– ನಯನಾ ಹೆಬ್ಬಾರ್✍️
ಕಾಸರಗೋಡು
ಉದಯರಶ್ಮಿ ದಿನಪತ್ರಿಕೆ
"ಅಮ್ಮ ಎಲ್ಲಿದ್ದೀಯಾ? ದೊಡ್ಡಜ್ಜಿ ನೋಡು ಗಿಂಡಿಯಿಂದ ನೀರೆಲ್ಲ ಮನೆ ತುಂಬಾ ಚೆಲ್ಲಿಕೊಂಡು ನಡೀತಿದ್ದಾರೆ... ಚೂರೂ ನೋಡ್ಕೊಳ್ಳಲ್ಲ. ಮೊನ್ನೆಯಂತೂ ನನ್ನ ಫ್ರೆಂಡ್ಸ್ ಬಂದಿದ್ದವರ ಜೊತೆಗೆ ಏನೇನೋ ಪ್ರಶ್ನೆ ಕೇಳೋದು... ಇಂಥ ಬಟ್ಟೆ ಹಾಕೋಬಾರದು ಅನ್ನೋದು.. ತುಂಬಾ ಮುಜುಗರ ಆಯ್ತು ಅಮ್ಮ ನಂಗೆ... ನೀನು ಅವರನ್ನು ಕರಕೊಂಡು ಬಂದ ಮೇಲೆ ನಂಗೆ ನೆಮ್ಮದಿ ಇಲ್ಲ ಅನ್ನಿಸಿಬಿಟ್ಟಿದೆ" ಅಂತ ಒಂದೇ ಸಮನೆ ದೊಡ್ಡಜ್ಜಿಯ ಮೇಲೆ ದೂರು ಹೇಳುತ್ತಿದ್ದ ಮಗಳು ಇಂಚರಳ ಮಾತಿಗೆ ಹೊರಬಂದಳು ಮಾನಸ.
” ನೀರು ಚೆಲ್ಲಿದರೆ ಒರಸಿದರಾಯಿತು. ವಯಸ್ಸಾದಾಗ ಶರೀರ ನಾವು ಹೇಳಿದ ಹಾಗೆ ಕೇಳಲ್ಲ ಬಂಗಾರಿ… ನಿನ್ನ ಫ್ರೆಂಡ್ಸ್ ಬಂದಾಗ ಮಹಡಿ ರೂಮಿಗೆ ಕರೆದುಕೊಂಡು ಹೋಗಿ ಮಾತಾಡಿಕೋ .. ಅಜ್ಜಿಗೆ ನಾನು ತಿಳಿಸಿ ಹೇಳುವೆ” ಎಂದು ಮಗಳನ್ನು ಸಮಾಧಾನ ಮಾಡಿ ಕಾಲೇಜಿಗೆ ಕಳಿಸಿದ ಮಾನಸ ಗತ ನೆನಪಿನಲ್ಲಿ ಮುಳುಗಿದಳು.
ಮಾನಸಳ ದೊಡ್ಡಮ್ಮ ಶಾರದಮ್ಮ. ಚಿಕ್ಕಂದಿನಲ್ಲಿಯೇ ತುಂಬಾ ಸುಂದಯಾದ ಹೆಣ್ಣು ಮಗಳು.ಆದರೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಸಾಲಾಗಿ ಏಳು ಜನ ಮಕ್ಕಳು. ಹಾಡು ಹಸೆ ರಂಗೋಲಿಯಲ್ಲಿ ಎತ್ತಿದ ಕೈಯಾಗಿದ್ದ ಶಾರದಮ್ಮನವರನ್ನು ಹದಿಮೂರು ವರುಷವಿರುವಾಗಲೇ ಮೂವತ್ತು ವರ್ಷದ ವರನ ಜೊತೆ ಮದುವೆ ಮಾಡಿ ಕೊಟ್ಟಿದ್ದರು. ಅಮ್ಮನ ಮನೆಯಲ್ಲಿ ಊರಿನ ಮಕ್ಕಳ ಜೊತೆಗೆ ಕುಂಟಾಬಿಲ್ಲೆ ಆಡುತ್ತಾ ಖುಷಿಯಾಗಿದ್ದ ಹುಡುಗಿಗೆ ಮದುವೆಯಾದ ಮನೆ ನರಕವಾಯಿತು. ಬೆಳಗಿಂದ ರಾತ್ರಿ ತನಕವೂ ಕೆಲಸ. ರಾತ್ರಿಯಾದರೆ ಕಾಮುಕ ಗಂಡನಿಂದ ಮುಗ್ಧ ಮನಸ್ಸು ಮತ್ತು ಶರೀರದ ಮೇಲೆ ಪ್ರಹಾರ. ಆದರೂ ಪಾಪ ಯಾರ ಜೊತೆಗೂ ಹೇಳಿಕೊಳ್ಳುವಂತಿರಲಿಲ್ಲ.
ಹೀಗಿರುವಾಗ ಒಂದು ದಿನ ಅವಳ ತಂದೆ ತೀರಿಕೊಂಡರೆಂದು ಸೂತಕವಾಗಿ ತವರು ಮನೆಯಲ್ಲಿ ಉಳಿದುಕೊಳ್ಳಬೇಕಾದ ಪ್ರಸಂಗ ಒದಗಿ ಬಂತು. ಹನ್ನೊಂದನೆಯ ದಿನ ರಾತ್ರಿ ಗಂಡ ತನ್ನ ಜೊತೆಗೆ ಇರುವಂತೆ ಒತ್ತಾಯ ಮಾಡಿದ. ” ಅಪ್ಪನ ಸೂತಕ ಮುಗಿಯದೆ ನಾನು ನಿಮ್ಮ ಹತ್ರ ಬರೋಹಾಗಿಲ್ಲ. ನನ್ನನ್ನು ಒತ್ತಾಯಿಸಿ ಬಂಧುಗಳೆದುರು ನನ್ನ ಮರ್ಯಾದೆ ತೆಗಿಬೇಡಿ ” ಎಂದು ಹೇಳಿದವಳ ಬೆನ್ನಿಗೆ ಸಿಟ್ಟಿನಿಂದ ಅಲ್ಲೇ ಇದ್ದ ಒನಕೆ ತೆಗೆದು ಬಾರಿಸಿದ. ಆ ಏಟಿಗೆ ನೆಲಕ್ಕುರುಳಿದವಳಿಗೆ ಮುಂದೆ ಬೆನ್ನು ನೇರವಾಗದೆ ಬಗ್ಗಿ ನಡೆಯುವ ಸ್ಥಿತಿ ಎದುರಾಯಿತು. ಅವಳ ಹದಿನೆಂಟರ ವಯಸ್ಸಿನಲ್ಲಿ ಗಂಡ ಯಾವುದೋ ರೋಗದಿಂದ ದೇವರ ಪಾದ ಸೇರಿದ.
“ದುಷ್ಟ ಮೃಗ ಸತ್ತಿತು” ಎಂದು ಒಂದು ಕಡೆ ಸಮಾಧಾನ ಪಟ್ಟುಕೊಂಡರೂ ಅವಳ ಮುಂದಿನ ಬದುಕು ಧಾರುಣವಾಗಿತ್ತು. ಸೊಂಟದಿಂದಲೂ ಕೆಳಗೆ ಇಳಿ ಬಿದ್ದಿದ್ದ ಅವಳ ಪ್ರೀತಿಯ ತಲೆಗೂದಲನ್ನು ಕತ್ತರಿಸಿ ಕೇಶ ಮುಂಡನ ಮಾಡಿಸಿ, ಕೈ ಬಳೆ ಹಣೆಬಟ್ಟು ಕಿವಿಯೋಲೆ ಮೂಗುತ್ತಿ ಎಲ್ಲವನ್ನು ಕಿತ್ತು ಕೆಂಪು ಬಟ್ಟೆ ತೊಡಿಸಿ ಹದಿನೆಂಟರ ಬಾಲೆಯನ್ನು ಮಡಿ ಹೆಂಗಸಾಗಿ ಮಾಡಿಬಿಟ್ಟರು. ಬದುಕಿನುದ್ದಕ್ಕೂ ಅವಳು ಏನೇನೋ ಅನುಷ್ಠಾನಗಳೊಂದಿಗೆ ಬದುಕಬೇಕಾಗಿತ್ತು. ಯಾರದ್ದಾದರೂ ಮನೆಯಲ್ಲಿ ಹೆರಿಗೆ ಇದ್ದರೆ ಅವರ ಬಾಣಂತನ ಮಾಡಲು ಮಕ್ಕಳ ಚಾಕರಿಗಾಗಿ ಇವಳು ಹೋಗಬೇಕಾಗಿತ್ತು. ಮಕ್ಕಳಿಲ್ಲದ ತನ್ನ ಮಡಿಲು, ಎಲ್ಲೋ ಕಾಡುವ ಆಸೆಗಳ ಒಡಲು ಇವುಗಳನ್ನೆಲ್ಲ ಶಿವಾರ್ಪಣಗೊಳಿಸುತ್ತಾ ಬದುಕುತ್ತಿದ್ದ ಅವಳ ಸೇವೆಗೆ ಪ್ರತಿಯಾಗಿ ಸಿಗುತ್ತಿದ್ದದ್ದು ಬಂಧುಗಳ ಚುಚ್ಚು ಮಾತುಗಳು ಮಾತ್ರ.

