ಭಾರತ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಬಸವರಾಜ್ ಕೌಲಗಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಡತಾಯಿಯ ಮಗನೊಬ್ಬ ಜಿಲ್ಲಾಧಿಕಾರಿಯಾಗುವ ಕನಸು ಕಾಣುವುದಕ್ಕೆ ಹಾಗೂ ಕಂಡಂತ ಕನಸನ್ನು ನನಸು ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಿಸಿದ್ದು ಭಾರತದ ಸಂವಿಧಾನ. ಜಗತ್ತಿನ ಶ್ರೇಷ್ಠ ಸಂವಿಧಾನ ಎಂದು ಗುರುತಿಸಿಕೊಳ್ಳುವ ನಮ್ಮ ಸಂವಿಧಾನ ಇಲ್ಲದೇ ಹೋಗಿದ್ದರೆ ಈ ದೇಶದ ಸ್ಥಿತಿ ಪಾತಾಳ ಗರಿಡಿಯಂತಾಗುತ್ತಿತ್ತು ಎಂದು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಕೌಲಗಿ ಹೇಳಿದರು.
ನಗರದ ಎಕ್ಸಲಂಟ್ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಸಂವಿಧಾನ ದಿನದ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು; ಒಂದು ದೇಶದ ಆಡಳಿತ ಸೂತ್ರ ಹೇಗಿರಬೇಕು, ದೇಶದ ಪ್ರಜೆಗಳಿಗೆ ಯಾವ ರೀತಿಯ ಹಕ್ಕುಗಳಿರಬೇಕು, ಹಕ್ಕುಗಳಿಗೆ ಪ್ರತಿಯಾಗಿ ಎಂಥಹ ಕರ್ತವ್ಯಗಳನ್ನು ನಾವು ಮಾಡಬೇಕು ಎನ್ನುವುದನ್ನು ತಿಳಿಸಿಕೊಡುವ ಭಾರತೀಯ ಸಂವಿಧಾನ ಜಗತ್ತು ಕಂಡಂತ ಅತ್ಯುತ್ತಮವಾದ ಸಂವಿಧಾನ ಎಂದು ಗುರುತಿಸಿಕೊಳ್ಳುತ್ತದೆ. ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಬೇರೆ ಬೇರೆ ದೇಶಗಳ ಸಂವಿಧಾನಗಳನ್ನು ಓದಿ ಅರ್ಥೈಸಿಕೊಂಡು ನಮ್ಮ ದೇಶಕ್ಕೆ ಎಂಥಹ ಸಂವಿಧಾನ ಬೇಕು ಎನ್ನುವುದನ್ನು ತಿಳಿಸಿಕೊಟ್ಟರು. ಅಸ್ಪೃಶ್ಯತೆಯ ಬೆಂಕಿಯಲ್ಲಿ ಸ್ವತಃ ಬೆಂದಿದ್ದ ಬಾಬಾಸಾಹೇಬರು ಭಾರತದ ಸಂವಿಧಾನ ರಚನೆಯಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ನಿಭಾಯಿಸುವುದರೊಂದಿಗೆ ಸಮಾನತೆಯ ಸಂವಿಧಾನ ಜಾರಿಯಾಗುವುದಕ್ಕೆ ಕಾರಣರಾದರು. ಇಷ್ಟು ಅದ್ಭುತವಾದ ಸಂವಿಧಾನವನ್ನು ಪಡೆದುಕೊಂಡಿದ್ದರೂ ಸಹ ಅದರ ಆಶಯವನ್ನು ಪೂರ್ಣಗಳಿಸುವಲ್ಲಿ ಭಾರತೀಯರು ಇನ್ನೂ ಯಶಸ್ವಿಯಾಗುತ್ತಿಲ್ಲ ಎನ್ನುವುದು ಖೇದಕರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತ ಸಂವಿಧಾನ ನಮಗೆ ನೀಡಿರುವ ಅವಕಾಶಗಳನ್ನು ಸ್ವಾರ್ಥ ಸಾಧನೆಗೆ ಬಳಸಿಕೊಳ್ಳದೆ, ಸಮಾಜ ಸುಧಾರಣೆಗೆ, ದೇಶದ ಅಭಿವೃದ್ಧಿಗೆ, ಸಂವಿಧಾನದ ಆಶಯಗಳ ಈಡೇರಿಕೆಗೆ ಬಳಸಿಕೊಂಡಿದ್ದೇ ಆದಲ್ಲಿ ಇಡೀ ಜಗತ್ತಿಗೆ ಭಾರತ ಹಿರಿಯಣ್ಣನಾಗುತ್ತಾನೆ. ಆ ನಿಟ್ಟಿನಲ್ಲಿ ನಮ್ಮ ಯುವಕರು ಪ್ರಯತ್ನಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನವಜೀವನ ಬ್ಯಾಂಕ್ನ ಮ್ಯಾನೇಜರ್ ವಿ.ಡಿ.ಮಾದನಶೆಟ್ಟಿ, ಪ್ರಾಚಾರ್ಯ ಶ್ರೀಕಾಂತ ಕೆ.ಎಸ್ ಮಾತನಾಡಿದರು.
ವಿದ್ಯಾರ್ಥಿನಿ ಶೃತಿ ವಾಲೀಕಾರ ಪ್ರಾರ್ಥಿಸಿದರು, ಉಪನ್ಯಾಸಕ ರಮೇಶ ಬಾಗೇವಾಡಿ ಸ್ವಾಗತಿಸಿದರು, ಶರಣಗೌಡ ಪಾಟೀಲ್ ನಿರೂಪಿಸಿದರು, ರವಿ ಕಲ್ಲೂರಮಠ ವಂದಿಸಿದರು.
ಸಿಬ್ಬಂದಿ ಬಳಗದಿಂದ ಸನ್ಮಾನ
ಇದೇ ಸಂದರ್ಭದಲ್ಲಿ ಸ್ವದೇಶಕ್ಕೆ ಆಗಮಿಸಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಕೌಲಗಿ ಅವರನ್ನು ಎಕ್ಸಲಂಟ್ ಕಾಲೇಜಿನ ಸರ್ವ ಸಿಬ್ಬಂದಿ ಬಳಗ, ವಿದ್ಯಾರ್ಥಿ ನಿಲಯದ ನಿಲಯಪಾಲಕರು ಸನ್ಮಾನಿಸಿ ಅಭಿನಂದಿಸಿದರು.

