ಉದಯರಶ್ಮಿ ದಿನಪತ್ರಿಕೆ
ಬಸವಕಲ್ಯಾಣ: ಅನುಭವ ಮಂಟಪ ಅಭಿವೃದ್ಧಿ ಪ್ರಾಧಿಕಾರ ಮತ್ತು ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ ಇದರ ಅಡಿಯಲ್ಲಿ ಬಸವಕಲ್ಯಾಣದಲ್ಲಿ ನಡೆದ ಎರಡು ದಿನದ ಕಾರ್ಯಾಗಾರದಲ್ಲಿ 12 ನೆಯ ಶತಮಾನದ ಶರಣರ ಜೀವನ ಪರಿಚಯ ಕುರಿತು ಕಥಾ ಲೇಖನ ಹಾಗೂ ಶರಣರ ವಚನಗಳ ಪರಿಷ್ಕೃತ ಆವೃತ್ತಿಗಳನ್ನು ಒಳಗೊಂಡ ಸಾಹಿತ್ಯವನ್ನು ಸಿದ್ಧಪಡಿಸಲು ಸಂಪನ್ಮೂಲ ವ್ಯಕ್ತಿಗಳನ್ನು ಹುಡುಕಿ ಆ ಮೂಲಕ ಕಾರ್ಯನಿರ್ವಹಿಸುವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಡಾ.ಬಾಬಾಸಾಹೇಬ ಗಡ್ಡೆ ಅವರು, ಹೊಸ ಅನುಭವ ಮಂಟಪದ ವೀಕ್ಷಣೆ ಮತ್ತು ವಿವರಣೆಯನ್ನು, ಶರಣರ ತತ್ವಸಿದ್ಧಾಂತದೊಂದಿಗೆ ಮತ್ತು ಹೊಸ ಕಾರ್ಯ ತಂತ್ರಜ್ಞತೆಯೊಂದಿಗೆ ಹೇಗೆ ರೂಪುಗೊಳ್ಳುತ್ತಿದೆ ಕುರಿತು ಹಾಗೂ ಶರಣರ ಸಂವಾದ ಮತ್ತು ಸಂಭಾಷಣೆ ಮತ್ತು ವಚನಕಾರರ ಚರಿತ್ರೆ ಪ್ರಾತ್ಯಕ್ಷಿಕೆಯ ಕುರಿತು ವಿವರಿಸಿದರು.
ಪುಣೆಯ ಬಸವ ತಿಳುವಳಿಕೆ ಮತ್ತು ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ಶಶಿಕಾಂತ ಪಟ್ಟಣ ಅವರು, ಶರಣರ ಚರಿತ್ರೆ ರಚನೆ ಹಾಗೂ ವಚನಗಳ ಶುದ್ದೀಕರಣ ಮತ್ತು ಪ್ರಕ್ಷಿಪ್ತ ನಿವಾರಣೆಯ ಅಗತ್ಯತೆ ಕುರಿತು ಮಾತನಾಡಿದರು.
ಶರಣೆ ಗೌರಮ್ಮ ನಾಶಿ, ಪ್ರೊ.ಶಾರದಮ್ಮ ಪಾಟೀಲ್, ಡಾ.ದಾನಮ್ಮ ಝಳಕಿ, ಡಾ.ವೀಣಾ ಎಲಿಗಾರ, ಡಾ.ಶರಣಮ್ಮ ಗೊರೆಬಾಳ, ಡಾ.ಸುಧಾ ಕೌಜಗೇರಿ, ಡಾ.ಕಸ್ತೂರಿ ದಳವಾಯಿ, ಡಾ.ಜಯಶ್ರೀ ಹಸಬಿ, ಡಾ.ಗೀತಾ ಡಿಗ್ಗೆ, ಡಾ.ಸಂಗಮೇಶ ಕಲಹಾಳ ಹೀಗೆ ಪ್ರತಿಯೊಬ್ಬರೂ ತಮ್ಮ ಎರಡು ದಿನಗಳ ಕಾರ್ಯಾಗಾರದ ಬಗೆಗೆ ಸಕಾರಾತ್ಮಕವಾಗಿ ಸ್ಪಂದಿಸಿದರು.
ಡಾ.ಜಯಶ್ರೀ ಪಟ್ಟಣ ಶರಣು ಸಮರ್ಪಣೆ ಮಾಡಿದರು. ಕಾರ್ಯಕ್ರಮವನ್ನು ಜವಾಬ್ದಾರಿಯುತವಾಗಿ, ಯಶಸ್ವಿಯಾಗಿ ಡಾ.ಶಶಿಕಾಂತ ಪಟ್ಟಣ ನಡೆಸಿಕೊಟ್ಟರು.
ಶಿಬಿರಾರ್ಥಿಗಳೊಂದಿಗೆ ಡಾ.ಪಟ್ಟಣ ಸಂವಾದ
ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಐವತ್ತು ಜನರ ತಂಡವು ಡಾ.ಶಶಿಕಾಂತ ಪಟ್ಟಣ ಅವರು ಒದಗಿಸಿದ ಶರಣರ ಪುಸ್ತಕಗಳ ಸಹಾಯದಿಂದ ಯಾವುದೇ ಪವಾಡಗಳನ್ನು ಸೇರಿಸದೆ, ಕಾಲ್ಪನಿಕ ಸನ್ನಿವೇಶಗಳನ್ನು ಬರೆಯದೆ ನಿಜವಾದ ಅರ್ಥದಲ್ಲಿ ವಚನಗಳ ಸಾರಾoಶ ಏನಿದೆ, ಈಗಿನ ಸಮಯದಲ್ಲಿ ಅದರ ಪ್ರಸ್ತುತತೆ ಎಷ್ಟಿದೆ ಎನ್ನುವುದರ ಬಗೆಗೆ ಲೇಖನಗಳನ್ನು ಬರೆಯಿತು.
ಬಳಿಕ ಶಿಬಿರಾರ್ಥಿಗಳೊಂದಿಗೆ ಡಾ.ಪಟ್ಟಣ ಅವರು ಆಯಾ ಶರಣರ ಕುರಿತು ಸಂವಾದ ನಡೆಸಿದರು.

