’ಜಯ್ ನುಡಿ’ (ವ್ಯಕ್ತಿತ್ವ ವಿಕಸನ ಲೇಖನ ಮಾಲೆ)
ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ, ಮೊ:೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಜಗತ್ತಿಗೆ ಸದಾ ನೆನಪಿರುವಂತಹ ಗೆಲುವು ರಾತ್ರೋರಾತ್ರಿ ದೊರೆಯುವಂಥದ್ದಲ್ಲ. ಅದು ಸಮಯವನ್ನು ಬೇಡುತ್ತದೆ. ಜತೆಗೆ ಅದಕ್ಕೆ ನಮ್ಮ ಕಠಿಣ ಪರಿಶ್ರಮ, ತುಡಿತ ಮತ್ತು ಏಕಾಗ್ರತೆಯ ಅವಶ್ಯಕತೆಯೂ ಇದೆ. ಎಲ್ಲದಕ್ಕಿಂತ ಹೆಚ್ಚಾಗಿ ತ್ಯಾಗವನ್ನು ಬೇಡುತ್ತದೆ. ಹಿಂದಿನ ತಲೆಮಾರುಗಳಿಗೆ ಹೋಲಿಸಿದರೆ ಇಂದಿನ ಯುವ ಜನತೆ ಅತಿ ಹೆಚ್ಚು ಪ್ರತಿಭಾವಂತರಿದ್ದಾರೆ. ಅಲ್ಲದೇ ದೊಡ್ಡ ದೊಡ್ಡ ಹೊಂಗನಸುಗಳನ್ನು ಕಾಣುತ್ತಾರೆ. ಅದರಲ್ಲಿ ಕೆಲ ಯುವಕರಂತೂ ಕನಸು ನನಸಾಗಿಸಲು ಸಾಕಷ್ಟು ಹಾತೊರೆಯುತ್ತಾರೆ. ಅದರೊಂದಿಗೆ ಹಗಲು ರಾತ್ರಿಯೆನ್ನದೇ ಶ್ರಮವಹಿಸುತ್ತಾರೆ. ಹೀಗಿದ್ದಾಗ್ಯೂ ಸಹ ಗೆಲುವು ಅವರಿಗೆ ಮರೀಚಿಕೆ ಆಗುತ್ತದೆ ಮೈಲಿಗಟ್ಟಲೇ ಇನ್ನೂ ಸಾಗುವುದಿದೆ ಏನೋ ಅನಿಸುತ್ತದೆ. ಗೆಲುವು ನನ್ನ ಪಾಲಿಗಿಲ್ಲವೆಂದು ಯುವ ಜನತೆ ಬೇಸರಪಟ್ಟುಕೊಂಡು ಪ್ರಯತ್ನವನ್ನು ನಿಲ್ಲಿಸಿಬಿಡುತ್ತಾರೆ. ಯಾಕೆ ಹೀಗೆ ಆಗುತ್ತದೆಂಬ ಪ್ರಶ್ನೆಗೆ ಉತ್ತರ ಹುಡುಕಹೊರಟಾಗ ಅವರು ಮಾಡುವ ತಪ್ಪುಗಳು, ಎದುರಾಗುವ ಅಡೆತಡೆಗಳು ನೆದರಿಗೆ ಬೀಳುತ್ತವೆ.
ಯಶಸ್ಸು ನಿಧಾನ
‘ಯಶಸ್ಸು ನಿಧಾನ ಪ್ರಕ್ರಿಯೆ, ಆದರೆ ಯಶಸ್ಸಿನ ಹಾದಿಯನ್ನು ತೊರೆಯುವುದು ಅದನ್ನು ವೇಗಗೊಳಿಸುವುದಿಲ್ಲ.’ಈ ಉಲ್ಲೆಖವು ಶಾಶ್ವತವಾದ ಯಶಸ್ಸನ್ನು ಸಾಧಿಸಲು ಬಿಟ್ಟುಕೊಡುವ ಬದಲು ನಿರಂತರತೆ ಮತ್ತು ಕಠಿಣ ಪರಿಶ್ರಮದ ಅಗತ್ಯವಿದೆ ಎಂಬ ಸವಾಲಿನ ಸತ್ಯವನ್ನು ಒಳಗೊಂಡಿದೆ. ತಾಳ್ಮೆ ಕಳೆದುಕೊಳ್ಳುವುದು, ಅಕಾಲಿಕವಾಗಿ ಪ್ರಯತ್ನಗಳನ್ನು ತ್ಯಜಿಸುವುದು ಅಥವಾ ದಿಕ್ಕುಗಳನ್ನು ಬದಲಾಯಿಸುವುದು ಸುಲಭ. ಗೆಲುವು ಇನ್ನೂ ದೂರವಿದೆ ಎಂದು ತೋರುತ್ತಿರುವಾಗ ನಾವು ಗಮನವನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬುದು ಮುಖ್ಯ. ಯಶಸಿನ ದಾರಿಯಲ್ಲಿ ದೃಢಚಿತ್ತರಾಗಿ ಮುಂದುವರೆಯಲು ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ.
