ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಕಳೆದ ನಾಲ್ಕು ವರ್ಷಗಳಿಂದ ಕುಟುಂಬ ಕಲಹದಿಂದ ಪ್ರತ್ಯೇಕವಾಗಿ ಜೀವನ ಸಾಗಿಸುತ್ತಿದ್ದ ಎರಡು ಕುಟುಂಬಗಳನ್ನು ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ನ್ಯಾಯಾಧೀಶರ, ಉಭಯ ಪಕ್ಷಗಳ ನ್ಯಾಯವಾದಿಗಳ ಮತ್ತು ಸಮನ್ಸ್ ಮುಟ್ಟಿಸುವ ಪೊಲೀಸ್ ಪೇದೆಯ ಮನವೊಲಿಕೆ ಮತ್ತು ರಾಜಿ ಸಂಧಾನದ ಫಲವಾಗಿ ಮತ್ತೆ ಒಂದಾದ ಮನಕಲಕುವ ಘಟನೆ ಇಲ್ಲಿನ ನ್ಯಾಯಾಲಯದಲ್ಲಿ ನಡೆದಿದೆ.
ದಂಪತಿಗಳ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯದಿಂದ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದವು. ಹಲವು ವರ್ಷಗಳಿಂದ ವಿಚಾರಣೆ ನಡೆಯುತ್ತಿದ್ದವು. ಒಂದು ಕುಟುಂಬದ ದಂಪತಿಗೆ ಮೂರು ಮಕ್ಕಳಿದ್ದು, ತಂದೆ-ತಾಯಿ ದೂರಾಗಿದ್ದರಿಂದ ಮಕ್ಕಳು ತೀವ್ರ ಮಾನಸಿಕ ನೋವು ಅನುಭವಿಸುತ್ತಿದ್ದರು.
ಇನ್ನೊಂದು ಪ್ರಕರಣದಲ್ಲಿ ಅಂಗವಿಕಲ ಮಹಿಳೆಗೆ ಜೀವನ ಸಂಗಾತಿಯಾಗಿ ಬಾಳು ನೀಡಿದ್ದ ಪತಿ, ಕುಟುಂಬ ಕಲಹದಿಂದ ದೂರಾಗಿದ್ದರು. ಈ ವೇಳೆ ಉಭಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿದ ಸಿವಿಲ್ ನ್ಯಾಯಾಧೀಶರಾದ ರಾಮಮೂರ್ತಿ ಎನ್ ಅವರು, ಅಂಗವಿಕಲ ಮಹಿಳೆಯ ಕೈಹಿಡಿದು ಬದುಕು ಕಟ್ಟಿಕೊಟ್ಟಿರುವುದು ನಿಮ್ಮ ದೊಡ್ಡ ಮನಸ್ಸಿನ ಪ್ರತೀಕ. ಆ ಮಹತ್ವವನ್ನು ಜೀವನದ ಕೊನೆಯವರೆಗೂ ಉಳಿಸಿಕೊಂಡಾಗಲೇ ಆ ತ್ಯಾಗಕ್ಕೂ, ಈ ದಾಂಪತ್ಯಕ್ಕೂ ನಿಜವಾದ ಅರ್ಥ ಸಿಗುತ್ತದೆ. ಕ್ಷಣಿಕ ಕೋಪಕ್ಕಾಗಿ ಅಮೂಲ್ಯವಾದ ಬಾಂಧವ್ಯವನ್ನು ಕಳೆದುಕೊಳ್ಳಬೇಡಿ ಎಂದು ಪತಿಗೆ ಮನಮುಟ್ಟುವ ಕಿವಿಮಾತು ಹೇಳಿದರು.
ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಕೈಗೆತ್ತಿಕೊಂಡ ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ ಮತ್ತು ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳೂ ಹಾಗೂ ಸಿವಿಲ್ ನ್ಯಾಯಾಧೀಶರಾದ ರಾಮಮೂರ್ತಿ ಎನ್ ಇವರುಗಳು ಉಭಯ ಪಕ್ಷಗಳೊಂದಿಗೆ ಪ್ರತ್ಯೇಕವಾಗಿ ಹಾಗೂ ಜಂಟಿಯಾಗಿ ಸುದೀರ್ಘ ಸಮಾಲೋಚನೆ ನಡೆಸಿದರು. ಜೀವನದ ಮಹತ್ವ, ಮಕ್ಕಳ ಭವಿಷ್ಯ ಹಾಗೂ ಕುಟುಂಬದ ಜವಾಬ್ದಾರಿಯನ್ನು ಮನವರಿಕೆ ಮಾಡಿಕೊಟ್ಟ ಪರಿಣಾಮ, ಎರಡೂ ಕುಟುಂಬಗಳು ತಮ್ಮ ಹಳೆಯ ಭಿನ್ನಾಭಿಪ್ರಾಯಗಳನ್ನು ಮರೆತು ಮತ್ತೆ ಒಂದಾಗಿ ಜೀವನ ಸಾಗಿಸಲು ಒಪ್ಪಿಗೆ ಸೂಚಿಸಿದರು.
ನ್ಯಾಯಾಲಯದಲ್ಲೇ ಪರಸ್ಪರ ಹಾರ ಬದಲಾಯಿಸಿಕೊಂಡು ಸಿಹಿ ಹಂಚಿದ ದಂಪತಿಗಳು, ಕುಟುಂಬದೊಂದಿಗೆ ಹೊಸ ಜೀವನ ಆರಂಭಿಸಲು ಸಮ್ಮತಿಸಿದ ದೃಶ್ಯ ಅಲ್ಲಿದ್ದವರ ಮನಸ್ಸನ್ನು ತಟ್ಟಿತು. ವಿಶೇಷವಾಗಿ ತಮ್ಮ ಪೋಷಕರು ಮತ್ತೆ ಒಂದಾಗಿರುವುದನ್ನು ಕಂಡ ಮಕ್ಕಳ ಸಂತಸ ಅಲ್ಲಿದ್ದವರ ಗಮನ ಸೆಳೆಯಿತು.
