ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಧಿನಿಯಮ ೨೦೦೫ ಅಡಿ ( ನರೇಗಾ ) ೨೦೨೫-೨೦೨೬ನೇ ಸಾಲಿನ ಕ್ರಿಯಾ ಯೋಜನೆ ಅಕ್ಟೋಬರ್ ೨ ರಿಂದ ಒಂದು ತಿಂಗಳುಗಳ ಕಾಲ ಸಿದ್ಧಪಡಿಸಲಾಗುತ್ತಿದ್ದು ಸಿಂದಗಿ ತಾಲೂಕಿನ ರೈತಾಪಿ ವರ್ಗ, ಮತ್ತು ಕೂಲಿ ಕಾರ್ಮಿಕರು ಇದರ ಸದುಪಯೋಗ ಪಡೆಯಬೇಕೆಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಮು. ಈ. ಅಗ್ನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಾಹಿತಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮ ದಡಿ (Iಇಅ) ಉದ್ಯೋಗ ಖಾತ್ರಿ ನಡೆಗೆ ಸಬಲತೆಯಡಿಗೆ ಅಭಿಯಾನದ ಮೂಲಕ ಮುಂಚಿತವಾಗಿ ಆರ್ಥಿಕ ವರ್ಷದ ಕ್ರಿಯಾಯೋಜನೆಯನ್ನು ಈಗಾಗಲೇ ಸಿದ್ಧಪಡಿಸಲಾಗುತ್ತಿದ್ದು, ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ವಾರ್ಡ್ ಸಭೆ ನಂತರ ಗ್ರಾಮ ಸಭೆಯಲ್ಲಿ ಅನುಮೋದಿಸಿದ ವಾರ್ಷಿಕ ಕ್ರಿಯಾ ಯೋಜನೆಯನ್ನು ಡಿಸೆಂಬರ್ ೫ರೊಳಗೆ ತಾಲೂಕು ಪಂಚಾಯಿತಿಗೆ ಸಲ್ಲಿಸುವಂತೆ ತಾಲೂಕಿನ ಎಲ್ಲಾ ೧೬ ಗ್ರಾಮ ಪಂಚಾಯತಗಳಿಗೆ ಈ ಮೂಲಕ ತಿಳಿಸಲಾಗುವುದು ಹಾಗೂ ಕ್ರೂಡಿಕೃತ ಕ್ರಿಯಾಯೋಜನೆಯನ್ನು ಜಿಲ್ಲಾ ಪಂಚಾಯತಿಗೆ ಡಿಸೆಂಬರ್ ೨೦ರ ಒಳಗೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ವಿಜಯಪುರ ಇವರ ಅನುಮೋದನೆ ಪಡೆಯಲು ಸಲ್ಲಿಸಲಾಗುವುದು.
ಆದ್ದರಿಂದ ರೈತರು, ಸಾರ್ವಜನಿಕರು ತಮಗೆ ಅವಶ್ಯಕತೆ ಇರುವ ವೈಯಕ್ತಿಕ ಕಾಮಗಾರಿಗಳಾದ ರೈತರಿಗೆ ಬದು ನಿರ್ಮಾಣ, ಕೃಷಿ ಹೊಂಡ ಹಾಗೂ ತೋಟಗಾರಿಕಾ ಬೆಳೆಗಳಾದ ದ್ರಾಕ್ಷಿ, ನಿಂಬೆ, ಪೇರು, ಸೀತಾಫಲ, ಪಪ್ಪಾಯ ಮತ್ತು ಬಾಳೆ ಸೇರಿದಂತೆ ಇತರೆ ತೋಟಗಾರಿಕಾ ಬೆಳೆಗಳನ್ನು ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿ ಸಹಾಯ ಧನ ಪಡೆಯಲು ಅವಕಾಶವಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳುವದು ಹಾಗೂ ಸಮುದಾಯ ಕಾಮಗಾರಿಗಳಾದ ಸಿಸಿ ರಸ್ತೆಗಳು, ಸಿಸಿ ಚರಂಡಿಗಳು, ಮುರುಮ್ ರಸ್ತೆಗಳು, ಶಾಲಾ ಅಭಿವೃದ್ಧಿ ಕಾಮಗಾರಿಗಳು ನರೇಗಾ ಅಡಿ ಸೌಲಭ್ಯ ಇರುವ ಎಲ್ಲಾ ಕಾಮಗಾರಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಯವರು, ಗಣಕಯಂತ್ರ ನಿರ್ವಾಹಕರು, ತಾಲೂಕು ಮಾಹಿತಿ ಶಿಕ್ಷಣ ಮತ್ತು ಸಂವಹನ ಸಂಯೋಜಕರು, ತಾಂತ್ರಿಕ ಸಹಾಯಕರು, ಬೇರ ಫೂಟ್ ಟೆಕ್ನಿಷಿಯನ್, ಗ್ರಾಮ ಕಾಯಕ ಮಿತ್ರರು ಸೇರಿದಂತೆ ಎಲ್ಲಾ ಅಧಿಕಾರಿಗಳು ಸಿಬ್ಬಂದಿಗಳು ಗ್ರಾಮ ಪಂಚಾಯತ್ ಮಟ್ಟದ ಎಲ್ಲಾ ಗ್ರಾಮಗಳಲ್ಲಿ ಅಭಿಯಾನವನ್ನು ಹಮ್ಮಿಕೊಂಡು ಮನೆ ಮನೆ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಕಾಮಗಾರಿ ಬೇಡಿಕೆಗಳನ್ನು ಸ್ವೀಕರಿಸಿ, ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಲಾಗುವುದು ಆದ್ದರಿಂದ ಜನತೆ ಇದರ ಸದುಪಯೋಗ ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ ೮೨೭೭೫೦೬೦೦೦ ಸಂಪರ್ಕಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
