’ಅಪ್ರತಿಮ ಮಹಿಳೆ’
ಲೇಖನ
ಸುಧಾ ಪಾಟೀಲ (ಬೆಳಗಾವಿ)
ವಿಶ್ವಸ್ಥರು, ಬಸವ ತಿಳುವಳಿಕೆ ಮತ್ತು ಅಧ್ಯಯನ ಕೇಂದ್ರ, ಪುಣೆ
ಉದಯರಶ್ಮಿ ದಿನಪತ್ರಿಕೆ
ಭಾರತ ಸ್ವಾತಂತ್ರ್ಯ ಹೋರಾಟವು ಕೇವಲ ರಾಜಕೀಯ ಹೋರಾಟವಾಗಿರಲಿಲ್ಲ. ಅದು ರಕ್ತಸಿಕ್ತ ಅಧ್ಯಾಯವೂ ಆಗಿತ್ತು. ತ್ಯಾಗ ಬಲಿದಾನಗಳ ಚಳುವಳಿಯೂ ಆಗಿತ್ತು. ಅದು ಪುರುಷ ಮತ್ತು ಮಹಿಳೆ ಎಂಬ ತಾರತಮ್ಯಗಳಿಲ್ಲದ ಒಂದು ಸಮಗ್ರ ಹೋರಾಟವಾಗಿತ್ತು. ಬೆಳವಡಿ ಮಲ್ಲಮ್ಮ ಕರ್ನಾಟಕದ ಬೆಳಗಾವಿ ಜಿಲ್ಲೆಯ ವೀರರಾಣಿ. ಮರಾಠರ ವಿರುದ್ಧ ಹೋರಾಡಲು ಮಹಿಳಾ ಸೇನೆಯನ್ನು ಸಂಘಟಿಸಿದ ಮೊದಲ ಮಹಿಳೆ. ವಿಶ್ವದಲ್ಲಿ ಪ್ರಥಮ ಮಹಿಳಾ ಸೈನ್ಯ ಕಟ್ಟಿದ್ದು ವೀರ ರಾಣಿ ಮಲ್ಲಮ್ಮ. ಕನ್ನಡ ನಾಡಿನ ಅತ್ಯಮೂಲ್ಯ ಅನರ್ಘ್ಯ ರತ್ನವಾದ ವೀರರಾಣಿ ಮಲ್ಲಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ ಕನ್ನಡ ನಾಡಿನ ವೀರ ವನಿತೆಯರಲ್ಲಿ ಒಬ್ಬಳು. ಸ್ವಾತಂತ್ರ ಹೋರಾಟದಲ್ಲಿ ಮುಖ್ಯವಾಗಿ ಹೆಸರಿಸಲಾದ ಹೆಸರುಗಳಲ್ಲಿ ಮೊದಲನೇ ಹೆಸರು ಬೆಳವಡಿ ಮಲ್ಲಮ್ಮ,
ಸೋಂದೆಯ ಯುವರಾಣಿ ಒಂದು ತಿಂಗಳಿನಲ್ಲಿ 21 ಹುಲಿಗಳನ್ನು ಹೊಡೆದು ಹಾಕಿದ ಬೆಳವಡಿಯ ರಾಜ ಈಶಪ್ರಭುವಿನ ಮಡದಿ ರಾಣಿ ಮಲ್ಲಮ್ಮಳ ಕುರಿತ ಸಾಹಸ ಪರಾಕ್ರಮಗಳ ರೋಚಕ ಕಥೆ ಮೈ ನವಿರೇಳಿಸುತ್ತದೆ. ರಾಣಿ ಮಲ್ಲಮ್ಮಳನ್ನು ಕಂಡರೆ ರಜಪೂತ ಯೋಧರು, ಬ್ರಿಟಿಷರು ಮಾತ್ರವಲ್ಲ ಶಿವಾಜಿ ಮಹಾರಾಜರ ಸೈನ್ಯವೂ ಮತ್ತು ಮೊಘಲ್ ಸಾಮ್ರಾಜ್ಯವೂ ಹೆದರುತ್ತಿತ್ತು. ಎಂಟೆದೆಯ ಗುಂಡಿಗೆಯ ಗಂಡು ಕೂಡಾ ಮಲ್ಲಮ್ಮಳ ಮುಂದೆ ನಿರ್ವೀರ್ಯನಾಗುತ್ತಿದ್ದ. ರಾಣಿಯ ಸ್ವಾಭಿಮಾನ ಮತ್ತು ಪರಾಕ್ರಮವನ್ನು ನೋಡಿ ಚತ್ರಪತಿ ಶಿವಾಜಿ ಮಹಾರಾಜರು ತಮ್ಮ ಸೈನ್ಯದಿಂದಾದ ಅನ್ಯಾಯಕ್ಕೆ ಕ್ಷಮೆ ಕೋರಿ ರಾಣಿ ಮಲ್ಲಮ್ಮಳನ್ನು ಸೋದರಿ ಎಂದು ಅಭಿಮಾನದಿಂದ ಕರೆಯುತ್ತಿದ್ದರು ಮತ್ತು ಇದರಿಂದ ಕನ್ನಡಿಗರು ಮತ್ತು ಮರಾಠಿಗರ ನಡುವೆ ಬಾಂದವ್ಯದ ಬೆಸುಗೆ ಬೆಸೆದ ಕೀರ್ತಿ ರಾಣಿ ಮಲ್ಲಮ್ಮಳಿಗೆ ಸಲ್ಲುತ್ತದೆ. ಮಲ್ಲಮ್ಮನ ರೋಚಕ ಕಥೆಯನ್ನು ಒಳಗೊಂಡ ಹಾಗೂ ಬ್ರಿಟಿಷರನ್ನು ತಬ್ಬಿಬ್ಬುಗೊಳಿಸಿ ಅವರ ವ್ಯಾಪಾರಕ್ಕೆ ನಿಷೇಧ ಹೇಳಬೇಕೆನ್ನುವ ರಾಣಿಯ ವಾದದ ಕಥೆ ಕೇಳಿದರೆ ಕನ್ನಡಿಗರು ಹೆಮ್ಮೆಯಿಂದ ಬೀಗುತ್ತಾರೆ.
16 ವರ್ಷಕ್ಕೆ ಮದುವೆ , 18 ವರ್ಷಕ್ಕೆ ವೈಧವ್ಯ, 19 ವರ್ಷಕ್ಕೆ ಮಹಾರಾಣಿಯಾಗಿ 20 ವರ್ಷಗಳ ರಾಜ್ಯಾ ಧಿಕಾರ, ಸುಧೀರ್ಘ ಸೇವೆಯ ಜನಪರ ಆಡಳಿತ ಮತ್ತು ಲೋಕ ಹಿತ ಕಾರ್ಯಗಳು ಮಲ್ಲಮ್ಮಳನ್ನು ಇವತ್ತಿಗೂ ಜೀವಂತವಾಗಿಟ್ಟಿವೆ.
350 ವರ್ಷಗಳ ಹಿಂದೆಯೇ ಬೆಳವಡಿಯ ರಾಣಿ ಮಲ್ಲಮ್ಮ ಬ್ರಿಟಿಷರನ್ನು ಭಾರತದ ಒಳಗೆ ಬಿಟ್ಟುಕೊಳ್ಳಬಾರದು ಎಂಬ ಕಹಳೆಯನ್ನು ಮೊಳಗಿಸಿದ್ದು ಇಂದು ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆ. ಆಗಸ್ಟ್ 18 ಬೆಳವಡಿಯ ವೀರ ರಾಣಿ ಮಲ್ಲಮ್ಮಳ ಜನ್ಮದಿನ. ಕನ್ನಡ ನಾಡಿಗೆ ಸೌಭಾಗ್ಯ ತಂದುಕೊಟ್ಟವಳು ಮತ್ತು ಕನ್ನಡ ನಾಡಿನ ಹೆಮ್ಮೆ ಸಂಸ್ಕೃತಿ ಪರಂಪರೆಯನ್ನು ಶಾಶ್ವತವಾಗಿ ಉಳಿಯುವಂತೆ ಮಾಡಿದ ಮಲ್ಲಮ್ಮಳ ಶೌರ್ಯ ಪರಾಕ್ರಮಗಳಿಗೆ ಛತ್ರಪತಿ ಶಿವಾಜಿ ಮಹಾರಾಜರು ಕೂಡ ಸೋತಿದ್ದರು ಎಂಬುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ. ರಾಣಿ ಮಲ್ಲಮ್ಮ ಇತಿಹಾಸದಲ್ಲಿ ಬಂಗಾರದ ಪುಟದಲ್ಲಿ ರಾರಾಜಿಸುವವಳು.ಕನ್ನಡ ನಾಡಿನ ಮನೆಮನೆಗಳಲ್ಲಿ ಮನಸುಗಳಲ್ಲಿ ಕೆಚ್ಚೆದೆಯ ಹೃದಯಗಳಲ್ಲಿ ಅಜರಾಮರವಾಗಿ ಉಳಿಯುವವಳು.