ತಪ್ಪುಗಳು
ನಮಗೆ ತಪ್ಪುಗಳು ಅಂದ ತಕ್ಷಣ ನಕಾರಾತ್ಮಕ ಭಾವ ಉಂಟಾಗುತ್ತದೆ. ವಾಸ್ತವದಲ್ಲಿ ಯಶಸ್ಸಿನ ಹಾದಿಯಲ್ಲಿ ಅವು ಮೆಟ್ಟಿಲುಗಳಿದ್ದಂತೆ ಆ ಸೋಪಾನಗಳನ್ನು ಬಳಿಸಿಯೇ ನಾವು ಗೆಲುವಿನ ಬೆಟ್ಟವನ್ನು ಹತ್ತಬೇಕು. ಆದರೆ ತಪ್ಪುಗಳನ್ನು ತಪ್ಪಾಗಿ ತಿಳಿಯುತ್ತೇವೆ. ‘ತಪ್ಪುಗಳು ಹೊಸ ಪಾಠವನ್ನು ಕಲಿಸುವ ಅವಕಾಶಗಳು.’ ಅವುಗಳನ್ನು ಅವಕಾಶಗಳೆಂದು ತಿಳಿಯದೇ ಅಡೆತಡೆಗಳೆಂದು ತಿಳಿಯುತ್ತೇವೆ. ಸಾಮಾನ್ಯವಾಗಿ ತಪ್ಪುಗಳನ್ನು ಅನನುಕೂಲ ಮತ್ತು ಸ್ವೀಕಾರಾರ್ಹವಲ್ಲವೆಂದು ಅರ್ಥೈಸುತ್ತೇವೆ. ಪ್ರತಿ ತಪ್ಪಿನಿಂದ ವಿಶೇಷವಾಗಿ ಹೊಸದನ್ನು ಕಲಿಯಬಹುದು. ಅದರಲ್ಲಿ ಅಮೂಲ್ಯವಾದ ಪಾಠವೊಂದು ಅಡಗಿದೆ ಎಂಬುದನ್ನು ಅರಿತುಕೊಳ್ಳದೇ ಹೋಗುತ್ತೇವೆ. ಸರಳವಾಗಿ ಹೇಳಬೇಕೆಂದರೆ ನಾವೆಲ್ಲ ಉತ್ತಮವಾಗುವ ದಾರಿಯೆಂದರೆ ಅದು ತಪ್ಪುಗಳಿಂದ ಕಲಿಯುವುದು. ತಪ್ಪುಗಳಿಂದ ಕಲಿಯುತ್ತ ಹೋದವರೆ ಯಶಸ್ಸಿನ ಶಿಖರದ ಮೇಲೆ ವಿಜಯದ ಪತಾಕೆಯನ್ನು ಹಾರಿಸುತ್ತಾರೆ. ತಪ್ಪುಗಳಿಲ್ಲದೇ ಗೆಲುವು ಸಾಧಿಸಲು ಅಸಾಧ್ಯ. ತಪ್ಪುಗಳು ನಮ್ಮನ್ನು ಸರಿಗೊಳಿಸುತ್ತವೆ. ಗೆಲುವಿನ ದಾರಿಯಲ್ಲಿ ಸರಿಯಾಗಿ ನಡೆಯುವಂತೆ ಮಾಡುತ್ತವೆ.. ಎಡವಿದಾಗ ಮತ್ತೆ ಎದ್ದು ನಡೆಯಲು ಸಹಾಯ ಮಾಡುತ್ತವೆ. ಆದ್ದರಿಂದ ತಪ್ಪುಗಳ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಬಿಡಬೇಕು. ತಪ್ಪು ತಪ್ಪಲ್ಲವೆಂದು ಮನಗಾಣಬೇಕು. ಅವುಗಳಿಂದ ಪಾಠ ಕಲಿತು ಯಶೋಶಿಖರದತ್ತ ಮುನ್ನುಗ್ಗಬೇಕು.
