ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಬೆಂಗಳೂರು ಹಾಗೂ ಗ್ರಾಪಂ ಬರಟಗಿ ಸಹಕಾರದೊಂದಿಗೆ “೧೦ ದಿನಗಳ ಬಂಜಾರ ಆಭರಣ ತಯಾರಿಕಾ ಕಾರ್ಯಾಗಾರ” (ಅ.೧೮ರಿಂದ ೨೭ವರೆಗೆ)ದ ಉದ್ಘಾಟನಾ ಸಮಾರಂಭವನ್ನು ಬರಟಗಿ ಗ್ರಾಪಂ ಅಧ್ಯಕ್ಷೆ ಕವಿತಾ ರಜಪೂತ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಎಲ್ಲ ಬಂಜಾರ ಶಿಬಿರಾರ್ಥಿಗಳು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡು ಜೀವನ ಉನ್ನತ ಮಟ್ಟಕ್ಕೆ ತಗೆದುಕೊಂಡು ಹೋಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಮನಗೌಡ ಎನ್ ಬಿರಾದಾರ ಅವರು, ಬಂಜಾರರಿಗೆ ಇಂತಹ ತರಬೇತಿ ನೀಡುತ್ತಿರುವುದು ಇದೇ ಮೊದಲು. ಈ ಹಿಂದೆ ಯಾರು ಕೂಡ ಆಲೋಚನೆ ಮಾಡಿರಲಿಲ್ಲ. ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯು ಅದ್ಬುತವಾದ ಕಾರ್ಯವನ್ನು ಮಾಡುತ್ತಿದೆ. ತಾಂಡಾದಲ್ಲಿಯೇ ಇಂತಹ ಕಾರ್ಯಾಗಾರವನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಕಲ್ಯಾಣಶಿಂಗ್ ಎಸ್ ಹಜೇರಿ ಆಭರಣಗಳ ಹೊಸ ವಿನ್ಯಾಸ ಕುರಿತು ಮಾತನಾಡಿದರು.
ಖ್ಯಾತ ಬಂಜಾರ ಗಾಯಕ ಆರ್ ಬಿ ನಾಯಕ್ ಮಾತನಾಡಿ, ಇಂದಿನ ಯುವ ಪೀಳಿಗೆಯು ಆಭರಣ ತಯಾರಿಕೆಯನ್ನು ಕಲಿತುಕೊಳ್ಳುವುದರ ಜೊತೆಗೆ ಹೊಸ ಹೊಸ ವಿನ್ಯಾಸದ ಆಭರಣಗಳನ್ನು ಹೇಗೆ ತಯಾರಿಸಬೇಕು ಎಂಬುದನ್ನು ಕಲಿತು ಮಾರುಕಟ್ಟೆಗೆ ತರಬೇಕೆಂದರು.
ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಸದಸ್ಯೆ ಡಾ.ಸುರೇಖಾ ಜಿ ರಾಠೋಡ ಕಾರ್ಯಾಗಾರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಸಾಗತಿಸಿದರು.
ಗೊವಿಂದ ಸಿಂದೆಯವರು ವಂದರ್ಣಾಪಣೆ ಮಾಡಿದರು. ಮಂಜುಳಾ ಚವ್ಹಾಣ ನಿರೂಪಿಸಿದರು.
ಸದಾಶಿವ ಪೂಜಾರಿ, ಧನರಾಜ ಪತ್ತಾರ, ದತ್ತಾ ಕಾಟಕರ್, ಸದು ಶಿವಾಜಿ, ಸುಭಾಸ ರಜಪೂತ, ಗುಲಾಬಸಿಂಗ್ ಪತ್ತಾರ, ಧರ್ಮಸಿಂಗ್ ಪತ್ತಾರ, ಸುರೇಶ್ ಮೊಹನ್ಶಿಂಗ್ ಪತ್ತಾರ್, ಹಣಮಶಿಂಗ್ ಪತ್ತಾರ, ಬಾಬು ಪತ್ತಾರ, ಗೀತಾ ಪತ್ತಾರ ಮತ್ತಿತರರು ಭಾಗವಹಿಸಿದ್ದರು.

