ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಗಾಣಿಗ ಸಮಾಜ ಬಾಂಧವರು ಎಂದಿಗೂ ಯಾರಿಗೂ ಕೆಡಕು ಬಯಸುವವರಲ್ಲ. ಗಾಣಿಗ ಸಮುದಾಯದವರು ಹೃದಯ ವಿಶಾಲತೆಯನ್ನು ಹೊಂದಿದ್ದಾರೆ. ನಮ್ಮ ಸಮಾಜ ಬಾಂಧವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಅಭಿವೃದ್ಧಿ ಹೊಂದಲು ಸಂಘಟಿತರಾಗುವದು ಅಗತ್ಯವಿದೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.
ಪಟ್ಟಣದ ಗಣೇಶ ನಗರದಲ್ಲಿರುವ ಯಲ್ಲಾಲಿಂಗೇಶ್ವರ ಮಠದ ಕಲ್ಯಾಣ ಮಂಟಪದಲ್ಲಿ ತಾಲೂಕು ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ, ಗಾಣಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ನಗರ ಘಟಕ ಹಾಗೂ ಸಮಾಜದ ಮಹಿಳಾ ಘಟಕದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆಗೈದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತಿಹಾಸ ಓದಿದವರು ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ. ಸಮಾಜದ ಪ್ರತಿಯೊಬ್ಬರೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಪ್ರತಿ ಆರು ತಿಂಗಳಿಗೊಮ್ಮೆ ಸಮಾಜದ ಸಭೆಗಳು ನಿರಂತರವಾಗಿ ನಡೆಯುವಂತಾಗಬೇಕು. ಸಮಾಜ ಬಾಂಧವರು ಒಂದಾಗಿ ಸಮಾಜದ ಅಭಿವೃದ್ಧಿಗ ಶ್ರಮಿಸಲು ಮುಂದಾಗಬೇಕು. ಸಂಕ್ರಮಣದ ನಂತರ ಎಲ್ಲರೂ ಒಂದಾಗಿ ಬೃಹತ್ ಪ್ರಮಾಣದಲ್ಲಿ ಸಮಾಜದ ಸಮಾವೇಶವನ್ನು ಹಮ್ಮಿಕೊಳ್ಳೋಣವೆಂದರು.
ನನ್ನ ಅಧಿಕಾರವಧಿಯಲ್ಲಿ ಯಾವುದೇ ಸರ್ಕಾರಿ ನೌಕರರನ್ನು ಬಲಿಪಶು ಮಾಡಿಲ್ಲ. ನಾನು ಒಂದು ಗುಂಟೆಯಷ್ಟು ಜಾಗೆಯನ್ನು ನನ್ನ ಹೆಸರಿನಲ್ಲಿಯಾಗಲಿ, ಸಂಬಂಧಿಕರ ಹೆಸರಿನಲ್ಲಿಯಾಗಲಿ ಕೂಡಗಿ, ಮುಳವಾಡ ಸುತ್ತಮುತ್ತ ಮಾಡಿಕೊಂಡಿಲ್ಲ ಎಂದ ಅವರು ಈಗಿರುವ ಶಾಸಕ ಶಿವಾನಂದ ಪಾಟೀಲರು ಸರ್ಕಾರಿ ನೌಕರರನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುವ ಮೂಲಕ ಅವರನ್ನು ಬಲಿಪಶು ಮಾಡುತ್ತಿದ್ದಾರೆ. ಬೇರೆ ಸಮಾಜದ ನೌಕರರ ಮೇಲೆ ವರ್ಗಾವಣೆ ಅಸ್ತ್ರವನ್ನು ಬಳಸುತ್ತಿದ್ದಾರೆ. ರಾಜಕಾರಣದಲ್ಲಿ ಸೋಲು-ಗೆಲುವು ಸಾಮಾನ್ಯ. ಅಧಿಕಾರದಲ್ಲಿದ್ದಾಗ ಎಲ್ಲ ಸಮಾಜದವರನ್ನು ಸಮಾನವಾಗಿ ಕಾಣುವ ಗುಣ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಶಿವಾನಂದ ಪಾಟೀಲರಿಗೆ ವೇದಿಕೆಯ ಮೂಲಕ ಹೇಳಿದರು.
