ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಹಾಗೂ ಕಲ್ಬುರ್ಗಿ ಫೌಂಡೇಶನ್ ದ ಶಿವಲಿಂಗಪ್ಪ ಕಲಬುರ್ಗಿ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಲಿಂಗಾಯತ ಸಮಾಜ ಮತ್ತು ಬಸವ ಭಕ್ತರನ್ನು ದಿಕ್ಕು ತಪ್ಪಿಸುವ ’ವಚನ ದರ್ಶನ’ ಕೃತಿಯ ಮುಟ್ಟುಗೋಲಿಗೆ ಹಾಗೂ ವಿವಾದಿತ ಶರಣರ ಚರಿತ್ರೆಗೆ ಮಸಿ ಬಳೆಯುವ ರೀತಿಯಲ್ಲಿ ನಿರ್ಮಿಸಿದ ’ಶರಣರ ಶಕ್ತಿ’ ಚಲನಚಿತ್ರ ನಿಷೇಧಕ್ಕೆ ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಸಿಂದಗಿ-ವಿಜಯಪುರದ ಕಲ್ಬುರ್ಗಿ ಫೌಂಡೇಶನ್ ಆಗ್ರಹಿಸಿವೆ.
ಈ ಕುರಿತು ಸೋಮವಾರ ಜಂಟಿ ಪ್ರಕಟಣೆಯಲ್ಲಿ ತಿಳಿಸಿರುವ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಹಾಗೂ ಕಲ್ಬುರ್ಗಿ ಫೌಂಡೇಶನ್ ದ ಶಿವಲಿಂಗಪ್ಪ ಕಲಬುರ್ಗಿ ಅವರು, ಅಯೋಧ್ಯಾ ಪ್ರಕಾಶನದವರು ಸದಾಶಿವ ಸ್ವಾಮಿಗಳ ಪ್ರಧಾನ ಸಂಪಾದಕತ್ವದಲ್ಲಿ ಹೊರ ತಂದ ’ವಚನ ದರ್ಶನ’ ಎಂಬ ಕೃತಿಯಲ್ಲಿ ಕೆಲ ಸಂಪ್ರದಾಯವಾದಿ ಶಕ್ತಿಗಳು ಇಂದು ವಚನ ಸಾಹಿತ್ಯವನ್ನು ತಮ್ಮ ಅನಕೂಲಕ್ಕೆ ತಕ್ಕಂತೆ ಖೋಟಾ ವಚನ ಪ್ರಕ್ಷಿಪ್ತ ವಚನ ಮತ್ತು ಸಂಸ್ಕೃತ ಉಕ್ತಿಗಳನ್ನು ಒಳಗೊಂಡ ಕೆಲ ದೋಷಪೂರಿತ ವಚನಗಳನ್ನು ಉಲ್ಲೇಖಿಸಿ ವಚನ ಚಳುವಳಿಗೆ ಆಗಮ ವೇದ ಶಸ್ತ್ರ ಉಪನಿಷದ ಆದರ್ಶಪ್ರಾಯವಾಗಿದ್ದು ಲಿಂಗಾಯತ ಧರ್ಮ ಮತ್ತು ವಚನ ಸಾಹಿತ್ಯವು ವೇದ ಆಗಮ ಉಪನಿಷದಗಳ ವಿಕಾಸ ಎಂದು ನಿರೂಪಿಸುವ ಹುಸಿ ಪ್ರಯತ್ನವೆಂದು ಕಂಡು ಬರುತ್ತದೆ. ಇಂದು ಬಸವ ತತ್ವವು ಜಗತ್ತಿನ ಪ್ರಗತಿಪರ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವದ ಮಾದರಿ ಎನಿಸಿದ ಶರಣರ ಅನುಭವ ಮಂಟಪ ಪರಿಕಲ್ಪನೆಯನ್ನು ಬುಡುಮೇಲು ಮಾಡುವ ರೀತಿಯಲ್ಲಿ ಕೆಲ ಸಂಪ್ರದಾಯವಾದಿಗಳು ವಚನ ದರ್ಶನ ಕೃತಿ ರಚಿಸಿದ್ದಾರೆ.
ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಹುನ್ನಾರದಿಂದ ಬೇರೆ ಬೇರೆ ನಗರಗಳಲ್ಲಿ ವಚನ ದರ್ಶನ ಬಿಡುಗಡೆ ಮಾಡಿ ಪುಸ್ತಕವನ್ನು ಮಾರಾಟ ಮಾಡುತ್ತಿದ್ದಾರೆ. ವಚನ ಚಳುವಳಿಗೆ ವೇದ ಶಾಸ್ತ್ರ ಆಗಮ ಮೂಲ ಎನ್ನುವ ರೀತಿಯಲ್ಲಿ ಬಿಂಬಿಸುವ ವಚನ ದರ್ಶನವು ಬಸವ ಭಕ್ತರ ಭಾವನೆಗೆ ಧಕ್ಕೆ ತರುವ ಕಾರ್ಯವಾಗಿದೆ. ಸಾರ್ವಕಾಲಿಕ ಸಮಾನತೆ ಶಾಂತಿ ಪ್ರೀತಿ ಸಮ ಬಾಳು ಸಮಪಾಲು ಎನ್ನುವ ಶ್ರೇಷ್ಠ ಧ್ಯೇಯ ಹೊಂದಿದ ಶರಣರ ಅಭಿವ್ಯಕ್ತಿಗೆ ಕಳಂಕ ತರುವ ವಚನ ದರ್ಶನವನ್ನು ಈ ಕೂಡಲೇ ಸರಕಾರ ಮುಟ್ಟುಗೋಲು ಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಶರಣ ಸಂಸ್ಕೃತಿ ಅವಮಾನಿಸುವ ’ಶರಣರ ಶಕ್ತಿ’ ಚಲನಚಿತ್ರ
ಇನ್ನು ಶ್ರೀಮತಿ ಅನುರಾಧಾ ಕುಲಕರ್ಣಿ ನಿರ್ಮಾಣದ ಮತ್ತು ದೀಲಿಪ ಶರ್ಮ ಸಾಹಿತ್ಯ, ಸಂಭಾಷಣೆ, ನಿರ್ದೇಶನದ ’ಶರಣರ ಶಕ್ತಿ’ ಎಂಬ ಚಲನಚಿತ್ರವು, ಅತ್ಯಂತ ಅನಾಗರಿಕ ಸಂಭಾಷಣೆರನ್ನೊಳಗೊಂಡಿದ್ದು, ಅಕ್ಕನಾಗಮ್ಮನವರನ್ನು ಪುಂಡ ಜಂಗಮರ ಜಾರಿಣಿತನಕ್ಕೆ ಚೆನ್ನ ಬಸವಣ್ಣನವರ ಜನ್ಮಕ್ಕೆ ಕಾರಣ ಎಂಬ ಮಹಾ ಪ್ರಮಾದವನ್ನು ಚಿತ್ರಿಸಿದ್ದಾರೆ. ಶರಣರ ಬದುಕನ್ನು ಕ್ರೌರ್ಯದಿಂದ ಅಸಂಬದ್ಧ ಮಾತುಗಳಿಂದ ಚಲನ ಚಿತ್ರವನ್ನು ನಿರ್ಮಿಸಿದ್ದು ಕನ್ನಡದ ಹೆಮ್ಮೆಯ ಶರಣ ಸಂಸ್ಕೃತಿಗೆ
ಅಪಮಾನ ಮಾಡಿದ್ದಾರೆ. ಇಂತಹ ಚಲನ ಚಿತ್ರದ ಅನೇಕ ಸನ್ನಿವೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಶೀಘ್ರದಲ್ಲೇ ಚಲನ ಚಿತ್ರ ಬಿಡುಗಡೆಗೊಳ್ಳಲಿದೆ. ಬಸವ ಭಕ್ತರ ಭಾವನೆಗೆ ದಕ್ಕೆ ತರುವ ರೀತಿಯಲ್ಲಿ ಚಿತ್ರಿಸಿದ ಈ ಚಲನಚಿತ್ರದಿಂದ ಸಮಾಜದಲ್ಲಿ ಶಾಂತಿ ಕದಡುವ ಅಪಾಯವಿದ್ದು, ಕಾರಣ ’ಶರಣರ ಶಕ್ತಿ’ ಪ್ರದರ್ಶನದ ಮೇಲೆ ಸರಕಾರ ನಿಷೇಧ ಹೇರಿ ಮುಂದಾಗುವ ಅನಾಹುತಗಳನ್ನು ನಿಯಂತ್ರಿಸಬೇಕೆಂದು ಡಾ.ಪಟ್ಟಣ ಮತ್ತು ಕಲಬುರ್ಗಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

“ವಿವಾದಿತ ’ವಚನ ದರ್ಶನ’ ಮುಟ್ಟುಗೋಲು ಮತ್ತು ಶರಣ ಸಂಸ್ಕೃತಿಯನ್ನು ಅವಮಾನಿಸುವ ’ಶರಣರ ಶಕ್ತಿ’ ಚಲನಚಿತ್ರ ನಿಷೇಧಕ್ಕೆ ಆಗ್ರಹಿಸುವ ನಿಟ್ಟಿನಲ್ಲಿ ಅ.16 ಅಕ್ಟೋಬರ್ 2024 ರಂದು ವಿಜಯಪುರ ದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ವಿಜಯಪುರ ಜಿಲ್ಲೆಯ ಬಸವ ಭಕ್ತರು ಅಂದು ಬೆಳಿಗ್ಗೆ 11 ಘಂಟೆಗೆ ಉಪಸ್ಥಿತರಿರಬೇಕೆಂದು ಕೋರುವೆ.”
– ಡಾ ಶಶಿಕಾಂತ ಪಟ್ಟಣ
ಅಧ್ಯಕ್ಷರು, ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ, ಪುಣೆ