ದೀರ್ಘಾವಧಿಯ ಬದ್ಧತೆ
ಅರ್ಥಪೂರ್ಣ ಸಾಧನೆಗಳಿಗೆ ಸಮಯ ಮತ್ತು ಶ್ರಮ ಬೇಕಾಗುತ್ತದೆ. ಎಂಬುದನ್ನು ಒಪ್ಪಿಕೊಳ್ಳದಿರುವುದು ದೊಡ್ಡ ತಪ್ಪು. ಇಂದಿನ ದಾವಂತ ಜೀವನದ ಸಂಸ್ಕೃತಿಯಲ್ಲಿ ರಾತ್ರೋರಾತ್ರಿ ಗೆಲುವು ಸಿಗಬೇಕೆಂದು ಬಯಸುತ್ತೇವೆ. ಈ ಸಂಸ್ಕೃತಿಯು ಯಶಸ್ವಿನ ಆಕರ್ಷಣೆಯು ಪಾಂಡಿತ್ಯವು ದೀರ್ಘಾವಧಿಯ ಬದ್ಧತೆ ಎಂಬುದನ್ನು ಮರೆಯುವಂತೆ ಮಾಡುತ್ತಿದೆ. ಯಾವುದೇ ಕ್ಷೇತ್ರದಲ್ಲಿ ಪರಿಣಿತರಾಗಲು ಸುಮಾರು ೧೦,೦೦೦ ಗಂಟೆಗಳ ಅಭ್ಯಾಸವನ್ನು ತೆಗೆದುಕೊಳ್ಳುತ್ತದೆ ಎಂದು ನರವಿಜ್ಞಾನಿ ಡೇವಿನಲ್ ಲೆವಿಟನ್ ಸೂಚಿಸುತ್ತಾರೆ. ‘ಯಶಸ್ಸು ಕೇವಲ ಒಂದು ಗಮ್ಯಸ್ಥಾನವಲ್ಲ, ಅದೊಂದು ಪಯಣ.’ಎಂಬುದನ್ನು ಮರೆತಿರುವುದು ಒಂದು ದೊಡ್ಡ ತಪ್ಪು. ಗೆಲುವಿನ ನಿರೀಕ್ಷೆಯಲ್ಲಿರುವವರು ಕೇವಲ ನಿರೀಕ್ಷಿಸಿದರೆ ಅದು ಲಭಿಸುವುದಿಲ್ಲ. ಅದಕ್ಕಾಗಿ ದೀರ್ಘಾವಧಿ ಬದ್ಧತೆಯ ನಿರಂತರ ಪ್ರಯತ್ನವನ್ನು ಮುಂದುವರೆಸಲೇಬೇಕು.