ಸಾನಿಧ್ಯ ವಹಿಸಿದ್ದ ಕೊಲ್ಹಾರದ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು ಮಾತನಾಡಿ, ಗಾಣಿಗ ಸಮಾಜ ದೇಶಕ್ಕೆ ಮೋದಿಯಂತಹ ಶ್ರೇಷ್ಠ ರಾಜಕಾರಣಿಯನ್ನು ನೀಡುವ ಮೂಲಕ ಸಮಾಜ ದೇಶಕ್ಕೆ ದೊಡ್ಡ ಕೊಡುಗೆ ನೀಡಿದೆ. ಪ್ರತಿಯೊಬ್ಬ ಗಾಣಿಗ ಸಮಾಜ ಬಾಂಧವರು ನಾವು ಗಾಣಿಗ ಸಮಾಜದವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದರೂ ಪ್ರಚಾರ ಪಡೆದುಕೊಳ್ಳಲಿಲ್ಲ. ಅವರು ಎಲ್ಲ ಸಮಾಜದ ಬಾಂಧವರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಇಂತಹ ವ್ಯಕ್ತಿಗೆ ಸಮಾಜ ಬಾಂಧವರು ಬೆಂಬಲವಾಗಿ ನಿಂತು ಮುಂದೆ ಇವರಿಗೆ ಅಧಿಕಾರ ಸಿಗುವಂತೆ ಶ್ರಮಿಸಬೇಕೆಂದರು.
ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಸಿದ್ದಲಿಂಗ ಚೌಧರಿ ಮಾತನಾಡಿದರು.
ಅರಕೇರಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಕಲ್ಲಪ್ಪ ಗಾಣಿಗೇರ ಉಪನ್ಯಾಸ ನೀಡಿದರು.
ಅಧ್ಯಕ್ಷತೆಯನ್ನು ತಾಲೂಕು ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ನಗರ ಘಟಕದ ಅಧ್ಯಕ್ಷ ಸಿದ್ದನಗೌಡ ಪಾಟೀಲ ವಹಿಸಿದ್ದರು. ವೇದಿಕೆಯಲ್ಲಿ ಸಮಾಜದ ವಿವಿಧ ಸಂಘದ ಪದಾಧಿಕಾರಿಗಳಾದ ಎಸ್.ಎಂ.ಸಜ್ಜನ, ಕಲ್ಲು ಸೊನ್ನದ, ಚಂದ್ರಕಾಂತ ಡೋಣಗಿ, ಅರವಿಂದ ಸಜ್ಜನ, ಪರಶುರಾಮ ತುಪ್ಪದ, ಪುಷ್ಪಾ ತುಪ್ಪದ, ಶ್ರೀಶೈಲ ಪರಮಗೊಂಡ, ಎಸ್.ಎಂ.ಹಂಗರಗಿ, ಸುರೇಶ ಗೋಲಗೊಂಡ, ಎಸ್.ಎಂ.ಬಿಸ್ಟಗೊಂಡ, ಚಂದ್ರಪ್ಪ ಮುರನಾಳ ಇತರರು ಇದ್ದರು. ತಾಲೂಕು ಗಾಣಿಗ ಸಮಾಜದ ಅಧ್ಯಕ್ಷ ಕಲ್ಲು ಸೊನ್ನದ ಪ್ರಾಸ್ತವಿಕವಾಗಿ ಮಾತನಾಡಿದರು. ಬಿ.ಎಸ್.ಚನ್ನಗೊಂಡ ಸ್ವಾಗತಿಸಿದರು. ವಿನೋದ ಸಜ್ಜನ ನಿರೂಪಿಸಿದರು. ಬಸವರಾಜ ಕೋಣಿನ ವಂದಿಸಿದರು.