ಈ ವೇಳೆ ಉಭಯ ನ್ಯಾಯಾಧೀಶರು ಮಾತನಾಡಿ, ವಿಚ್ಛೇದನವೇ ಪ್ರತಿಯೊಂದು ಸಮಸ್ಯೆಗೆ ಪರಿಹಾರವಲ್ಲ. ಪರಸ್ಪರ ವಿಶ್ವಾಸ, ತಾಳ್ಮೆ ಮತ್ತು ಸಂವಹನದಿಂದ ಅನೇಕ ಕುಟುಂಬಗಳನ್ನು ಉಳಿಸಬಹುದು. ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ದಂಪತಿಗಳು ಸಾಮರಸ್ಯದಿಂದ ಬದುಕಬೇಕು. ಲೋಕ್ ಅದಾಲತ್ನ ಉದ್ದೇಶ ಕೇವಲ ಪ್ರಕರಣ ಮುಕ್ತಾಯಗೊಳಿಸುವುದಲ್ಲ, ಸಾಧ್ಯವಾದಲ್ಲಿ ಒಡೆದ ಕುಟುಂಬಗಳನ್ನು ಮತ್ತೆ ಬೆಸೆಯುವುದಾಗಿದೆ ಎಂದು ಹೇಳಿದರು.
ಈ ವೇಳೆ ಪಕ್ಷಗಾರರ ಪರ ವಕೀಲರಾದ ಎನ್.ಜಿ.ಕುಲಕರ್ಣಿ, ಐ.ಎಸ್.ಹಗಟಗಿ ನ್ಯಾಯವಾದಿಗಳಾದ ಎಚ್.ಟಿ.ಪೂಜಾರಿ, ವಿ.ಸಿ.ಉರಾನ್, ಚೇತನ ಶಿವಶಿಂಪಿ, ಎಂ.ಬಿ.ಬಿರಾದಾರ, ಬಸಣ್ಣ ಮುಂದಿನಮನಿ, ರವಿ ನಾಲತವಾಡ, ಸಿ.ಎಸ್.ಕಾಖಂಡಕಿ, ಸೇವಾ ಸಮಿತಿಯ ಆಡಳಿತ ಸಹಾಯಕ ಅರವಿಂದ ಕುಂಬಾರ, ನ್ಯಾಯಾಲಯದ ಸಿಬ್ಬಂದಿಗಳಾದ ರಾಮಣ್ಣ ಕಮ್ಮಾರ, ನಿಸಾರ ನೇಗಿನಾಳ ಸೇರಿದಂತೆ ದಂಪತಿಗಳ ಸಂಬಂಧಿಗಳು ಇದ್ದರು.
ಲೋಕ್ ಅದಾಲತ್ನಲ್ಲಿ ನಡೆದ ಅಪರೂಪದ ಮಿಲನ
ನ್ಯಾಯಾಲಯವು ಕೇವಲ ತೀರ್ಪು ನೀಡುವ ಸ್ಥಳವಲ್ಲ, ಒಡೆದ ಕುಟುಂಬಗಳನ್ನು ಮತ್ತೆ ಬೆಸೆಯುವ ಮಾನವೀಯ ವೇದಿಕೆಯೂ ಹೌದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿತು.
ಈ ಯಶಸ್ಸಿನ ಹಿಂದೆ ಸಮನ್ಸ್ ಜಾರಿಗೊಳಿಸುವ ಕರ್ತವ್ಯ ನಿರ್ವಹಿಸಿದ್ದ ಪೊಲೀಸ್ ಪೇದೆ ಸಂಗಣ್ಣ ಚಲವಾದಿ ಅವರ ಮಾನವೀಯ ಸೇವೆಯೂ ಗಮನ ಸೆಳೆಯಿತು.
ಪ್ರತೀ ಬಾರಿ ಸಮನ್ಸ್ ಮುಟ್ಟಿಸುವ ಸಂದರ್ಭದಲ್ಲೂ ಅವರು ಎರಡೂ ದಂಪತಿಗಳಿಗೆ ರಾಜಿಯಾಗಿ ಒಂದಾಗಿ ಜೀವನ ಸಾಗಿಸುವಂತೆ ಕಿವಿಮಾತು ಹೇಳಿ ಮನವೊಲಿಸಲು ನಿರಂತರ ಪ್ರಯತ್ನಿಸಿದ್ದರು. ಲೋಕ್ ಅದಾಲತ್ನಲ್ಲಿ ಎರಡು ಕುಟುಂಬಗಳು ಮತ್ತೆ ಒಂದಾದ ಬಳಿಕ, ನ್ಯಾಯವಾದಿಗಳು ಪೇದೆಯ ಸೇವೆಯನ್ನು ವಿಶೇಷವಾಗಿ ಸ್ಮರಿಸಿ, ಪೊಲೀಸರ ಕರ್ತವ್ಯ ಕೇವಲ ಸಮನ್ಸ್ ಮುಟ್ಟಿಸುವುದಲ್ಲ, ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಜವಾಬ್ದಾರಿಯನ್ನೂ ಅವರು ಅರ್ಥಪೂರ್ಣವಾಗಿ ನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು.

