ಜೆಎಸ್ಎಸ್ ಹಾಸ್ಪಿಟಲ್ಸ್ ವತಿಯಿಂದ ಪ್ಲಾಸ್ಟಿಕ್ ಮುಕ್ತ ಪರಿಸರ ಜಾಗೃತಿ ಜಾಥಾ ಹಾಗೂ ಯೋಗ ಶಿಬಿರ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ಲಾಸ್ಟಿಕ್ ಇಂದು ಮಾನವನನ್ನು ಸಾವಿನ ಮನೆ ಬಾಗಿಲಿನಲ್ಲಿ ನಿಲ್ಲಿಸುತ್ತಿದೆ. ನಿತ್ಯ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆ ಇಲ್ಲದೆ ಬದುಕುವುದಕ್ಕೆ ಸಾಧ್ಯವೇ ಇಲ್ಲ ಎನ್ನುವ ಮಟ್ಟದಲ್ಲಿ ಇಂದು ಪ್ಲಾಸ್ಟಿಕ್ ಮಾನವನ ಜೀವನದೊಂದಿಗೆ ಬೆರೆತು ಹೋಗಿದ್ದು ಪ್ಲಾಸ್ಟಿಕ್ ನಮ್ಮನ್ನು ಕೊಲ್ಲುವ ಮೊದಲು ನಾವು ಪ್ಲಾಸ್ಟಿಕ್ನ್ನು ನಿರ್ಮೂಲ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಜೆಎಸ್ಎಸ್ ಆಸ್ಪತ್ರೆಯ ನರರೋಗ ವಿಭಾಗದ ಮುಖ್ಯಸ್ಥ ಅಂತರಾಷ್ಟ್ರೀಯ ಖ್ಯಾತಿಯ ಯೋಗಿಕ್ ನ್ಯೂರೋ ಸರ್ಜನ್ ಡಾ.ಮಯೂರ್ ಕಾಕು ಹೇಳಿದರು.
ವಿಶ್ವ ಬೆನ್ನುಹುರಿ ದಿನದ ಅಂಗವಾಗಿ ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಆಯೋಜಿಸಲಾಗಿದ್ದ ಯೋಗಶಿಬಿರ ಹಾಗೂ ವಾಕೇಥಾನ್ ಉದ್ಧೇಶಿಸಿ ಮಾತನಾಡಿದ ಅವರು; ಪ್ರತಿ ವರ್ಷವೂ ಜಾಗತಿಕವಾಗಿ ೪೬೦ ಮಿಲಿಯನ್ ಮೆಟ್ರಿಕ್ಟನ್ ಪ್ಲಾಸ್ಟಿಕ್ನ್ನು ಉತ್ಪಾದಿಸಲಾಗುತ್ತಿದೆ. ಸುಮಾರು ೨೦ ಮಿಲಿಯನ್ ಮೆಟ್ರಿಕ್ಟನ್ ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರ ಪಾಲಿನ್ಯ ಉಂಟಾಗುತ್ತಿದೆ. ೧೨ ಮಿಲಿಯನ್ ಮೆಟ್ರಿಕ್ಟನ್ ಪ್ಲಾಸ್ಟಿಕ್ ಕಡಲನ್ನು ಸೇರುತ್ತಿರುವುದರಿಂದ ಜಲಚರಗಳ ಜೀವಕ್ಕೆ ಸಂಚಕಾರ ಬರುತ್ತಿದೆ. ಒಟ್ಟು ತಯಾರಾಗಿರುವ ಪ್ಲಾಸ್ಟಿಕ್ನಲ್ಲಿ ೯% ರಷ್ಟು ಮಾತ್ರ ಪುನರ್ ಬಳಕೆಯಾಗುತ್ತಿದ್ದು ೭೯% ರಷ್ಟು ನೈಸರ್ಗಿಕ ವಿಕೋಪಗಳಲ್ಲಿ ಸೇರಿ ನಿಸರ್ಗವನ್ನು ಹಾಳು ಮಾಡುತ್ತಿದೆ. ೬೦% ರಷ್ಟು ಮನೆಬಳಕೆಯ ಪ್ಲಾಸ್ಟಿಕ್ ಕಾಂಪೋಸ್ಟ ಗೊಬ್ಬರ ಮಾಡುವುದಕ್ಕೆ ಯೋಗ್ಯವಾಗಿದ್ದರು ಅದರ ನಿರ್ವಹಣೆ ಮಾಡುವುದಕ್ಕೆ ಸಾಧ್ಯವಾಗದ ಕಾರಣ ಪರಿಸರದ ಮೇಲೆ ವ್ಯಕ್ತಿರಿಕ್ತ ಪರಿಣಾಮ ಬೀರುತ್ತಿದೆ. ಬೀದಿಗೆ ಬಿಸಾಕುತ್ತಿರುವ ಪ್ಲಾಸ್ಟಿಕ್ ಸೇವೆನೆಯಿಂದ ಸಾವಿರಾರು ಗೋವುಗಳು ಪ್ರಾಣ ಬಿಡುತ್ತಿವೆ. ಅಲ್ಲದೆ ಪ್ಲಾಸ್ಟಿಕ್ ನಮ್ಮ ರಕ್ತದಲ್ಲಿ ಸೇರಿಕೊಂಡು ಕ್ಯಾನ್ಸರ್ ರೋಗಕ್ಕೂ ದಾರಿ ಮಾಡಿಕೊಡುತ್ತಲಿದೆ. ಹೀಗಾಗಿ ಪ್ಲಾಸ್ಟಿಕ್ ನಿರ್ಮೂಲನೆ ಮಾಡುವುದಕ್ಕೆ ನಾವೆಲ್ಲ ಕಂಕಣಬದ್ಧರಾಗಬೇಕು ಎಂದು ಹೇಳಿದರು.