ಅನುಕರಣೆ
ಹೊಳೆಯುವ ವಸ್ತುಗಳೆಲ್ಲ ಬಂಗಾರವಲ್ಲ. ಅನ್ನೋ ಬಂಗಾರದಂಥ ಮಾತನ್ನು ನಾವೆಲ್ಲ ಕೇಳಿಯೇ ಇರುತ್ತೇವೆ. ಹಾಗೆಯೇ ಬೇಗನೆ ಯಶಸ್ವಿ ವ್ಯಕ್ತಿಗಳಾಗಬೇಕೆಂದು ಕಂಗೊಳಿಸುವ, ದಾರಿ ತಪ್ಪಿಸುವ ಅಡ್ಡಮಾರ್ಗವನ್ನು ಹಿಡಿಯುವುದು ತಪ್ಪು.. ’ಇಂಗ್ಲೀಷ್ನ ಮಾತೊಂದು ಹೀಗೆ ಹೇಳುತ್ತದೆ. ‘ಇಟ್ ಈಸ್ ಬೆಟರ್ ಟು ಫೇಲ್ ಇನ್ ಓರಿಜಿನ್ಯಾಲಿಟಿ ದ್ಯಾನ್ ಟು ಸಕ್ಸೀಡ್ ಇನ್ ಇಮಿಟೇಷನ್. ಅಂದರೆ ಅವರಿವರನ್ನು ಅನುಕರಿಸಿ ಗೆಲ್ಲುವುದಕ್ಕಿಂತ ನಮ್ಮತನದಲ್ಲಿ ಸೋಲುವುದು ಒಳ್ಳೆಯದು. ಯಾರೋ ಏನೋ ಮಾಡಿ ಗೆದ್ದಿದ್ದಾರೆ ಅಂದರೆ ಅವರನ್ನೇ ನಕಲು ಮಾಡುವುದು ತಪ್ಪು. ನಮ್ಮಲ್ಲಿರುವ ಪ್ರತಿಭೆ, ಶಕ್ತಿ, ಸಾಮರ್ಥ್ಯಗಳನ್ನು ಗುರುತಿಸಿ ಆ ನಿಟ್ಟಿನಲ್ಲಿ ಪ್ರಯತ್ನಿಸುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಅನುಕರಣೆ ನಮ್ಮನ್ನು ಹಾಳು ಮಾಡುತ್ತದೆ. ಆದ್ದರಿಂದ ಚಿಂತಿಸಿ ನಿರ್ವಹಿಸಬೇಕು.
ತ್ಯಜಿಸುವುದು
ಭವಿಷ್ಯವನ್ನು ನಿರೂಪಿಸುವ ಮಹತ್ವದ ಸಂಗತಿಗಳಲ್ಲಿ ನಿರಾಸಕ್ತಿಯನ್ನು ತೋರುವುದು ತುಂಬಾ ಅಪಾಯಕಾರಿ ಸಂಗತಿ. ಬಯಸಿದ ಬದುಕನ್ನು ಕಟ್ಡಿಕೊಳ್ಳಲು ಹಗಲು ಇರುಳು ಗುರಿಯತ್ತ ಪಯಣಿಸುವುದನ್ನೇ ರೂಡಿಸಿಕೊಳ್ಳಬೇಕು. ‘ಹತ್ತು ಕಡೆ ಗುಂಡಿ ತೋಡಿದರೆ ನೀರು ಲಭಿಸುವುದಿಲ್ಲ. ಒಂದೇ ಕಡೆ ಗುಂಡಿ ತೋಡಿದರೆ ನೀರು ಸಿಗುವ ಸಾಧ್ಯತೆ ಹೆಚ್ಚು.’ ಕೆಲ ದಿನಗಳು ಇಲ್ಲವೇ ಕೆಲ ತಿಂಗಳು ಒಂದು ಗುರಿಯ ಬೆನ್ನು ಹತ್ತುವುದು, ನಂತರ ಇದು ಫಲ ನೀಡದು ಅಂತ ತ್ಯಜಿಸುವುದು ಸಹ ಗೆಲುವಿನ ಹಾದಿಯಲ್ಲಿ ಮಾಡುವ ತಪ್ಪೇ ಸರಿ.’ವಿನ್ನರಸ್ ನೆವರ್ ಕ್ವಿಟ್. ಕ್ವಿಟ್ರ್ಸ್ ನೆವರ್ ವಿನ್’ ಈ ಇಂಗ್ಲೀಷ್ ನುಡಿ ಗೆಲ್ಲುವವರು ಪ್ರಯತ್ನವನ್ನು ಬಿಡುವುದಿಲ್ಲ. ಪ್ರಯತ್ನ ತ್ಯಜಿಸುವವರು ಗೆಲ್ಲಲಾರರು ಎಂಬುದನ್ನು ಸಮರ್ಥಿಸುತ್ತದೆ.

