ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆ | ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಾರ್ವಜನಿಕ ಉಪಯೋಗಕ್ಕಾಗಿ ಕಾಯ್ದಿರಿಸಿದ ನಿವೇಶನಗಳನ್ನು ಸ್ವಂತ ಕಟ್ಟಡ ಕಟ್ಟಲು ಜಾಗದ ಸಮಸ್ಯೆ ಇರುವ ಸರ್ಕಾರಿ ಶಾಲೆ, ಕಚೇರಿ, ಆಸ್ಪತ್ರೆಗಳನ್ನು ಗುರುತಿಸಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಂಚಿಕೆ ಮಾಡಲು ಪ್ರಥಮಾದ್ಯತೆ ನೀಡಬೇಕು ಎಂದು ಬೃಹತ್ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ,ಪಾಟೀಲ ಅವರು ಸೂಚಿಸಿದರು.
ಸೋಮವಾರ ನಗಾರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ಹಲವಾರು ಇಲಾಖೆಗಳಿಗೆ ಕಟ್ಟಡ ಕಟ್ಟಲು ಸ್ವಂತ ಜಾಗದ ಕೊರತೆಯಿದ್ದು, ಅವುಗಳನ್ನು ಗುರುತಿಸಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಹಂಚಿಕೆ ಮಾಡಲು ಪ್ರಥಮಾಧ್ಯತೆ ನೀಡಬೇಕು. ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ ಸಂಘ-ಸಂಸ್ಥೆಗಳು ಯಾವ ಉದ್ದೇಶಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂಬುದನ್ನು ಖಚಿತ ಪಡಿಸಿಕೊಂಡು, ನಿವೇಶನವನ್ನು ಬೇರೆ ಕಾರಣಕ್ಕಾಗಿ ಬಳಸಿಕೊಳ್ಳದಂತೆ ನಿಯಮಾನುಸಾರ ಉದ್ದೇಶಕ್ಕಾಗಿ ನಿವೇಶನ ಬಳಸುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ವಿಜಯಪುರ ನಗರಕ್ಕೆ ಅಮೃತ ಯೋಜನೆಯಡಿ ಜಿ.ಐ.ಎಸ್. ಆಧಾರಿತ ಮಹಾಯೋಜನೆ-೨೦೪೧ (ಪರಿಷ್ಕೃತ-೩) ತಯಾರಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆ ರವರೊಂದಿಗೆ ಜಂಟಿಯಾಗಿ ಚರ್ಚಿಸಿ ಪೂರಕ ಮಾಹಿತಿಯನ್ನು ಪಡೆದು ಮಹಾಯೋಜನೆಯಲ್ಲಿ ಅಳವಡಿಸಲು ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ಅಗತ್ಯವಿರುವ ರಸ್ತೆ, ಚರಂಡಿ, ಹೈಮಾಸ್ಟ್ ದೀಪ, ಉದ್ಯಾನವನ ಅಭಿವೃದ್ಧಿ, ಒಳಚರಂಡಿ, ಕುಡಿಯುವ ನೀರು ಕಾಮಗಾರಿಗೆ ಯೋಜನೆ ಸಿದ್ಧಪಡಿಸಿಕೊಳ್ಳಬೇಕು. ಪ್ರಾಧಿಕಾರದ ಅಭಿವೃಧ್ಧಿ ೧ ಹಾಗೂ ೨ರಲ್ಲಿ ಖಾಲಿ ಇರುವ ವಾಣಿಜ್ಯ ಮಳಿಗೆಗಳ ಹಂಚಿಕೆಗೆ ಕ್ರಮವಹಿಸಿ, ವಾಣಿಜ್ಯ ಮಳಿಗೆಗಳ ವಿನ್ಯಾಸಕ್ಕೆ ತಕ್ಕಂತೆ ಬಾಡಿಗೆ ನಿಗಧಿಪಡಿಸಿ ಎಂದು ಹೇಳಿದರು.
ಸಭೆಯಲ್ಲಿ ಪ್ರಾಧಿಕಾರದಿಂದ ಹೊಸ ವಿನ್ಯಾಸ, ಭೂ-ಬದಲಾವಣೆ ಪ್ರಕರಣಗಳು, ಪೂರ್ಣ ಪ್ರಮಾಣದ ಅಭಿವೃದ್ಧಿ ಹೊಂದಿದ ವಿನ್ಯಾಸಗಳ ಬಿಡುಗಡೆ, ಸಾರ್ವಜನಿಕ ನಿವೇಶನಗಳ ಉಪ-ವಿಭಜನೆ, ಒಗ್ಗೂಡಿಸುವಿಕೆ ಪ್ರಕರಣಗಳಿಗೆ ಅನುಮೋದನೆ ನೀಡಲಾಯಿತು.
ಸಭೆಯಲ್ಲಿ ವಿಜಯಪುರ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ನಾಗಠಾಣ ಶಾಸಕರಾದ ವಿಠ್ಠಲ ಕಟಕದೊಂಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕನ್ನಾನ್ ಮುಶ್ರೀಫ್, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವನೆ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ರಾಜಶೇಖರ ಡಂಬಳ, ಮಹಾನಗರ ಪಾಲಿಕೆ ಆಯುಕ್ತರಾದ ವಿಜಕುಮಾರ ಮೆಕ್ಕಳಕಿ, ಪ್ರಾಧಿಕಾರದ ಸದಸ್ಯರಾದ ಮಹಾದೇವ .ಎಸ್. ರಾಠೋಡ, ಸಲೀಂ ಅಲ್ಲಾವುದ್ದೀನ ಪಿರಜಾದೆ, ಸಂತೋಷ ಪವಾರ, ಶ್ರೀಮತಿ ಕಾಶಿಬಾಯಿ .ಎಸ್. ಹಡಪದ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

“ಪ್ರಾಧಿಕಾರದಿಂದ ಸಿಎ ಸೈಟ್ಗಳಿಗೆ ಅನುಮೋದನೆ ನೀಡುವ ಪೂರ್ವದಲ್ಲಿ ಅಲ್ಲಿ ಒಳಚರಂಡಿ, ಕುಡಿಯುವ ನೀರು, ಉದ್ಯಾನವನ, ವಿದ್ಯುತ್, ರಸ್ತೆ ಅಗತ್ಯ ಮೂಲಭೂತ ಸೌಕರ್ಯಗಳ ಎಲ್ಲಾ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟಗಳನ್ನು ಖಾತ್ರಿ ಪಡಿಸಿಕೊಳ್ಳಬೇಕು. ಕುಡಿಯುವ ನೀರು, ನೈರ್ಮಲ್ಯ ಮತ್ತು ಒಳಚರಂಡಿ ಮಂಡಳಿ, ಮಹಾನಗರ ಪಾಲಿಕೆ ಜಂಟಿಯಾಗಿ ಸಿಎ ಸೈಟ್ಗಳ ವ್ಯವಸ್ಥೆಯನ್ನು ಪರಿಶೀಲಿಸಬೇಕು.”
– ಡಾ ಎಂ.ಬಿ,ಪಾಟೀಲ
ಬೃಹತ್ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು

