ಬೆಳಗಾವಿ ವಿಭಾಗ ಮಟ್ಟದ ಖೋಖೋ ಪಂದ್ಯಾವಳಿ | ಬೆಳಗಾವಿ ತಂಡ ರನ್ನರ್ ಅಪ್ | ಲವ ಮಾದರ ಗೆ ಆಲ್ ರೌಂಡರ್ ಪ್ರಶಸ್ತಿ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಇಲ್ಲಿನ ಡ್ಯಾಂಸೈಟ್ ನ ಸರ್ಕಾರಿ ಶಾಲಾ ಮೈದಾನದಲ್ಲಿ ಮಂಗಳವಾರ ಜರುಗಿದ ಬೆಳಗಾವಿ ವಿಭಾಗ ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ವಿಜಯಪುರದ ಬಾಲಕ ಮತ್ತು ಬಾಲಕಿಯರ ತಂಡ (14 ವಯೋಮಾನದೊಳಗಿನ) ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಯಿತು.
ತೀವ್ರ ಕುತೂಹಲ ಕೆರಳಿಸಿದ್ದ ಬಾಲಕರ ಅಂತಿಮ ಪಂದ್ಯದಲ್ಲಿ ವಿಜಯಪುರ ತಂಡ 10 ಅಂಕ ಗಳಿಸಿತು. ಅದರ ಎದುರಾಳಿ ಬೆಳಗಾವಿ ತಂಡವು 7 ಅಂಕ ಗಳಿಸಿ, ಮೂರು ಅಂಕಗಳ ಅಂತರದಿಂದ ಸೋಲನ್ನಪ್ಪಿ ರನ್ನರ್ ಅಪ್ ಆಯಿತು.
ವಿಜಯಪುರ ತಂಡದ ಲವ ಮಾದರ ಆಲ್ ರೌಂಡರ್ ಪ್ರಶಸ್ತಿಗೆ, ಇದೇ ತಂಡದ ರುದ್ರಗೌಡ ಬಿರಾದಾರ ಉತ್ತಮ ರನ್ನರ್ ಹಾಗೂ ಬೆಳಗಾವಿಯ ಹೊನ್ನಪ್ಪ ತರಾಟೆ ಬೆಸ್ಟ್ ಚೇಸರ್ ವೈಯಕ್ತಿಕ ಪ್ರಶಸ್ತಿ ಪಡೆದರು.
ಬಾಲಕಿಯರ ಅಂತಿಮ ಸ್ಪರ್ಧೆ ಏಕಪಕ್ಷೀಯವಾಯಿತು. ವಿಜಯಪುರ ತಂಡ 16 ಅಂಕ, ಬೆಳಗಾವಿ ತಂಡ 8 ಅಂಕ ಪಡೆದು 8 ಅಂಕಗಳ ಲೀಡ್ ನಿಂದ ವಿಜಯಪುರ ತಂಡದ ಬಾಲಕಿಯರು ವಿಜೇತರಾದರು.
ಮೊದಲ ಇನ್ನಿಂಗ್ಸ್ ನಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ವಿಜಯಪುರ ತಂಡದ ಸುಮಂಗಲಾ ಮಂಗಳಗುಡ್ಡ ಬೆಸ್ಟ್ ರನ್ನರ್ ಪ್ರಶಸ್ತಿಗೂ ಭಾಜನರಾದರು.
ಇದೇ ತಂಡದ ಸಂಜನಾ ವಡವಡಗಿ ಬೆಸ್ಟ್ ಚೇಸರ್ ಪ್ರಶಸ್ತಿಗೆ ಪಾತ್ರರಾದರು. ಬೆಳಗಾವಿಯ ನಿಂಗಮ್ಮ ಉತ್ತಮ ಆಲ್ ರೌಂಡರ್ ಪ್ರಶಸ್ತಿಗೆ ಭಾಜನರಾದರು.
ನಿಡಗುಂದಿಯ ಮಣಗೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿದ್ದ ವಿಜಯಪುರ ಬಾಲಕರ ತಂಡ ಹಾಗೂ ಸಮೀಪದ ಬೇನಾಳ ಆರ್ ಎಸ್ ಶಾಲೆಯ ವಿದ್ಯಾರ್ಥಿನಿಯರಿದ್ದ ಬಾಲಕಿಯರ ತಂಡ ಬಹುತೇಕ ಸ್ಥಳೀಯರೇ ಆಗಿದ್ದರಿಂದ ಸಹಸ್ರಾರು ಕ್ರೀಡಾಭಿಮಾನಿಗಳು ಬೆಳಿಗ್ಗೆಯಿಂದಲೇ ಮೈದಾನದಲ್ಲಿದ್ದು ಕ್ರೀಡಾಪಟುಗಳಿಗೆ ಹುರಿದುಂಬಿಸಿದರು.
