ಉದಯರಶ್ಮಿ ದಿನಪತ್ರಿಕೆ
ಚಡಚಣ: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ ಬಳಿ ಶನಿವಾರ ಸಂಜೆ ನಡೆದ ಜಗಳದಲ್ಲಿ 35 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಕ್ಕನೇ ತನ್ನ ಸ್ವಂತ ತಮ್ಮನನ್ನು ಭೀಕರವಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಹಲಸಂಗಿ ಗ್ರಾಮದ ಬಾಬುಸಾ(ಬಾಬುರಾವ್) ಮಹಾದೇವ ಜಮಾದಾರ (35) ಕೊಲೆಯಾದ ದುರ್ದೈವಿ. ಅವರೊಂದಿಗೆ ಬಂದಿದ್ದ ಸೋಲಾಪುರ ಮೂಲದ ವ್ಯಕ್ತಿ ಅಪ್ಪಾಸಾಹೇಬ ಮಕಾಶಿ ಎಂಬುವವರಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸೋಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ಹಿನ್ನೆಲೆ:
ಮೃತ ಬಾಬುಸಾ(ಬಾಬುರಾವ್) ಅವರಿಗೆ ಐದು ವರ್ಷಗಳ ಹಿಂದೆ ಅವರ ಸ್ವಂತ ಅಕ್ಕ ಮೀನಾಕ್ಷಿ ಭತಗುಣಕಿ(ತಳವಾರ) ತನ್ನ ಮಗಳು ಸತ್ಯವ್ವಳನ್ನು ಕೊಟ್ಟು ಮದುವೆ ಮಾಡಿಸಿದ್ದರು. ಆದರೆ, ಮದುವೆಯಾದಾಗಿನಿಂದಲೂ ಗಂಡ ಬಾಬುಸಾ(ಬಾಬುರಾವ್) ಹಾಗೂ ಹೆಂಡತಿ ಸತ್ಯವ್ವ ನಡುವೆ ಸಣ್ಣಪುಟ್ಟ ವಿಷಯಗಳಿಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಶನಿವಾರ ಸಂಜೆ ಬಾಬುಸಾ(ಬಾಬುರಾವ್) ಅವರು ಹಲಸಂಗಿ ಕ್ರಾಸ್ ಬಳಿ ಇರುವ ಅಕ್ಕ ಮೀನಾಕ್ಷಿ ಅವರ ಮನೆಗೆ ಹೋಗಿದ್ದ. ಈ ಸಂದರ್ಭದಲ್ಲಿ ಮತ್ತೊಮ್ಮೆ ಕೌಟುಂಬಿಕ ಕಲಹ ತಾರಕಕ್ಕೇರಿದೆ. ಈ ವೇಳೆ ಆಕ್ರೋಶಗೊಂಡ ವಿಕಾಸ್ ಹಾಗೂ ಅಕ್ಕ ಮೀನಾಕ್ಷಿ ಹಾಗೂ ಕುಟುಂಬದವರು ತಮ್ಮನ ಮೇಲೆಯೇ ಹಲ್ಲೆ ನಡೆಸಿದ್ದು, ಪರಿಣಾಮ ಬಾಬುಸಾ(ಬಾಬುರಾವ್) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿಎಸ್ಪಿ ಸುಲ್ಪಿ, ಸಿಪಿಐ ಪರುಶುರಾಮ ಮನಗೂಳಿ, ಪಿಎಸ್ಐ ಮಂಜುನಾಥ ತಿರಕನ್ನವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ.


