ಯುವ ಜನ ಸೇನೆ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ತೀವ್ರ ಆಕ್ರೋಶ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಕಳೆದ ಐದಾರು ತಿಂಗಳಿಂದ ಪಟ್ಟಣ ಪಂಚಾಯತಿಯ ಸಾಮಾನ್ಯ ಸಭೆಯನ್ನೇ ನಡೆಸದೆ ಆಡಳಿತ ಮಂಡಳಿ ಜನಪ್ರತಿನಿಧಿಗಳ ಜವಾಬ್ದಾರಿಯನ್ನು ಮರೆತಿದೆ ಎಂದು ಯುವ ಜನ ಸೇನೆ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಟ್ಟಣದಲ್ಲಿ ರಸ್ತೆ, ಕುಡಿಯುವ ನೀರು, ಚರಂಡಿ, ಸ್ವಚ್ಛತೆ, ಬೀದಿದೀಪ ಸೇರಿದಂತೆ ಜನರನ್ನು ಕಾಡುತ್ತಿರುವ ನೂರಾರು ಸಮಸ್ಯೆಗಳಿದ್ದರೂ, ಅವುಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕಾದ ಸಾಮಾನ್ಯ ಸಭೆಯನ್ನೇ ತಿಂಗಳುಗಟ್ಟಲೆ ನಡೆಸದಿರುವುದು ಆಡಳಿತದ ಸಂಪೂರ್ಣ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ಜನರು ಅಭಿವೃದ್ಧಿಗಾಗಿ ಮತ ಹಾಕಿದ್ದಾರೆ ಹೊರತು ಮೌನ ಆಡಳಿತಕ್ಕಾಗಿ ಅಲ್ಲ. ಸಮಸ್ಯೆಗಳ ಪರಿಹಾರಕ್ಕಾಗಿ ಸಭೆ ನಡೆಸುವುದೇ ಜನಪ್ರತಿನಿಧಿಗಳ ಮೊದಲ ಕರ್ತವ್ಯ. ಆದರೆ ಐದಾರು ತಿಂಗಳಿಂದ ಸಭೆಯೇ ನಡೆಸದಿರುವುದು ಜನರ ವಿಶ್ವಾಸಕ್ಕೆ ಮಾಡಿದ ದ್ರೋಹವಾಗಿದೆ ಎಂದು ಕಿಡಿಕಾರಿದರು.
ಪಟ್ಟಣದ ಹಲವು ವಾರ್ಡ್ಗಳಲ್ಲಿ ರಸ್ತೆ ಹದಗೆಟ್ಟಿವೆ, ಚರಂಡಿಗಳು ಕೊಳಚೆಯಿಂದ ತುಂಬಿವೆ, ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ, ಸ್ವಚ್ಛತಾ ಕಾರ್ಯ ಸಮರ್ಪಕವಾಗಿಲ್ಲ. ಸಾರ್ವಜನಿಕರು ಪದೇ ಪದೇ ದೂರು ನೀಡುತ್ತಿದ್ದರೂ ಅವುಗಳ ಬಗ್ಗೆ ಚರ್ಚಿಸಲು ಆಡಳಿತ ಮಂಡಳಿಗೆ ಸಮಯ ಸಿಗದಿರುವುದು ಆಶ್ಚರ್ಯಕರ ಸಂಗತಿಯಾಗಿದೆ ಎಂದರು.
ಐದಾರು ತಿಂಗಳಿಂದ ಸಾಮಾನ್ಯ ಸಭೆ ನಡೆಸದಿರುವುದರ ಹಿಂದಿನ ಉದ್ದೇಶವೇನು? ಅಧ್ಯಕ್ಷರಿಗೆ ಸಮಯ ಸಿಗಲಿಲ್ಲವೇ? ಅಥವಾ ಸಾರ್ವಜನಿಕರಿಗೆ ತಿಳಿಯಬಾರದ ವಿಷಯಗಳನ್ನು ಮುಚ್ಚಿಡುವ ಪ್ರಯತ್ನ ನಡೆಯುತ್ತಿದೆಯೇ? ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಹಾಗೂ ಅನುದಾನದ ಬಳಕೆ ಕುರಿತು ಸದಸ್ಯರ ಮುಂದೆ ಚರ್ಚಿಸಲು ಹಿಂದೇಟು ಹಾಕುತ್ತಿರುವುದೇಕೆ? ಎಂದು ಅವರು ಪ್ರಶ್ನಿಸಿದರು.
ಸಾಮಾನ್ಯ ಸಭೆಯು ಕೇವಲ ಔಪಚಾರಿಕ ಸಭೆಯಲ್ಲ. ಪಟ್ಟಣದ ಅಭಿವೃದ್ಧಿ ಯೋಜನೆಗಳು, ಸಾರ್ವಜನಿಕರ ಸಮಸ್ಯೆಗಳು, ವಿವಿಧ ಕಾಮಗಾರಿಗಳ ಪ್ರಗತಿ, ಅನುದಾನದ ಬಳಕೆ ಹಾಗೂ ಆಡಳಿತಾತ್ಮಕ ನಿರ್ಣಯಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಪ್ರಮುಖ ವೇದಿಕೆಯಾಗಿದೆ. ಅಂತಹ ಸಭೆಯನ್ನೇ ನಿರಂತರವಾಗಿ ನಡೆಸದೇ ಇರುವುದು ಆಡಳಿತದ ನಿರ್ಲಕ್ಷ್ಯವನ್ನು ಬಯಲಿಗೆಳೆಯುತ್ತದೆ ಎಂದು ಆರೋಪಿಸಿದರು.
ಪಟ್ಟಣದ ಜನರು ದಿನನಿತ್ಯ ಮೂಲಭೂತ ಸೌಲಭ್ಯಗಳಿಗಾಗಿ ಪರದಾಡುತ್ತಿರುವ ಸಂದರ್ಭದಲ್ಲಿ ಆಡಳಿತ ಮಂಡಳಿ ಮೌನ ವಹಿಸಿರುವುದು ಖಂಡನೀಯ. ಜನರ ಸಮಸ್ಯೆಗಳಿಗೆ ಸ್ಪಂದಿಸದ ಆಡಳಿತವನ್ನು ಜನರು ಸಹಿಸುವುದಿಲ್ಲ ಎಂದು ಎಚ್ಚರಿಸಿದ ಅವರು, ಕೂಡಲೇ ಸಾಮಾನ್ಯ ಸಭೆ ಕರೆದು ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳು ಹಾಗೂ ಸಾರ್ವಜನಿಕ ಸಮಸ್ಯೆಗಳ ಕುರಿತು ಚರ್ಚಿಸಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇನ್ನೂ ವಿಳಂಬ ಮಾಡಿದರೆ ಯುವ ಜನ ಸೇನೆ ನೇತೃತ್ವದಲ್ಲಿ ಸಾರ್ವಜನಿಕರನ್ನು ಸಂಘಟಿಸಿ ಪಟ್ಟಣ ಪಂಚಾಯತಿ ಎದುರು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು. ಜನರ ಹಕ್ಕುಗಳಿಗಾಗಿ ಯಾವುದೇ ಹಂತದ ಹೋರಾಟಕ್ಕೂ ನಾವು ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ.