ಮೈದಾನದಲ್ಲಿಯೇ ಪ್ರತಿ ಪಂದ್ಯದ ಪ್ರತಿ ಇನ್ಸಿಂಗ್ಸ್ ಮುಗಿದ ತಕ್ಷಣ ಕ್ರೀಟಾಪಟುಗಳಿಗೆ ಕುಡಿಯುವ ನೀರು, ಮಜ್ಜಿಗೆ ಹಾಗೂ ಹಣ್ಣಿನ ವ್ಯವಸ್ಥೆ ಮಾಡಲಾಗಿತ್ತು, ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು, ಪ್ರೇಕ್ಷಕರ ಪ್ರತಿಯೊಬ್ಬರಿಗೂ ಉತ್ತರಕರ್ನಾಟಕ ಶೈಲಿಯ ಊಟದ ವ್ಯವಸ್ಥೆ ಮಾಡಿದ್ದರು. ಸಂಘಟಕರು ಅಚ್ಚುಕಟ್ಟುತನಕ್ಕೆ ಜನ ಕೊಂಡಾಡಿದರು.
ಬಾಲಕಿಯರ ತಂಡದ ಕೋಚ್ ಎನ್.ಬಿ.ದಾಸರ ಹಾಗೂ ಮಣಗೂರ ಶಾಲೆಯ ಮುಖ್ಯ ಗುರು ಆರ್.ಜಿ. ಬುಲಾತಿಯವರನ್ನು ಕ್ರೀಡಾಭಿಮಾನಿಗಳು ಹೆಗಲಮೇಲೆ ಹೊತ್ತು ಮೈದಾನ ತುಂಬಾ ಮೆರವಣಿಗೆ ಮಾಡಿ ಗುಲಾಲು ಎರಚಿ ಸಂಭ್ರಮಿಸಿದರು.
ಪ್ರಶಸ್ತಿ ವಿತರಣೆ:
ಸಂಜೆ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಿ ಸಂಘಟಕ ಚಂದ್ರಶೇಖರ ನುಗ್ಗಲಿ ಮಾತನಾಡಿ, ಕ್ರೀಡಾಕೂಟ ಆಯೋಜಿಸಿದ ಬಗೆಯನ್ನು ವಿವರಿಸಿದರು.
ಎ.ಎಸ್. ಲಾಳಶೇರಿ, ಎಸ್.ಎಂ. ಪಾಟೀಲ, ವಿಜಯಕುಮಾರ ದೇಸಾಯಿ, ಅಶೋಕ ಬೂದಿಹಾಳ, ಎಂ.ಎಸ್. ಮುಕಾರ್ತಿಹಾಳ, ಎಸ್.ಎಚ್. ಬಿರಾದಾರ, ಶಂಕರ ಚವ್ಹಾಣ, ಪರಶುರಾಮ ಪಮ್ಮಾರ, ಎಸ್.ಎನ್. ಮಿಣಜಗಿ, ಎಚ್.ಎಂ. ಬಲವಾಡ, ಎಸ್.ಎಂ. ಪಾಟೀಲ, ಎಂ.ಆರ್. ಮಕಾನದಾರ, ಎಂ.ಎಂ. ಮುಲ್ಲಾ, ಸಲೀಂ ದಡೆದ, ಎಂ.ಬಿ. ಬಿರಾದಾರ, ಆರ್.ಬಿ. ಗೌಡರ. ವಿ.ಕೆ. ಮಸೂತಿ, ಆರ್.ಜಿ.ಬುಲಾತಿ ಮತ್ತೀತರರಿದ್ದರು.
ಬಸವರಾಜ ಯರವಿನತೆಲಿಮಠ ಅಧ್ಯಕ್ಷತೆ ವಹಿಸಿದ್ದರು.
270 ಕ್ರೀಡಾಪಟುಗಳಿಗೆ ಸನ್ಮಾನ
ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಪ್ರತಿ ಆಟಗಾರ, ಕೋಚ್ ಸೇರಿ ಒಟ್ಟಾರೇ 270 ಜನ ಕ್ರೀಡಾಪಟುಗಳನ್ನು ಸನ್ಮಾನಿಸಿದ್ದು ವಿಶೇಷ ಹಾಗೂ ಇದೇ ಮೊದಲು.
ಕ್ರೀಡಾಕೂಟ ಉದ್ಘಾಟನೆ
ಮಂಗಳವಾರ ಬೆಳಿಗ್ಗೆ 7 ಕ್ಕೆ ಕ್ರೀಡಾಕೂಟಕ್ಕೆ ಆಲಮಟ್ಟಿ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಎಚ್.ಎನ್. ಶ್ರೀನಿವಾಸ ಕ್ರೀಡಾಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು.
ಆರ್ಎಫ್ ಓ ಮಹೇಶ ಪಾಟೀಲ, ಕ್ರೀಡಾಕೂಟದ ಸಂಘಟಕ, ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ನೌಕರರ ಸಂಘದ ಅಧ್ಯಕ್ಷ ಎಸ್.ಬಿ. ದಳವಾಯಿ, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಎ.ಎಸ್. ಲಾಳಶೇರಿ, ಎಸ್.ಎಸ್. ಅವಟಿ, ಎನ್.ಬಿ.ದಾಸರ, ಸುರೇಶ ಆಲೂರ, ಮೆರೆಕೂರ ಮತ್ತೀತರರು ಇದ್ದರು.

