ಇಂಡಿಯಲ್ಲಿ ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪ
ಉದಯರಶ್ಮಿ ದಿನಪತ್ರಿಕೆ
ಇಂಡಿ: ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು ರಾಜ್ಯ ಸರಕಾರ ರೈತರ ನೆರವಿಗೆ ಧಾವಿಸದೆ ರೈತ ಸಮುದಾಯವನ್ನು ಕಡೆಗಣನೆ ಮಾಡುತ್ತಿದೆ. ಸಂಬಂಧಪಟ್ಟ ಇಲಾಖೆಗಳಿಗೆ ಸಚಿವ ಸ್ಥಾನವನ್ನೂ ನೀಡಿಲ್ಲ ಮುಖ್ಯವಾಗಿ ರೈತರಿಗೆ ಅವಶ್ಯವಿರುವ ಕೃಷಿ ಹಾಗೂ ತೋಟಗಾರಿಕೆ ಸಚಿವ ಸ್ಥಾನವೂ ಖಾಲಿ ಇದೆ. ಈ ಸರಕಾರ ಸಂಪೂರ್ಣ ನಿಷ್ಕ್ರೀಯವಾಗಿದೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಗರದ ಪ್ರವಾಸಿಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಾ ಕಾಲುವೆಗೆ ಈಗಾಗಲೇ ಒಂದುವರೆ ಟಿಎಂಸಿ ನೀರು ಹರಿಸುವದಾಗಿ ಕಲಬುರಗಿ ಆಯುಕ್ತರು ತಿಳಿಸಿದ್ದರು ಬೇಗನೇ ನೀರು ಬಿಡಬೇಕು ಇಲ್ಲದಿದ್ದರೆ ಒತ್ತಡ ಹೇರುವದಾಗಿ ತಿಳಿಸಿದರು.
ಸಂಪುಟ ರಚನೆ ಮಾಡದೆ ಇರುವುದರಿಂದ ಇಂಡಿ ತಾಲೂಕಿನ ಭೀಮಾ ನದಿ ದಂಡೆಯ ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆ ಇದ್ದು ಅದಕ್ಕಾಗಿ ಕೇಂದ್ರ ಸಚಿವ ಕುಮಾರಸ್ವಾಮಿಯವರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಅವರ ಜೊತೆ ಚರ್ಚೆ ಮಾಡಲಿದ್ದಾರೆ.
ಕೆಎಸ್ ಎನ್ಡಿಎಂಸಿ ವರದಿ ಪ್ರಕಾರ ರಾಜ್ಯದ ೧೩೫ ತಾಲೂಕುಗಳು ಡೆಫಿಸಿಯಂಟ್ ವಲಯದಲ್ಲಿವೆ. ವಿಜಯಪುರ ಸೇರಿ ಎಲ್ಲಾ ಭಾದಿತ ತಾಲೂಕುಗಳಿಗೆ ಅಧಿಕೃತ ಬರ ಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹಿಸಿದರು.
ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳ ಎಲ್ಲಾ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ರೈತರ ಮೇಲೆ ಯಾವದೇ ಸಾಲದ ವಸೂಲಾತಿ ಒತ್ತಡ ಹೇರಬಾರದು ಎಂದರು.
ಕೋರ್ ಸಮಿತಿ ಅಧ್ಯಕ್ಷ ಜೆ.ಕೆ ಕೃಷ್ಣಾರೆಡ್ಡಿ ಮಾತನಾಡಿದರು.
ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಬಸವನ ಬಾಗೇವಾಡಿಯ ಅಪ್ಪುಗೌಡ ಪಾಟೀಲ, ಇಂಡಿ ಜೆಡಿಎಸ್ ಅಧ್ಯಕ್ಷ ಬಿ.ಡಿ.ಪಾಟೀಲ ಹಂಜಗಿ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಮಾಜಿ ಶಾಸಕ ದೇವಾನಂದ ಚವ್ಹಾಣ, ಅಯೂಬ ನಾಟಿಕಾರ, ಶ್ರೀಶೈಲಗೌಡ ಪಾಟೀಲ, ಸಿದ್ದು ಡಂಗಾ, ಡಾ|| ರಮೇಶ ರಾಠೋಡ ಮತ್ತಿತರಿದ್ದರು.
ರೈತರಿಂದ ಮನವಿ ಸ್ವೀಕರಿಸಿದ ನಿಖಿಲ್
ಪತ್ರಿಕಾಗೋಷ್ಠಿಗೂ ಮೊದಲು ಇಂಡಿ ವಿಧಾನಸಭಾ ಕ್ಷೇತ್ರದ ಅಗಸನಾಳ, ಹೊರ್ತಿ, ಝಳಕಿ ಹಾಗೂ ಅಂಜುಟಗಿ ಗ್ರಾಮಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ ರೈತರ ಅಳಲನ್ನು ನಿಖಿಲ್ ಕುಮಾರಸ್ವಾಮಿ ಅವರು ಆಲಿಸಿ ಮನವಿಗಳನ್ನು ಸ್ವೀಕರಿಸಿದರು.
ಪ್ರತಿ ತಾಲೂಕಿಗೆ ಕನಿಷ್ಠ ಐದು ಕೋಟಿ ರೂ ವಿಶೇಷ ಅನುದಾನ ಬಿಡುಗಡೆ ಮಾಡಿ
ಶಾಸಕ ಮತ್ತು ಶಾಸಕಾಂಗ ಪಕ್ಷದ ನಾಯಕ ಸುರೇಶ ಬಾಬು ಮಾತನಾಡಿ, ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ತೀರ್ವ ಬರಗಾಲದ ಪರಿಸ್ಥಿತಿಯಿದ್ದು ಅನ್ನದಾತನ ಬವಣೆ ದುಸ್ತರವಾಗಿದೆ. ವಾಡಿಕೆಗಿಂತ ಸುಮಾರು ೪೦ % ಕ್ಕಿಂತಲೂ ಕಡಿಮೆ ಮಳೆಯಾಗಿದೆ. ಏಕದಳ, ದ್ವಿದಳ, ಹಾಗೂ ಇತರೆ ಬೆಳೆಗಳಿಗೆ ತೀವ್ರ ಹಾನಿಯಾಗಿದ್ದು ರೈತರು ಸಂಕಷ್ಟದಲ್ಲಿದ್ದಾರೆ ಎಂದರು. ಅಂತರ್ಜಲ ಸಂಪೂರ್ಣ ಬತ್ತಿದೆ. ಟ್ಯಾಂಕರ್ ಮೂಲಕ ನೀರು ಮತ್ತು ತುರ್ತು ಬೋರವೆಲ್ಲ ಗಳಿಗಾಗಿ ಪ್ರತಿ ತಾಲೂಕಿಗೆ ಕನಿಷ್ಠ ಐದು ಕೋಟಿ ರೂ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದರು.

