ವಿಜಯಪುರ ಡಿಎಚ್ ಒ ಡಾ. ಸಂಪತ್ತಕುಮಾರ ಗುಣಾರಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಾಯಿ ಮರಣ ಪ್ರಮಾಣ ಮತ್ತು ತೊಂದರೆ ತಡೆಗಟ್ಟುವುದು ವಿಶ್ವ ಜನಸಂಖ್ಯೆ ದಿನಾಚರಣೆಯ ಉದ್ದೇಶವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಸಂಪತ್ತ ಗುಣಾರಿ, ಹೇಳಿದರು.
ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ನರ್ಸಿಂಗ್ ಕಾಲೇಜಿನ ಆವರಣದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಆರೋಗ್ಯಕರ ಸಮಯದಲ್ಲಿ ಗರ್ಭಧಾರಣೆ ಹಾಗೂ ಮಕ್ಕಳ ನಡುವೆ ಆರೋಗ್ಯಕರ ಅಂತರ ಕಾಪಾಡುವವರಿಂದ ತಾಯಿ ಮತ್ತು ಮಕ್ಕಳ ಆರೋಗ್ಯ ವೃದ್ಧಿಸುವದರೊಂದಿಗೆ ಅನಗತ್ಯ ಗರ್ಭಧಾರಣೆಯನ್ನು ತಡೆಗಟ್ಟಬಹುದಾಗಿದೆ ಎಂದ ಅವರು, ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯದ ಗುಣಮಟ್ಟ ಸುಧಾರಣೆ ಗರ್ಭಧಾರಣೆಗೆ ಆರೋಗ್ಯಕರ ಸಮಯ ಮತ್ತು ಗರ್ಭಧಾರಣೆಗಳ ನಡುವಿನ ಅಂತರವನ್ನು ಉತ್ತೇಜಿಸಬೇಕಿದೆ ಎಂದರು.
ಭಾರತ ಸ್ವಾತಂತ್ರ್ಯ ಪಡೆದುಕೊಂಡಾಗ ದೇಶದ ಜನಸಂಖ್ಯೆ ಕೇವಲ ೩೩ ಕೋಟಿ ಇತ್ತು. ಕಳೆದ ೭೯ ವರ್ಷಗಳಲ್ಲಿ ಜನಸಂಖ್ಯೆಯ ವಿಷಯದಲ್ಲಿ ಹಲವು ಮಹತ್ವದ ಬದಲಾವಣೆ ಮಾಡಲಾಗಿದೆ. ಪ್ರಸ್ತುತ ಭಾರತ ಜನಸಂಖ್ಯೆ ೧೪೪ ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿದೆ. ಆದ್ದರಿಂದ ವಿಶ್ವದಲ್ಲಿ ಅತ್ಯಧಿಕ ಜನಸಂಖ್ಯೆ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಿದೆ. ಆದರೆ ಇತ್ತಿಚಿನ ವರ್ಷಗಳಲ್ಲಿ ಭಾರತ ದೇಶದ ಜನನ ದರ ೧.೯೪ ಕ್ಕೆ ಕುಸಿದಿದೆ. ಇದು ಭವಿಷ್ಯದಲ್ಲಿ ಜನಸಂಖ್ಯೆಯ ಆಸಮತೋಲನಕ್ಕೆ ಕಾರಣವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಮಾತನಾಡಿ, ವೃದ್ಧರ ಸಂಖ್ಯೆ ಹೆಚ್ಚಳಗೊಂಡು ದುಡಿಯುವ ಕೈಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ಮುಖ್ಯವಾಗಿ ದೇಶಕ್ಕೆ ಆರ್ಥಿಕ ದೃಷ್ಟಿಯಿಂದ ಅಪಾಯವಾಗುತ್ತದೆ ಎಂದರು. ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ವರಿ ಗೋಲಗೇರಿ ಮತ್ತು ಅರವಳಿಕೆ ತಜ್ಞರಾದ ಡಾ. ಸಜ್ಜನ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಎಂ.ಬಿ.ಬಿರಾದಾರ, ತಾಲೂಕು ಆರೋಗ್ಯಾಧಿಕಾರಿ ಡಾ. ಕೆ.ಡಿ ಗುಂಡಬಾವಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೊಸಮನಿ, ಸುರೇಂದ್ರ ಮಾನಕರ, ಶಂಕರ ಚಲವಾದಿ, ರೇಖಾ ದಶವಂತ, ಮೋತಿಲಾಲ ಲಮಾಣಿ, ಎನ್.ಆರ್. ಬಾಗವಾನ, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸಹಾಯಕ ಮಲೇರಿಯಾ ಅಧಿಕಾರಿ ವಿರುಪಾಕ್ಷ ಬಂದಿ ನಿರೂಪಿಸಿ, ವಂದಿಸಿದರು.

