ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಸಮಾಜಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡ ಮಹನೀಯರನ್ನು, ಮಹಾತ್ಮರನ್ನು ಸದಾ ಸಮಾಜವು ಸ್ಮರಿಸಬೇಕು. ಅವರು ನೀಡಿರುವ ಸಂದೇಶಗಳನ್ನು ಅರಿತುಕೊಂಡು ಉತ್ತಮ ಸಂಸ್ಕಾರ ಅಳವಡಿಸಿಕೊಂಡು ಉತ್ತಮ ಜೀವನ ಸಾಗಿಸುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಗದಗದ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು.
ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮದ ಅಗಸಿ ಆವರಣದಲ್ಲಿ ಹಮ್ಮಿಕೊಂಡಿರುವ ಬಸವನಾಡ ನವರಾತ್ರೋತ್ಸವ ಕಾರ್ಯಕ್ರಮದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಗುರು ಕುಮಾರೇಶ್ವರ ಶಿವಯೋಗಾಶ್ರಮ ನೀಲನಕ್ಷೆ ಬಿಡುಗಡೆ, ಸಾಹಿತ್ಯ ಬಳಗ ಮತ್ತು ಕ್ರಿಯಾಶೀಲ ಸಾಧಕ ಬಳದ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸಮಾಜವನ್ನು ಕಟ್ಟಿ ಬೆಳೆಸಿದ ಧೀಮಂತರಲ್ಲಿ ಹಾನಗಲ್ ಕುಮಾರಸ್ವಾಮೀಜಿ ಒಬ್ಬರಾಗಿದ್ದಾರೆ. ಬಸವೇಶ್ವರರರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದ ಅವರು ಸಮಾಜ ಸುಧಾರಣೆಗೆ ಶ್ರಮಿಸಿದ್ದರು. ಅನೇಕ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಪ್ರೇರಣೆಯಾಗಿದ್ದಾರೆ. ಮಠಗಳಲ್ಲಿ ಪ್ರಸಾದ ನಿಲಯ ತೆರೆದು ದಾಸೋಹ ವ್ಯವಸ್ಥೆಯನ್ನು ಆರಂಭಿಸಿದರು. ಅವರಿಂದ ಪ್ರೇರಣೆಗೊಂಡ ಅನೇಕ ಮಠಗಳು ಶಿಕ್ಷಣ ಸಂಸ್ಥೆ ಆರಂಭಿಸುವ ಮೂಲಕ ಅನೇಕ ಬಡ ವಿದ್ಯಾರ್ಥಿಗಳಿಗೆ ನೆರವಾದವು. ಸ್ವಾಮೀಜಿಗಳು ಮಠಗಳ ಮಾಲೀಕರಲ್ಲ ಅವರು ಸಮಾಜ ಸೇವಕರು ಎಂಬ ಸಂದೇಶವನ್ನು ಹಾನಗಲ್ ಕುಮಾರಸ್ವಾಮೀಜಿ ನೀಡಿದ್ದಾರೆ. ಇದರಿಂದ ಪ್ರೇರಿತಗೊಂಡ ಅನೇಕ ಮಠಾಧೀಶರರು ಸಮಾಜಕ್ಕೆ ಅನೇಕ ಕೊಡುಗೆ ನೀಡಿದ್ದಾರೆ ಎಂದರು.
ನಾಡಿನಲ್ಲಿ ನವರಾತ್ರಿ ಉತ್ಸವ ಎಲ್ಲೆಡೆ ಸಂಭ್ರಮದಿಂದ ಜರುಗುತ್ತಿದೆ. ಹುಣಶ್ಯಾಳ ಪಿಬಿ ಗ್ರಾಮದ ಹಿರೇಮಠದ ಆನಂದ ದೇವರು ಈ ಹಬ್ಬವನ್ನು ನೆಪವಾಗಿಟ್ಟುಕೊಂಡು ಕಳೆದ ಆರು ತಿಂಗಳಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪಾದಯಾತ್ರೆ, ಪ್ರವಚನ ಸೇರಿದಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜನರಿಗೆ ಸಂಸ್ಕಾರ ಕೊಡುವ ಜೊತೆಗೆ ಸನ್ಮಾರ್ಗದಲ್ಲಿ ನಡೆಯುವಂತೆ ಸಂದೇಶದ ಕೆಲಸ ಮಾಡಿದ್ದಾರೆ. ಮೂಢನಂಬಿಕೆ, ಅಂಧಶ್ರದ್ಧೆ, ವ್ಯಸನಗಳನ್ನು ಹೋಗಲಾಡಿಸುವ ಕಾರ್ಯ ಮಾಡಿರುವದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಗುರು ಕುಮಾರೇಶ್ವರ ಶಿವಯೋಗಾಶ್ರಮದ ನೀಲನಕ್ಷೆ ಅನಾವರಣಗೊಳಿಸಿದ ಜವಳಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಮಾತನಾಡಿದರು.
ಮನಗೂಳಿ ಹಿರೇಮಠದ ಅಭಿನ ಸಂಗನಬಸವ ಸ್ವಾಮೀಜಿ ಮಾತನಾಡಿ, ಯುವಜನಾಂಗಕ್ಕೆ ಸರಿಯಾದ ಮಾರ್ಗದರ್ಶನವಿಲ್ಲದೇ ಇರುವದರಿಂದಾಗಿ ಅನೇಕರು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಆನಂದ ದೇವರು ಅವರು ಆರು ತಿಂಗಳ ಕಾಲ ಬಸವನಬಾಗೇವಾಡಿ, ನಿಡಗುಂದಿ, ಮುದ್ದೇಬಿಹಾಳ, ತಾಳಿಕೋಟಿ ಸೇರಿದಂತೆ ವಿವಿಧ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವ್ಯಸನ ಮುಕ್ತ ಸಮಾಜದ ಜಾಗೃತಿ ಕಾರ್ಯಕ್ರಮ ಮಾಡುವ ಮೂಲಕ ದುಶ್ಚಟಗಳನ್ನು ಹೋಗಲಾಡಿಸಲು ಶ್ರಮಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಬಸವನಬಾಗೇವಾಡಿಯ ಸಿದ್ದಲಿಂಗ ಸ್ವಾಮೀಜಿ, ಆಸಂಗಿಯ ವೀರಬಸವ ಸ್ವಾಮೀಜಿ, ಹುಣಶ್ಯಾಳ ಪಿಬಿಯ ಆನಂದದೇವರು, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುರೇಶ ಹಾರಿವಾಳ, ಮುಖಂಡರಾದ ಲೋಕನಾಥ ಅಗರವಾಲ, ಅಮರೇಶಗೌಡ ಪಾಟೀಲ, ವಿನುತ ಕಲ್ಲೂರ, ಪ್ರಶಾಂತ ಆಲೂರ, ರವಿಗೌಡ ಚಿಕ್ಕೊಂಡ, ಸಿ.ಬಿ.ಮೇಟಿ, ಎಚ್.ಬಿ.ಬಾರಿಕಾಯಿ, ಶಿವು ಮಡಿಕೇಶ್ವರ ಸೇರಿದಂತೆ ಇತರರು ಇದ್ದರು.

” ಈ ಚಿಕ್ಕ ಗ್ರಾಮದಲ್ಲಿ ಸಂಭ್ರಮದಿಂದ ನವರಾತ್ರಿ ಉತ್ಸವ ಸಂಭ್ರಮದಿಂದ ಆಚರಿಸಲಾಗುವ ಜೊತೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅನೇಕ ಸಾಧಕರನ್ನು, ಪ್ರತಿಭಾವಂತರನ್ನು, ಕ್ರಿಯಾಶೀಲರನ್ನು ಸೇರಿದಂತೆ ಸಮಾಜಕ್ಕೆ ಶ್ರಮಿಸುವವರನ್ನು ಗುರುತಿಸಿ ಅವರನ್ನು ಗೌರವಿಸುವ ಕಾರ್ಯ ಸ್ಮರಣೀಯ. ಗ್ರಾಮದಲ್ಲಿ ಮಠ ಸ್ಥಾಪಿಸಲು ಮುಂದಾಗಿರುವ ಆನಂದದೇವರ ಕಾರ್ಯ ಖಂಡಿತ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ. ಧಾರ್ಮಿಕ ಉತ್ಸವದಂತಹ ಕಾರ್ಯಕ್ರಮಗಳಿಂದ ಭಕ್ತಿ,ಶ್ರದ್ಧೆ ಹೆಚ್ಚಾಗುತ್ತದೆ. ನಾಡಿಗೆ ಮಠಗಳು ಮಹತ್ವದ ಕೊಡುಗೆ ನೀಡಿವೆ. ಇವರ ಧಾರ್ಮಿಕ ಕಾರ್ಯಗಳಿಗೆ ಸಹಕಾರ ನೀಡುವೆ.”
– ಶಿವಾನಂದ ಪಾಟೀಲ
ಜವಳಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವರು

