ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಕೇಂದ್ರ ಮತ್ತು ರಾಜ್ಯ ಸರ್ಕಾರ ರಾಜ್ಯದ ವಿವಿಧ ನೋಂದಾಯಿತ ಕಂಪನಿಗಳಲ್ಲಿ ತಯಾರಿಸಿದ ಸ್ಪ್ರಿಂಕ್ಲರ್ ಪೈಪುಗಳನ್ನು ರೈತ ಬಾಂಧವರಿಗೆ ರಿಯಾಯತಿ ದರದಲ್ಲಿ ವಿತರಿಸಿದ ಈ ಸ್ಪ್ರಿಂಕ್ಲರ್ ಪೈಪುಗಳು ಕಳಪೆ ಗುಣಮಟ್ಟದಾಗಿವೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸರ್ಕಾರದ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಸ್ ಅವರಿಗೆ ಈಚೆಗೆ ಅಖಂಡ ಕರ್ನಾಟಕ ರೈತ ಸಂಘದಿಂದ ಮುಖಂಡ ಅರವಿಂದ ಕುಲಕರ್ಣಿ ಅವರು ಬೆಂಗಳೂರಿನಲ್ಲಿ ಮುಖ್ಯಕಾರ್ಯದರ್ಶಿ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡ ಮೇರೆಗೆ ಬುಧವಾರ ಕೃಷಿ ಇಲಾಖೆಯ ಅಧಿಕಾರಿಗಳು ಹುಲಬೆಂಚಿ, ನಾಗರಾಳಹುಲಿ, ಶರಣಸೋಮನಾಳ ಗ್ರಾಮಗಳಿಗೆ ಭೇಟಿ ನೀಡಿ ರೈತರಿಗೆ ವಿತರಿಸಿದ ಸ್ಪ್ರಿಂಕ್ಲರ್ ಪೈಪುಗಳನ್ನು ಗುಣಮಟ್ಟ ಪರೀಕ್ಷೆಗೆ ಸಂಗ್ರಹಿಸಿದರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ರೈತ ಸಂಘದ ಮನವಿಗೆ ಸ್ಪಂದಿಸಿ ಕೃಷಿ ಇಲಾಖೆಯ ಆಯುಕ್ತರಿಗೆ ರೈತರಿಗೆ ವಿತರಿಸಿದ ಸ್ಪ್ರಿಂಕ್ಲರ್ ಪೈಪುಗಳ ಬಗ್ಗೆ ಹದಿನೈದು ದಿನಗಳಲ್ಲಿ ಮಾಹಿತಿ ಸಂಗ್ರಹಿಸಿ ಕಳಪೆ ಸ್ಪ್ರಿಂಕ್ಲರ್ ಪೈಪುಗಳನ್ನು ವಿತರಿಸಿದ ಕಂಪನಿಗಳ ಮೇಲೆ ಕ್ರಮ ಕೈಗೊಳ್ಳಲು ಹಾಗೂ ಪೈಪುಗಳ ಗುಣಮಟ್ಟ ಪರೀಕ್ಷಿಸಲು ಕ್ರಮ ವಹಿಸಬೇಕೆಂದು ಆದೇಶ ನೀಡಿದ ಮೇರೆಗೆ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಅಜಯಕುಮಾರ ಅಜೂರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ರೂಪಾ, ಬಸವನಬಾಗೇವಾಡಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎಚ್.ಯರಝರಿ, ಮುದ್ದೇಬಿಹಾಳ ತಾಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ ಚವ್ಹಾಣ ಅವರು ಹುಲಬೆಂಚಿ, ನಾಗರಾಳಹುಲಿ, ಶರಣಸೋಮನಾಳ ಗ್ರಾಮಗಳಿಗೆ ಭೇಟಿ ನೀಡಿ ರೈತ ಜಮೀನುಗಳಲ್ಲಿರುವ ವಿವಿಧ ಕಂಪನಿಗಳ ಸ್ಪ್ರಿಂಕ್ಲರ್ ಪೈಪುಗಳ ಮಾದರಿಯನ್ನು ಸಿಪೆಟ್ ಸಂಸ್ಥೆಗೆ ಕಳುಹಿಸಲು ಸಂಗ್ರಹಿಸಿದರು.