ಆದರೆ ತನ್ನ ತಂಗಿಯ ಮಗಳಾದ ಮಾನಸ ಮಾತ್ರ ಶಾರದಮ್ಮನ ಪ್ರೀತಿಯ ಜೀವವಾಗಿದ್ದಳು. ಮಾನಸಳ ಅಮ್ಮ ಅವಳ ಚಿಕ್ಕವಯಸ್ಸಿನಲ್ಲಿಯೇ ತೀರಿಕೊಂಡಿದ್ದಳು. ಹೀಗಾಗಿ ದೊಡ್ಡಮ್ಮನ ಮಡಿಲಿನಲ್ಲಿಯೇ ಬೆಳೆದವಳನ್ನು ತನ್ನ ಮಗುವಾಗಿಸಿಕೊಂಡಿದ್ದರು ಶಾರದಮ್ಮ. ಮಾನಸ ತಂದೆಯು ಇವರನ್ನು ಒಡಹುಟ್ಟಿದ ಅಕ್ಕನಂತೆ ನೋಡಿಕೊಳ್ಳುತ್ತಿದ್ದುದರಿಂದ ತಾಯಿ ಇಲ್ಲದ ತಬ್ಬಲಿಗೆ ಆಧಾರವಾಗಿದ್ದರು. ಮಾನಸಳ ಮದುವೆಯಾಗಿ ಬಾಣಂತನವನ್ನು ಇವರೇ ಮಾಡಿ ತನ್ನ ಸೆರಗಿನಲ್ಲಿ ಕಟ್ಟಿಕೊಂಡಿದ್ದ ಹಣದಿಂದ ಮಗುವಿಗೆ ಒಂದು ಕಿವಿಯೋಲೆ ಮಾಡಿಸಿಕೊಟ್ಟಿದ್ದರು. ಅವಳ ಗಂಡ ಪ್ರದೀಪನಿಗೂ ಇವರೆಂದರೆ ತುಂಬಾ ಪ್ರೀತಿ. ಅಲ್ಲಿ ಇಲ್ಲಿ ತಿರುಗಾಡಿಕೊಂಡಿರುತ್ತಿದ್ದ ಶಾರದಮ್ಮನವರಿಗೆ ವಯಸ್ಸಾದಾಗ ಅವರನ್ನು ನೋಡಿಕೊಳ್ಳುವುದು ತನ್ನ ಕರ್ತವ್ಯವೆನಿಸಿತು ಮಾನಸಳಿಗೆ. ಹೀಗಾಗಿ ಗಂಡನ ಒಪ್ಪಿಗೆ ಪಡೆದು ಮನೆಯಲ್ಲಿ ಇರಿಸಿಕೊಂಡಿದ್ದಳು. ಆದರೆ ಮಾನಸಳ ಮಗಳು ಇಂಚರಳಿಗೆ ಹಳೆಯ ಕಾಲದ ಅಜ್ಜಿಯ ಕಟ್ಟುಪಾಡುಗಳು ಇಷ್ಟವಾಗುತ್ತಿರಲಿಲ್ಲ. ಅವಳು ಏನಾದರೂ ಒಂದು ನೆವ ತೆಗೆದು ಅವರನ್ನು ಆಡಿ ಅಂದು ಮನೆ ಮನಸ್ಸನ್ನು ರಾಡಿಗೊಳಿಸುತ್ತಿದ್ದಳು. ಇದು ಮಾನಸಳಿಗೆ ನುಂಗಲಾರದ ತುತ್ತಾಗಿತ್ತು. ಇವತ್ತು ಇದಕ್ಕೊಂದು ಇತಿಶ್ರೀ ಹಾಡಲೇಬೇಕೆಂದು ನಿರ್ಧರಿಸಿದಳು.
ಸಂಜೆ ಕಾಲೇಜಿನಿಂದ ಬಂದ ಮಗಳ ಜೊತೆ ಮಾತಿಗೆ ಕೂತಳು.
