ರಾಷ್ಟ್ರೀಯ ರೈತರ ಸಂಘದ ಪದಾಧಿಕಾರಿಗಳಿಂದ ಶಿರಸ್ತೇದಾರ ಸುರೇಶ ಮ್ಯಾಗೇರಿ ಅವರಿಗೆ ಮನವಿ ಸಲ್ಲಿಕೆ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕಿನಲ್ಲಿ ಸಮರ್ಪಕ ಮಳೆಯಾಗದೇ ಇದ್ದು ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದೂ ಘೋಷಿಸಿ, ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ರಾಷ್ಟ್ರೀಯ ರೈತರ ಸಂಘದ ಪದಾಧಿಕಾರಿಗಳು ಶಿರಸ್ತೇದಾರ ಸುರೇಶ ಮ್ಯಾಗೇರಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯಕ್ಕೆ ಸೋಮವಾರ ಆಗಮಿಸಿದ ರಾಷ್ಟ್ರೀಯ ರೈತರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ತಾಲ್ಲೂಕಿನ ಎಲ್ಲ ಹಳ್ಳಿಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಭಿತ್ತಿದ ತೊಗರಿ, ಹತ್ತಿ ಸೇರಿದಂತೆ ವಿವಿಧ ಬೆಳೆಗಳು ಮಳೆಯಿಲ್ಲದೆ ಹಾನಿಗೊಳಗಾದ ಬಗ್ಗೆ ಶಿರಸ್ತೇದಾರರ ಗಮನ ಸೆಳೆದರು.
ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಕಾರ್ಯದರ್ಶಿ ರೇಣುಕಾ ಪಾಟೀಲ ಮಾತನಾಡಿ, ರೈತರು ಸಂಕಷ್ಟಕ್ಕೆ ಸಿಲುಕಿದ್ದು ಹಿಂದೆ ಭಿತ್ತನೆ ಮಾಡಿದ ಬೆಳೆಗಳು ಮಳೆ ಇಲ್ಲದೆ ನಿಂತಿವೆ. ಇದರಿಂದ ಭಿತ್ತಿದ ಕೃಷಿ ವೆಚ್ಚವನ್ನು ಸಹ ಮರಳಿ ಪಡೆಯಲು ಸಾಧ್ಯವಾಗದಂತಾಗಿದೆ ಆದ್ದರಿಂದ ತಹಶೀಲ್ದಾರ ಸರ್ಕಾರಕ್ಕೆ ವರದಿ ಸಲ್ಲಿಸಿ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಹಾಗೂ ಸಾಲ ವಸೂಲಾತಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ರಾಷ್ಟ್ರೀಯ ರೈತರ ಸಂಘದ ತಾಲ್ಲೂಕು ಅಧ್ಯಕ್ಷ ಶಿವಪ್ಪ ಡೋಣೂರ, ಜಿಲ್ಲಾ ಉಪಾಧ್ಯಕ್ಷ ಸಂಪತ್ ಜಮಾದಾರ ಮಾತನಾಡಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಿರಸ್ತೇದಾರ, ತಾಲ್ಲೂಕಿನ ಮಳೆ, ಬೆಳೆಗಳ ವಾಸ್ತವಿಕ ವರದಿ ಹಾಗೂ ನಿಮ್ಮ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ತಾಲ್ಲೂಕು ಯುವಮೋರ್ಚಾ ಅಧ್ಯಕ್ಷ ಸಂಗಮೇಶ ಹುಣಸಗಿ, ಮಹಿಳಾ ಘಟಕದ ಅಧ್ಯಕ್ಷೆ ಗುರಮ್ಮ ಹಿರೇಮಠ, ಸಾಹೇಬಗೌಡ ಪಾಟೀಲ, ದ್ಯಾವಪ್ಪಗೌಡ ಪಾಟೀಲ, ಅಮೀನಪ್ಪಗೌಡ ಪಾಟೀಲ, ಬಾಬಾಗೌಡ ಪಾಟೀಲ, ರುದ್ರಯ್ಯ ಹಿರೇಮಠ, ಕಲ್ಲಯ್ಯ ಮಠಪತಿ, ವಿಠ್ಠಲ ಯಾತಗಿರಿ, ರಾಮಣ್ಣ ನಾಯ್ಕೋಡಿ, ಅಕ್ಬರ್ ಅರಬ್, ಗಣೇಶ ಕನ್ನೋಳ್ಳಿ, ಅಡಿವೆಪ್ಪ ಬನ್ನಿಕಟ್ಟಿ, ರಾಜಶೇಖರ ಯಾತಗಿರಿ, ಅಲ್ಲಾಭಕ್ಷ ಭೈರವಾಡಗಿ, ಧರೆಪ್ಪ ಮನಗೂಳಿ, ಆನಂದ ಬನ್ನಿಕಟ್ಟಿ, ಮಾಂತೇಶ ಹಿರ್ಲಾಕುಂಡ, ಅಪ್ಪಾಸಾಬ್ ಹರವಾಳ, ಸೋಮರಾಯ ಇದ್ದರು.

