ಕರ್ನಾಟಕ ಸಹಕಾರ ಸಂಘಗಳ ನಿಬಂಧಕರಿಗೆ ಮನವಿ | ವೈಜ್ಞಾನಿಕವಾಗಿ ಸಿಬ್ಬಂದಿ ಬಲ ಪುನರ್ಘಟಿಸಲು ಒತ್ತಾಯ | ಬ್ಯಾಂಕಿನ ಆರ್ಥಿಕ ಪರಿಸ್ಥಿತಿ ಇಳಿಕೆಯ ಆತಂಕ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿಯು ಈಗ ತೆರವಾಗಿರುವ ೧೧೭ ಹುದ್ದೆಗಳಲ್ಲಿ ೪೮ ವಿವಿಧ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುತ್ತಿರುವ ಪ್ರಕ್ರಿಯೆಯನ್ನು ಕೂಡಲೇ ತಡೆಹಿಡಿಯಬೇಕೆಂದು ಆಗ್ರಹಿಸಿ ಬ್ಯಾಂಕಿನ ಸದಸ್ಯರ ಗುಂಪೊಂದು ಕರ್ನಾಟಕ ಸಹಕಾರ ಸಂಘಗಳ ನಿಬಂಧಕರಿಗೆ ಮನವಿ ಸಲ್ಲಿಸಿದ ಘಟನೆ ಕೊಂಚ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ವಾರದಂದು (೮/೧೦/೨೦೨೪) ಬೆಂಗಳೂರಿಗೆ ತೆರಳಿ ಅಗತ್ಯ ದಾಖಲೆಗಳೊಂದಿಗೆ ಮನವಿ ಸಲ್ಲಿಸಿದ “ಅ” ವರ್ಗದ ಕೆಲ ಸದಸ್ಯರು ಸಿದ್ದೇಶ್ವರ ಬ್ಯಾಂಕಿಗೆ ಈ ಹಿಂದೆ ಅವೈಜ್ಞಾನಿಕವಾಗಿ ಮಂಜೂರಾಗಿರುವ ೨೬೮ ಸಿಬ್ಬಂದಿ ಬಲವನ್ನು ರದ್ದುಪಡಿಸಿ ಬ್ಯಾಂಕಿನ ಈಗಿನ ಕಾರ್ಯಭಾರ ಮತ್ತು ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಸಹಕಾರಿ ಸಂಘಗಳ ಕಾಯ್ದೆ (೧೯೫೯ & ೧೯೬೦ ರ ಉಪನಿಯಮ ೧೭(೧) & ೧೭(೧)C ) ಪ್ರಕಾರ ವೈಜ್ಞಾನಿಕವಾಗಿ ಸಿಬ್ಬಂದಿ ಬಲವನ್ನು ಪುನರ್ಘಟಿಸಬೇಕೆಂದು ಒತ್ತಾಯಿಸಿದ್ದಾರೆ.
ಆಡಳಿತ ಮಂಡಳಿಯು ಬ್ಯಾಂಕಿನ/ಸಂಸ್ಥೆಯ ಹಿತಾಸಕ್ತಿಗೆ ವಿರುದ್ಧವಾಗಿ, ವಸ್ತುಸ್ಥಿತಿಯನ್ನು ಮರೆಮಾಚಿ, ಸಹಕಾರಿ ಸಂಘಗಳ ಮತ್ತು ಬ್ಯಾಂಕಿನ ಪೋಟ ನಿಯಮಗಳು ಹಾಗೂ ಬ್ಯಾಂಕಿನ ಸಿಬ್ಬಂದಿ ಸೇವಾ ನಿಯಮಗಳನ್ನು ಉಲ್ಲಂಘಿಸಿ ಬ್ಯಾಂಕಿನ ಸಿಬ್ಬಂದಿ ವೆಚ್ಚವನ್ನು ದುಡಿಯುವ ಬಂಡವಾಳದ ಶೇ.೨ ಕ್ಕಿಂತ ಕಡಿಮೆ ಮಾಡುವ ದುರಾಲೋಚನೆಯಿಂದ ನಿಬಂಧಕರಿಗೆ ಅನೇಕ ತಪ್ಪು ಮಾಹಿತಿಗಳನ್ನು ನೀಡಿದ್ದಾರೆ.
