ವಿಜಯಪುರದ ಅರ್ಕಾಟ್ ದರ್ಗಾದಲ್ಲಿ ಉದ್ಯೋಗ ಮೇಳದ ಉದ್ಘಾಟನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಉದ್ಯೋಗ ಒದಗಿಸುವ ವೇದಿಕೆಯಾಗುವುದು ಒಂದು ಪುಣ್ಯದ ಕಾರ್ಯ ಎಂದು ಸಮಾಜ ಸೇವಕ ಅಬ್ದುಲ್ ರಜಾಕ್ ಹೊರ್ತಿ ಹೇಳಿದರು.
ವಿಜಯಪುರದ ಐತಿಹಾಸಿಕ ಹಜರತ್ ಸುಲ್ತಾನ ಸೈಯ್ಯದ್ ಷಹಾ ಅಬ್ದುಲ್ ರೆಹಮಾನ್ ಖಾದ್ರಿ ದರ್ಗಾದ ಆವರಣದಲ್ಲಿ ನಡೆದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಉದ್ಯೋಗ ಒದಗಿಸಿದರೆ ಉದ್ಯೋಗ ಪಡೆದ ಕುಟುಂಬವೇ ಉದ್ಧಾರವಾಗುತ್ತದೆ, ಹೀಗಾಗಿ ಉದ್ಯೋಗ ಒದಗಿಸುವ ಉದ್ದೇಶದಿಂದ ಈ ಉದ್ಯೋಗ ಮೇಳ ಆಯೋಜಿಸಿರುವುದು ಸಂತೋಷ ತಂದಿದೆ ಎಂದರು.
ಐತಿಹಾಸಿಕ ಅರ್ಕಾಟ್ ದರ್ಗಾ ಆಧ್ಯಾತ್ಮಿಕತೆ ಹಾಗೂ ಭಾವೈಕ್ಯತೆ ಸಂಗಮ. ದರ್ಗಾ ಉರುಸು ಅಂಗವಾಗಿ ಉದ್ಯೋಗ ಮೇಳ ಆಯೋಜಿಸಿರುವುದು ಅರ್ಥಪೂರ್ಣ ಎಂದರು.
ಸಂಯುಕ್ತ ಕರ್ನಾಟಕ ಮುಖ್ಯ ವರದಿಗಾರ ವಾಸುದೇವ ಹೆರಕಲ್ಲ ಮಾತನಾಡಿ, ಅರ್ಕಾಟ್ ದರ್ಗಾ ದವಾ ಹಾಗೂ ದುವಾ ಹೆಸರುವಾಸಿ. ಉದ್ಯೋಗದಾತರು ಉದ್ಯೋಗಿಯ ಸ್ವಭಾವ, ಹಾವಭಾವ ಎಲ್ಲವನ್ನೂ ವೀಕ್ಷಿಸುತ್ತಾರೆ, ಹೀಗಾಗಿ ಶ್ರೇಷ್ಠ
ವ್ಯಕ್ತಿತ್ವ, ಕೌಶಲ್ಯ ರೂಪಿಸಿಕೊಂಡು ಮುನ್ನಡೆಯಬೇಕು ಎಂದರು.
ಸನ್ಮಾನ ಸ್ವೀಕರಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾದ ವಿಜಯಪುರ ಜಿಲ್ಲಾ ಕಾನಿಪ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಮಾತನಾಡಿ, ಭಾವೈಕ್ಯತೆ ಕ್ಷೇತ್ರವಾಗಿರುವ ದರ್ಗಾದಲ್ಲಿ ಉದ್ಯೋಗ ಮೇಳ ಆಯೋಜಿಸಿರುವುದು ಸಂತೋಷ ತಂದಿದೆ, ಗಡಿಯಾರ ನೋಡಿ ಕೆಲಸ ಮಾಡುವ ಮನೋಭಾವದಿಂದ ದೂರವಿದ್ದು ಸಮರ್ಪಣಾ ಮನೋಭಾವದಿಂದ ದುಡಿಯುವ ಮೂಲಕ ಸೇವೆ ಸಲ್ಲಿಸುವ ಕಂಪನಿಯ ಮೆಚ್ಚುಗೆಗೆ ಪಾತ್ರವಾಗಬೇಕು ಎಂದರು.
ದರ್ಗಾದ ಡಾ.ಸೈಯ್ಯದ್ ತಖೀಪೀರಾ ಹುಸೈನಿ ಸಾನಿಧ್ಯ ವಹಿಸಿದ್ದರು.
ನಗರ ಯೋಜನಾ ಪ್ರಾಧಿಕಾರದ ಯೋಜನಾ ನಿರ್ದೇಶಕ ಬದ್ರುದ್ದೀನ್ ಸೌದಾಗರ, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಗುರುಪಾದಯ್ಯ ಹಿರೇಮಠ, ಪಾಲಿಕೆ ಸದಸ್ಯ ಅಲ್ತಾಫ್ ಇಟಗಿ, ಖ್ಯಾತ ವೈದ್ಯ ಡಾ.ರಿಹಾನ್ ಬಾಂಗಿ, ಬಂದೇನವಾಜ್ ಬೀಳಗಿ, ಉದ್ಯಮಿ ಅಮೀನ್ ಚೌಧರಿ, ಆಸೀಫ್ ಬಾಗವಾನ, ಸದ್ಭಾವನಾ ಟ್ರಸ್ಟ್ ಪ್ರಮುಖ ಶಫೀಕ್ ಮಣೂರ, ಅಬುಬಕರ್ ಬಿಜಾಪೂರ, ಅಲ್ಲಾಭಕ್ಷ ಬಾಗವಾನ, ಸುಹಾಸ ಕುಲಕರ್ಣಿ ಮೊದಲಾದವರು ಉಪಸ್ಥಿತರಿದ್ದರು.