ಈ ಸಂದರ್ಭದಲ್ಲಿದ್ದ ರೈತ ಮುಖಂಡ ಅರವಿಂದ ಕುಲಕರ್ಣಿ ಅವರು ಸ್ಪ್ರಿಂಕ್ಲರ್ ಪೈಪುಗಳ ಮಾದರಿಗಳನ್ನು ಸಿಪೆಟ್ ಸಂಸ್ಥೆಯ ಲ್ಯಾಬ್ನಲ್ಲಿ ಗುಣಮಟ್ಟ ಪರೀಕ್ಷಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ರೈತ ಮುಖಂಡರ ಸಮ್ಮುಖದಲ್ಲಿ ಲ್ಯಾಬ್ ಟೆಸ್ಟ್ ನಡೆಸಬೇಕೆಂದು ಅಧಿಕಾರಿಗಳ ಗಮನಕ್ಕೆ ತಂದ ಅವರು, ರಾಜ್ಯದಲ್ಲಿ ೬೭ ನೋಂದಾಯಿತ ಕಂಪನಿಗಳಿದ್ದು. ಬಹುತೇಕ ಕಂಪನಿಗಳು ಕಳಪೆ ಮಟ್ಟದಲ್ಲಿ ಸ್ಪ್ರಿಂಕ್ಲರ್ ಪೈಪುಗಳನ್ನು ತಯಾರು ಮಾಡಿ ಕೃಷಿ ಇಲಾಖೆಯ ಮುಖಾಂತರ ರೈತರಿಗೆ ವಿತರಿಸಿ ಸರ್ಕಾರದ ಮಾನದಂಡಗಳನ್ನು ಉಲ್ಲಂಘಿಸಿದ್ದಾರೆ. ಸಿಪೆಟ್ ಸಂಸ್ಥೆಗೆ ಗುಣಮಟ್ಟ ಪರೀಕ್ಷಿಸಲು ಕಳಿಸುವ ಮುಂಚೆ ರೈತರ ಜಮೀನಿನಲ್ಲಿ ಪೈಪ್ ಅಳವಡಿಸಿದ ಜಿಪಿಎಸ್ ಮಾಡಿದ ಭಾವಚಿತ್ರ,ವಿಡಿಯೋ ಸಾಕ್ಷಿ ಕಲೆ ಹಾಕಬೇಕು. ನಂತರ ಸಿಪೆಟ್ ಸಂಸ್ಥೆಗೆ ಗುಣಮಟ್ಟ ಪರೀಕ್ಷಿಸಲು ರವಾನಿಸಬೇಕೆಂದು ಹೇಳಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ರೂಪಾ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅಜಯಕುಮಾರ ಅಜೂರ ಅವರು, ಇಂದು ಸಂಗ್ರಹಿಸಿದ ಪೈಪುಗಳ ಮಾದರಿಯನ್ನು ಪರೀಕ್ಷಿಸಲು ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ನ್ಯಾಯಯುತವಾಗಿ ಕ್ರಮ ತೆಗೆದುಕೊಳ್ಳಲಾಗುವದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿಠ್ಠಲ ಬಿರಾದಾರ, ಲಾಲಸಾಬ ಹಳ್ಳೂರ, ಸಂತೋಷ ಬಿರಾದಾರ,ರಾಜು ವಂದಾಲ, ಪುಲಿಗೆಪ್ಪ ಸಾಸನೂರ, ಪುಲಿಗೆಪ್ಪ ಬಂಡಿವಡ್ಡರ ಇತರರು ಇದ್ದರು.

