಸುತ್ತುತ್ತಾ ಕೆಳಗೆ ಬೀಳುತ್ತದೆ. ಹಾಗೆಯೇ ಮನುಷ್ಯನೂ ಸಹ ಶಕ್ತಿಯಿರುವವರೆಗೂ ಸುತ್ತಿ
ಸುತ್ತಿ ಏನನ್ನೋ ಸಾಧಿಸಬೇಕೆಂದು ಓಡಿ ಓಡಿ ಶಕ್ತಿಯೆಲ್ಲ ಕುಂದಿ ಧರೆಗೆ ಬಿದ್ದು, ಸಾವನ್ನಪ್ಪಿ ತನ್ನ ದೇಹವನ್ನು ಈ ಧರೆಗೇ ಒಪ್ಪಿಸುತ್ತಾನೆ” ಎಂಬ ಡಿವಿಜಿಯವರ ಮಾತಿನಂತೆ, ಈ ಮೇಲಿನ ಉದಾಹರಣೆಗಳು, ಕಡೆಯ ಹಂತ ತಲುಪಿದ ಹಿರಿಕರ ವಿಷಯಗಳಾದವು.
ಇನ್ನು ಚಿಕ್ಕವರ ಒಬ್ಬಂಟಿತನ ಇನ್ನೂ ಶೋಚನಿಯ.
ಯಾರಿಗೂ ಹೇಳಿಕೊಳ್ಳಲಾಗದ ಅಥವಾ ಹೇಳಿಕೊಂಡರೂ ಪರಿಹಾರ ಸಿಗದ ತನ್ನ ಮನೆಯ ಕೆಲವು ವಿಷಯಗಳು ಕೆಲವು ಮಕ್ಕಳ ಒಬ್ಬಂಟಿ ವರ್ತನೆಗೆ ಕಾರಣವಿರಬಹುದು.
ತನಗೆ ಗಾಸಿಪ್ ಮಾಡಲು ಬರುವುದಿಲ್ಲ ಅಂತಲೊ ಇಲ್ಲಾ ಇತರರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ತನ್ನ ಮಾತಿಗೆ ಇಲ್ಲಾ ಎಂತಲೋ, ತನಗೆ ಯಾರೂ ಪ್ರಾಮುಖ್ಯತೆ ಕೊಡುತ್ತಿಲ್ಲ, ತನ್ನ ಬಗ್ಗೆ ಯಾರಲ್ಲೂ ಆದರಗಳೇ ಇಲ್ಲಾ, ಎಲ್ಲರೂ ತನ್ನನ್ನು ಕಡೆಗಣಿಸುತ್ತಾರೆ ಎಂದು ಕೊರಗುವ ಅದೆಷ್ಟೋ ಮನಸುಗಳು ತಮ್ಮೊಳಗೆ ಒಂಟಿತನವನ್ನು ಮೌನವಾಗಿಯೇ ಅನುಭವಿಸುತ್ತಿರುತ್ತವೆ. ಸಾಯಲೂ ಆಗದೆ ಬದುಕಲೂ ಆಗದೆ ಮೇಲೆ ನಗುಮುಖದ ಪರದೆ ಹಾಕಿಕೊಂಡು ಹೇಗೋ ಹಾಗೆ ಜೀವನ ಮುಂದುವರೆಸುತ್ತಿರುತ್ತವೆ. ಇಂತಹವರು ಕೆಲಸಮಯ ಡಿಪ್ರೇಷನ್ ಗೆ ಸಹ ಹೋಗುವ ಸಾಧ್ಯತೆಗಳಿರುತ್ತವೆ. ಇನ್ನಾ ಕೆಲವರು ಆತ್ಮಹತ್ಯೆಯ ದಾರಿಯನ್ನು ಸಹ ಹಿಡಿದುಬಿಡಬಹುದು.
ತಮಗೆ ಆಸಕ್ತಿ ಇರುವ ಪ್ಯಾಷನ್ ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು, ಗ್ರಂಥಾಲಯಕ್ಕೆ ಹೋಗಿ ಓದುವುದು, ಅದಕ್ಕೆಂದೇ ಇರುವ ಸಮಾಜಸೇವಾ ಸಂಘಗಳು, ಮಾತಿನ ಕಟ್ಟೆ, ಯೋಗ ಕ್ಲಾಸು, ಇವುಗಳಿಗೆ ಸೇರಿಕೊಳ್ಳುವುದು, ಜನರೊಂದಿಗೆ ಸಂಪರ್ಕದಲ್ಲಿರಲು ಪ್ರಯತ್ನಿಸುವುದು, ಹೀಗೆ ಏನಾದರೂ ಒಂದು ಅಭ್ಯಾಸಗಳಲ್ಲಿ ಇಂತಹವರು ತಮ್ಮನ್ನ ತಾವು ಬಲವಂತವಾಗಿಯಾದರೂ ತೊಡಗಿಸಿಕೊಂಡು, ಕಷ್ಟಪಟ್ಟಾದರೂ ಸರಿಯೇ ಇಷ್ಟಪಟ್ಟು ಜೀವನವನ್ನು ಸಹ್ಯ ಮಾಡಿಕೊಂಡುಬಿಡಬೇಕು.


