ಉದಯರಶ್ಮಿ ದಿನಪತ್ರಿಕೆ
ಆಲಮೇಲ: ವಿಜಯಪುರ ಜಿಲ್ಲೆ ಕಡಣಿಯ ಬೆರಗು ಪ್ರಕಾಶನ ಸಂಸ್ಥೆಯು ನೀಡುವ ರಾಜ್ಯಮಟ್ಟದ ಪ್ರೊ.ಎಚ್.ಟಿ.ಪೋತೆ ಹಸ್ತಪ್ರತಿ ಪ್ರಶಸ್ತಿಗೆ ಕಥಾ ವಿಭಾಗದಲಿ ಡಾ.ಲಕ್ಷ್ಮಣ ವಿ.ಎ ಅವರ ‘ಜಿರಿ ಮಳೆಯ ಕಣ್ಣು’ ಹಾಗೂ ಕಾವ್ಯಹಸ್ತಪ್ರತಿ ಬೆಂಗಳೂರಿನ ಭಾಗ್ಯವಸು ಅವರ ‘ರೆಪ್ಪೆಗಂಬದ ಮೇಲೆ ಕೂತ ಮರಿ ಹಕ್ಕಿ’ ಆಯ್ಕೆಯಾಗಿದೆ ಹಾಗೂ ದಿ.ಯಮುನಾಬಾಯಿ ರಾಜಣ್ಣ ಭೋವಿ ಸ್ಮರಣಾರ್ಥ ೨೦೨೩ರ ಸಾಲಿನ ಪುಸ್ತಕ ಪ್ರಶಸ್ತಿಗೆ ದಾವಣಗೆರೆಯ ಮಲ್ಲಿಕಾರ್ಜುನ ಕಡಕೋಳ ಅವರ ಪರಿಮಳದ ಹಾದಿಯ ಪಯಣಿಗರು ಕೃತಿಯು ಆಯ್ಕೆಯಾಗಿದೆ ಎಂದು ಬೆರಗು ಪ್ರಕಾಶನದ ಪ್ರಕಾಶಕಿ ವಿಜಯಲಕ್ಷ್ಮಿ ಆರ್.ಕತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವಕವಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಯುವ ಕಾವ್ಯ ಪುರಸ್ಕಾರ ನೀಡಲು ಇದೇ ವರ್ಷದಿಂದ ನಿರ್ಧರಿಸಿದ್ದು ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಪಿ. ನಂದಕುಮಾರ ಅವರ “ಹಂಗಿನ ಕಿರೀಟಕ್ಕೆ ಜೋತು ಬಿದ್ದ ನಾಲಿಗೆ’ಹಸ್ತಪ್ರತಿ ಆಯ್ಕೆಯಾಗಿದೆ.
ಬೆರಗು ಪ್ರಕಾಶನವು ಕಳೆದ ಐದು ವರ್ಷಗಳಿಂದಲೂ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದ್ದು. ಪ್ರಸಕ್ತ ವರ್ಷದ ಪ್ರಶಸ್ತಿಗೆ ೧೫೭ ಪುಸ್ತಕಗಳು, ಹಾಗೂ ಹಸ್ತಪ್ರತಿ ಸ್ಪರ್ಧೆಗೆ ೭೪ ಹಸ್ತಪ್ರತಿಗಳು ನಾಡಿನ ವಿವಿಧ ಭಾಗಗಳಿಂದ ಮತ್ತು ಮಹಾರಾಷ್ಟç, ಕೇರಳ ಹಾಗೂ ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದವು. ಖ್ಯಾತ ಕವಿ, ಕತೆಗಾರ ವಾಸುದೇವ ನಾಡಿಗ ಹಾಗೂ ಗುಲಬರ್ಗಾ ವಿವಿಯ ಡಾ.ಎಂ.ಬಿ.ಕಟ್ಟಿ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು.
ಹಸ್ತಪ್ರತಿ ಪ್ರಶಸ್ತಿಯು ಹತ್ತು ಸಾವಿರ ರೂ. ನಗದು, ಪ್ರಶಸ್ತಿಫಲಕ ಹಾಗೂ ಸ್ಮರಣಿಕೆಯೊಳಗೊಂಡಿದ್ದು ಬೆರಗು ಪ್ರಕಾಶನವು ಹಸ್ತಪ್ರತಿಯನ್ನು ಪ್ರಕಟಿಸುವ ಮೂಲಕ ಗೌರವಿಸಲಿದೆ ಹಾಗೂ ಪುಸ್ತಕ ಪ್ರಶಸ್ತಿಯು ಐದು ಸಾವಿರ ರೂ.ನಗದು, ಪ್ರಶಸ್ತಿಫಲಕ ಹಾಗೂ ಸ್ಮರಣಿಕೆಯೊಳಗೊಂಡಿದ್ದು ಮುಂದಿನ ತಿಂಗಳು ಕಡಣಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