ಸ್ಪಷ್ಟತೆ
ಇನ್ನೊಂದು ಸಂಗತಿಯೆಂದರೆ ಒಂದು ಗುರಿಯತ್ತ ಪ್ರಯತ್ನಿಸುತ್ತ ಸಾಗುವುದು ಜಯ ಇನ್ನೇನು ಲಭಿಸುವುದು ಎನ್ನುವ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡು ಪ್ರಯತ್ನವನ್ನು ತ್ಯಜಿಸುವುದು. ಇದು ನಿಜಕ್ಕೂ ದೊಡ್ಡ ಮೂರ್ಖತನ. ಗಿಡ ಇನ್ನೇನು ಹಣ್ಣು ಕೊಡುವ ಸಮಯ ಬಂದಿದೆ ಅನ್ನೋ ಹೊತ್ತಿನಲ್ಲಿ ಬೇರು ಸಮೇತ ಗಿಡವನ್ನು ಕಿತ್ತು ಹಾಕಿದಂತೆ ಆಗತ್ತದೆ. ಅಂತೆಯೇ ಆ ಮೂರ್ಖತನ ಗೆಲುವನ್ನು ದೂರ ಮಾಡುತ್ತದೆ. ಬಯಸಿದ ಬದುಕನ್ನು ಪಡೆಯುವುದು ಕಠಿಣವೇನೂ ಅಲ್ಲ ಆದರೆ ಗುರಿ ಸ್ಪಷ್ಟವಾಗಿರಬೇಕು. ಅಂದರೆ ಒಂದೇ ದಾರಿಯಲ್ಲಿ ನಿಲ್ಲದ ನಡಿಗೆ ಇರಬೇಕು. ಪಡೆಯುವ ತನಕ ಬಿಡದ ಛಲವಿರಬೇಕು. ನಿಮಗೇನು ಸಾಧಿಸುವುದಿದೆ ಎಂಬುದರ ಬಗ್ಗೆ ನಿಮಗೇ ಸ್ಪಷ್ಟತೆ ಇಲ್ಲದಿದ್ದರೆ ಗೆಲುವು ಮರೀಚಿಕೆಯಾಗುವುದು. ಆದ್ದರಿಂದ ಒಂದು ಗುರಿಯನ್ನು ನಿರ್ಧರಿಸಿ ಅದರತ್ತ ದೃಡಚಿತ್ತದಿಂದ ನಡೆಯಬೇಕು. ಒಂದೇ ಒಂದು ಗುರಿಯನ್ನು ಬೆನ್ನು ಹತ್ತುವುದು ತಡವಾದರೂ ಸರಿ ಅದರಲ್ಲಿ ಗೆಲುವು ಖಂಡಿತ.
ಸಣ್ಣ ಗೆಲುವು
ದೊಡ್ಡ ಗೆಲುವು ಒಮ್ಮೆಲೇ ಬರುವುದಿಲ್ಲ. ಸಣ್ಣ ಸಣ್ಣ ಗೆಲುವುಗಳು ದೊಡ್ಡ ಗೆಲುವಿನ ಮುನ್ಸೂಚನೆಗಳು. ದೊಡ್ಡ ಗುಡ್ಡದ ಮೇಲಿರುವ ಮಂದಿರ ತಲುಪಲು ಸಣ್ಣ ಸಣ್ಣ ಮೆಟ್ಟಿಲುಗಳು ಹೇಗೆ ಸಹಾಯ ಮಾಡುತ್ತವೆಯೋ ಹಾಗೆಯೇ ಚಿಕ್ಕ ಗುರಿಗಳು ದೊಡ್ಡ ಗುರಿ ಸಾಧಿಸಲು ಸಹಕಾರಿ. ದೊಡ್ಡ ಗುರಿಯನ್ನು ಚಿಕ್ಕ ಚಿಕ್ಕ ಇಲ್ಲವೇ ಸೂಕ್ಷ್ಮ ಗುರಿಗಳನ್ನಾಗಿ ವಿಭಜಿಸುವುದರಿಂದ ದೊಡ್ಡ ಗೆಲುವಿನತ್ತ ಪಯಣಿಸಲು ಪ್ರೇರಣೆ ನೀಡುತ್ತದೆ. ಪ್ರೇರಣೆಯನ್ನು ಕಾಪಾಡಿಕೊಳ್ಳಲು ಸಣ್ಣ ಗೆಲುವುಗಳು ನಿರ್ಣಾಯಕಗಳೆಂದು ವಿವರಿಸುತ್ತಾರೆ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ನ ಪ್ರಾಧ್ಯಾಪಕರಾದ ತೆರೆಸಾ ಅಮಾಬೈಲ್.