ನಮ್ಮ ಕನ್ನಡ ನಾಡಿನಲ್ಲಿ ಜನಿಸಿ ನಾಡಿನ ಕೀರ್ತಿಪತಾಕೆಯನ್ನು ದೇಶಾದ್ಯಂತ ಪಸರಿಸಿದ ವೀರಮಾತೆಯರಲ್ಲಿ ಬೆಳವಡಿ ಮಲ್ಲಮ್ಮ ಸಹ ಒಬ್ಬ ಪ್ರಮುಖರು. ಇವರು ಸೋoದೆಯ ಮಹಾರಾಜ ಮಧುಲಿಂಗನಾಯಕರ ಸುಪುತ್ರಿ. ಐದನೆಯ ವಯಸ್ಸಿನಲ್ಲಿ ಮಲ್ಲಮ್ಮನಿಗೆ ವಯಸ್ಸಿಗೆ ಮೀರಿದ ಧೈರ್ಯ, ಕ್ಷಾತ್ರ ತೇಜಸ್ಸು, ಮುಖದಲ್ಲಿ ರಾರಾಜಿಸುತ್ತಿತ್ತು. ತಮ್ಮ ಊರಿನ ಜನರ ಮೇಲೆ ಮಲ್ಲಮ್ಮ ಬಹಳ ವಾತ್ಸಲ್ಯ ಇಟ್ಟುಕೊಂಡಿದ್ದರು. ಆ ಚಿಕ್ಕ ವಯಸ್ಸಿನಲ್ಲಿಯೇ ಎಲ್ಲ ನಾಯಕತ್ವದ ಗುಣಗಳನ್ನೂ ಸಹ ಬೆಳೆಸಿಕೊಂಡಿದ್ದರು. ಇಂತಹ ಸಂಗತಿಗಳನ್ನು ತಿಳಿದ ತಂದೆ ಮದುಲಿಂಗ ನಾಯಕರು ಮಲ್ಲಮ್ಮ ಮತ್ತು ಸಹೋದರ ಸದಾಶಿವ ನಾಯಕನನ್ನು ಹೆಚ್ಚಿನ ಕಲಿಕೆಗಾಗಿ ಗುರುಕುಲಕ್ಕೆ ಕಳಿಸಿದರು. ಮಲ್ಲಮ್ಮ ಸಂಸ್ಕೃತ ಕನ್ನಡ, ಉರ್ದು, ಮರಾಠಿ ಭಾಷೆಗಳು ಸುಲಲಿತವಾಗಿ ಓದಲು ಬರೆಯಲು ಮಾತನಾಡಲು ಕಲಿತಿದ್ದರು. ಸಹೋದರ ಸದಾಶಿವ ನಾಯಕ ವಿದ್ವಾಂಸರಾಗಿ ಹೊರಬಂದರು.
ಮಲ್ಲಮ್ಮನಿಗೆ ಸಾಹಿತ್ಯಾಸಕ್ತಿಯು ಅತಿಯಾಗಿತ್ತು. ರಾಜ್ಯದ ಪ್ರಮುಖ ವಿದ್ವಾಂಸರಿಂದ ಸಾಹಿತ್ಯದ ಬಗೆಗಿನ ಉನ್ನತ ಜ್ಞಾನವನ್ನು ಪಡೆದು ಎಲ್ಲ ವಿಭಾಗಗಳಲ್ಲೂ ಪರಿಣಿತಿ ಪಡೆದರು. ಮಲ್ಲಮ್ಮ ಹದಿನಾರು ವರ್ಷದಲ್ಲಿದ್ದಾಗ ಬೆಳಗಾವಿಯ ಬೈಲಹೊಂಗಲದ ಈಶಪ್ರಭು ಮಹಾರಾಜರ ಜೊತೆ ಪಾಣಿ ಗ್ರಹಣವಾಯಿತು. ಮಹಾರಾಜ ಈಶಪ್ರಭುವೂ ಅಪ್ರತಿಮ ಪರಾಕ್ರಮಿಯಾಗಿದ್ದರು. ಇವರಿಗೆ ನಂತರದ ದಿನಗಳಲ್ಲಿ ಒಂದು ಗಂಡು ಮಗು ಜನಿಸಿತು. ಆ ಮಗುವಿಗೆ ನಾಗಭೂಷಣ ಎಂದು ನಾಮಕರಣ ಮಾಡಲಾಯಿತು.
