ಕಲಕೇರಿಯ ಶ್ರೀ ಬಸವೇಶ್ವರ ಪ್ರೌಡಶಾಲೆಯಲ್ಲಿ ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಗ್ರಾಮದ ಶ್ರೀ ಬಸವೇಶ್ವರ ಪ್ರೌಢಶಾಲೆಯಲ್ಲಿ ೨೦೧೪-೧೫ನೇ ಸಾಲಿನ ಎಸ್ಎಸ್ಎಲ್ಸಿ ವಿಧ್ಯಾರ್ಥಿ ಗೆಳೆಯರ ಬಳಗದಿಂದ ಸ್ನೇಹ ಸಮ್ಮಿಲನ ಮತ್ತು ಗುರು ವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೌಢಶಾಲೆಯ ಮುಖ್ಯಗುರು ಜೆ.ಬಿ.ಗುಮಶೆಟ್ಟಿ ಅವರು, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ವೈಚಾರಿಕತೆಯನ್ನು ಬೆಳೆಸಿಕೊಳ್ಳಬೇಕು ಹಾಗೂ ಗುರು ಹಿರಿಯರಿಗೆ ವಿಧೇಯರಾಗಿ ಜಗತ್ತಿಗೆ ಸಂಸ್ಕಾರ ಕಲಿಸಿಕೊಟ್ಟ ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿ ಬೆಳೆದು ನಿಲ್ಲುವ ಸ್ವಾವಲಂಬಿ ಪ್ರಜೆಗಳಾಗಿ ಬೆಳೆಯಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳೆಲ್ಲ ಒಟ್ಟಾಗಿ ಸೇರಿ ಗುರುಗಳಿಗೆ ವಂದಿಸುವ ಗೌರವಿಸುವ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಪ್ರಾಥನಾಗೀತೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವು ಶಿಕ್ಷಕರಾದ ಎಸ್.ಆರ್.ಹರಿಜನ ಮತ್ತು ರಾಕೇಶ ಅವರ ಸುಂದರ ಹಾಡುಗಳಿಂದ ಎಲ್ಲರನ್ನು ಮನರಂಜಿಸಿದರು.
ಶಿಕ್ಷಕರಾದ ಎಸ್.ಪಿ.ರಾಣಗಟ್ಟಿ ಅವರು ಶಿಕ್ಷಕ ಎಂಬ ಪದದ ಅರ್ಥವನ್ನು ತಿಳಿಸಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮದ್ಯ ಇರುವ ಸಂಬಂಧವನ್ನು ಉದಾಹರಣೆ ಸಹಿತ ವಿವರಿಸಿ ವಿಶೇಷ ಉಪನ್ಯಾಸ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ವಿಧ್ಯಾರ್ಥಿಗಳಾದ ಬಸವರಾಜ ಶ್ರೀಗಿರಿ, ಬಸವರಾಜ ಗುಮಶೆಟ್ಟಿ (ಬೆಂಕಿ ಬಸು), ರೂಪಾ ಗದ್ದಗಿಮಠ, ಭಾಗ್ಯಶ್ರೀ ಅಡಕಿ, ನೀಲಮ್ಮ ಭೈರಿ, ರೇಖಾ ಬಡಿಗೇರ, ಕಯ್ಯುಮ ಪೀರಾಪೂರ, ಪರಶುರಾಮ ತಳ್ಳೊಳ್ಳಿ, ವಿಶ್ವ ಮೋಪಗಾರ, ಸಚಿನ ಸಜ್ಜನ, ಬೀಮಾಶಂಕರ ಹೂಗಾರ, ಸಮೀರ ಬಿಸನಾಳ, ವಿರೇಶ ಚಿಕ್ಕಮಠ ಅವರು ತಮ್ಮ ಅನಿಸಿಕೆಗಳನ್ನು ಹೇಳುವ ಮೂಲಕ ಗುರುವೃಂದ ತಮ್ಮ ಮೇಲೆ ಬೀರಿರುವ ಪ್ರಭಾವ ಪ್ರೇರಣೆಗಳನ್ನು ಮೆಲುಕು ಹಾಕುತ್ತಾ ತಮ್ಮ ವಿದ್ಯಾರ್ಥಿ ಜೀವನವನ್ನು ನೆನಪು ಮಾಡಿಕೊಟ್ಟರು.
ಎನ್.ಕೆ.ಗುಂಡಕನಾಳ ಗುರುಗಳು ಅನುಭವದ ಬುತ್ತಿಯನ್ನು ವಿದ್ಯಾರ್ಥಿಗಳ ಜೊತೆಗೆ ಹಂಚಿಕೊಳ್ಳುತ್ತಾ ಗುರುಗಳು ನಿಮ್ಮಿಂದ ಹಣ, ಆಸ್ತಿ, ಅಂತಸ್ತು, ಯಾವುದನ್ನೂ ಬಯಸುವದಿಲ್ಲಾ ಬದಲಾಗಿ ನಿಮ್ಮ ಏಳಿಗೆ ಮತ್ತು ಪ್ರೀತಿ, ವಿಶ್ವಾಸವನ್ನು ಮಾತ್ರ ಬಯಸುತ್ತಾರೆ ಎಂದು ಹೇಳಿದರು.
ನಂತರ ಶಿಕ್ಷಕರಾದ ವಿ.ಎಮ್.ಸಿಂದಗಿ, ಎಸ್.ಎಸ್.ಬಿರಾದಾರ, ಕೆ.ಎಸ್.ದೇಸಾಯಿ, ರಾಜು ಕಡಕೋಳ, ಬಸವರಾಜ ಹಡಪದ ಅವರು ಹಳೆದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಸಂಗೀತಾ ವಾಲಿ ಮತ್ತು ಪೂರ್ಣಿಮಾ ಹಿರೇಮಠ ನಿರೂಪಿಸಿದರು. ಪ್ರತಿಭಾ ಚಿಕ್ಕಮಠ ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಪ್ರೀತಿಯ ಭೋಜನದ ವ್ಯವಸ್ಥೆ ಮಾಡಲಾಯಿತು.