ಭಾವನಾತ್ಮಕ ಕಾರಣ
‘ಸ್ಟಾರ್ಟ್ ವಿಥ್ ವೈ” ಅಂದರೆ ನೀವು ಇದನ್ನೇಕೆ ಸಾಧಿಸಬೇಕು ಎನ್ನುವುದಕ್ಕೆ ಭಾವನಾತ್ಮಕ ಕಾರಣವನ್ನು ಕೊಟ್ಟುಕೊಂಡು ಆರಂಭಿಸಬೇಕು. ಈ ಕಾರಣ ಹಿನ್ನೆಡೆಗಳನ್ನು ನಿರ್ವಿಹಿಸಲು ಸಹಕಾರಿ. ‘ಏಕೆ’ ಅನ್ನು ಗ್ರಹಿಸುವುದು ಅನಿವಾರ್ಯ. ಈ ‘ಏಕೆ’ ನಿಮ್ಮ ಆಂತರಿಕ ದಿಕ್ಸೂಚಿಯಾಗಿ ಕಾರ್ಯ ನಿರ್ವಹಿಸುತ್ತದೆ. ಆದರೆ ಗುರಿ ಸಾಧನೆಗೆ ನಾವು ಬಲವಾದ ಕಾರಣವನ್ನು ಕೊಟ್ಟುಕೊಳ್ಳುವುದೇ ಇಲ್ಲ. ಹೀಗಾಗಿ ಪಯಣವನ್ನು ಅರ್ಧಕ್ಕೆ ನಿಲ್ಲಿಸುತ್ತೇವೆ.
ಕೊನೆ ಹನಿ
ಸ್ಟ್ಯಾನ್ಫೋರ್ಡ್ ಮನಸಾಸ್ತ್ರಜ್ಞ ಕರೋಲ್ ಡ್ವೆಕ್ ‘ಬೆಳವಣಿಗೆ ಮನಸ್ಥಿತಿ’ಯ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಾರೆ. ಕೌಶಲ್ಯಗಳು ಸ್ಥಿರವಾಗಿಲ್ಲ, ಆದರೆ ಅವುಗಳನ್ನು ಕಲಿಕೆಯಿಂದ ಅಭಿವೃದ್ಧಿಪಡಿಸಬಹುದು.’ ನೀವು ಇನ್ನೂ ಎಷ್ಟು ದೂರ ಹೋಗಬೇಕು ಎನ್ನುವುದಕ್ಕಿಂತ ನೀವು ಎಷ್ಟು ದೂರ ಬಂದಿದ್ದೀರಿ.’ ಎಂಬುದರ ಮೇಲೆ ಕೇಂದ್ರೀಕರಿಸಿ. ಇದರಿಂದ ಪ್ರಗತಿ ಸಾಧ್ಯ. ಪ್ರಗತಿಯ ಮೇಲೆ ಕೇಂದ್ರೀಕರಿಸಿ ಹೊರತು ಪರಿಪೂರ್ಣತೆಯ ಮೇಲಲ್ಲ. ಪ್ರತಿದಿನದ ಕೊನೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಿ. ಸಾಧನೆಗಳನ್ನು ಪರೀಕ್ಷಿಸಿ ಬದಲಾವಣೆಯನ್ನು ಪರಿಗಣಿಸಿ. ಗೆಲುವಿಗೆ ಯಾವುದೇ ಅಡ್ಡಮಾರ್ಗಗಳಿಲ್ಲ. ಅಂತೆಯೇ ಮಾಂತ್ರಿಕ ತಂತ್ರಗಳಿಲ್ಲ. ಮಿತಿಗಳನ್ನು ಸವಾಲಾಗಿಸಿಕೊಳ್ಳಿ, ಆಗ ಮಾತ್ರ ಅತ್ಯದ್ಭುತ ಗೆಲುವು ನಗೆ ಬೀರುತ್ತದೆ.