ಎಲ್ಲ ರಾಣಿಯರು ಕೇವಲ ರಾಜ ಭವನದಲ್ಲಿ ಮಾತ್ರ ಇರುತ್ತಾರೆ. ಆದರೆ ಮಲ್ಲಮ್ಮ ಎಲ್ಲರ ಹಾಗೆ ಸುಮ್ಮನೆ ಕುಳಿತುಕೊಂಡಿರುವ ರಾಣಿ ಆಗಿರಲಿಲ್ಲ. ಬೆಳವಡಿಯಲ್ಲಿ 2,000ಕ್ಕೂ ಅಧಿಕ ಮಹಿಳೆಯರ ಸೇನಾ ತಂಡವನ್ನು ಕಟ್ಟಿ ಅದಕ್ಕೆ ಬೇಕಾದ ತರಬೇತಿ ಮತ್ತು ಸಹಕಾರವನ್ನು ನೀಡಿದರು. ಮಲ್ಲಮ್ಮ ಯಾವುದೇ ಸಮಯದಲ್ಲೂ ರಾಜ್ಯಭಾರ ಮಾಡಬೇಕೆನ್ನುವ ಪರಿಸ್ಥಿತಿ ಒದಗಿ ಬಂದರೆ ಎಲ್ಲದಕ್ಕೂ ತಯಾರಾಗಿದ್ದರು. ಮಲ್ಲಮ್ಮ ಯುದ್ಧ ವಿದ್ಯೆಗಳಾದ ಕುಸ್ತಿ ಧನುರ್ವಿದ್ಯೆ, ಕತ್ತಿ ವರಸೆ, ಕುದುರೆ ಸವಾರಿ ಇವುಗಳಲ್ಲಿ ಬಹಳ ಪ್ರವೀಣೆಯಾಗಿದ್ದರು. ಇದರ ಜೊತೆಜೊತೆಗೆ ರಾಜ ನೀತಿ ಮತ್ತು ಅದರ ಸಾಧಕ ಬಾಧಕಗಳನ್ನು ಚೆನ್ನಾಗಿ ಅರಿತಿದ್ದರು.

ನಂತರದ ದಿನಗಳಲ್ಲಿ ರಾಜ್ಯ ವಿಸ್ತರಿಸುವ ಕಾರ್ಯದಲ್ಲಿ ಮರಾಠರ ಚಕ್ರವರ್ತಿ ಶಿವಾಜಿ ಮಹಾರಾಜರು ತೊಡಗಿದ್ದರು. ದಕ್ಷಿಣ ಭಾರತದಿಂದ ಉತ್ತರದ ಕಡೆಗೆ ಪ್ರಾಣ ಬೆಳೆಸುತ್ತಿದ್ದ ಸಮಯವದು. ಆಗ ಅವರ ಸೈನ್ಯ ಬೆಳವಡಿಯ ಪಕ್ಕದಲ್ಲಿ ತಂಗಿತ್ತು. ಮರಾಠರು ರಾಜ್ಯ ವಿಸ್ತಾರದ ಬಯಕೆಯಿಂದ ಬೆಳವಡಿಗೆ ಒತ್ತಡ ಹಾಕಲು ಪ್ರಯತ್ನಿಸಿದರು ಮಲ್ಲಮ್ಮನ ಸ್ವಾಭಿಮಾನ ಇದಕ್ಕೆ ಒಪ್ಪಿಗೆ ನೀಡಲಿಲ್ಲ ಮರಾಠರಿಗೆ ತಲೆಬಾಗದೆ ಯುದ್ಧಕ್ಕಾದರೂ ಸೈ , ಆದರೆ ತಲೆತಗ್ಗಿಸಿ ಮಾತ್ರ ನಿಲ್ಲುವುದಿಲ್ಲ ಎಂದು ತೀರ್ಮಾನಿಸಿದರು. ನಂತರ ಒಂದು ದಿನ ಮರಾಠಾ ಸೈನಿಕರು ಪ್ರಯಾಣದ ದಾಹದಿಂದ ಅಲ್ಲಿಯ ಗೊಲ್ಲರ ಬಳಿ ಸ್ವಲ್ಪ ಹಾಲನ್ನು ನೀಡಲು ಹೇಳಿದರು. ಮರಾಠರು ಬೆಳವಡಿಗೆ ನೀಡುತ್ತಿದ್ದ ಅಲ್ಪಸ್ವಲ್ಪ ತೊಂದರೆಯನ್ನು ತಿಳಿದ ಗೊಲ್ಲರು ಹಾಲು ನೀಡಲು