ವಿಜಯಪುರದಲ್ಲಿ ’ಧಗೆ’ ಚಿತ್ರ ತಂಡದ ನಾಯಕ ಸಂಗಮೇಶ ಉಪಾಸೆ, ನಿರ್ದೇಶಕ ಕೆರ್ನಳ್ಳಿ ಈಶ್ವರ, ಪದ್ಮಶ್ರೀ ಮಂಜಮ್ಮ ಜೋಗತಿ & ಚಿತ್ರತಂಡದಿಂದ ಸುದ್ದಿಗೋಷ್ಟಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಉತ್ತರ ಕರ್ನಾಟಕ ಭಾಗದ ಗ್ರಾಮೀಣ ಜೀವನದ ಮೌಲ್ಯ, ಬದುಕು ಆಧರಿಸಿದ ಹಾಗೂ ವಿಜಯಪುರ ನೆಲದ ಕಲಾವಿದರ ಬಾಹುಳ್ಯವುಳ್ಳ ‘ಧಗೆ’ ಚಲನಚಿತ್ರ ಡಿಸೆಂಬರ್ ಮಾಸಾಂತ್ಯದೊಳಗೆ ೧೫೦ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಲನಚಿತ್ರದ ನಿರ್ದೇಶಕ ಕೆರ್ನಳ್ಳಿ ಈಶ್ವರ ಹೇಳಿದರು.
ಸೋಮವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಧಗೆ ಎನ್ನುವುದು ವಿಜಯಪುರ ಭಾಗದಲ್ಲಿ ಜನಜನಿತ, ಇಲ್ಲಿನ ಬಿರುಬಿಸಿಲಿನ ಪ್ರಭಾವದಿಂದಾಗಿ ಧಗೆ ಸಾಮಾನ್ಯ, ಈ ವಾತಾವರಣ ಮಾನವ ಜೀವನದಲ್ಲಿ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದರ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ ಈ ಚಿತ್ರದಲ್ಲಿ ಜೋಗತಿಯ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದು, ಮಗುವೊಂದನ್ನು ಅವರು ಸಾಕುವ ನಿಟ್ಟಿನಲ್ಲಿ ಅವರು ವಹಿಸುವ ಶ್ರಮ, ಮಮತೆ, ಸಮಾಜದ ದೃಷ್ಟಿಕೋನ ಹೀಗೆ ಅನೇಕ ಆಯಾಮಗಳಲ್ಲಿ ಕಥೆ ಹೆಣೆಯಲಾಗಿದೆ ಎಂದರು.
ಖ್ಯಾತ ನಟ, ಕೆಎಎಸ್ ಅಧಿಕಾರಿ ಸಂಗಮೇಶ ಉಪಾಸೆ ಕಥಾನಾಯಕರಾಗಿದ್ದು,
ನೀತಾ ಬಿಜಾಪುರ್, ಮುತ್ತು ಶಂಕ್ರಣ್ಣನವರ, ಪರಶುರಾಮ ಹೊಸಮನೆ, ಸಚಿನ್ ಹಳ್ಳಿ ಕಟ್ಟೆ , ಸುನಿಲ್ ಕುಮಾರ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಶೇ.೯೦ ರಷ್ಟು ವಿಜಯಪುರದ ಕಲಾವಿದರೇ ಈ ಚಿತ್ರದಲ್ಲಿ ನಟಿಸಿರುವುದು ಇನ್ನೊಂದು ವಿಶೇಷ, ಆನಂದ್ ದಿಂಡವಾರ ಛಾಯಾಗ್ರಹಣ, ಕೆ.ಎಂ.ಇಂದ್ರ ಅವರ ಸಂಗೀತವಿದೆ ಎಂದರು.
ಕೆರ್ನಳ್ಳಿ ಈಶ್ವರ್, ದೀಪ ಬಿ. ಎಮ್., ಮಡಿವಾಳಪ್ಪ ಗೋಗಿ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ ಎಂದರು.
ಈ ಚಿತ್ರವನ್ನು ಸಿನಿ ಸ್ಟಾಲ್, ಬೆಂಗಳೂರು ಹಾಗೂ ಯುನಿವರ್ಸಲ್ ಸ್ಟುಡಿಯೊ, ವಿಜಯಪುರ ಎರಡು ಸಂಸ್ಥೆಗಳು ಸೇರಿ ನಿರ್ಮಾಣ ಮಾಡುತ್ತಿದ್ದಾರೆ ಎಂದು ವಿವರಿಸಿದರು.
ಖ್ಯಾತ ನಟ ಸಂಗಮೇಶ ಉಪಾಸೆ ಮಾತನಾಡಿ, ಕಲಾವಿದರಿಗೆ ಪ್ರೇಕ್ಷಕರೇ ದೇವರು, ಉತ್ತರ ಕರ್ನಾಟಕ ಭಾಗದ ಕಲಾವಿದರು, ಉತ್ತರ ಕರ್ನಾಟಕ ಭಾಗದ ಕಥಾ ನೆಲೆಯುಳ್ಳ ಚಿತ್ರ ಇದಾಗಿದೆ, ಒಂದು ಅರ್ಥದಲ್ಲಿ ಇದೊಂದು ಮೌಲ್ಯಧಾರಿತ ಕನ್ನಡ ಚಿತ್ರವಾಗಿದೆ ಎಂದರು.
ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷೆ, ಪದ್ಮಶ್ರೀ ಮಂಜಮ್ಮ ಜೋಗತಿ, ’ಧಗೆ’ ಚಲನಚಿತ್ರ ನಿರ್ಮಾಪಕರಾದ ಕೆರ್ನಳ್ಳಿ ಈಶ್ವರ್, ದೀಪ ಬಿ. ಎಮ್., ಮಡಿವಾಳಪ್ಪ ಗೋಗಿ ಸೇರಿದಂತೆ ಚಿತ್ರತಂಡದವರು ಸುದ್ದಿಗೋಷ್ಟಿಯಲ್ಲಿ ಪಾಲ್ಗೊಂಡಿದ್ದರು.

