ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಉದ್ಘಾಟಿಸಿದ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಹೆಣ್ಣು ಮಕ್ಕಳನ್ನು ಕಾಪಾಡುವ ಹಾಗೂ ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ವಿಶೇಷ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಎಲ್ಲ ಕಾನೂನುಗಳ ಬಗ್ಗೆ ದೇಶದ ಪ್ರತಿಯೊಬ್ಬ ಹೆಣ್ಣು ಮಗು ತಿಳಿದುಕೊಂಡಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುವ ಶೋಷಣೆ ಅಂತ್ಯವಾಗಲಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಹಾಗೂ ಇತರೆ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಬಾಲ್ಯ ವಿವಾಹ ಪದ್ಧತಿ, ವರದಕ್ಷಿಣೆ ಪಿಡುಗು, ಸತಿ ಸಹಗಮನ ಪದ್ಧತಿಯಂತಹ ಅನೇಕ ಪಿಡುಗುಗಳು ಮಹಾಮಾರಿಯಾಗಿ ಸಮಾಜದ ವ್ಯವಸ್ಥೆಯನ್ನು ಹಾಳು ಮಾಡಿದ್ದವು. ಇದರಿಂದ ಹೊರಬರಲು ದೇಶದಲ್ಲಿ ಹಲವು ಮುಖ್ಯ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಕಾಯ್ದೆಗಳ ಬಗ್ಗೆ ತೀಳುವಳಿಕೆ ಇಲ್ಲದ ಕಡೆಗಳಲ್ಲಿ ಹಳೆಯ ಪಿಡುಗುಗಳು ಜಾರಿಯಲ್ಲಿವೆ. ಅವುಗಳಿಂದ ಹೊರಬರಬೇಕಾದರೆ ಪ್ರತಿಯೊಬ್ಬ ಹೆಣ್ಣುಮಗು ಕಾನೂನುಗಳನ್ನು ತಿಳಿದುಕೊಳ್ಳುವ ಅನಿವಾರ್ಯತೆ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡ ಕಾನೂನುಗಳನ್ನು ಜನತೆಗೆ ಮುಟ್ಟಿಸಲು ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿವೆ. ಅದರಲ್ಲಿ ಕಾನೂನು ಸೇವಾ ಪ್ರಾಧಿಕಾರದಿಂದ ಆಚರಿಸಲಾಗುವ ವಿವಿಧ ಕಾರ್ಯಕ್ರಮಗಳೂ ಕೂಡ ಒಳಗೊಂಡಿವೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಕಾನೂನುಗಳ ತಿಳುವಳಿಕೆ ಪಡೆದು ಇತರರಿಗೂ ತಿಳಿಸುವ ಪ್ರಯತ್ನ ಎಲ್ಲ ತಾಯಂದಿರಿಂದ ಆಗಬೇಕು ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಮಾತನಾಡಿ, ಹೆಣ್ಣು-ಗಂಡಿನ ಮಧ್ಯೆ ಸಮಾನತೆ ತರಬೇಕೆಂದು ಸಾಕಷ್ಟು ಕಾನೂನುಗಳನ್ನು ಜಾರಿಗೆ ತಂದರೂ ಇನ್ನೂ ಭ್ರೂಣ ಹತ್ಯೆಯಂತಹ ಪ್ರಕರಣಗಳು ನಿಂತಿಲ್ಲ. ಹೆಣ್ಣೇ ಹೆಣ್ಣಿಗೆ ಶತ್ರುವಾಗಿರುವದು ವಿಪರ್ಯಾಸ. ಎಲ್ಲ ತಾಯಂದಿರು ತಮ್ಮ ಮನೆಗೆ ಬರುವ ಸೊಸೆಯನ್ನ ಮಗಳಂತೆ, ಎಲ್ಲ ಸೊಸೆಯಂದಿರು ತಮ್ಮ ಅತ್ತೆಯಂದಿರನ್ನ ತಾಯಿಯರಂತೆ ಕಂಡಲ್ಲಿ ಅದೆಷ್ಟೋ ಬದಲಾವಣೆ ಕಾಣಬಹುದು. ಈ ಬದಲಾವಣೆಗೆ ಮುಖ್ಯವಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಯಾವುದೇ ಮಗುವನ್ನು ಶಿಕ್ಷಣದಿಂದ ವಂಚಿತರನ್ನಾಗಿಸಿದಲ್ಲಿ ದೇಶದ ಭವಿಷ್ಯಕ್ಕೆ ಬಹು ದೊಡ್ಡ ಹೊಡೆತ ಬೀಳುತ್ತದೆ. ದೇಶದ ಬೆಳವಣಿಗೆ ಕುಂಠಿತವಾದರೆ ಹೆಣ್ಣಿನ ಮೇಲೆ ದೌರ್ಜನ್ಯ ಹೆಚ್ಚಾಗುವದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ನ್ಯಾಯವಾದಿ ರಶ್ಮಿ ಕುಲಕರ್ಣಿ ವಿಶೇಷ ಉಪನ್ಯಾಸ ನೀಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಮೇಲ್ವಿಚಾರಕಿ ಶರಣಮ್ಮ ಸಿದರೆಡ್ಡಿ ಪ್ರಸ್ತಾವಿಕವಾಗಿ ಮಾತನಾಡಿದರು.
ಸಹಾಯಕ ಶಿಶು ಅಭಿವೃದ್ಧಿ ಅದಿಕಾರಿ ಶರಣಮ್ಮ ದೇಸಾಯಿ, ತಾಲೂಕು ಪಂಚಾಯತ್ ಮ್ಯಾನೇಜರ್ ಡಿ.ಬಿ.ಅಂಜುಟಗಿ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು ಭಾಗಿಯಾಗಿದ್ದರು.