ತಮಗೆ ನ್ಯಾಯಯುತವಾಗಿ ಸಲ್ಲಬೇಕಿದ್ದ ಸೌಲಭ್ಯಗಳ ಬಗ್ಗೆ ಪ್ರಶ್ನಿಸುವ ಬ್ಯಾಂಕ್ ಸಿಬ್ಬಂದಿಯನ್ನು ಕ್ಷುಲ್ಲಕ ಕಾರಣಕ್ಕೆ ಅಮಾನತುಗೊಳಿಸುವ, ಸೇವೆಯಿಂದ ವಜಾಗೊಳಿಸುವ ಹೀನ ಕಾರ್ಯಕ್ಕೆ ಮುಂದಾಗುತ್ತಿರುವುದರಿಂದಾಗಿ ಸೇವಾ ಅಭದ್ರತೆಯ ಭಯದಿಂದ ಸಿಬ್ಬಂದಿ ಅನಿವಾರ್ಯವಾಗಿ ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.
ಎಂತಹ ವ್ಯಂಗ್ಯವೆಂದರೆ ೪೮ ಸಿಬ್ಬಂದಿ ನೇಮಕಾತಿಯ ಜಾಹಿರಾತಿನಲ್ಲಿ ನಿಯಮಾನುಸಾರ ತುಟ್ಟಿಭತ್ಯೆ ಹಾಗೂ ಇತರ ಭತ್ಯೆಗಳು ನೀಡಲಾಗುವುದೆಂದು ಎಂದು ಪ್ರಕಟಿಸಿದ ಇವರು ಬ್ಯಾಂಕಿನ ಹಾಲಿ ಸಿಬ್ಬಂದಿಗೆ ನಿಯಮಾನುಸಾರ ತುಟ್ಟಿಭತ್ಯೆ ನೀಡುತ್ತಿಲ್ಲ. ಕಳೆದ ೧೫ ವರ್ಷಗಳಲ್ಲಿ ಕೇವಲ ೪ ಆರ್ಥಿಕ ವರ್ಷಗಳಿಗೆ ಮಾತ್ರ ಲಾಭಾಂಶ ವಿತರಿಸಲಾಗಿದೆ ಎನ್ನುತ್ತಾರೆ.
ಬ್ಯಾಂಕಿನಲ್ಲಿ ಈಗ ದುಡಿಯುವ ಬಂಡವಾಳ ಕಡಿಮೆಯಾಗುತ್ತಿದ್ದು, ನಿವ್ವಳ ಅನುತ್ಪಾದಕ ಆಸ್ತಿ ಪ್ರಮಾಣ ಏರಿಕೆಯಾಗುತ್ತ, ಬ್ಯಾಂಕಿನ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಇಳಿಕೆಯಾಗುತ್ತ ಹೊರಟಿದೆ ಎಂದು ಈ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಈಗ ಬ್ಯಾಂಕು ಸಂಪೂರ್ಣ ಗಣಕೀಕರಣಗೊಂಡಿದ್ದರಿಂದ ೫ ಜನ ಸಿಬ್ಬಂದಿಯ ಕೆಲಸವನ್ನು ಒಬ್ಬರೇ ಮಾಡಬಹುದಾಗಿದೆ. ಅಲ್ಲದೆ ಬಲ್ಲ ಮೂಲಗಳ ಪ್ರಕಾರ ಬ್ಯಾಂಕಿನ ೧೨ ಶಾಖೆಗಳೂ ಸೇರಿದಂತೆ ಪ್ರತಿದಿನ ಜಮಾವಣೆ ಹಣದ ಚಲನ್ ಗಳ ಸಂಖ್ಯೆ ಕೇವಲ ೩೦೦ ರಿಂದ ೩೫೦, ಇನ್ನು ಹಣ ಪಾವತಿಯಾಗುತ್ತಿರುವ ಚಲನ್ ಗಳ ಸಂಖ್ಯೆ ಕೇವಲ ೩೧೦ ರಿಂದ ೩೨೫. ವಸ್ತುಸ್ಥಿತಿ ಹೀಗಿರುವಾಗ ಒಂದು ವೇಳೆ ಬ್ಯಾಂಕಿಗೆ ಹೊಸ ಸಿಬ್ಬಂದಿ ನೇಮಕಾತಿಯಾದಲ್ಲಿ ಅನಾವಶ್ಯಕ ಸಿಬ್ಬಂದಿ ವೆಚ್ಚದ ಹೆಚ್ಚಳದಿಂದ ಬ್ಯಾಂಕಿನ ಆರ್ಥಿಕ ಪರಿಸ್ಥಿತಿ ಅಧೋಗತಿಗಿಳಿದು, ಬ್ಯಾಂಕಿನಲ್ಲಿ ಸದಸ್ಯರು ಹಾಗೂ ಸಾರ್ವಜನಿಕರು ಇಟ್ಟಿರುವ ಠೇವಣಿ ಮೊತ್ತ ಹಿಂತಿರುಗಿಸಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿರುವ ಮನವಿದಾರರು, ಅದಕ್ಕಾಗಿ ಬ್ಯಾಂಕ್ ನೌಕರರ ಭವಿಷ್ಯಕ್ಕಾಗಿ, ಠೇವಣಿದಾರರ ಹಿತರಕ್ಷಣೆಗಾಗಿ ಆದಷ್ಟು ಬೇಗನೆ ಕ್ರಮ ಕೈಗೊಳ್ಳಬೇಕೆಂದು ಬಾಳಾಸಾಹೇಬ ಪಾಟೀಲ, ವಿಶ್ವಜೀತ್ ಪಾಟೀಲ, ಸದಾನಂದ ಶೀಳೀನ್, ಪರಶುರಾಮ ಹೊಸಪೇಟ, ಸಾಹೇಬಗೌಡ ಪಾಟೀಲ, ಬಾಪೂಗೌಡ ಬಿರಾದಾರ ಸೇರಿದಂತೆ ಅನೇಕರು ಮನವಿ ಪತ್ರದ ಮೂಲಕ ಆಗ್ರಹಿಸಿದ್ದಾರೆ.

ಒಟ್ಟು ೩೪೦೦೦ “ಅ” ವರ್ಗದ ಸದಸ್ಯರನ್ನು ಹೊಂದಿರುವ ವಿಜಯಪುರದ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ನಗರದಲ್ಲಿರುವ ೧೧ ಶಾಖೆಗಳು ಸೇರಿದಂತೆ ಒಟ್ಟು ೧೨ ಶಾಖೆಗಳನ್ನು ಹೊಂದಿದೆ. ದಿ.೩೧/೦೩/೨೦೨೪ ಅಂತ್ಯಕ್ಕೆ ರೂ.೫೩೧ ಕೋಟಿ ಠೇವಣಿಗಳನ್ನು ಹಾಗೂ ರೂ.೬೨೪.೫೯ ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ. ಬ್ಯಾಂಕು ಒಟ್ಟು ಅನುಮೋದಿತ ೨೬೮ ಸಿಬ್ಬಂದಿ ವೃಂದಬಲವನ್ನು ಹೊಂದಿದ್ದು ದಿ.೩೦/೦೬/೨೦೨೪ಕ್ಕೆ ೧೧೭ ಹುದ್ದೆಗಳು ತೆರವಾಗಿದ್ದು, ಪ್ರಸ್ತುತ ಒಟ್ಟು ೧೫೧ ಸಿಬ್ಬಂದಿ ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ

ನಿಬಂಧಕರಿಗೆ ನೀಡಿದ ತಪ್ಪು ಮಾಹಿತಿಗಳು
ತರಾತುರಿಯಾಗಿ ೪೮ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲೇಬೇಕೆಂದು ಹಟ ತೊಟ್ಟಿರುವ ಆಡಳಿತ ಮಂಡಳಿಯ ನಿರ್ದೇಶನದಂತೆ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರು ನಿಬಂಧಕರಿಗೆ ಹಲವು ತಪ್ಪು ಮಾಹಿತಿಗಳನ್ನು ಕೊಟ್ಟಿದ್ದಾರೆ. ಅದರಲ್ಲಿ ಕೆಲವನ್ನು ಇಲ್ಲಿ ಉಲ್ಲೇಖಿಸಲಾಗಿದೆ.
- ಭರ್ತಿ ಮಾಡಿಕೊಳ್ಳುವ ೪೮ ಸಿಬ್ಬಂದಿ ವಾರ್ಷಿಕ ವೆಚ್ಚ ರೂ.೧.೭೩ ಕೋಟಿ ಎಂದು ನಿಬಂಧಕರಿಗೆ ತಿಳಿಸಿದ್ದು, ಇನ್ನೊಂದೆಡೆ ರೂ.೩.೧೮ ಕೋಟಿ ವೆಚ್ಚದ ಲೆಕ್ಕ ಕೊಟ್ಟಿದ್ದಾರೆ.
- ನಿಯಮ ಪ್ರಕಾರ ೨೦೨೨/೨೩ ನೇ ಆರ್ಥಿಕ ವರ್ಷಕ್ಕೆ ಬದಲು ೨೦೨೩/೨೪ ನೇ ಆರ್ಥಿಕ ವರ್ಷದ ಅಂದಾಜು ಆಯವ್ಯಯಕ್ಕೆ ಮಂಜೂರು ತೋರಿಸಿದ್ದಾರೆ.
- ೨೦೨೩/೨೪ನೇ ಆರ್ಥಿಕ ವರ್ಷಕ್ಕೆ ಬ್ಯಾಂಕು ರೂ.೪.೧೩ ಕೋಟಿ ನಿವ್ವಳ ಲಾಭ ಹಾಗೂ ಸಿಬ್ಬಂದಿ ವೆಚ್ಚ ರೂ.೯.೬೫ ಕೋಟಿ ಎಂದು ತಿಳಿಸಿದ್ದಾರೆ. ವಾಸ್ತವದಲ್ಲಿ ನಿವ್ವಳ ಲಾಭ ರೂ.೨.೯೯ ಕೋಟಿ, ಸಿಬ್ಬಂದಿ ವೆಚ್ಚ ೧೦.೫೩ ಕೋಟಿ ಇದೆ.
- ಹೊಸ ಸಿಬ್ಬಂದಿ ನೇಮಕಾತಿ ಪೂರ್ವದಲ್ಲಿ ಹಾಲಿ ಸಿಬ್ಬಂದಿಗೆ ಪದೋನ್ನತಿ ನೀಡದೇ ನಿಯಮ ಉಲ್ಲಂಘಿಸಲಾಗಿದೆ.
- ಬ್ಯಾಂಕಿನ ಸಿಬ್ಬಂದಿ ವೇತನ ಶ್ರೇಣಿ ಪ್ರತಿ ೫ ವರ್ಷಕ್ಕೊಮ್ಮೆ ಪರಿಷ್ಕರಿಸದೆ, ತುಟ್ಟಿಭತ್ತೆಗಳನ್ನು ಮಂಜೂರಿಸದೆ ನಿಯಮ ಉಲ್ಲಂಘಿಸಲಾಗಿದೆ.
- ಅರ್ಹ ಸಿಬ್ಬಂದಿಗೆ ಆದ್ಯತೆಯ ಮೇಲೆ ಮುಂಬಡ್ತಿ ನೀಡದೇ ನಿಯಮ ಉಲ್ಲಂಘಿಸಲಾಗಿದೆ.
ಕೋಟ್
ಈ ಹಿಂದೆಯೂ ನೇಮಕಾತಿ ಪ್ರಕ್ರಿಯೆ ತಡೆಗಾಗಿ ೨೦೨೧ ರಿಂದಲೇ ನಿಬಂಧಕರಿಗೆ ಹಲವು ಬಾರಿ ಲಿಖಿತ ದೂರುಗಳನ್ನು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಮನವಿಗೂ ಸಹಕಾರ ಇಲಾಖೆ ಸರಕಾರದ ಪ್ರದಾನ ಕಾರ್ಯದರ್ಶಿ, ನಿಬಂಧಕರು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಪಂದಿಸದಿದ್ದಲ್ಲಿ ಸಿದ್ದೇಶ್ವರ ಬ್ಯಾಂಕಿನ ಸದಸ್ಯರ, ನೌಕರರ ಮತ್ತು ಠೇವಣಿದಾರರ ಹಿತರಕ್ಷಣೆಗೆ ನಾವೆಲ್ಲ ನೊಂದ ಸದಸ್ಯರು “ಸಿದ್ದೇಶ್ವರ ಬ್ಯಾಂಕ್ ಬಚಾವೋ” ಆಂದೋಲನ ರೂಪಿಸುವುದು ಅನಿವಾರ್ಯವಾಗುತ್ತದೆ.
– ಬಾಳಾಸಾಹೇಬ ಬ. ಪಾಟೀಲ
“ಅ” ವರ್ಗದ ಸದಸ್ಯರು, ಶ್ರೀ ಸಿದ್ದೇಶ್ವರ ಬ್ಯಾಂಕ್, ವಿಜಯಪುರ