” ನೋಡು ಮಗಳೇ, ಪ್ರತೀದಿನ ಮನೆಯಲ್ಲಿ ಅಸಹನೆಯಿಂದ ಗಲಾಟೆ ಮಾಡ್ತಾನೆ ಇದ್ದಿ… ಇವತ್ತು ಅಜ್ಜಿ ಸ್ವಲ್ಪ ನೀರು ಚೆಲ್ಲಿರ ಬಹುದು, ಒರೆಸಿಕೊಂಡರಾಯಿತು. ನಿನ್ನ ಜೊತೆ ಅವರ ವಯಸ್ಸಿಗೆ ತಕ್ಕ ಹಾಗೆ ಏನೋ ಮಾತನಾಡಿರಬಹುದು, ಅವರಿಗೆ ಅರ್ಥ ಮಾಡಿಸಿ ಕೊಟ್ಟರಾಯಿತು. ಆದರೆ ಒಬ್ಬ ವ್ಯಕ್ತಿಯನ್ನು ದ್ವೇಷಿಸತೊಡಗಿದರೆ ಅವರ ಪ್ರವೃತ್ತಿಗಳೆಲ್ಲವೂ ನಮಗೆ ತಪ್ಪಾಗಿಯೇ ಕಾಣಿಸುತ್ತದೆ. ಹಾಗೆ ಮಾಡದಿರು. ಚಿಕ್ಕಂದಿನಲ್ಲಿ ನಿನ್ನ ಮಲ ಮೂತ್ರಗಳನ್ನೆಲ್ಲ ಬಾಚಿ ನಿದ್ದೆಗೆಟ್ಟು ನಿನ್ನನ್ನು ನೋಡಿಕೊಂಡಿದ್ದು ಇದೇ ದೊಡ್ಡಜ್ಜಿ. ಅಪ್ಪನಲ್ಲಿ ಒಂದು ಹಂತದಲ್ಲಿ ಕೈಯಲ್ಲಿ ಚಿಕ್ಕಾಸು ಇಲ್ಲದೆ ಪರದಾಡುತ್ತಿದ್ದಾಗ ಯಾರೋ ಕೊಟ್ಟ ಹಣವನ್ನೆಲ್ಲ ಒಟ್ಟು ಸೇರಿಸಿ ನಿನ್ನ ಅಪ್ಪನ ಕೈಯಲ್ಲಿರಿಸಿದ್ದು ಈ ನನ್ನ ದೊಡ್ಡಮ್ಮ. ಅಮ್ಮನಿಲ್ಲದ ನನಗೆ ತಾಯಿ ಪ್ರೀತಿಯನ್ನು ಕೊಟ್ಟದ್ದು ಇವರೇ. ಅವರಿದ್ದರೆ ಮನೆ ಗಲೀಜು ಅಂತಿಯಲ್ಲಾ… ನಾಳೆ ನಿನ್ನ ಅಮ್ಮನೂ ಇದೇ ಸ್ಥಿತಿ ತಲುಪಿದಾಗ ಹೀಗೆ ಅನ್ನುತ್ತೀಯಾ ಮಗಳೇ…. ಸ್ವಲ್ಪ ಸಮಾಧಾನ ಮಾಡಿಕೋ. ಬದುಕಿನಲ್ಲಿ ಕೆಲವೊಂದು ಪರಿಸ್ಥಿತಿಗಳನ್ನು ದಾಟಿಯೇ ಮುಂದೆ ಸಾಗಬೇಕು. ಪಲಾಯನವಾದಗಳು ನಮ್ಮನ್ನು ಮನುಷ್ಯರನ್ನಾಗಿಸುವುದಿಲ್ಲ. ನಾಳೆ ನಮ್ಮಿಂದಲೂ ನೀನು ಇದೇ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ಇದ್ದಷ್ಟು ದಿನ ಆ ನೊಂದ ಜೀವಕ್ಕೆ ನಾನು ಆಸರೆಯಾಗಿರಬೇಕು. ಹಾಗಾದಾಗ ಮಾತ್ರ ಅವರ ಅನಂತರದ ಬಾಳಿನಲ್ಲಿ ನನಗೆ ತೃಪ್ತಿ ಇರುತ್ತದೆ. ನಿಧಾನವಾಗಿ ಅವರಿಗೆ ತಿಳಿ ಹೇಳೋಣ, ಅರ್ಥ ಮಾಡಿಕೊಳ್ಳುತ್ತಾರೆ. ನೀನು ದಿನಾ ಸಿಟ್ಟು ಮಾಡಿಕೊಂಡು ಅವರನ್ನು ನೋಯಿಸಿ ಈ ಮನೆಯಲ್ಲಿ ನೆಮ್ಮದಿ ಇಲ್ಲದಂತೆ ಮಾಡಬೇಡ… ” ಎಂದು ಬುದ್ಧಿ ಹೇಳಿದ ಅಮ್ಮನನ್ನು ಮಗಳು ತನ್ನ ತಪ್ಪಿನ ಅರಿವಾಗಿ ಆಲಂಗಿಸಿಕೊಂಡಳು.
ಮನೆಯೊಳಗಿನಿಂದ ಈ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಶಾರದಮ್ಮನವರ ಕಂಗಳು ನೀರು ತುಂಬಿಕೊಂಡು ಮಾನಸಳಿಗೆ ವಂದನೆ ಹೇಳುತ್ತಿತ್ತು..
