ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಇಂದಿರಾನಗರದ ಶಿರೋಳ ರಸ್ತೆಯಲ್ಲಿರುವ ಕೊಳಚೆ ಮಂಡಳಿಯವರು ನೀಡಿದ್ದರು ಎನ್ನಲಾದ ಜಾಗೆಯಲ್ಲಿನ ಶಡ್ಗಳನ್ನು ಪುರಸಭೆಯವರು ಶುಕ್ರವಾರ ತೆರವುಗೊಳಿಸಿದರು.
ಕಳೆದ ಕೆಲವು ದಿನಗಳ ಹಿಂದೆ ಇಲ್ಲಿರುವ ಶಡ್ಗಳನ್ನು ತೆರವುಗೊಳಿಸುವದಾಗಿ ಪುರಸಭೆಯವರು ತಿಳಿಸಿದ್ದರು. ಈ ಬಗ್ಗೆ ಕೆಲವರು ಕೊಳಚೆ ಮಂಡಳಿಯವರು ಮತ್ತು ಪುರಸಭೆಯವರು ಜಂಟಿಯಾಗಿ ಸರ್ವೇ ಮಾಡಿ ಈ ಜಾಗೆಯನ್ನು ನಮಗೆ ನೀಡಿದ್ದಾರೆ. ನಮಗೆ ಈ ಜಾಗೆಯಿಲ್ಲದೇ ವಾಸ್ತವಕ್ಕೆ ಬೇರೆ ಜಾಗೆಗಳಿಲ್ಲ. ದಯವಿಟ್ಟು ನಮ್ಮ ಮನೆಗಳನ್ನು ತೆವುಗೊಳಿಸಬೇಡಿ ಎಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರು. ಇದಾದ ಬಳಿಕ ಪುರಸಭೆ ಸಾಮಾನ್ಯ ಸಭೆಯಲ್ಲಿ ಕೊಳಚೆ ಮಂಡಳಿ ನೀಡಿದ ಜಾಗೆ ಬೇರೆ ಈ ಷಡ್ ನಿರ್ಮಿಸಿದ ಜಾಗೆ ಬೇರೆ. ಇಲ್ಲಿ ಜಾಗೆ ಕೊಡಿಸುವದಾಗಿ ಸುಳ್ಳು ಹೇಳಿ ಬಡವರ ಬಳಿ ಮತ್ತು ನಮ್ಮೂರಿನವರಲ್ಲದವರ ಬಳಿ ಕೆಲವರು ದುಡ್ಡು ಪಡೆದು ಮೋಸ ಮಾಡಿದ್ದಾರೆ ಎಂದು ಪುರಸಭೆ ಸದಸ್ಯ ಹಣಮಂತ ಭೋವಿ ಆರೋಪಿಸಿದ್ದರು. ಸಭೆಯಲ್ಲಿ ಈ ಬಗ್ಗೆ ಗಂಭೀರವಾಗಿ ಚರ್ಚೆಯಾಗಿ ಮತ್ತೊಮ್ಮೆ ಸರ್ವೇ ಮಾಡಿ ಅನಧಿಕೃತವಾಗಿದ್ದರೆ ಶಡ್ಗಳನ್ನು ತೆರವುಗೊಳಿಸಬೇಕೆಂದು ಶಾಸಕ ಸಿ.ಎಸ್.ನಾಡಗೌಡರು ಆದೇಶಿಸಿದ್ದರು. ಈ ಬಗ್ಗೆ ತಿಳಿದ ಕೊಳಚೆ ಮಂಡಳಿಯ ಹಕ್ಕುಪತ್ರ ಹೊಂದಿದ್ದ ಕೆಲ ಫಲಾನುಭವಿಗಳು ಕಲ್ಬುರ್ಗಿಯ ಉಚ್ಛನ್ಯಾಯಾಲಯದ ಮೊರೆ ಹೋಗಿದ್ದರು. ಈ ಎಲ್ಲ ಬೆಳವಣಿಗೆಗಳ ಬಳಿಕ ಇಂದು ಜೆಸಿಬಿಯಿಂದ ಎಲ್ಲ ಶಡ್ಗಳನ್ನು ತೆರವುಗೊಳಿಸಲಾಗಿದೆ.
ಈ ವೇಳೆ ಮಾಧ್ಯಮದವರೊಂದಿಗೆ ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ಮಾತನಾಡಿ ಹಲವು ವರ್ಷಗಳ ಹಿಂದೆ ಈ ಜಾಗೆಯನ್ನು ಮದರಿ ಎನ್ನುವವರಿಗೆ ಲೀಸ್ ನೀಡಲಾಗಿತ್ತು. ಅವರ ಅವಧಿಯ ಬಳಿಕ ತಮ್ಮ ಬೆಲೆ ಬಾಳುವ ಸಾಮಾನುಗಳನ್ನು ತೆಗೆದುಕೊಳ್ಳಲು ಕಾಲಾವಕಾಶ ಕೋರಿ ಕೋರ್ಟ ನ ಮೊರೆ ಹೋಗಿದ್ದರು. ಕಳೆದ ಕೆಲವು ದಿನಗಳ ಹಿಂದೆ ತಮ್ಮ ವಯಕ್ತಿಕ ಕಾರಣದಿಂದ ಅವರು ಜೈಲಿನಲ್ಲಿದ್ದು ಅವರ ಮಶಿನರಿ ಸಾಮಾನುಗಳನ್ನು ದೂರ ಸರಿಸಿ ಈ ಜಾಗೆಯಲ್ಲಿ ಶಡ್ ಹೊಡೆದುಕೊಂಡು ಇಪ್ಪತ್ತು ವರ್ಷದಿಂದ ನಾವು ಇದೇ ಶಡ್ ನಲ್ಲಿದ್ದೇವೆ ನಮ್ಮನ್ನು ತೆರವುಗೊಳಿಸಬೇಡಿ ಎಂದು ಮನವಿ ಸಲ್ಲಿಸಿದ್ದರು. ಈ ಬಗ್ಗೆ ನಾವು ೬ ಜನರ ಸದಸ್ಯರು ಮತ್ತು ನಾಮನಿರ್ದೇಶಿತ ಸದಸ್ಯರ ತಂಡ ರಚಿಸಿ ಜಾಗೆಯಲ್ಲಿ ಬಂದು ಪರಿಶೀಲಿಸಿ ನೋಡಲಾಗಿ ಯಾರೊಬ್ಬರೂ ಇಲ್ಲಿ ವಾಸವಿಲ್ಲದ್ದು ಕಂಡು ಬಂದಿದೆ. ಕೊಳಚೆ ಮಂಡಳಿ ನೀಡಿದ ಹಕ್ಕು ಪತ್ರದಲ್ಲಿನ ಫೊಟೋಗೂ ಜಾಗೆಗೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ನಾವೇ ಸ್ವತಃ ನಿಂತು ಈ ಶಡ್ಗಳನ್ನು ತೆರವುಗೊಳಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

