ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಪುರಸಭೆಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಂಗಳವಾರ ದಿಢೀರ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅಲ್ಲಿರುವ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿರುವ ಬಗ್ಗೆ ಪರಿಶೀಲಿಸಿದ್ದೇನೆ. ಆಸ್ತಿ ತೆರಿಗೆ ಮತ್ತು ಇತರ ಸಂಪನ್ಮೂಲಗಳ ಬಗೆಗಿನ ಕೆಲಸ ಕಾರ್ಯಗಳನ್ನು ಸರಿಯಾಗಿ ಮಾಡುವಂತೆ ಸೂಚಿಸಿದ್ದೇನೆ. ಕುಡಿಯುವ ನೀರು, ಚರಂಡಿ ಸೇರಿದಂತೆ ಸಿವ್ಹಿಲ್ ಕಾಮಗಾರಿಗಳನ್ನು ಗುಣಮಟ್ಟದಲ್ಲಿ ತ್ವರಿತವಾಗಿ ಮುಗಿಸುವಂತೆ, ನಗರದ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಸರಿಯಾಗಿ ನಿಭಾಯಿಸುವಂತೆ, ರೈತರಿಗೆ ಸಾರ್ವಜನಿಕರಿಗೆ ಅವರ ಕೆಲಸಗಳಲ್ಲಿ ಸತಾಯಿಸದೇ ಬೇಗನೆ ಮಾಡಿಕೊಡುವಂತೆ, ತಾಲೂಕಿನ ಎಲ್ಲ ಸರ್ಕಾರಿ ನೌಕರರು ತಮ್ಮ ಕೆಲಸ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸುವಂತೆ ಸೂಚಿಸಿರುವದಾಗಿ ತಿಳಿಸಿದರು.
ಈ ವೇಳೆ ಜಿಲ್ಲಾ ಯೋಜನಾ ನಿರ್ದೇಶಕ ಬಿ.ಎ.ಸೌದಾಗರ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಇಂಜೀನಿಯರ್ ಭೀಮನಗೌಡ ಬಗಲಿ, ಎಸ್.ಐಗಳಾದ ಮಹಾಂತೇಶ ಕಟ್ಟಿಮನಿ, ಜಾವೇದ ನಾಯ್ಕೋಡಿ ಸೇರಿದಂತೆ ಮತ್ತೀತರರು ಇದ್ದರು.
ಪುರಸಭೆ ಕಾಯ್ದೆಗೆ ವಿರುದ್ಧ ಕಟ್ಟಡ
ಇಲ್ಲಿನ ವಿದ್ಯಾನಗರದಲ್ಲಿ ಪುರಸಭೆ ಕಾಯ್ದೆಗೆ ವಿರುದ್ಧವಾಗಿ ಶಾಲಾ ಕಟ್ಟಡವೊಂದನ್ನು ಕಟ್ಟಿದ್ದು ಅದನ್ನು ನೆಲಸಮಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕಾನೂನು ಬಾಹಿರವಾಗಿ ಶಾಲೆ ನಿರ್ಮಿಸುವದರಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ದಿನಂಪ್ರತಿ ಉಪದ್ರವ ಉಂಟಾಗುತ್ತದೆ. ಕಟ್ಟಡ ಕಟ್ಟುವ ಮೊದಲೇ ತಡೆಹಿಡಿಯುವಂತೆ ಅನೇಕ ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಜನಸ್ಪಂದನದಲ್ಲಿ ಹಲವು ದೂರುಗಳನ್ನು ದಾಖಲಿಸಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಕ್ರಮ ಕೈಗೊಂಡಿರುವದಾಗಿ ತಿಳಿಸಿ ದೂರುಗಳ ಸ್ಥಿತಿಯನ್ನು ಮುಕ್ತಾಯಗೊಳಿಸಿ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುತ್ತಾರೆ. ಕಾರಣ ಕೂಡಲೇ ಪುರಸಭೆ ಕಾಯ್ದೆಗೆ ವಿರುದ್ಧವಾಗಿ ಕಟ್ಟಲಾದ ಶಾಲಾ ಕಟ್ಟಡವನ್ನು ನೆಲಸಮಗೊಳಿಸಬೇಕು ಮತ್ತು ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸಿಸಿಎ ನಿಯಮಗಳ ಅಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ವಿನಂತಿಸಿದ್ದಾರೆ.