ಇಂದು ಬೆನ್ನುಹುರಿ ಸಮಸ್ಯೆ ಸೇರಿದಂತೆ ನರ ರೋಗಗಳು ಬಹಳಷ್ಟು ಜನಗಳನ್ನು ಬಾಧಿಸುತ್ತಿವೆ. ಇದಕ್ಕೆ ಕೇವಲ ಶಸ್ತçಚಿಕಿತ್ಸೆಯೇ ಮದ್ದು ಎಂದು ನಂಬಿಕೊಂಡಿದ್ದಾರೆ. ಆದರೆ ಯೋಗ ಚಿಕಿತ್ಸೆಯ ಮೂಲಕ ಆಪರೇಷನ್ ಇಲ್ಲದೇ ಸಮಸ್ಯೆಯನ್ನು ವಾಸಿ ಮಾಡಬಹುದಾಗಿದ್ದು ಯೋಗಶಕ್ತಿಯಿಂದ ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಇನ್ನುಮುಂದೆ ಜೆಎಸ್ಎಸ್ ಆಸ್ಪತ್ರೆಯಲ್ಲಿ ಯೋಗಿಕ್ ನ್ಯೂರೋ ಚಿಕಿತ್ಸೆ ಲಭ್ಯವಿರಲಿದ್ದು ಅವಶ್ಯಕತೆ ಉಳ್ಳವರು ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಗಳು ಸಿದ್ಧೇಶ್ವರ ಶ್ರೀಗಳ ಕನಸಾದ ಸ್ವಚ್ಚ ಹಾಗೂ ಸದೃಢ ವಿಜಯಪುರವನ್ನು ನಿರ್ಮಾಣ ಮಾಡುವಲ್ಲಿ ನಗರದ ಶಾಸಕ ಬಸನಗೌಡ ರಾ ಪಾಟೀಲ ಯತ್ನಾಳರ ಕೊಡುಗೆ ಅಪಾರವಾಗಿದ್ದು ಮುಂದಿನ ದಿನಗಳಲ್ಲಿ ಅವರಿಂದ ಇನ್ನೂ ಹೆಚ್ಚಿನ ಸೇವೆ ಒದಗಿ ಬರಲಿ ಎಂದರು.

ನಗರದ ಶಾಸಕ ಬಸನಗೌಡ ರಾ ಪಾಟೀಲ್ ಯತ್ನಾಳ ಅವರು ಬೆಳಿಗ್ಗೆ ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಪ್ಲಾಸ್ಟಿಕ್ ಮುಕ್ತ ವಿಜಯಪುರ ನಿರ್ಮಾಣದ ಜಾಗೃತಿಗಾಗಿ ವಾಕೇಥಾನ್ಗೆ ಚಾಲನೆ ನೀಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರನ್ನ ಬೆಳಗಲಿಯ ಯೋಗ ಗುರು ಸದಾಶಿವಯ್ಯನವರು, ಸಿದ್ಧೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ, ಉಪಾಧ್ಯಕ್ಷ ಸಂಗು ಸಜ್ಜನ್, ನಿರ್ದೇಶಕ ರಾಮನಗೌಡ ಬ. ಪಾಟೀಲ್ ಯತ್ನಾಳ, ಜೆಎಸ್ಎಸ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಶರಣ ಮಳಖೇಡ್ಕರ ಸೇರಿದಂತೆ ಅನೇಕ ಕರಿಯರ್ ಅಕಾಡೆಮಿ ಹಾಗೂ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಐಆರ್ಬಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