ನಿರಾಕರಿಸಿದರು. ಅದನ್ನು ನೋಡಿ ಮರಾಠರು ಸಿಟ್ಟಿಗೇಳುತ್ತಾರೆ. ನಂತರ ಆ ಪ್ರಕರಣ ದೊಡ್ಡ ಮಟ್ಟಕ್ಕೆ ತಿರುಗಿ ಮಲ್ಲಮ್ಮ ತನ್ನ ಸೈನ್ಯದ ಜೊತೆಗೆ ಮುಂದಾಳತ್ವ ವಹಿಸಿಕೊಂಡು ಹೋರಾಟಕ್ಕೆ ಸಜ್ಜಾಗುತ್ತಾರೆ. ಸುಮಾರು ನೂರಕ್ಕೂ ಅಧಿಕ ಮರಾಠಾ ಸೈನಿಕರನ್ನು ಸದೆಬಡೆಯುತ್ತಾರೆ ಮರಾಠಾ ಸೈನಿಕರು ಮೋಸದಿಂದ ಮಲ್ಲಮ್ಮನ ಕುದುರೆಯ ಕಾಲು ಕಡಿದು ಬೀಳಿಸುತ್ತಾರೆ ಆಗ ಕೆಳಗಿಳಿದ ಮಲ್ಲಮ್ಮ ಕತ್ತಿ ಗುರಾಣಿಯ ಸಹಾಯದಿಂದ ಹೋರಾಡುತ್ತಾಳೆ ಆದರೆ ವಿಧಿಯಾಟ ಬೇರೆಯೇ ಇದೆ. ಆ ಸೈನಿಕರು ಮಲ್ಲಮ್ಮನನ್ನು ಸೆರೆಹಿಡಿದು ಶಿವಾಜಿ ಮಹಾರಾಜರ ಎದುರು ಕರೆದೊಯ್ದು ನಿಲ್ಲಿಸುತ್ತಾರೆ.
ಪರಾಕ್ರಮಿ ಯೋಧ ಶಿವಾಜಿ ಮಹಾರಾಜರನ್ನು ನೋಡಿದ ಮಲ್ಲಮ್ಮ ಕಿಂಚಿತ್ತೂ ಹೆದರದೆ ಧೈರ್ಯದಿಂದ ತಲೆ ಎತ್ತಿಕೊಂಡು ನಿಂತಿರುತ್ತಾರೆ. ಒಳ್ಳೆಯ ಸಂಸ್ಕಾರವಂತರಾದ ಶಿವಾಜಿ ಮಹಾರಾಜರು ಆ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥೈಸಿಕೊಂಡು ನಂತರ ಹೇಳುತ್ತಾರೆ. “ಅಮ್ಮ ನಾವು ಇನ್ನು ಮೇಲೆ ನಿಮಗೆ ಯಾವುದೇ ತೊಂದರೆ ನೀಡುವುದಿಲ್ಲ” ಎಂದು ಹೇಳಿ ಮಲ್ಲಮ್ಮನ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳುತ್ತಾರೆ. ನಮ್ಮ ಕನ್ನಡ ನಾಡಿನ ಸ್ತ್ರೀ ಒಬ್ಬಳು ಅಂತಹ ಮಹಾತ್ಮಾ ಛತ್ರಪತಿ ಶಿವಾಜಿ ಮಹಾರಾಜರ ಮನಸ್ಸನ್ನು ಗೆದ್ದು ಮಾತೆ ಎಂದು ಕರೆಸಿಕೊಂಡ ಧೈರ್ಯವಂತೆ ಮಲ್ಲಮ್ಮ. ಶಿವಾಜಿ ಮಹಾರಾಜರ ಸೈನಿಕರಿಂದ ಸಕಲ ಮರ್ಯಾದೆಯೊಂದಿಗೆ ತನ್ನ ರಾಜ್ಯಕ್ಕೆ ಮರಳಿದ ಸ್ವಾಭಿಮಾನಿ ವೀರವನಿತೆ ಬೆಳವಡಿ ಮಲ್ಲಮ್ಮನವರಿಗೆ ಶತಶತ ಪ್ರಣಾಮಗಳು.


